
CHITRADURGA NEWS | 22 JANUARY 2024
ಚಿತ್ರದುರ್ಗ (CHITRADURGA): ಪ್ರಭು ಶ್ರೀರಾಮನಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧ. ಇಲ್ಲಿನ ಪ್ರತಿ ಸ್ಥಳಕ್ಕೂ ರಾಮನ ಸ್ಪರ್ಶವಿದೆ. ಗುಡ್ಡದ ನೇರಲಕೆರೆಯ ದಶರಥ ರಾಮೇಶ್ವರಸ್ವಾಮಿ ಸನ್ನಿಧಿ, ವಿಠಲ ರುಕ್ಕುಮಾಯಿ ಪಾಂಡುರಂಗ ದೇವಾಲಯದಲ್ಲಿನ ರಾಮನ ಪಾದುಕೆಗಳಿಂದ ಹೊಸದುರ್ಗ ಕೊಂಚ ವಿಶೇಷವಾಗಿದೆ.
ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮನ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸದುರ್ಗ ಪಟ್ಟಣದ ಗಾಂಧಿ ವೃತ್ತದ ವಿಠಲ ರುಕ್ಕುಮಾಯಿ ಪಾಂಡುರಂಗ ದೇವಾಲಯದಲ್ಲಿ ಜ.22 ರಂದು ದರ್ಶನ ಮಾಡಬಹುದಾಗಿದೆ.

ಇದನ್ನೂ ಓದಿ: ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ | ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ
1992ರ ನವೆಂಬರ್ 6ರಂದು ಶ್ರೀರಾಮ ಪಾದುಕೆ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಭೆ ನಡೆದ ಕಾರಣ ಶ್ರೀರಾಮನ ಪಾದುಕೆಗಳನ್ನು ಅಂದಿನ ವಿಶ್ವ ಹಿಂದೂ ಪರಿಷತ್ತಿನ ಆರ್.ಡಿ. ಸೀತಾರಾಂ ಅವರು ಪಟ್ಟಣದ ವಿಠ್ಠಲ ರುಕ್ಕುಮಾಯಿ ಪಾಂಡುರಂಗ ದೇವಾಲಯದಲ್ಲಿ ಇಟ್ಟಿದ್ದರು. ಅದಕ್ಕೆ ಪ್ರತಿದಿನ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗುತ್ತಿದೆ. ಯಾತ್ರೆ ಸಂದರ್ಭ ರಾಮನ ಪಾದುಕೆಗಳಿಗೆ ಮಂದಿರ ನಿರ್ಮಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಆರ್.ಡಿ. ಸೀತಾರಾಮ್ ರಾವ್, ದೇವಸ್ಥಾನ ಟ್ರಸ್ಟ್ ಸದಸ್ಯ ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಭವಿಷ್ಯ ನುಡಿಯುವ ಗಂಗೆ ಹೊಂಡ | ರಾಮಗಿರಿಯಲ್ಲಿ ಒಂದು ದಿನ ತಂಗಿದ್ದ ಪ್ರಭು ಶ್ರೀರಾಮ
ರಾಮಾಯಣ ಕಾಲದ ಪುರಾಣ ಪ್ರಸಿದ್ಧ ಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಗುಡ್ಡದ ನೇರಲಕೆರೆಯ ದಶರಥ ರಾಮೇಶ್ವರಸ್ವಾಮಿ ಸನ್ನಿಧಿಯಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಗುಹೆಯ ಒಳಗೆ ಶಿವಲಿಂಗವಿದ್ದು, ದಶರಥ ಮಹಾರಾಜ ಅದನ್ನು ಸ್ಥಾಪಿಸಿದ. ಶ್ರೀರಾಮನೂ ಅದಕ್ಕೆ ಪೂಜೆ ಸಲ್ಲಿಸಿದ್ದ ಎಂಬ ಐತಿಹ್ಯವಿದೆ. ರಾಮಾಯಣ ಕಾಲದ್ದು ಎಂದು ಪ್ರಸಿದ್ಧಿ ಪಡೆದಿರುವ ಕಾರಣ ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಅಂಗವಾಗಿ ಸೋಮವಾರ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ವಜ್ರಗಿರಿಯ ದಟ್ಟಾರಣ್ಯದಲ್ಲಿ ಶ್ರವಣಕುಮಾರನು ತಂದೆ ತಾಯಿಯ ಬಾಯಾರಿಕೆ ಈಡೇರಿಸಲು ನೀರು ತರಲು ಹೋದಾಗ, ದಶರಥ ಮಹಾರಾಜ ಬಿಟ್ಟ ಬಾಣಕ್ಕೆ ಶ್ರವಣಕುಮಾರ ಬಲಿಯಾದ. ಆಗ ಶ್ರವಣಕುಮಾರನ ತಂದೆ–ತಾಯಿ ದಶರಥನಿಗೆ ಶಾಪ ನೀಡುತ್ತಾರೆ. ಆಗ ದಶರಥನು ಶಾಪವಿಮೋಚನೆಗಾಗಿ ವಜ್ರಗಿರಿ (ತಾಲ್ಲೂಕಿನ ಮತ್ತೋಡು ಹೋಬಳಿ ಗುಡ್ಡದನೇರಲಕೆರೆ) ಅರಣ್ಯದಲ್ಲಿ ಒಂದು ಶಿವಲಿಂಗ ಸ್ಥಾಪಿಸಿ, ಪೂಜೆ ನೆರವೇರಿಸಿದ.
ಇದನ್ನೂ ಓದಿ: ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಮೃತಪಟ್ಟ ವ್ಯಕ್ತಿ
ವನವಾಸ ಪೂರೈಸಿ ಆಯೋಧ್ಯೆಗೆ ಹಿಂದಿರುಗುತ್ತಿದ್ದ ಶ್ರೀರಾಮ ಇದೇ ಶಿವಲಿಂಗಕ್ಕೆ ಪೂಜೆ ನೇರವೇರಿಸಿದ್ದ. ದಶರಥ ಪ್ರತಿಷ್ಠಾಪಿಸಿದ್ದ ಶಿವಲಿಂಗಕ್ಕೆ, ದಶರಥ ಹಾಗೂ ಶ್ರೀರಾಮ ಇಬ್ಬರೂ ಪೂಜೆ ಸಲ್ಲಿಸಿದ್ದರಿಂದ ಈ ಕ್ಷೇತ್ರ ದಶರಥ ರಾಮೇಶ್ವರ ಎಂದು ಹೆಸರುವಾಸಿಯಾಗಿದೆ. ಇದಕ್ಕೆ ಇಂಬು ನೀಡುವಂತೆ ಶ್ರೀಕ್ಷೇತ್ರ ಕಾಡಿನಲ್ಲಿದ್ದು, ಇಂದಿಗೂ ಗುಹೆ ಮುಂಭಾಗದಲ್ಲಿರುವ ಪರ್ವತವನ್ನು ಶ್ರವಣಕುಮಾರನ ಪರ್ವತ ಎನ್ನಲಾಗುತ್ತಿದೆ ಎಂದು ಗುಡ್ಡದನೇರಲಕೆರೆ ಗ್ರಾಮದ ನಾಗರಾಜ್ ಓಣಿಮನೆ ಮಾಹಿತಿ ನೀಡಿದರು.
ದಟ್ಟಾರಣ್ಯದ ಮಧ್ಯದಲ್ಲಿ ನೆಲೆಸಿರುವ ದಶರಥ ರಾಮೇಶ್ವರ ಸ್ವಾಮಿ ಸನ್ನಿಧಾನದಲ್ಲಿ ವಾನರಗಳ (ಕೋತಿ) ದಂಡೇ ಇದೆ. ಮೊದಲು ವಾನರರಿಗೆ ಸೇವೆ, ನಂತರ ದೇವರಿಗೆ ನೈವೇದ್ಯ ಆನಾದಿಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ದೇವಾಲಯದಿಂದ ಸ್ವಲ್ಪ ದೂರದಲ್ಲಿ ಶ್ರವಣಕುಮಾರ ಹಾಗೂ ಅವರ ತಂದೆ–ತಾಯಿಯರ ಸಮಾಧಿ ಎನ್ನಲಾದ ಸ್ಥಳ ಇದೆ.
ರಾಮಾಯಣ ಕಾಲದ ಐತಿಹಾಸಿಕ ಸ್ಥಳಗಳನ್ನು ಸಂಶೋಧಿಸಲು ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸ ಮಂಡಳಿಯವರು 2017ರಂದು ಮಾರ್ಚ್ 26ರಂದು ಈ ಕ್ಷೇತ್ರಕ್ಕೆ ಭೇಟಿ ನೀಡಿ, ‘ರಾಮಾಯಣಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಲ್ಲಿ ಇದೂ ಒಂದು’ ಎಂಬುದಾಗಿ ಗುರುತಿಸಿದ್ದರು.
ಈ ಕ್ಷೇತ್ರದ ಮಹಿಮೆ ಅರಿತ ಪ್ರೊ. ಅಶುತೋಷ್ ಮನೋಜ್ ಅವರು ರಾಮಮಂದಿರ ನಿರ್ಮಾಣದ ಕುರಿತು ಸ್ವಾಮಿಯಲ್ಲಿ ಭವಿಷ್ಯ ಕೇಳಿದ್ದರು. ಆಗ 2018ರ ನಂತರ ರಾಮಮಂದಿರ ನಿರ್ಮಾಣಕ್ಕೆ ಶುಭದಿನ ಬರಲಿದೆ. ಆಯೋಧ್ಯೆಯ ವಿವಾದಿತ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣವಾಗಲಿದೆ ಎಂದು ನುಡಿದಿತ್ತು ಎಂದು ದೇವಸ್ಥಾನದ ಧರ್ಮದರ್ಶಿ ಸಮಿತಿ ಸಂಚಾಲಕ ಎನ್.ಕೆ. ರವಿಕುಮಾರ್ ಹೇಳಿದರು.
ಎರಡು ವರ್ಷಗಳ ಹಿಂದೆ ಬಜರಂಗದಳದ ಪ್ರಭಂಜನ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಪವಿತ್ರ ಮೃತ್ತಿಕೆ ಹಾಗೂ ಗಂಗಾಜಲವನ್ನು ಬೆಳ್ಳಿಯ ಹೊದಿಕೆಯೊಂದಿಗೆ ಆಯೋಧ್ಯೆಗೆ ತಲುಪಿಸಿದ್ದರು. ಆ ಪವಿತ್ರ ಗಂಗಾಜಲವನ್ನು ಶ್ರೀರಾಮನ ಪ್ರತಿಷ್ಠಾಪನೆಯ ಜಾಗದಲ್ಲಿನ ಪೀಠದ ಕೆಳಗೆ ಹಾಕಲಾಗಿದೆ. ಆ ಸಮಯದಲ್ಲಿ ಕರ್ನಾಟಕದಿಂದ ತಲುಪಿದ ಏಕೈಕ ಮೃತ್ತಿಕೆ ಹಾಗೂ ಗಂಗಾಜಲ ಇದು ಎನ್ನುತ್ತಾರೆ ಸ್ಥಳೀಯರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
