
CHITRADURGA NEWS | 29 SEPTEMBER 2025
ಚಿತ್ರದುರ್ಗ: ದುಶ್ಚಟಗಳನ್ನು ತ್ಯಜಿಸಿ ಬದಲಾವಣೆಯ ಕಡೆ ಗಮನ ನೀಡಿದಾಗ ಮಾತ್ರ ಮಾದಿಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬದ ಪ್ರಯಕ್ತ ಚರ್ಮ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ

ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೊಲ್ಲಾಪುರ ಶ್ರೀಮಹಾಲಕ್ಷ್ಮಿ ದೇವಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು.
ಸರ್ಕಾರ ನಿಮ್ಮ ಉನ್ನತಿಯ ಬಗ್ಗೆ ಯೋಚಿಸುವುದಿಲ್ಲ, ನಿಮ್ಮ ಬೆಳವಣಿಗೆಗೆ ನೀವೇ ಶಿಲ್ಪಿಗಳಾಗಬೇಕು, ಕುಡಿತ, ಅನಕ್ಷರತೆ ಮಾದಿಗ ಸಮುದಾಯಕ್ಕೆ ಶಾಪವಾಗಿದೆ. ನಾನು ಕೂಡ ದುಶ್ಚಟಕ್ಕೆ ಒಳಗಾಗಿದ್ದಾರೆ ಹಮಾಲಿ ಕೆಲಸ ಮಾಡಿಕೊಂಡು ಬದುಕಬೇಕಿತ್ತು. ಕೆಟ್ಟ ಚಟಗಳಿಂದ ದೂರ ಉಳಿದಿದ್ದಕ್ಕೆ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ನಾವು ಸಾಗುತ್ತಿರುವ ದಾರಿ ಸರಿಯೋ, ತಪ್ಪೋ ಎನ್ನುವುದನ್ನು ನಿರ್ಣಯಿಸುವ ವಿವೇಕ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ ಆದರೆ ನಾವು ಕೆಟ್ಟ ವಿಷಯಗಳಿಗೆ ಆದ್ಯತೆ ನೀಡಿ ಕುಟುಂಬವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.
ಇದನ್ನೂ ಓದಿ: ಕೋಟೆ ನಾಡಿನಲ್ಲಿ ಅದ್ದೂರಿ ಬಸವ ಸಂಸ್ಕೃತಿ ಯಾತ್ರೆ | ಕಲಾ ತಂಡಗಳ ಮೆರುಗು | MLC ನವೀನ್ ಚಾಲನೆ
ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿಕ್ಷಣ ಪಡೆಯದ ಹೊರತು ವ್ಯಕ್ತಿಯ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಮನೆಯ ಹಿರಿಯರು ಸರಿ ದಾರಿಯಲ್ಲಿ ಸಾಗಿದರೆ ಅದು ಕಿರಿಯರಿಗೆ ಮಾರ್ಗ ದರ್ಶನವಾಗುತ್ತದೆ. ನೀವೇ ತಪ್ಪು ದಾರಿ ತುಳಿದರೆ ಕುಟುಂಬ ನಾಶವಾಗುತ್ತದೆ ಎಂದರು.
ಶಿಕ್ಷಣ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಜಾತಿ ವರ್ಗದವರಿಗೂ ಶಿಕ್ಷಣ ಪಡೆಯಲು ಸಾಧ್ಯವಿದೆ. ಸಮುದಾಯದ ಯುವಕರು ಕೇವಲ ಹೊರಟ ಸಂಘರ್ಷಕ್ಕೆ ಆದ್ಯತೆ ನೀಡದೆ ದುಡಿಮೆಗೆ ಒತ್ತು ನೀಡಿ, ಬಡತನದ ನೆಪದಲ್ಲಿ ಶಿಕ್ಷಣದಿಂದ ವಿಮುಖರಾದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಶ್ರೀಗಳು ಎಚ್ಚರಿಸಿದರು
ಗ್ರಾಮಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಲು ಎಲ್ಲಾ ಸಮುದಾಯಗಳೂ ಒಗ್ಗೂಡಿ ಸಾಗಬೇಕು. ದೇವಾಲಯಗಳು ಧಾರ್ಮಿಕ ಶ್ರದ್ದಾ ಕೇಂದ್ರಗಳಾಗಬೇಕು, ಗ್ರಾಮಗಳಲ್ಲಿ ಎಲ್ಲಾ ಜಾತಿ ವರ್ಗಗಳ ಜನರು ಸೌಹಾರ್ದತೆಯಿಂದ ಬಾಳಬೇಕು ಎಂದು ಸ್ವಾಮೀಜಿ ತಿಳಿಸಿದರು.
ದಲಿತರು ಮತಾಂತರದಿಂದ ದೂರವಿರಬೇಕು, ಮತಾಂತರವಾದರೆ ನೀವು ಧಾರ್ಮಿಕ ಅಲ್ಪ ಸಂಖ್ಯಾತರಾಗುತ್ತೀರಿ. ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತೀರಿ, ಆದುದರಿಂದ ಜಾತಿ ಗಣತಿಯ ವೇಳೆ ಧರ್ಮದ ಕಾಲಂ ನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 29 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಮಾತನಾಡಿ, ದೇವಾಲಗಳು ಮನಸ್ಸುಗಳನ್ನು ಬೆಸೆಯುವ ಕೇಂದ್ರಗಳಾಗಿವೆ ಆದರೆ ಮೂಢನಂಬಿಕೆಗೆ ಬಲಿಯಾಗಿ ಹಬ್ಬ ಜಾತ್ರೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ದೇವಾಲಯಗಳು ಹಿಂದೂಗಳ ಐಕ್ಯತೆಯ ಕೇಂದ್ರಗಳಾಗಿವೆ. ಗ್ರಾಮಗಳ ಬಹುತೇಕೆ ವಿಷಯಗಳು ನಿರ್ಧಾರವಾಗುವುದು ದೇವಾಲಯಗಳಲ್ಲಿಯೇ. ಅದ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ದೇವಾಲಗಳ ಪಾತ್ರ ಅನನ್ಯ ಎಂದು ಹೇಳಿದರು.
ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ನಿರಂತರ ಶ್ರಮ ವಹಿಸಿದ ಶ್ರೀ ಬಸವ ಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಬಳ್ಳಾರಿ ಹೆಚ್ ಹನುಮಂತಪ್ಪ, ಬಿ ಪಿ ಪ್ರಕಾಶಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ಹಾಗೂ ಖ್ಯಾತ ವೈದ್ಯರಾದ ಡಾ. ಈ.ಸತೀಶ್ ಇವರನ್ನು ಅಭಿನಂದಿಸಲಾಯಿತು.
ಇದನ್ನೂ ಓದಿ: GST ಇಳಿಕೆ | ಜನರು, ವ್ಯಾಪಾರಿಗಳ ಬಳಿ ತೆರಳಿ ರಿಯಾಲಿಟಿ ಚೆಕ್ | ಸಂಸದ ಗೋವಿಂದ ಕಾರಜೋಳ | ಜಿ.ಎಚ್ ತಿಪ್ಪಾರೆಡ್ಡಿ
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನರಸಿಂಹರಾಜು, ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ಹೂಡಿ ಮಂಜುನಾಥ್, ಪರಶುರಾಮ್ ಹೊನ್ನಳ್ಳಿ, ಯೋಗೀಶ್ ಸೋರೆಕುಂಟೆ, ಸಂದೀಪ್ ಗುಂಡಾರ್ಪಿ, ಮಾದಾರಚನ್ನಯ್ಯ ನೌಕರರ ಸೇವಾ ಸಮಿತಿಯ ಸದಸ್ಯರು ಮುಖಂಡರಾದ ಮಾರಘಟ್ಟ ಜಯಪ್ಪ, ಬೊಮ್ಮೇನಹಳ್ಳಿ ಮಹಾಂತೇಶ್, ನಾಗರಾಜ್, ಅನಂತ್ ಲಕ್ಷ್ಮಿಸಾಗರ ದೇವರಾಜ್, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಸಿಇಓ ಎಸ್. ರಾಘವೇಂದ್ರ, ವ್ಯವಸ್ಥಾಪಕ ಓ.ಮಲ್ಲಿಕಾರ್ಜುನ್, ಜಾನುಕೊಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಸೇರಿದಂತೆ ಮಲ್ಲಾಪುರ ಗ್ರಾಮದ ಮುಖಂಡರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
