ಮುಖ್ಯ ಸುದ್ದಿ
sirigere mata: ಸುಮ್ಮನಿದ್ದರೆ ಒಳಿತು ತಿರುಗೇಟು ನೀಡುವ ಕಾಲ ದೂರವಿಲ್ಲ | ಷಡ್ಯಂತ್ರ ತಂಡಕ್ಕೆ ಸಿರಿಗೆರೆ ಭಕ್ತರ ಖಡಕ್ ಸಂದೇಶ

CHITRADURGA NEWS | 21 AUGUST 2024
ಚಿತ್ರದುರ್ಗ: ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ ಸಿರಿಗೆರೆ ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರವಿಲ್ಲ ಎಂದು ಹೆಮ್ಮನಬೇತೂರು ಗ್ರಾಮದ ಭಕ್ತರು ಷಡ್ಯಂತ್ರ ತಂಡಕ್ಕೆ ಎಚ್ಚರಿಸಿದ್ದಾರೆ.
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪೀಠದಲ್ಲಿ ಮುಂದುವರಿಯಬೇಕು ಎಂದು ಆಗ್ರಹಿಸಿ ಭಕ್ತರು ರಕ್ತದಲ್ಲಿ ಸಹಿ ಮಾಡಿರುವ ಪತ್ರಗಳನ್ನು ಶ್ರೀಗಳಿಗೆ ಕಳುಹಿಸಿದ್ದಾರೆ. ಇದರಲ್ಲಿ ‘ಮಠದ ವಿರುದ್ಧ ಕೆಲವರು ಅಪಪ್ರಚಾರ ಮಾಡಿಕೊಂಡು ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ. ಶ್ರೀಗಳು ನಾಡಿನ ಆಸ್ತಿಯಾಗಿದ್ದಾರೆ. ಅವರನ್ನು ವಿಚಲಿತರನ್ನಾಗಿ ಮಾಡುವ ಪ್ರಯತ್ನಗಳ ವಿರುದ್ಧ ನಾವು ದನಿ ಎತ್ತುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ಎಲ್ಲ ಭಕ್ತರ ಬೆಂಬಲ ತಮಗೆ ಸೂಚಿಸುತ್ತಿದ್ದೇವೆ. ಯಾರ ಒತ್ತಡಕ್ಕೂ ಮಣಿಯದೇ ಸ್ವಯಂಪ್ರೇರಿತರಾಗಿ ನಾವೆಲ್ಲರೂ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೀಗಳ ವಿರುದ್ಧ ನಡೆಸುತ್ತಿರುವ ಪಿತೂರಿ ವಿರುದ್ಧ ಹೋರಾಟಕ್ಕೂ ಸಿದ್ಧರಿದ್ದೇವೆ. ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ತುಂಬಿ ತುಳುಕಿದ ತಳಕು | ಕುಸಿದವು ಮನೆ, ಹೆಕ್ಟೇರ್ಗಟ್ಟಲೇ ಬೆಳೆ ನಾಶ
ಈ ಷಡ್ಯಂತ್ರಗಳನ್ನು ಬಲ್ಲವರಾದ ಶ್ರೀಗಳು ಅಪಪ್ರಚಾರಗಳಿಗೆ ಗಮನ ನೀಡದೆ ತಮ್ಮ ಸಮಾಜಮುಖಿ ಸೇವೆಯಲ್ಲಿ ಮುಂದುವರಿಯಬೇಕು. ಪೀಠ ತ್ಯಾಗದ ಮಾತು ಕೈಬಿಟ್ಟು ಪೀಠದಲ್ಲಿಯೇ ಮುಂದುವರಿಯಬೇಕು. ಪಿತೂರಿ ನಡೆಸುವವರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟು ದಿನ ಇಲ್ಲದ ಗೊಂದಲ, ಸುಳ್ಳು ಆರೋಪ, ಪಿತೂರಿ ಈಗ ಹೆಚ್ಚಾಗಿ ನಡೆಯುತ್ತಿದೆ. ನಾವೆಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ದೇವಾಲಯದಲ್ಲಿ ಗ್ರಾಮದ ಮುಖಂಡರು, ಭಕ್ತರೆಲ್ಲರೂ ಸೇರಿ ತರಳಬಾಳು ಮಠದ ಮೇಲೆ ಸುಳ್ಳು ಸುದ್ದಿ, ಪಿತೂರಿ ಮಾಡುವ ಬಂಡವಾಳಶಾಹಿಗಳ ವಿರುದ್ಧ ತೊಡೆ ತಟ್ಟಿ ನಿಲ್ಲಬೇಕು. ಶ್ರೀಗಳ ನೇತೃತ್ವದಲ್ಲಿ ಸಮಾಜ ಮುಂದುವರಿಯಲಿ ಎಂಬ ಆಶಯದಿಂದ ರಕ್ತದಲ್ಲಿ ಸಹಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ.
ಶ್ರೀಗಳು ಹೆಮ್ಮಬೇತೂರು ಗ್ರಾಮ ಮಾತ್ರವಲ್ಲ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು. ಎಷ್ಟೋ ಹಳ್ಳಿಗಳು ಈಗ ನೀರಾವರಿ ಸೌಲಭ್ಯ ಕಂಡಿದ್ದು, ಅದು ಸಿರಿಗೆರೆ ಶ್ರೀಗಳಿಂದ ಆಗಿರುವ ಕಾರ್ಯ. ಹಾಗಾಗಿ ಶ್ರೀಗಳ ಬದಲಾವಣೆ ಮಾಡಬಾರದು ಎಂಬ ನಿರ್ಣಯ ತೆಗೆದುಕೊಂಡು ಶ್ರೀಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ರಾತ್ರೋರಾತ್ರಿ ಕಣ್ಮುಚ್ಚಿ ಸುರಿದ ಮಳೆ | ಕೋಡಿ ಬಿದ್ದ ಕೆರೆಗಳು ಗ್ರಾಮಗಳು ಜಲಾವೃತ
ಭಕ್ತರಾದ ಎನ್.ಎಂ. ಪ್ರಸನ್ನ, ಎಸ್.ಬಸವರಾಜ್, ಬಿ.ಎಸ್.ಸಚಿನ್, ಪಂಪಣ್ಣ, ಸಿ.ಎಸ್.ಪ್ರಕಾಶ, ಎಚ್.ಆರ್. ಶಿವಕುಮಾರ, ಇ.ರಮೇಶ, ಕರಿಬಸಣ್ಣ, ಎಸ್.ಆರ್.ಪ್ರಕಾಶ್, ನಾಗರಾಜಪ್ಪ, ಎಸ್.ಎನ್.ಕಲ್ಲೇಶಪ್ಪ, ಎಸ್.ಎಸ್. ಸೋಮಶೇಖರ್, ತಿಪ್ಪೇಸ್ವಾಮಿ, ಟಿ.ಡಿ.ರಮೇಶ್, ಬಕ್ಕೇಶ್, ಯು.ಆರ್.ಎಸ್.ಶ್ರೀನಿವಾಸ್, ಜಿ.ಎಸ್.ರಾಜಶೇಖರ್ ಮತ್ತಿತರರು ಪತ್ರಕ್ಕೆ ರಕ್ತದಲ್ಲಿ ಸಹಿ ಮಾಡಿದ್ದಾರೆ.
