CHITRADURGA NEWS | 18 AUGUST 2025
ಚಿತ್ರದುರ್ಗ: ಹಚ್ಚ ಹಸುರಿನ ಪ್ರಕೃತಿಯ ಚೆಲುವಿನ ನಡುವೆ ನೆಲೆ ನಿಂತಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಚಿಕ್ಕಮರಡಿ ಚೆಲುವರಾಯ ಸ್ವಾಮಿಗೆ ಕಡೇ ಶ್ರಾವಣ ಸೋಮವಾರದ ಅಂಗವಾಗಿ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು QR ಕೋಡ್ ಮೂಲಕ ನೋಂದಣಿ ಕಡ್ಡಾಯ
ನಾಕೀಕೆರೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಬಾಣಪ್ಪ, ಭೂತಪ್ಪ ದೇವರುಗಳೊಂದಿಗೆ ತೆರಳಿದ ಗ್ರಾಮಸ್ಥರು, ಶ್ರಾವಣ ಮಾಸದ ಅಭಿಷೇಕ ನೆರವೇರಿಸಿ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಗ್ರಾಮದ ಪ್ರಮುಖರಾದ ಮಲ್ಲಿಕಾರ್ಜುನಪ್ಪ, ಬಿ.ತಿಪ್ಪೇಸ್ವಾಮಿ, ಬಾಲರಾಜ್, ಎನ್.ಸಂತೋಷ್, ಎನ್.ಎಸ್.ಕುಮಾರ, ಮಹಾದೇವಣ್ಣ, ಚಿದಾನಂದ, ಪೂಜಾರಿ ಕಲ್ಲಪ್ಪ, ಗೌಡ್ರ ಕರಿಯಪ್ಪ ಮತ್ತಿತರರಿದ್ದರು.
ಪ್ರಕೃತಿಯ ಚೆಲುವಿನ ನಡುವೆ ಚೆಲುವರಾಯಸ್ವಾಮಿ:
ಹೊಸದುರ್ಗ ತಾಲೂಕು ಗಡಿ ಗ್ರಾಮ ನಾಕೀಕೆರೆಯ ಪಶ್ಚಿಮ ದಿಕ್ಕಿಗೆ ಇರುವ ಗುಡ್ಡದ ಸಾಲುಗಳಲ್ಲಿ, ಚಿಕ್ಕಮರಡಿ ಎಂಬ ಬೆಟ್ಟದ ತುದಿಯಲ್ಲಿ ಚಿಕ್ಕಮರಡಿ ದೇವಸ್ಥಾನವಿದ್ದು, ಗುಡ್ಡದ ಮೇಲಿನ ವಿಹಂಗಮ ನೋಟ ಮನಸೂರೆಗೊಳ್ಳುವಂತಿದೆ.

ಸುಧೀರ್ಘ ಹಿನ್ನೆಲೆ ಇರುವ ಚಿಕ್ಕಮರಡಿ ಚೆಲುವರಾಯ ಸ್ವಾಮಿ ಬೆಟ್ಟ ಹತ್ತಲು ಭಕ್ತರೊಬ್ಬರು ಬೆಟ್ಟದ ತುದಿವರೆಗೆ ಕಲ್ಲು ಹಾಸು ಹಾಕಿಸಿರುವುದು ವಿಶೇಷವಾಗಿದೆ. ಆದರೆ, ಅಭಿವೃದ್ಧಿ ನಿರ್ವಹಣೆ, ಮೂಲ ಸೌಲಭ್ಯಗಳ ಕೊರತೆಯಿಂದ ಈ ಸುಂದರ ತಾಣ ಬೆಳಕಿಗೆ ಬಂದಿಲ್ಲ.
ಇದನ್ನೂ ಓದಿ: ಅಂತರ ಬೆಳೆ ಪದ್ಧತಿಯು ಅಡಿಕೆ, ತೆಂಗು ಮತ್ತು ಬಾಳೆ ತೋಟಗಳಲ್ಲಿ ಸುಸ್ಥಿರ ಇಳುವರಿ
ಚಿಕ್ಕಮರಡಿ ಗುಡ್ಡದ ಹಿಂಭಾಗದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಬೆಟ್ಟದ ಸಾಲು, ಎತ್ತ ನೋಡಿದರೂ ಹಚ್ಚ ಹಸಿರು, ಪಕ್ಕದಲ್ಲೇ ಕೆರೆಯ ಅಂಗಳ, ಬೆಟ್ಟದ ಮುಂಭಾಗಕ್ಕೆ ನಾಕೀಕೆರೆ, ಗೂಳಿಹೊಸಹಳ್ಳಿ, ಉಪ್ಪರಿಗೇನಹಳ್ಳಿ, ಡಿ.ಕೆ.ಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಗುಂಪು ಗುಂಪಾಗಿ ಕಾಣಿಸುತ್ತವೆ.
ಇಷ್ಟೂ ಗ್ರಾಮಗಳ ರೈತರ ಜಮೀನು, ತೋಟಗಳು, ಜಮೀನುಗಳಲ್ಲಿನ ಬೆಳೆಗಳನ್ನು ಅಲ್ಲಿಂದ ಕಣ್ತುಂಬಿಕೊಳ್ಳುವುದೇ ಒಂದು ಸೊಗಸು.
ಚಿಕ್ಕಮರಡಿ ಬೆಟ್ಟದ ಅಕ್ಕ ಪಕ್ಕದಲ್ಲಿ ನಾಗರಹಾವಿನ ಗುಡ್ಡ, ದೊಡ್ಡಗುಡ್ಡ ಎಂಬ ಬೃಹದಾಕಾರದ ಗುಡ್ಡಗಳಿದ್ದು, ಅವುಗಳ ನಡುವೆ ತುಸು ಚಿಕ್ಕದಾಗಿ ಕಾಣುವ ಕಾರಣಕ್ಕೆ ಇದನ್ನು ಚಿಕ್ಕಮರಡಿ ಎಂದು ಕರೆಯುತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಇಲ್ಲಿ ನೆಲೆ ನಿಂತಿರುವ ಚಿಕ್ಕಮರಡಿ ಚೆಲುವರಾಯಸ್ವಾಮಿ ನಾಕೀಕೆರೆ ಸೇರದಂತೆ ಸುತ್ತಮುತ್ತಲಿನ ಹಳ್ಳಿಗಳನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಈ ಭಾಗದ ರೈತರು ಬಿತ್ತನೆ ಮಾಡುವಾಗ ತಮ್ಮ ಜಮೀನಿನಿಂದಲೇ ಈ ಗುಡ್ಡದತ್ತ ಕೈ ಮುಗಿದು ಉತ್ತಮ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ: ರೈತರ ಆದಾಯ ವೃದ್ಧಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಅತ್ಯಗತ್ಯ | ಕೃಷಿ ತಂತ್ರಜ್ಞರ ಸಂಸ್ಥೆ
ಮೆಕ್ಕೆಜೋಳ, ಸೂರ್ಯಕಾಂತಿ ಇನ್ನಿತರೆ ಬೆಳೆ ಬೆಳೆದ ರೈತರು ಹಂದಿ ಮತ್ತಿತರೆ ಕಾಡು ಪ್ರಾಣಿಗಳ ಕಾಟ ಇಲ್ಲದಂತೆ ಕಾಪಾಡು ತಂದೆ ಎಂದು ಹರಕೆ ಮಾಡಿಕೊಳ್ಳುವುದು ಉಂಟು.
ಇನ್ನೂ ಗ್ರಾಮದ ಮನೆಗಳಲ್ಲಿ ಹಸು ಕರು ಹಾಕಿದಾಗ ಗಿಣ್ಣು ಮಾಡಿ ಚಿಕ್ಕಮರಡಿ ಚೆಲುವರಾಯಸ್ವಾಮಿಗೆ ತಂದು ನೈವೇಧ್ಯೆ ಮಾಡುವುದು ವಾಡಿಕೆ. ಪಕ್ಕದಲ್ಲೇ ಭೂತರಾಯಸ್ವಾಮಿ ದೇವಸ್ಥಾನ, ಎರಡು ಗುಹೆಗಳೂ ಇವೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
