CHITRADURGA NEWS | 24 JULY 2026
ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯದಿಂದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ರೂ. 367 ಕೋಟಿ ವೆಚ್ಚದ ಬೃಹತ್ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಸಂಪೂರ್ಣ ತಾಲ್ಲೂಕಿಗೆ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆರಂಭವಾಗಲಿದೆ ಎಂದು ಹೊಳಲ್ಕೆರೆ ಶಾಸಕರಾದ ಡಾ. ಎಂ.ಚಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: ನಾಳೆ, ನಾಡಿದ್ದು ಚಿತ್ರದುರ್ಗಕ್ಕೆ ಸಿಎಂ ಡಿಕೆಶಿ | ಎಲ್ಲೆಲ್ಲಿ ಯಾವ ಕಾರ್ಯಕ್ರಮದಲ್ಲಿ ಭಾಗೀ ಆಗ್ತಾರೆ ಪೂರ್ಣ ಮಾಹಿತಿ…
ಶುಕ್ರವಾರ ವಾಣಿ ವಿಲಾಸ ಸಾಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ‘ಜಾಕ್ ವೆಲ್’ ಹಾಗೂ ನೀರೆತ್ತುವ ಕಾಮಗಾರಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮುಂದಿನ 2052ನೇ ಇಸವಿಯವರೆಗೆ ಹೆಚ್ಚಾಗಬಹುದಾದ ಜನಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ವಿನ್ಯಾಸಗೊಳಿಸಲಾಗಿದೆ. ಸುಮಾರು ಮೂರೂವರೆ ಯಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿ, ಇತ್ತೀಚೆಗಷ್ಟೇ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ | ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ
ವಿವಿ ಸಾಗರದ ಜಾಕ್ ವೆಲ್ ಜಾಗದಿಂದ ನೀರೊಳಗೆ 100 ಅಡಿ ಆಳದಲ್ಲಿ ನೀರಿದೆ. ಆ ನೀರಿನ ಕೆಳಗೆ 40 ಅಡಿ ದಪ್ಪದ ಬಂಡೆಯಿದ್ದು, 45 ಅಡಿ ಬಂಡೆಯನ್ನು ಕೊರೆದು ಪೈಪ್ ಪಿಲ್ಲರ್ ಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಟ್ಟಕ್ಕಿಂತ ಮೇಲೆ 30 ಅಡಿ ಎತ್ತರದ ಪಿಲ್ಲರ್ ಗಳನ್ನು ನಿರ್ಮಿಸಿ, ಒಟ್ಟು 170 ಅಡಿ ಎತ್ತರದ ಬೃಹತ್ ಜಾಕ್ ವೆಲ್ ಕಟ್ಟಡ ನಿರ್ಮಿಸಲಾಗಿದೆ ಎಂದರು.
24 ಗಂಟೆ ತಡೆಯಿಲ್ಲದ ನೀರು ಪೂರೈಕೆ:
ಈ ಯೋಜನೆಯಲ್ಲಿ 1,600 ಹೆಚ್.ಪಿ ಸಾಮಥ್ರ್ಯದ ಪಂಪ್ಗಳು ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ಪಂಪ್ಗಳ ಪೈಕಿ ಎರಡು ನಿರಂತರವಾಗಿ ಕಾರ್ಯಾಚರಿಸಲಿದ್ದು, ಒಂದು ಪಂಪ್ ಅನ್ನು ತುರ್ತು ಸಂದರ್ಭಕ್ಕಾಗಿ ಕಾಯ್ದಿರಿಸಲಾಗಿದೆ. ಯಾವುದೇ ತಾಂತ್ರಿಕ ಅಡಚಣೆಯಾಗದಂತೆ 24 ಗಂಟೆಯೂ ವರ್ಷದ 365 ದಿನವೂ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ವಾಣಿ ವಿಲಾಸ ಸಾಗರದಿಂದ 25 ಕಿ.ಮೀ ದೂರದಲ್ಲಿರುವ ಹಾಲೇನಹಳ್ಳಿಯ ರೂ. 60 ಕೋಟಿ ವೆಚ್ಚದ ಫಿಲ್ಟರ್ ಘಟಕಕ್ಕೆ ನೀರನ್ನು ಹಾಯಿಸಿ, ನಂತರ ಗಟ್ಟಿಹೊಸಹಳ್ಳಿ ಗುಡ್ಡದಲ್ಲಿರುವ ಎತ್ತರದ ಪ್ರದೇಶಕ್ಕೆ ಲಿಫ್ಟ್ ಮಾಡಲಾಗುತ್ತದೆ. ಗಟ್ಟಿಹೊಸಹಳ್ಳಿಯಿಂದ ಇಡೀ ತಾಲೂಕಿಗೆ ಗುರುತ್ವಾಕರ್ಷಣೆ ಆಧಾರದ ಮೇಲೆ 625 ಕಿ.ಮೀ ಉದ್ದದ ಬೃಹತ್ ಪೈಪ್ಲೈನ್ ಜಾಲದ ಮೂಲಕ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
400ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು:
ಹೊಳಲ್ಕೆರೆ ತಾಲ್ಲೂಕಿನ ಸಣ್ಣ ಗ್ರಾಮಗಳು, ದೊಡ್ಡ ಗ್ರಾಮಗಳು ಹಾಗೂ ಹಟ್ಟಿಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಈ ಯೋಜನೆಯಿಂದ ನೀರು ತಲುಪಲಿದೆ. ಹೊಳಲ್ಕೆರೆ ಟೌನ್ಗೆ ರೂ.25 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಪೈಪ್ಲೈನ್ ಜಾಲ ರೂಪಿಸಲಾಗಿದ್ದು, ನಿರಂತರ ಕುಡಿಯುವ ನೀರು ಸಿಗಲಿದೆ.
ರೂ.300 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್:
ಕ್ಷೇತ್ರದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಜೋಗ್ ಫಾಲ್ಸ್ನಿಂದ ವಿದ್ಯುತ್ ತಂದು ಭರಮಸಾಗರ ಮತ್ತು ಹೊಳಲ್ಕೆರೆ ಭಾಗದಲ್ಲಿ ರೂ. 300 ಕೋಟಿ ವೆಚ್ಚದಲ್ಲಿ 220 ಕೆವಿಎ ಸಾಮಥ್ರ್ಯದ ಬೃಹತ್ ವಿದ್ಯುತ್ ಉಪಕೇಂದ್ರ ನಿರ್ಮಿಸಲಾಗುತ್ತಿದೆ. ಕ್ಷೇತ್ರದ ಜನತೆ ಐದು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದು, ಅವರ ಋಣ ತೀರಿಸಲು ಮೊದಲ ಹಂತದಲ್ಲಿ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 24 | ಮೆಕ್ಕೆಜೋಳ, ರಾಗಿ ರೇಟ್….
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಸಿ.ರಘು ಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್, ತಿಪ್ಪೇಸ್ವಾಮಿ, ಈಶಣ್ಣ, ರಮೇಶ್, ಪ್ರವೀಣ್, ರಂಗಸ್ವಾಮಿ, ನಿತಿನ್, ಬಂಗಾರಪ್ಪ, ನಾಗರಾಜ್ ಶಿವಪುರ, ಚಿತ್ರಹಳ್ಳಿ ದೇವರಾಜ್ ಸೇರಿದಂತೆ ಮತ್ತಿರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

