
CHITRADURGA NEWS | 07 SEPTEMBER 2026
ಚಿತ್ರದುರ್ಗ: ಶರಣರ ವಿಚಾರಗಳನ್ನು ನಾವು ಕೇವಲ ಸಿದ್ಧಾಂತದ ರೂಪದಲ್ಲಿ ಹೇಳುತ್ತೇವೆಯೇ ಹೊರತು, ಅವುಗಳನ್ನು ಬದುಕಿನಲ್ಲಿ ಅನುಸರಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ. ಇದು ಖೇದಕರ ಸಂಗತಿ ಎಂದು ಎಸ್ಜೆಎಂ ವಿದ್ಯಾಪೀಠ ಹಾಗೂ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಪಿ.ಎಸ್. ಶಂಕರ್ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ₹22.11 ಲಕ್ಷ ನಿವ್ವಳ ಲಾಭ
ಶ್ರೀ ಮುರುಘಾಮಠದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿರುವ ಅನುಭಾವ ಶ್ರಾವಣ–ಶರಣ ಚಿಂತನ ಮಾಲಿಕೆಯ 22ನೇ ದಿನದ ಕಾರ್ಯಕ್ರಮದಲ್ಲಿ ಮಂಟೇಸ್ವಾಮಿಯವರ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿದರು.
ಬಸವಾದಿ ಶಿವಶರಣರು ಹಾಗೂ ವಿವಿಧ ದಾರ್ಶನಿಕರ ವಿಚಾರಗಳನ್ನು ನಾವು ಸಾಕಷ್ಟು ತಿಳಿದುಕೊಳ್ಳುತ್ತೇವೆ. ಆದರೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಸೋಲುತ್ತಿದ್ದೇವೆ. ‘ಕಳಬೇಡ, ಕೊಲಬೇಡ’ ಎಂದು ಹೇಳುತ್ತಲೇ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ. ಅನುಭಾವ ಎಂದರೆ ಅಂತರಂಗ ಮತ್ತು ಬಹಿರಂಗ ಒಂದೇ ಆಗಿರಬೇಕು. ಹೊರಗೆ ಒಳ್ಳೆಯವರಂತೆ ಕಾಣಿಸಿಕೊಂಡು ಅಂತರಂಗದಲ್ಲಿ ದ್ವೇಷ, ಮತ್ಸರಗಳನ್ನು ತುಂಬಿಕೊಂಡಿರುವುದು ಸರಿಯಲ್ಲ ಎಂದರು.
ಸೂರ್ಯನು ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಬೆಳಕು ನೀಡುವಂತೆ, ನಾವು ಕೂಡ ಬಸವಾದಿ ಶಿವಶರಣರು ಹಾಗೂ ಮಂಟೇಸ್ವಾಮಿಯವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸ ಇರಬಾರದು. ತಪ್ಪುಗಳು ಸಹಜವಾಗಿದ್ದು, ಅವುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: ಯುವಕರ ಸಂಘಟನೆಗೆ ಆದ್ಯತೆ | ಭಾರತ ಜೋಡೋ ಸಂಘಟನೆ ಮೂಲಕ ಪಕ್ಷ ಬಲವರ್ಧನೆ
ಬಸವಣ್ಣನವರು ಅನುಭವ ಮಂಟಪದಲ್ಲಿ ಯಾವುದೇ ತಾರತಮ್ಯವಿಲ್ಲದೆ ವಿವಿಧ ಕಸುಬುಗಳ ಜನರಿಗೆ ಅವಕಾಶ ನೀಡಿದ್ದರು. ಅದೇ ರೀತಿಯಲ್ಲಿ ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬದುಕುವುದು ಅಗತ್ಯ. ಈ ಆಶಯದ ಭಾಗವಾಗಿಯೇ ‘ಅನುಭಾವ ಶ್ರಾವಣ’ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಅಂತರಂಗ ಶುದ್ಧಿಯೇ ಮಂಟೇಸ್ವಾಮಿಯವರ ಶಕ್ತಿ
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಂಟೇಸ್ವಾಮಿಯವರು ಮಧ್ಯ ಕರ್ನಾಟಕದಲ್ಲಿ ಸಂಚರಿಸಿ ಬಳಿಕ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಭಾಗಗಳಲ್ಲಿ ಜಂಗಮರಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದರು. ತಮ್ಮ ಅನುಭಾವದ ಅಂತರಂಗ ಶುದ್ಧಿಯಿಂದ ಮೌಖಿಕವಾಗಿ ಕಟ್ಟಿಹಾಡಿದ ಸಾಲುಗಳು ಮಹಾಕಾವ್ಯಗಳಾಗಿ ರೂಪುಗೊಂಡಿವೆ ಎಂದರು.
ಮಂಟೇಸ್ವಾಮಿ ಹಾಗೂ ಕೊಡೇಕಲ್ ಬಸವಣ್ಣನವರ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಣಿತರು ಸಂಶೋಧನೆ ನಡೆಸಿ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಮಂಟೇಸ್ವಾಮಿಯವರ ಸಂದೇಶವನ್ನು ಅರಿಯಲು ದೊಡ್ಡ ವಿದ್ಯೆಗಿಂತ ಅಂತರಂಗದ ಶುದ್ಧಿ ಮುಖ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ಬಗ್ಗೆ ಹಗುರ ಮಾತು | ಕೃಷ್ಣಭೈರೇಗೌಡರ ಕ್ಷಮೆಗೆ ಆಗ್ರಹ
ಇದೇ ವೇಳೆ ಡಾ. ಪಿ.ಎಸ್. ಶಂಕರ್ ಅವರ ಸೇವೆ ಹಾಗೂ ಪ್ರತಿಭೆಯನ್ನು ಸ್ಮರಿಸಿದ ಅವರು, ಇಳಿವಯಸ್ಸಿನಲ್ಲಿಯೂ ಬರಹ, ತರಬೇತಿ ಹಾಗೂ ಉಪನ್ಯಾಸಗಳ ಮೂಲಕ ಅವರು ಸಕ್ರಿಯರಾಗಿದ್ದಾರೆ. ವಿದ್ಯಾಪೀಠ ಹಾಗೂ ಶಾಲಾ-ಕಾಲೇಜುಗಳಿಗೂ ಅವರ ಮಾರ್ಗದರ್ಶನ ದೊರೆಯುತ್ತಿದೆ ಎಂದರು.
ಮಂಟೇಸ್ವಾಮಿಯವರ ಜೀವನ ಹಾಗೂ ಸಾಧನೆ ಕುರಿತು ಚಿತ್ರದುರ್ಗ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎ.ಎಂ. ಲಕ್ಷ್ಮಿ ಮಾತನಾಡಿ, ಮಂಟೇಸ್ವಾಮಿ ಶ್ರಮ ಸಂಸ್ಕೃತಿ, ಜಾತಿ ವಿರೋಧಿ ನಿಲುವು ಹಾಗೂ ಆಧ್ಯಾತ್ಮಿಕತೆಯ ಶಕ್ತಿಯುತ ಪ್ರತೀಕವಾಗಿದ್ದಾರೆ ಎಂದರು.
ಮಂಟೇಸ್ವಾಮಿ ಕಾವ್ಯವು ಕನ್ನಡ ಪರ ಹಾಗೂ ಜನಪರ ಮಹಾಕಾವ್ಯಗಳಲ್ಲಿ ಒಂದಾಗಿದ್ದು, ಲಿಖಿತ ರೂಪಕ್ಕಿಂತ ಹೆಚ್ಚಾಗಿ ಮೌಖಿಕ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದಿದೆ. ಸಾಮಾಜಿಕ ಅಸಮಾನತೆ ನಿವಾರಣೆ, ಜಾತಿ ವ್ಯವಸ್ಥೆಯ ವಿರೋಧ ಹಾಗೂ ಸ್ತ್ರೀ ಸಮಾನತೆಗಾಗಿ ಮಂಟೇಸ್ವಾಮಿ ಶ್ರಮಿಸಿದರು. ವಿವಿಧ ಜಾತಿ-ವರ್ಗಗಳ ಜನರನ್ನು ಒಂದೇ ವೇದಿಕೆಯಡಿ ತಂದು ಅನುಭಾವಿ ಸಹೋದರತ್ವ ನಿರ್ಮಿಸಿದ ಕಾರಣಿಕ ಪುರುಷರಾಗಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವ ಮುರುಘೇಂದ್ರ ಶ್ರೀಗಳು ವಿಷಯ ಕುರಿತು ಮಾತನಾಡಿದರು. ವಿವಿಧ ಸಮಾಜಗಳ ಮುಖಂಡರಾದ ಬಸವರಾಜ ಕಟ್ಟಿ, ನಾಗರಾಜ್ ಸಂಗಂ, ಶಿವಣ್ಣ ಕಸವನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಅರಿವು ಶೈಕ್ಷಣಿಕ ಸಾಲ | ಅರ್ಜಿ ಅಹ್ವಾನ
ಎಸ್.ಜೆ.ಎಂ. ಪ್ರಿಯದರ್ಶಿನಿ ಪ್ರೌಢಶಾಲೆಯ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಪತ್ತಾರ್ ಮಂಟೇಸ್ವಾಮಿಯವರ ಗೀತೆಗಳನ್ನು ಹಾಡಿದರು. ಮಧುಸೂಧನ್ ಸ್ವಾಗತಿಸಿದರು. ಗೀತಾ ನಿರೂಪಿಸಿ, ಶರಣು ಸಮರ್ಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

