CHITRADURGA NEWS | 19 JUNE 2024
ಚಿತ್ರದುರ್ಗ: ದೇಶಾದ್ಯಂತ ಗಮನ ಸೆಳೆದಿರುವ ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿರುವ ವಿಆರ್ಎಸ್ ಬಡಾವಣೆಯ ಕೆ.ಎಸ್.ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಸ್ಯಾಂಡಲ್ವುಡ್ ಸ್ಟಾರ್ ನಟ, ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕಳೆದೊಂದು ವಾರಿದಂದ ಕನ್ನಡ ಚಿತ್ರರಂಗದ ಮೇಲೆ ಸೂತಕದ ಕರಿಛಾಯೆ ಮೂಡಿಸಿದ್ದ ಈ ಪ್ರಕರಣದ ಬಗ್ಗೆ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಧ್ವನಿ ಎತ್ತಿದೆ.
ಇದನ್ನೂ ಓದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಬಂಧನ
ವಾಣಿಜ್ಯ ಮಂಡಳಿಯ ತಂಡ ಚಿತ್ರದುರ್ಗದ ರೇಣುಕಸ್ವಾಮಿ ಮನೆಗೆ ಬಂದು ಅವರ ಕುಟುಂಬಕ್ಕೆ 5 ಲಕ್ಷ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಇದೇ ವೇಳೆ ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಿಸ್ಪಕ್ಷಪಾತ ತನಿಖೆ ನಡೆದು ಮೃತರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಆಶಿಸಿದ್ದಾರೆ.
ಕೊಲೆ ವಿಚಾರದಲ್ಲಿ ನ್ಯಾಯಯುತ ತೀರ್ಪು ಬರಲಿ ಎಂದ ಕಿಚ್ಚ:
ಇದೆಲ್ಲಾ ಮುಗಿದ ಬೆನ್ನಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲು ಪ್ರಕರಣದ ಕುರಿತು ಭಾನುವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಕುಟುಂಬಕ್ಕೆ, ಹೆಣ್ಣು ಮಗುವಿಗೆ, ಬಾಳಿ ಬದುಕಬೇಕಾದ ರೇಣುಕಸ್ವಾಮಿ ಎಲ್ಲೋ ರಸ್ತೆಯಲ್ಲಿ ಬಿದ್ದಿದ್ದರಲ್ಲ ಅವರಿಗೆ ನ್ಯಾಯ ಸಿಗಬೇಕು. ಮುಂದೆ ಹುಟ್ಟಬೇಕಾಗಿರುವ ಅವರ ಮಗುವಿಗೆ ನ್ಯಾಯ ಸಿಗಬೇಕು ಎಂದು ಮಾಧ್ಯಮವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ | ಮಗ ಪೊಲೀಸ್ ವಶಕ್ಕೆ | ತಂದೆ ಲೋ ಬಿಪಿಯಿಂದ ಸಾವು
ಮಾಧ್ಯಮದವರು ತೋರಿಸುತ್ತಿರುವುದನ್ನು ನೋಡಿ ವಿಚಾರ ತಿಳಿದುಕೊಳ್ಳುತ್ತಿದ್ದೇವೆ. ಈ ಕೊಲೆ ಪ್ರಕರಣದಲ್ಲಿ ಪೊಲೀಸರು ಹಾಗೂ ಮಾಧ್ಯಮದವರು ಸತ್ಯಾಂಶ ಹೊರತರಲು ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ ಎಂದಿದ್ದಾರೆ.
ಮುಖ್ಯಮಂತ್ರಿಗಳೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕುಳಿತಿದ್ದಾರೆ ಎಂಬ ಸುದ್ದಿ ಓದಿದ್ದೇನೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿರುವ ಅವರು, ಮಾಧ್ಯಮ, ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ ಸಾಮಾನ್ಯ ವ್ಯಕ್ತಿಯಾಗಿ ನಾನು ಅವರ ಪರ, ಇವರ ಪರ ಮಾತನಾಡುವುದು ಅಥವಾ ವಿರುದ್ಧವಾಗಿ ಮಾತನಾಡುವುದು ತಪ್ಪಾಗುತ್ತದೆ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ವಿಚಾರಣೆ ವಿಡಿಯೋ, ಸಾಕ್ಷಿಗಳನ್ನು ತೆರೆದಿಡಬೇಕು ಎಂದ ಉಪ್ಪಿ:
ಇನ್ನೂ ನಟ, ನಿರ್ದೇಶಕ ಉಪೇಂದ್ರ ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರೇಣುಕಸ್ವಾಮಿ ಕೊಲೆ ಪ್ರಕರಣ, ದರ್ಶನ್ ಬಂಧನ ಮತ್ತು ವಿಚಾರಣೆಯನ್ನು ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಬೆರಗಿನಿಂದ ನೋಡುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ನಾವಿದ್ದೇವೆ | ಚಲನಚಿತ್ರ ವಾಣಿಜ್ಯ ಮಂಡಳಿ
ಈ ಹೈ ಪ್ರೊಫೈಲ್ ಕೇಸ್ನ ವಿಚಾರಣೆಯಲ್ಲಿ ನಿಸ್ಪಕ್ಷಪಾತ ನಿರ್ಣಯ ಮತ್ತು ನ್ಯಾಯಕ್ಕಾಗಿ ಜನ ಕಾಯುತ್ತಿದ್ದಾರೆ. ರೇಣುಕಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನ ಕಾಡುತ್ತಿವೆ. ಊಹಾಪೋಹಗಳು ಹುಟ್ಟಿಕೊಳ್ಳುತ್ತಿವೆ.
ಏಕೆಂದರೆ ಯಾವುದೇ ಕೇಸ್ನ ವಿಚಾರಣೆಯ ವೀಡಿಯೋ ದಾಖಲೆ ಮತ್ತು ಸಾಕ್ಷಿಗಳ ಎಲ್ಲ ವಿವರಗಳನ್ನು ಪೊಲೀಸರು ಆಗಾಗ ಸಂಬಂಧಪಟ್ಟವರು, ಕುಟುಂಬದವರ ಜೊತೆ ಹಂಚಿಕೊಳ್ಳುವಂತೆ ಕಾನೂನಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ | ರಂಭಾಪುರಿ ಶ್ರೀ ಒತ್ತಾಯ
ಹಿಂದೆ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ. ಎಲ್ಲವನ್ನೂ ವೀಡಿಯೋ ಮಾಡಿ ಲೈವ್ ಸ್ಟ್ರೀಮಿಂಗ್ ಮಾಡಬಹುದು. ಈ ಸಂಬಂಧ ಕಾನೂನು ಸುಧಾರಣೆ ಆಗಬೇಕು ಎಂದಿದ್ದಾರೆ.
ಒಬ್ಬ ಸಾರ್ವಜನಿಕ ವ್ಯಕ್ತಿಯ ಕೇಸ್ ಆಗಿದ್ದರೆ ಆ ಕೇಸ್ನ ವಿಚಾರಣೆಯ ವೀಡಿಯೋ ಹಾಗೂ ಸಾಕ್ಷ್ಯಗಳನ್ನು ಪೊಲೀಸರು ಸಾರ್ವಜನಿಕರ ಎದುರು ತೆರೆದಿಡಬೇಕು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ವಿಚಾರಣೆ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಎಲ್ಲವಕ್ಕೂ ಇದರಿಂದ ತೆರೆ ಎಳೆದಂತಾಗುತ್ತದೆ.
ಇದನ್ನೂ ಓದಿ: ರೇಣುಕಸ್ವಾಮಿ ಮೈಮೇಲಿದ್ದ ಕರಡಿಗೆ ಸುಳಿವು | ಆಟೋ, ಕಾರು ಕೂಡಾ ಜಪ್ತಿ
ಹೀಗಾದಾಗ ರೇಣುಕಸ್ವಾಮಿ ಕುಟುಂಬ, ಮಾಧ್ಯಮ, ಸಾರ್ವಜನಿಕರು, ಅಭಿಮಾನಿಗಳಲ್ಲಿ ಗೊಂದಲಗಳಿಲ್ಲದೆ ಪೊಲೀಸ್ ಮತ್ತು ಮಾಧ್ಯಮದ ಬಗ್ಗೆ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಧರ್ಮೋ ರಕ್ಷತಿ ರಕ್ಷಿತಃ ಎಂದ ರಚಿತ
ಕನ್ನಡ ಖ್ಯಾತ ನಟಿ ರಚಿತಾ ರಾಮ್ ತಮ್ಮ ಎಕ್ಸ್(twiter) ಖಾತೆಯಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಕುರಿತು ಪೋಸ್ಟ್ ಹಾಕಿದ್ದಾರೆ.

ಧರ್ಮೋ ರಕ್ಷತಿ ರಕ್ಷಿತಃ ಎಂಬ ಅಡಿ ಬರಹದೊಂದಿಗೆ ಬರೆದಿರುವ ರಚಿತಾ, ಇದನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತುಗಳಿವು ಎಂದು ಆರಂಭಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ಸರ್ಕಾರವಿದೆ | ಗೃಹ ಸಚಿವ ಡಾ.ಜಿ.ಪರಮೇಶ್ವರ್
ಮೊದಲನೆಯದಾಗಿ ರೇಣುಕಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ ಎಂದಿರುವ ರಚಿತಾ, ಮುಂದುವರೆದು, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿರುವ ನಟ ದರ್ಶನ್ ಸರ್ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ
ಇನ್ನೇನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದು ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಪ್ರಕರಣದ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಸ್ಪಕ್ಷಪಾತವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಪೋಸ್ಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
