ಮುಖ್ಯ ಸುದ್ದಿ
ಇಷ್ಟಲಿಂಗ ಜಾತಿ ಕುರುಹು ಅಲ್ಲ | ಶಿವಯೋಗಿ ಸಿ.ಕಳಸದ

CHITRADURGA NEWS | 09 JUNE 2024
ಚಿತ್ರದುರ್ಗ: ಹಣ ಕೊಟ್ಟು ಅಗತ್ಯ ವಸ್ತು ಖರೀದಿಸಬಹುದೇ ಹೊರತು, ಸುಖ, ಶಾಂತಿ, ನೆಮ್ಮದಿ ಕೊಳ್ಳಲು ಸಾಧ್ಯವಿಲ್ಲ. ಧ್ಯಾನದ ಮೂಲಕ ಮನೋಬಲ, ಆತ್ಮವಿಶ್ವಾಸ, ದೃಢತೆ ಮತ್ತು ಸಮಸ್ಯೆಗಳನ್ನು ಎದುರಿಸಬಹುದಾದ ಶಕ್ತಿಗಳಿಸಬಹುದಾಗಿದೆ ಎಂದು ಎಸ್ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶ್ರೀಮಠದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಆಯೋಜಿಸಿದ್ದ ಶಿವಯೋಗ (ಧ್ಯಾನ)ದ ಪ್ರಾತ್ಯಕ್ಷಿಕೆಯ ಸಾನಿಧ್ಯವಹಿಸಿ ಮಾತನಾಡಿದರು.
‘ಆದಿಮಾನವ ಹೇಗೆ ವಿಕಾಸ ಹೊಂದುತ್ತಾ ನಾಗರಿಕ ಮಾನವನಾಗಿದ್ದನೋ ಹಾಗೆ ಹಾಲು ಸಂಸ್ಕಾರ ಹೊಂದುತ್ತಾ ಯಾವ ರೀತಿ ತುಪ್ಪವಾಗುತ್ತದೆಯೋ ಆ ರೀತಿಯಲ್ಲಿ ಮನುಷ್ಯರು ಸಂಸ್ಕಾರವಂತರಾಗಬೇಕು. ಈಗ ಏನೆಲ್ಲವನ್ನು ಮನುಷ್ಯರು ಸಂಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ದಯೆ, ಅನುಕಂಪ, ಮಾನವೀಯತೆ, ಪರೋಪಕಾರ ಗುಣಗಳಿಂದ ದೂರವಾಗುತ್ತಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ಮುರುಘಾಮಠವು ಜನರ ಬದುಕಿನ ಹಸನಿಗಾಗಿ ಸದಾ ಮಿಡಿಯುತ್ತಾ ಬಂದಿದೆ’ ಎಂದು ನುಡಿದರು.

ಕ್ಲಿಕ್ ಮಾಡಿ ಓದಿ: ಫೋನ್ಪೇ ಆ್ಯಕ್ಟಿವೇಷನ್ ಕಾಲ್ | ಕೆಲವೇ ನಿಮಿಷಕ್ಕೆ ₹1.75 ಲಕ್ಷ ವಂಚನೆ
‘ವಿಜ್ಞಾನ ಹಾಗೂ ತಂತ್ರಜ್ಞಾನದ ಬಲದಿಂದ ಹೊಸ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುವ ಮೂಲಕ ನಿಧಾನಗತಿಯಲ್ಲಿದ್ದ ಜೀವನ ವಿಧಾನವನ್ನು ಬಹುಬೇಗ ಗುರಿಮುಟ್ಟುವ ಹಂತಕ್ಕೆ ತಲುಪಿರುವುದು ಸರಿಯಷ್ಟೇ. ಉದಾಹರಣೆ ಸಂವಹನ, ಸಂಪರ್ಕ, ಸಾರಿಗೆ, ಕೈಗಾರಿಕೆ, ಕೃಷಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿರುವುದು ಬೌದ್ಧಿಕ ಬೆಳವಣಿಗೆಗೆ ಪೂರಕ. ಆದರೆ ಆಧ್ಯಾತ್ಮಿಕದ ಔನ್ನತ್ಯವೇರಲು 12ನೇ ಶತಮಾನದಲ್ಲಿ ಬಸವಣ್ಣ ಇಷ್ಟಲಿಂಗ ಎನ್ನುವ ಪರಿಕಲ್ಪನೆಯನ್ನು ಸಂಶೋಧಿಸಿ ಕೊಟ್ಟರು’ ಎಂದು ತಿಳಿಸಿದರು.

ಚಿತ್ರದುರ್ಗ ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಶಿವಯೋಗ (ಧ್ಯಾನ)ದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ಶ್ರೀಮಠದ ನೌಕರರು
‘ವಿಜ್ಞಾನಿಗಳು ತಂತ್ರಜ್ಞರುಗಳು ಕಂಡುಹಿಡಿದ ವಸ್ತುಗಳನ್ನು ನಾವು ಯಾವುದೇ ಜಾತಿ, ಧರ್ಮಭೇದವಿಲ್ಲದೆ ಉಪಯೋಗಿಸುತ್ತೇವೆಯೋ ಹಾಗೆ ಇಷ್ಟಲಿಂಗ ಎನ್ನುವ ಕುರುಹುವಿಗೆ ಆ ಯಾವ ಸಂಕೋಲೆಗಳು ಇಲ್ಲ. ಮನುಷ್ಯರಿಗೆ ಕಷ್ಟ ಬಂದಾಗ ಇನ್ನೊಬ್ಬ ಮಾನವನಿಂದ ಸಹಕಾರ, ನೆರವು ಪಡೆಯುತ್ತೇವೆ. ಆದರೆ ಆ ಸಂದರ್ಭದಲ್ಲಿ ಯಾವ ದೇವರು ಸಹ ದರ್ಶನ ನೀಡಿ ಕಷ್ಟ ಪರಿಹರಿಸಿದ ಉದಾಹರಣೆ ಇಲ್ಲ. ಅದಕ್ಕೇ ಹೇಳುವುದು ಮನುಷ್ಯರೇ ದೇವರು, ತನ್ನರಿವೇ ಗುರು ಎನ್ನುವುದನ್ನು ಬಸವಾದಿ ಶಿವಶರಣರು ಬೋಧಿಸಿದರು’ ಎಂದು ನುಡಿದರು.
ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಮಾತನಾಡಿ, ‘ಇಷ್ಟಲಿಂಗ ಇದು ಜಾತಿಯ ಕುರುಹು ಅಲ್ಲ. ನೀತಿ ಪ್ರಧಾನವಾದದ್ದು. ಬಸವಣ್ಣನವರು ವಿಶ್ವದ ಸಂಕೇತವಾಗಿ ನಮ್ಮ ಕರದ ಮೇಲೆ ಆರಾಧಿಸಿ, ಧ್ಯಾನಿಸಿ, ಎದೆಯಲ್ಲಿ ಧರಿಸುವ ಪ್ರೇರಣೆ ನೀಡಿದ್ದಾರೆ’ ಎಂದರು.
ಕ್ಲಿಕ್ ಮಾಡಿ ಓದಿ: ಖರ್ಚಿಲ್ಲದೆ ಪ್ರಕರಣ ಬಗೆಹರಿಸಿಕೊಳ್ಳಿ | ಜಿಲ್ಲಾ ನ್ಯಾಯಾಲಯದಿಂದ ಸುರ್ವಣಾವಕಾಶ
‘ಇಲ್ಲಿ ನಮ್ಮ ಆಹಾರ ಪದ್ಧತಿಗೂ ಇಷ್ಟಲಿಂಗ ಧಾರಣೆಗೂ ಯಾವ ನಿರ್ಬಂಧವಿಲ್ಲ. ದೇಹಕ್ಕೆ ಒಗ್ಗುವಂತ ಆಹಾರವನ್ನು ಸೇವಿಸಿದರೆ ಸಾಕು. ಆಹಾರ ಅವರವರಿಗೆ ಬಿಟ್ಟದ್ದು. ಮಡಿ ಮೈಲಿಗೆ ಅಂತ ಏನೂ ಇಲ್ಲ. ನಮ್ಮ ತಪ್ಪು ಒಪ್ಪುಗಳನ್ನು ನೋಡುವವರು ಯಾರು ಇಲ್ಲ ಅಂತ ತಿಳಿದುಕೊಳ್ಳುವ ಅಗತ್ಯ ಇಲ್ಲ. ನಮ್ಮ ನಡೆ ನುಡಿಯಲ್ಲಿ ವ್ಯತ್ಯಾಸವಾದರೆ ನನ್ನೊಂದಿಗೆ ಭಗವಂತ ಇದ್ದಾನೆ ಎಂಬ ಭಾವ ಇದರಿಂದ ಬರುತ್ತದೆ. ಹಾಗಾಗಿ ನಮ್ಮ ಇಡೀ ಮಠದ ಸಿಬ್ಬಂದಿ ಸಂಸ್ಕಾರಕ್ಕೆ ಒಳಗಾಗಬೇಕು. ಇದರಿಂದ ಮಠ ಹಾಗೆ ನಿಮ್ಮ ಸಂಸಾರಕ್ಕೂ ಒಳ್ಳೆಯದಾಗುತ್ತದೆಂಬ ಸದಾಶಯ ಶ್ರೀಮಠದ್ದಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ’ ಎಂದು ಹೇಳಿದರು.
ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್.ಚಂದ್ರಶೇಖರ್, ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹಾಗೂ ಶ್ರೀಮಠದ ಮುರುಘೇಶ ಸ್ವಾಮೀಜಿ ಇದ್ದರು.
