CHITRADURGA NEWS | 28 OCTOBER 2025
ಚಿತ್ರದುರ್ಗ: ಕೋಟೆ ನಾಡಿನ ರಕ್ಷಕಿ, ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ನವೆಂಬರ್ 11 ರಂದು ಜಿಲ್ಲಾ ಕೇಂದ್ರದಲ್ಲಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಹೇಳಿದರು.

ಇದನ್ನೂ ಓದಿ: ಬಾಲ್ಯ ವಿವಾಹವಾದರೆ ಪೋಕ್ಸೋ ಕೇಸ್ ದಾಖಲು | ನ್ಯಾ.ಎಂ.ವಿಜಯ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಒನಕೆ ಓಬವ್ವ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒನಕೆ ಓಬವ್ವ ಜಯಂತಿಯನ್ನು ನ. 11 ರಂದು ಬೆಳಿಗ್ಗೆ 11.30ಕ್ಕೆ ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9.30 ಗಂಟೆಗೆ ಒನಕೆ ಓಬವ್ವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆಯನ್ನು ನಗರದ ಕೋಟೆಯ ಮುಂಭಾಗದಿಂದ ಪ್ರಾರಂಬಿಸಲಾಗುವುದು.
ಮೆರವಣಿಗೆಯು ಕೋಟೆ ಆವರಣದಿಂದ ಆರಂಭಗೊಂಡು, ಗಾಂಧಿ ವೃತ್ತ, ಪ್ರವಾಸಿ ಮಂದಿರ, ಒನಕೆ ಓಬವ್ವ ಪುತ್ಥಳಿ ಇರುವ ವೃತ್ತ, ಮದಕರ ನಾಯಕ ವೃತ್ತ ಮೂಲಕ ಸಾಗಿ, ವಾಲ್ಮೀಕಿ ಭವನದವರೆಗೆ ನೆರವೇರಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಸಮಾಜದವರ ಆಶಯದಂತೆ ನಟರಾಜ್ ಅವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು. ಅಧಿಕಾರಿಗಳು ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಜನಪ್ರತಿನಿಧಿಗಳು, ಗಣ್ಯರಿಗೆ ತಲುಪಿಸಿ ಆಹ್ವಾನಿಸಬೇಕು.
ಇದನ್ನೂ ಓದಿ: ನಾಳೆ ಅಂತರ-ಪೀಳಿಗೆಯ ಬಾಂಧವ್ಯ ಮೇಳ | ಜೆ.ವೈಶಾಲಿ
ಎಲ್ಲ ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಿಸಬೇಕು ಎಂದು ಸೂಚನೆ ನೀಡಿದರು. ಎಲ್ಲ ಸಂಘ ಸಂಸ್ಥೆಗಳು, ಸಮಾಜದವರು, ನಾಗರಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ರಾಜ್ಯ ಸಭೆ ಮಾಜಿ ಸದಸ್ಯ ಹೆಚ್. ಹನುಮಂತಪ್ಪ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ನವರ ಧೈರ್ಯ ಸಾಹಸ ಇಡೀ ಜಗತ್ತಿಗೆ ತಿಳಿದಿದೆ. ಒನಕೆ ಓಬವ್ವರನ್ನು ಕೇವಲ ಛಲವಾದಿ ಸಮಾಜಕ್ಕೆ ಮಾತ್ರ ಸೀಮಿತ ಮಾಡುವುದು ಸರಿಯಲ್ಲ. ಕೇವಲ ಒಂದು ಜಾತಿಗೆ ಕಟ್ಟಿಹಾಕುವ ಕೆಲಸ ಆಗಬಾರದು.
ಮದಕರಿ ನಾಯಕರ ರಾಜ್ಯಕ್ಕೆ ಜೀವ ಕೊಟ್ಟವರೇ ಒನಕೆ ಓಬವ್ವ. ಹೀಗಾಗಿ ಮದಕರಿ ನಾಯಕ ಜಯಂತಿ ಆಚರಣೆ ಸಂದರ್ಭದಲ್ಲಿ ಒನಕೆ ಓಬವ್ವರನ್ನು ಸ್ಮರಿಸಬೇಕಾದ್ದು ಎಲ್ಲರ ಕರ್ತವ್ಯ. ಎಲ್ಲ ಸಮುದಾಯದವರು ಒನಕೆ ಓಬವ್ವ ಜಯಂತಿಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ನವೆಂಬರ್ 12 ರಿಂದ ಚಿತ್ರದುರ್ಗದಲ್ಲಿ ಸ್ವದೇಶಿ ಮೇಳ | ಪೋಸ್ಟರ್ ಬಿಡುಗಡೆ
ಸಭೆಯಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಡಿಡಿಪಿಐ ಮಂಜುನಾಥ್, ವಿವಿಧ ಇಲಾಖೆಗಳ ಅಧಿಕಾರಿಗಲು, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಛಲವಾದಿ ಮಹಾಸಭಾದ ಅಧ್ಯಕ್ಷ ಹೆಚ್. ಶೇಷಣ್ಣ, ಸಮಾಜದ ಮುಖಂಡರುಗಳಾದ ಹೆಚ್.ಸಿ. ನಿರಂಜನಮೂರ್ತಿ, ಎಸ್.ವಿ. ಗುರುಮೂರ್ತಿ, ವೆಂಕಟೇಶ್, ರವಿಕುಮಾರ್ ಪೂಜಾರ್, ದೇವರಾಜ್, ಜಯರಾಂ, ಅಣ್ಣಪ್ಪ, ದಯಾನಂದ್, ಪ್ರಹ್ಲಾದ್, ನವೀನ್, ಧರ್ಮರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
