ಲೋಕಸಮರ 2024
ಬಿಸಿಲಿನ ತಾಪ ಲೆಕ್ಕಿಸದ ಮತದಾರ | ಮಠಾಧೀಶರಿಂದ ಮತ ಚಲಾವಣೆ | ಬೆಳಗಿನಿಂದ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು ?


CHITRADURGA NEWS | 26 APRIL 2024
ಚಿತ್ರದುರ್ಗ: ಬಿಸಿಲಿನ ತಾಪಕ್ಕೆ ಮತದಾನದ ಪ್ರಮಾಣ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯನ್ನು ಕೋಟೆನಾಡಿನ ಮತದಾರರು ತಲೆಕೆಳಗೆ ಮಾಡಿದ್ದಾರೆ. ಸೂರ್ಯನ ಶಾಖವನ್ನೂ ಲೆಕ್ಕಿಸದೇ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಮತದಾರರು ತೋರಿದ ಉತ್ಸಾಹ ಪ್ರತಿ ಗಂಟೆಗೆ ಏರಿಕೆಯಾಗುತ್ತಿದ್ದ ಮತದಾನದ ಪ್ರಮಾಣಕ್ಕೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ಮದುವೆ ಮಂಟಪದಿಂದ ಮತಗಟ್ಟೆಗೆ ಬಂದ ನವ ದಂಪತಿಗಳು | ಮಾಂಗಲ್ಯ ಧಾರಣೆ ನಂತರ ಮತದಾನ
ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದರೆ, ಬೆಳಗಿನಿಂದಲೇ ಜನ ಮತಗಟ್ಟೆ ಬಳಿ ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದರು. ಮಧ್ಯಾಹ್ನದ ಬಿಸಿಲಿನ ಕಾರಣಕ್ಕೆ ಬೆಳಗ್ಗೆ ಬೇಗ ಮತ ಚಲಾಯಿಸಬಹುದು. ಮಧ್ಯಾಹ್ನ ನೀರಸ ಪ್ರತಿಕ್ರಿಯೆ ಕಟ್ಟಿಟ್ಟಬುತ್ತಿ ಎನ್ನುವ ಅಧಿಕಾರಿಗಳ ಅಂದಾಜು ಕೂಡಾ ಸುಳ್ಳಾಯಿತು. ಮಧ್ಯಾಹ್ನವೂ ಮತದಾರರ ಉತ್ಸಾಹ ಬತ್ತಲಿಲ್ಲ.
ಇದನ್ನೂ ಓದಿ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು
ಬೆಳಗ್ಗೆ 9 ಗಂಟೆ ವೇಳೆಗೆ ಬಿಸಿಲ ನಾಡು ಮೊಳಕಾಲ್ಮೂರಿನಲ್ಲಿ ಮತದಾನದ ಪ್ರಮಾಣ ಶೇ.10.28ಕ್ಕೆ ತಲುಪಿದ್ದರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 9.52 ರಷ್ಟಿತ್ತು. ಹೊಸದುರ್ಗದಲ್ಲಿ 5.37 ರಷ್ಟು ಮಾತ್ರ ಮತದಾನವಾಗಿ ನೀರಸವಾಗಿತ್ತು. ಒಟ್ಟಾರೆ ಜಿಲ್ಲೆಯ ಮತದಾನದ ಪ್ರಮಾಣ 9 ಗಂಟೆಗೆ ಶೇ.7.33 ರಷ್ಟಿತ್ತು.
ಆನಂತರ ಬೆಳಗ್ಗೆ 11 ಗಂಟೆ ವೇಳೆಗೆ ಮೊಳಕಾಲ್ಮೂರು ತಾಲೂಕು ಶೇ.26.77ಕ್ಕೆ ತಲುಪಿದರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಆನಂತರ ಶೇ.23.73 ರಷ್ಟಿತ್ತು. ಈ ವೇಳೆಗೆ ಹೊಸದುರ್ಗದ ಮತದಾನ ಪ್ರಮಾಣ ಶೇ.17.89ಕ್ಕೆ ತಲುಪಿತ್ತು. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರಾ, ಪಾವಗಡ ಒಳಗೊಂಡಂತೆ 11 ಗಂಟೆಗೆ ಶೇ.21.75 ರಷ್ಟಿತ್ತು.
ಇದನ್ನೂ ಓದಿ: KAS ಪರೀಕ್ಷೆಗೆ ಉಚಿತ ತರಬೇತಿ
ಮಧ್ಯಾಹ್ನ 1 ಗಂಟೆಗೆ ಏರು ಬಿಸಿಲಿನಲ್ಲಿ ಕೂಡಾ ಮತದಾನದ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಶೇ.44.28 ರಷ್ಟಿದ್ದರೆ, ಚಿತ್ರದುರ್ಗ ಶೇ.40.21, ಚಳ್ಳಕೆರೆ ಶೇ.39.94 ರಷ್ಟಿತ್ತು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಶೇ.39.05ರಷ್ಟು ಮತದಾನಕ್ಕೆ ಒಳಗಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಶೇ.52.14ಕ್ಕೆ ತಲುಪಿದರೆ, ಸಂಜೆ 5 ಗಂಟೆಗೆ ಶೇ.67 ರಷ್ಟು ಮತದಾನ ದಾಖಲಾಗಿತ್ತು.
ಇದನ್ನೂ ಓದಿ: ಶುರುವಾಯ್ತು ಮತದಾನ ಸಂಭ್ರಮ | ಮತಗಟ್ಟೆಗಳತ್ತ ಮತದಾರನ ಹೆಜ್ಜೆ
ಸಂಜೆ 5 ಗಂಟೆ ವೇಳೆಗೆ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.96, ಚಿತ್ರದುರ್ಗ ಶೇ.67.86, ಹಿರಿಯೂರು ಶೇ.65.96, ಹೊಸದುರ್ಗ ಶೇ.67.77, ಮೊಳಕಾಲ್ಮೂರು ಶೇ.65.42, ಶಿರಾ ಶೇ.63.98, ಹೊಳಲ್ಕೆರೆ ಶೇ.65.96 ರಷ್ಟು ಮತದಾನ ಆಗಿತ್ತು.
ಮಠಾಧೀಶರಿಂದ ಮತದಾನ:
ನಗರಕ್ಕೆ ಹೊಂದಿಕೊಂಡಿರುವ ಮಠದ ಕುರುಬರಹಟ್ಟಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ವಿವಿಧ ಮಠಾಧೀಶರು ಮತದಾನ ಮಾಡಿ ಮತಾಧೀಶರಾದರು.
ಇದನ್ನೂ ಓದಿ: ಬಿಎಸ್ಸಿ ಆಗ್ರಿ ಪ್ರವೇಶ ಪರೀಕ್ಷೆಗೆ ಪ್ರಾಯೋಗಿಕ ತರಬೇತಿ
ಹೊಸದುರ್ಗ ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಯಾದವ ಶ್ರೀ ಕೃಷ್ಣ ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಕೇತೇಶ್ವರ ಮಠದ ಶ್ರೀ ಮೇದಾರ ಕೇತೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತದಾನ ಮಾಡಿದರು.

