
CHITRADURGA NEWS | 25 APRIL 2026
ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಪ್ರದೇಶಗಳಲ್ಲಿ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವಂತೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ನಿರ್ದೇಶನ ನೀಡಿದರು.

ಇದನ್ನೂ ಓದಿ:
ಬೇಸಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಜನ-ಜಾನುವಾರುಗಳ ಕುಡಿಯುವ ನೀರು, ಮೇವು ಪರಿಸ್ಥಿತಿ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಶುಕ್ರವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕಿನ ದಿಂಡಾವರ, ಕರಿಯಾಲ ಹಾಗೂ ಜೆ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪತ್ರಿಕಾ ವರದಿಗಳು ಪ್ರಕಟವಾಗಿವೆ. ಅಧಿಕಾರಗಳು ಕೂಡಲೇ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು. ಜಲ ಜೀವನ್ ಮಿಷನ್ ಅಡಿ ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಣೆ ಸಿದ್ದವಿರುವ ಹಳ್ಳಿಗಳಲ್ಲಿ, ಕೂಡಲೇ ಓವರ್ ಹೆಡ್ ಟ್ಯಾಂಕ್ಗಳನ್ನು ಭರ್ತಿ ಮಾಡಿ ನೀರು ಸರಬರಾಜಿಗೆ ಚಾಲನೆ ನೀಡಬೇಕು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಆರ್.ಓ.ಪ್ಲಾಂಟ್ಗಳು ಕಾರ್ಯನಿರ್ವಹಿಸದೇ ಶಿಥಿಲಗೊಂಡಿವೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಇಂಜಿಯುರ್ಗಳು ಹಾಗೂ ತಾಲ್ಲೂಕು ಪಂಚಾಯಿತಿ ಇಓಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಆರ್.ಓ.ಪ್ಲಾಂಟ್ಗಳ ದುರಸ್ಥಿ ಕ್ರಮ ವಹಿಸಬೇಕು.
ಇದನ್ನೂ ಓದಿ:
ಮುಂಬರುವ ದಿನಗಳಲ್ಲಿ ಮಳೆಯ ಕೊರೆತೆ ಎದುರಾಗುವ ಸಂಭವಿದೆ. ಪ್ರಾದೇಶಿಕ ಆಯುಕ್ತರ ಅನುಮತಿ ಪಡೆದು ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ರಾಜ್ಯ ಆಹಾರ ಮತ್ತು ನಾಗರಿಕ ಸರಬಾಜು ನಿಗಮದ ಅಧ್ಯಕ್ಷ ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲ್ಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವ 4 ಗ್ರಾಮಗಳು ಹಾಗೂ ಸಮಸ್ಯೆ ತಲೆದೊರಬಹುದಾದ 9 ಗ್ರಾಮಗಳಲ್ಲಿ ಹೊಸ ಬೋರ್ವೆಲ್ ಅಥವಾ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಬೇಕು. ಹೊಸದುರ್ಗ ಪಟ್ಟಣಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ವಿತರಣೆ ಜಾಲ ಹಾಗೂ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಕೃತಕ ಅಭಾವ ಉಂಟಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ನಗರಕ್ಕೆ ಸಮೀಪವಿರುವ ಮದಕರಿಪುರಕ್ಕೆ ನಗರದ ಕುಡಿಯುವ ನೀರಿನ ಸಂಪರ್ಕ ಜಾಲದಿಂದ ನೀರು ಒದಗಿಸಬೇಕು. ನಗರದಲ್ಲಿ ಒಟ್ಟು 19 ಆರ್.ಓ.ಪ್ಲಾಂಟ್ಗಳಿದ್ದು, ಇದರಲ್ಲಿ 3 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 16 ಸ್ಥಗಿತವಾಗಿವೆ. ನಗರಸಭೆ ಅಧಿಕಾರಿಗಳು ಒಂದು ವಾರದಲ್ಲಿ ಈ ಆರ್.ಓ. ಪ್ಲಾಂಟ್ಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುವ ಮಾದರಿಯಲ್ಲಿ ಖಾಸಗಿಯವರಿಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:
ಕೆ.ಎಂ.ಇ.ಆರ್.ಸಿ ಅಥವಾ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ಜಿಲ್ಲೆಯ ಎಲ್ಲಾ ಆರ್.ಓ. ಪ್ಲಾಂಟ್ಗಳನ್ನು ನಿರ್ಮಿಸಿ-ನಿರ್ವಹಣೆ ಮಾಡುವ ಆಧಾರದಲ್ಲಿ 5 ವರ್ಷಗಳ ಅವಧಿ ಗುತ್ತಿಗೆ ನೀಡಲು ಯೋಜನೆ ರೂಪಿಸುವಂತೆ ಸಭೆಯಲ್ಲಿ ಶಾಸಕರು ಒಕ್ಕೊರಲಿನಿಂದ ಅಧಿಕಾರಿಗಳಿಗೆ ಒತ್ತಾಯಿಸಿದರು.
ವಿಪತ್ತು ನಿರ್ವಹಣಾ ಕೋಶ ತೆರೆಯಲು ತಾಕೀತು:
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಲ್ಲಾ ತಾಲ್ಲೂಕು ಪಂಚಾಯತ್ ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಬೇಕು. ದಿನದ 24 ಗಂಟೆಯೂ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಮೀಸಲಾದ ಹೆಲ್ಪ್ಲೈನ್ ಸಂಖ್ಯೆಗಳನ್ನು ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಜಿಲ್ಲಾ ಪಂಚಾಯಿತಿಗೆ ‘ಗ್ರಾಮ ಫೋನ್’ ಮೂಲಕ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ನೀರಿನ ಸಮಸ್ಯೆ ಉಂಟಾದ ಮೇಲೆ ಕ್ರಮ ಕೈಗೊಳ್ಳುವ ಬದಲು, ಮೊದಲೇ ಯೋಜನೆ ರೂಪಿಸಿ ಸಿದ್ಧರಾಗಿರಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಜಿಲ್ಲೆಯಲ್ಲಿ ಸದ್ಯ 15 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಿದೆ. ಮುಂಬರುವ ದಿನಗಳಲ್ಲಿ ಸುಮಾರು 69 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು.
ಇದನ್ನೂ ಓದಿ:
ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳ ಸುತ್ತಮುತ್ತಲಿರುವ ಖಾಸಗಿ ಬೋರ್ವೆಲ್ಗಳನ್ನು ತಕ್ಷಣವೇ ಗುರುತಿಸಿ ಪಟ್ಟಿ ಮಾಡಿಕೊಳ್ಳಬೇಕು. ಸರ್ಕಾರದ ನಿಯಮದಂತೆ ನಿಗದಿಪಡಿಸಿದ ದರ ನೀಡಿ ಖಾಸಗಿ ಬೋರ್ವೆಲ್ ಮಾಲೀಕರಿಂದ ನೀರು ಪಡೆದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬೇಕು. ಖಾಸಗಿ ಬೋರೆವೆಲ್ಗಳು ಇರದಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪೂರ್ವಾನುಮತಿ ಪಡೆದು ಹೊಸ ಬೋರ್ವೆಲ್ ಕೊರೆಸಲು ಕ್ರಮ ಕೈಗೊಳ್ಳಬೇಕು.
ಹಳೆಯ ಪಂಪ್ ಮೋಟರ್ಗಳನ್ನು ದುರಸ್ಥಿ ಕ್ರಮ ವಹಿಸಬೇಕು. ಈಗಾಗಲೇ ನೀರು ಬತ್ತಿರುವ ಬೋರ್ವೆಲ್ಗಳ ಮೋಟಾರುಗಳನ್ನು ತೆಗೆದು ಹೊಸದಾಗಿ ಕೊರೆದ ಬೋರ್ವೆಲ್ಗಳಲ್ಲಿ ಅಳವಡಿಸಲು ಕ್ರಮ ವಹಿಸಬೇಕು. ವಿಪತ್ತು ಪರಿಹಾರ ನಿಧಿಯಿಂದ 100 ರಿಂದ 300 ಮೀಟರ್ಗಳವರೆಗೆ ಪೈಪ್ಲೈನ್ ವಿಸ್ತರಣೆ ಅನುದಾನ ಒದಗಿಸಲಾಗುವುದು.
ಜಾಗತಿಕ ಎಲ್ ನಿನೋ ಪರಿಣಾಮವಾಗಿ ಬಾರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಶೇ. 30 ರಿಂದ 40 ರಷ್ಟು ಕಡಿಮೆಯಾಗುವ ಮುನ್ಸೂಚನೆಯಿದೆ. ಮುನ್ನೆಚ್ಚರಿಕೆಯಾಗಿ ಜಾನುವಾರುಗಳಿಗೆ ಅಗತ್ಯ ಇರುವ ಮೇವು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಇದನ್ನೂ ಓದಿ:
ಪ್ರಸ್ತುತ ಜಿಲ್ಲೆಯಲ್ಲಿ 44 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕೊರತೆಯಾಗದಂತೆ ಕ್ರಮ ವಹಿಸುವುದಾಗಿ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಆರ್.ಓ.ಪ್ಲಾಂಟ್ಗಳ ನಿರ್ವಹಣೆ ಆದ್ಯತೆ:
ಜಿಲ್ಲೆಯಲ್ಲಿ ಒಟ್ಟು 273 ಆರ್.ಓ ಪ್ಲಾಂಟ್ಗಳಿದ್ದು, ಅವುಗಳಲ್ಲಿ 68 ಘಟಕಗಳು ದುರಸ್ಥಿಗೆ ಬಂದಿವೆ. ಇವುಗಳನ್ನು ಶೀಘ್ರವಾಗಿ ಸರಿಪಡಿಸಲು 46 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ 100 ಕ್ಕೂ ಹೆಚ್ಚು ಫಿಲ್ಟರ್ಗಳನ್ನು ಸರಿಪಡಿಸಲಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ 23 ಗ್ರಾಮ ಪಂಚಾಯತ್ಗಳ 54 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬAದಿದ್ದು, ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳಲ್ಲಿ 54 ಹೊಸ ಬೋರೆವೆಲ್ ಕೊರೆಯಿಸಲಾಗಿದೆ. ಟ್ಯಾಂಕರ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:
2023 ರಲ್ಲಿ 82 ಗ್ರಾಮ ಪಂಚಾಯತ್ಗಳ 233 ಗ್ರಾಮಗಳಲ್ಲಿ ನೀರಿನ ತೊಂದರೆಯಾಗಿತ್ತು. ಅಂದು 870 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗಿತ್ತು. 2024 ರಲ್ಲಿ ಬರಗಾಲದ ತೀವ್ರತೆಯಿಂದಾಗಿ ದಾಖಲೆಯ 7,000 ಟ್ಯಾಂಕರ್ಗಳನ್ನು ಬಳಸಲಾಗಿತ್ತು. 2025 ರಲ್ಲಿ ಮಳೆ ಉತ್ತಮವಾಗಿದ್ದರಿಂದ ಕೇವಲ 883 ಟ್ಯಾಂಕರ್ಗಳ ನೀರು ಸರಬರಾಜು ಮಾಡಲಾಗಿತ್ತು. ಈ ಬಾರಿ ಟ್ಯಾಂಕರ್ ಬದಲು ಹೊಸ ಕೊಳವೆ ಬಾವಿ ಹಾಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ನೀಡಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
158 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ:
ಜಿಲ್ಲೆಯಲ್ಲಿ ಏಪ್ರಿಲ್ನಲ್ಲಿ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಒಟ್ಟು 158 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಲ್ಲಿ ಹಿರಿಯೂರು ತಾಲೂಕು ಅತಿ ಹೆಚ್ಚು ಹಾನಿಯನ್ನು ಸಂಭವಿಸಿದ್ದು 102.25 ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿವೆ. ಚಳ್ಳಕೆರೆ ತಾಲೂಕಿನಲ್ಲಿ 44.80 ಹೆಕ್ಟೇರ್ , ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ಒಟ್ಟಾಗಿ 11.00 ಹೆಕ್ಟೇರ್, ಮೊಳಕಾಲ್ಮೂರು ತಾಲೂಕಿನಲ್ಲಿ 0.80 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಕಂಡುಬಂದಿದೆ.
ಹಾನಿಗೊಳಗಾದ ತೋಟಗಾರಿಕೆ ಬೆಳೆಗಳ ಪೈಕಿ ದಾಳಿಂಬೆ 77 ಹೆಕ್ಟೇರ್, ಬಾಳೆ 22 ಹೆಕ್ಟೇರ್, ಪಪ್ಪಾಯಿ 16 ಹೆಕ್ಟೇರ್, ಮಾವು 13 ಹೆಕ್ಟೇರ್ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು ಅಂದಾಜು 32,58,150 ರೂ. ಗಳ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಹಾರದ ಹಣವು ಸರ್ಕಾರದ ಪರಿಹಾರ ತಂತ್ರಾAಶದ ಮೂಲಕ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಯಾವುದೇ ಸಮೀಕ್ಷೆಗಳು ಬಾಕಿ ಇರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ:
ಸಭೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬಿಸಿಲಾಘಾತದ ಕುರಿತು ಚರ್ಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ತಹಶೀಲ್ದಾರರು, ತಾ.ಪಂ.ಇಓಗಳು, ವಿವಿಧ ನಗರಸಭೆಗಳ ಪೌರಾಯುಕ್ತು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
