
CHITRADURGA NEWS | 18 AUGUST 2025
ಚಿತ್ರದುರ್ಗ: ರೈತರ ಆದಾಯ ವೃದ್ಧಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಅವಶ್ಯವಾಗಿ ಬೇಕಾಗಿದೆ ಎಂದು ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷರು ಹಾಗೂ ಕೃಷಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳಾದ ಡಾ.ಎ.ಬಿ.ಪಾಟೀಲ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 18 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್ ಎಷ್ಟಿದೆ?

ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ರಾಜ್ಯ ಮತ್ತು ಪ್ರಾದೇಶಿಕ ಘಟಕ ಹಾಗೂ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ತ್ಯಾಜ್ಯದ ಮೌಲ್ಯವರ್ಧನೆ ಹಾಗೂ ರೈತ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆಯ ಸೌಲಭ್ಯ ಕಲ್ಪಿಸುವ ಕುರಿತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಪ್ರಾಥಮಿಕ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಾರೆ. ಆದರೆ ಅಧಿಕ ಆದಾಯ ಗಳಿಸಬೇಕಾದರೆ ರೈತ-ರೈತೋದ್ಯಮಿ ಆಗಬೇಕಾದರೆ ರೈತರಿಗೆ, ರೈತ ಉತ್ಪಾದಕ ಸಂಸ್ಥೆಯು ಉತ್ತಮವಾಗಿ ಸೇವೆ ನೀಡಬೇಕು.
ವಿಜ್ಞಾನ ಮತ್ತು ವಾಣಿಜ್ಯ ಸೇರಿದಾಗ ಮಾತ್ರ ಆದಾಯ ಹೆಚ್ಚಾಗಲಿದೆ. ಇದರ ಜೊತೆಗೆ ಮಾರುಕಟ್ಟೆ ಹಾಗೂ ಹೆಚ್ಚಿನ ಬೆಲೆ ಸಿಗುವುದು ಸಹ ಬಹಳ ಮುಖ್ಯವಾಗಿದ್ದು, ಮಾರುಕಟ್ಟೆ, ಮಾರಾಟಗಾರರು, ಖರೀದಿದಾರರನ್ನು, ಉತ್ಪಾದಕರನ್ನು ಹಾಗೂ ಉತ್ಪಾದಕ ಸಂಸ್ಥೆಗಳನ್ನು ಒಂದುಗೂಡಿಸಿ, ಸಮನ್ವಯತೆ ತಂದಿರುವ ಸಮನ್ವಯ ಟ್ರಸ್ಟ್ನ ಕಾರ್ಯ ಎಂದು ಶ್ಘಾಘನೀಯ ಎಂದರು.
ಇದನ್ನೂ ಓದಿ: POP ಗಣೇಶ ನಿಷೇಧ
ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಇತರೆ ಉಪ ಕಸುಬುಗಳನ್ನು ಅಳವಡಿಸಿಕೊಂಡರೆ ಆದಾಯ ವೃದ್ಧಿಯಾಗಲಿದ್ದು, ಕೃಷಿಯಿಂದ ಸಂಸ್ಕøತಿ, ತೋಟಗಾರಿಕೆಯಿಂದ ಸಂಸ್ಕಾರ ಹಾಗೂ ಪಶುಸಂಗೋಪನೆಯಿಂದ ರೈತರಿಗೆ ಸಮ್ಮೋಹನ ಶಕ್ತಿ ಬರಲಿದೆ ಎಂದು ತಿಳಿಸಿದ ಅವರು, ಕೃಷಿ ಹಾಗೂ ಇತರೆ ಉಪಕಸುಬುಗಳಿಂದ 350 ದಶಲಕ್ಷ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಕಸದಿಂದ ರಸ ಮಾಡುವ ಸಾಕಷ್ಟು ವಿಧಾನ, ತಂತ್ರಜ್ಞಾನಗಳಿದ್ದು, ಕೃಷಿ ತ್ಯಾಜ್ಯದಿಂದ ಮೌಲ್ಯವರ್ಧಿತ ಪದಾರ್ಥ ಪಡೆಯುವುದು.
ಕೇವಲ ಪ್ರಾಥಮಿಕ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡುವುದು ಮಾತ್ರವಲ್ಲದೇ ಕೃಷಿ ತ್ಯಾಜ್ಯ ವಸ್ತುಗಳನ್ನು ಸಹ ವಿಘಟನೆ, ಮೌಲ್ಯವರ್ಧನೆ, ಪ್ಯಾಕಿಂಗ್ ಹಾಗೂ ಮಾರಾಟ ಮಾಡಿ ಆದಾಯ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಹಾಗೂ ನಮ್ಮ ದೇಶದಲ್ಲಿ ಕೃಷಿಯ ಬೆಳವಣಿಗೆ ಹೇಗಿದೆ? ನಮ್ಮ ದೇಶಿಯ ಮಾರುಕಟ್ಟೆಗಳಲ್ಲಿರುವ ಸಾಧ್ಯತೆ, ಅವಕಾಶಗಳು, ವಿದೇಶಗಳಲ್ಲಿರುವ ಸಾಧ್ಯತೆ, ಅವಕಾಶಗಳನ್ನು ಅರ್ಥೈಸಿಕೊಂಡು ನಾವು ನಮ್ಮ ಕೃಷಿಯಲ್ಲಿ ತೆಗೆದುಕೊಳ್ಳಬೇಕಾದ ಬದಲಾವಣೆಗಳನ್ನು ಬಹಳಷ್ಟು ತ್ವರಿತಗತಿಯಲ್ಲಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ನೇಮಕಾತಿಗೆ ಅರ್ಜಿ
ರೈತರ ಉತ್ಪಾದಕ ಸಂಸ್ಥೆಗಳು ಕೇವಲ ಕೃಷಿ ಪರಿಕರಗಳ ವಿತರಣೆ ಮಾಡುವುದು ಅಷ್ಟೇ ಅಲ್ಲದೇ ಕೃಷಿಯಲ್ಲಿ ಆಗಬೇಕಾದ ಬದಲಾವಣೆಗಳನ್ನು ಸಹ ತರುವ ದಿಕ್ಕಿನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬೇಸಾಯ ಪದ್ದತಿ, ನವೀನ ಬೆಳೆ ಪದ್ಧತಿ, ತಳಿಗಳ ಬದಲಾವಣೆ, ಉತ್ಪಾದಕತೆ ಹೆಚ್ಚಳ ಮಾಡುವುದು, ಸಮಗ್ರ ಕೃಷಿ ಪದ್ಧತಿಗಳ ಅಳವಡಿಕೆ, ಕೃಷಿ ಸಂಸ್ಕರಣೆ, ಮೌಲ್ಯವರ್ಧನೆ, ಬ್ರಾಂಡಿಂಗ್, ಪ್ಯಾಕಿಂಗ್ ಸೇರಿದಂತೆ ಅಗತ್ಯ ಬದಲಾವಣೆ ತರುವ ಕೆಲಸಗಳನ್ನು ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಚ್ಚು ಪುಷ್ಪ ಕೃಷಿಯನ್ನು ಮಾಡುತ್ತಿದ್ದು, ಹೂ ಬೆಳೆಗಾರರಿಗೆ ಮದ್ಯವರ್ತಿಗಳ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸಲು ಸಾಧ್ಯವಾದರೆ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ದೇವಸ್ಥಾನಗಳಿಗೆ ತಲುಪಿಸುವ ಕೆಲಸ ಮಾಡೋಣ. ಈ ನಿಟ್ಟಿನಲ್ಲಿ ಸಂಪರ್ಕ ಕಲ್ಪಿಸಲು ಸಮನ್ವಯ ಟ್ರಸ್ಟ್ ಸಹಕಾರ ಅಗತ್ಯವಾಗಿದೆ ಎಂದರು.
ಸಮನ್ವಯ ಟ್ರಸ್ಟ್ ಸಂಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಕೆ.ಹೆಚ್.ಸುಮಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: ವಿವಿ ಸಾಗರದ ಒಳಹರಿವು ಹೆಚ್ಚಳ | ಇಂದಿನ ಜಲಾಶಯ ಮಟ್ಟ ಎಷ್ಟಿದೆ ?
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪ್ರಾದೇಶಿಕ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಕಟ್ಟಾ ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಜಿ.ಟಿ.ವೀರಭದ್ರ ರೆಡ್ಡಿ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕರ್ನಾಟಕ ಕೋಳಿ ಸಾಕಣೆದಾರರು ಮತ್ತು ತಳಿಗಾರರ ಸಂಘದ ನಿರ್ವಹಣಾ ಸಮಿತಿ ಸದಸ್ಯ ಎಸ್.ಜಿ.ವೀರಣ್ಣ, ರಾಜಸ್ಥಾನ್ ವಿಜ್ಞಾನಿ ಅನ್ಮೋಲ್ ಶರ್ಮಾ, ದೃಷ್ಠಿ ಇಂಟರ್ ನ್ಯಾಷನಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಸೆಹ್ವಾಲ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಪಾಟೀಲ್ ಸೇರಿದಂತೆ ರೈತರು ಹಾಗೂ ರೈತ ಉತ್ಪಾದಕ ಕಂಪನಿಗಳ ಪದಾಧಿಕಾರಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
