
CHITRADURGA NEWS | 02 MARCH 2026
ಚಿತ್ರದುರ್ಗ: ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಧೈರ್ಯ, ಅಭಿಮಾನದಿಂದ ಹೇಳದಿದ್ದರೆ ಹೆತ್ತ ತಾಯಿಗೆ ದ್ರೋಹ ಬಗೆದಂತಾಗುತ್ತದೆಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 02 | ಮೆಕ್ಕೆಜೋಳ ರೇಟ್ ಎಷ್ಟಿದೆ?
ತುರುವನೂರು ರಸ್ತೆಯಲ್ಲಿರುವ ಕಮ್ಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕಾರಿಣಿ ಸಭೆ, ಬಿಎಲ್ಓ-ಟು ಕಾರ್ಯಾಗಾರ, ವಿಬಿಜಿರಾಮ್ಜಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಯುವ ಮತದಾರರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದರ ಜೊತೆ ಅನರ್ಹ ಮತದಾರರನ್ನು ಮತ ಪಟ್ಟಿಯಿಂದ ಹೊರತೆಗೆಯುವುದರ ಕಡೆಗೂ ಬಿಎಲ್ಓ-ಟುಗಳು ಹಾಗೂ ಕಾರ್ಯಕರ್ತರು ಗಮನ ಕೊಡಬೇಕು. ಈ ನಿಟ್ಟಿನಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಗೆ ಸೋಲಿಲ್ಲ.
ಗಾಂಧಿ ಹೆಸರಿನಲ್ಲಿ ಕೋಟ್ಯಾಂತರ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆಯುತ್ತಿರುವುದನ್ನು ಕೇಂದ್ರ ಸರ್ಕಾರ ಪ್ರಶ್ನಿಸುತ್ತಿರುವುದಕ್ಕೆ ಹೊಟ್ಟೆ ಉರಿಯಿಂದ ವಿಬಿಜಿರಾಮ್ಜಿ ಯೋಜನೆ ವಿರುದ್ದ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ದ ಕಾರ್ಯಕರ್ತರು ಜಾಗೃತರಾಗಬೇಕು ಎಂದು ಎಚ್ಚರಿಸಿದರು.
ಇದನ್ನೂ ಓದಿ: ಒಳಮೀಸಲಾತಿ, ಖಾಲಿ ಹುದ್ದೆ ನೇಮಕಾತಿ ವಿಚಾರದಲ್ಲಿನ ಗೊಂದಲ ಬಗೆಹರಿಸಿ | ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ
ಮುದ್ರಾ ಯೋಜನೆಯಡಿ ಜಿಲ್ಲೆಗೆ ಮೂರು ಸಾವಿರದ ಒಂಬೈನೂರು ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಫಸಲ್ಭೀಮಾ, ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಕೃಷಿ ಸಂಚಾಯಿನಿ ಯೋಜನೆಯಲ್ಲಿ ಸಾಕಷ್ಟು ಅವಕಾಶವಿದೆ. ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಐದು ಪುಕ್ಕಟೆ ಗ್ಯಾರೆಂಟಿಗಳನ್ನು ಕೇಳುತ್ತ ಕೂರಬೇಡಿ. ಪ್ರಧಾನಿ ಮೋದಿರವರ ಒಳ್ಳೆ ಕೆಲಸಗಳನ್ನು ಜನರಿಗೆ ಮುಟ್ಟಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಬಿಚ್ಚಿಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮುಡಾ ಹಗರಣದಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆರು ಸಾವಿರ ಕೋಟಿ ರೂ. ಅಬಕಾರಿ ಹಗರಣವಾಗಿದೆ. ಗುತ್ತಿಗೆದಾರರ ಹಣ ಬಾಕಿ ಉಳಿಸಿಕೊಂಡಿದೆ. ಒಂದೆ ಒಂದು ಪೈಸೆಯ ಅಭಿವೃದ್ದಿಯಾಗಿಲ್ಲ. ಕಾಂಗ್ರೆಸ್ನಲ್ಲಿ ಮೂರು ಗುಂಪಾಗಿರುವುದರಿಂದ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ.ಯನ್ನು ಸದೃಢಗೊಳಿಸಿ ಯುವಕರನ್ನು ಹುರಿದುಂಬಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಬಿಎಲ್ಓ-ಟು ಕಾರ್ಯಾಗಾರದ ರಾಜ್ಯ ಸಂಚಾಲಕ ಜಗದೀಶ್ ಹಿರೆಮನಿ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿರುವುದು ದೇಶದಲ್ಲಿ ಸಂಚಲನ ಮೂಡಿಸಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ಗೆ ಒಬ್ಬ ಬಿಎಲ್ಎ-ಟುಗಳಿಗೆ ಕೆಲಸ ಮಾಡುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ದೇಶದಲ್ಲಿ ಹದಿಮೂರನೆ ಬಾರಿ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಇದನ್ನು ಸಹಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ವಿಶ್ವದ ಶಾಂತಿ, ನೆಮ್ಮದಿಗೆ ರೇಣುಕಾಚಾರ್ಯರ ಸೂತ್ರಗಳು ದಾರಿದೀಪ | ಉಪವಿಭಾಗಾಧಿಕಾರಿ ಕಾಂತರಾಜ್
ಬಿಹಾರದಲ್ಲಿ ಪ್ರಥಮವಾಗಿ ಮತಪಟ್ಟಿಯನ್ನು ಪರಿಷ್ಕರಿಸಿ 64 ಲಕ್ಷ ನಕಲಿ ಮತದಾರರನ್ನು ಪತ್ತೆಹಚ್ಚಿದೆ. ನೈಜ ಮತದಾರರು ಮತ ಪಟ್ಟಿಯಲ್ಲಿ ಉಳಿಯಬೇಕು. ಬೋಗಸ್ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಅಭಿಯಾನದ ಉದ್ದೇಶ. ಬಿಎಲ್ಓ-ಟುಗಳಿಗೆ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಹಾಗು ಡಿಲಿಟ್ ಮಾಡಿಸುವ ಅಧಿಕಾರ ಕೊಟ್ಟಿದೆ.
ಎರಡು ಕಡೆ ಒಬ್ಬ ಮತದಾರನ ಹೆಸರು ಪಟ್ಟಿಯಲ್ಲಿರಲು ಚುನಾವಣಾ ಆಯೋಗ ಬಿಡುವುದಿಲ್ಲ. ತಮಿಳುನಾಡಿನಲ್ಲಿ 74 ಲಕ್ಷ ನಕಲಿ ಮತದಾರರನ್ನು ಪತ್ತೆ ಹಚ್ಚಿ ಪಟ್ಟಿಯಿಂದ ಡಿಲಿಟ್ ಮಾಡಿದೆ. ದೇಶದ ಸಂರಕ್ಷಣೆ, ಭದ್ರತೆಗಾಗಿ ಅರ್ಹ ಮತದಾರರು ಮತ ಪಟ್ಟಿಯಲ್ಲಿ ಉಳಿಯಬೇಕಾಗಿರುವುದರಿಂದ ಕಾರ್ಯಕರ್ತರು ಒಟ್ಟಾಗಿ ಮತಪಟ್ಟಿ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಮಾಜಿ ಸಂಸದ ಎ.ನಾರಾಯಣಸ್ವಾಮಿ ಮಾತನಾಡುತ್ತ ಬಾಂಗ್ಲಾದಿಂದ ಅಕ್ರಮವಾಗಿ ನಮ್ಮ ದೇಶದೊಳಗೆ ನುಸುಳಿರುವವರಿಂದ ಮತ ಹಾಕಿಸಿಕೊಂಡು ಇಲ್ಲಿಯವರೆಗು ಚುನಾವಣೆಗಳಲ್ಲಿ ಗೆಲ್ಲುತ್ತಾ ಬರುತ್ತಿರುವ ಕಾಂಗ್ರೆಸ್ಗೆ ಈಗ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿರುವುದು ಬಿಸಿತುಪ್ಪವಾಗಿ ಪರಿಣಾಮಿಸಿದೆ. ಅದಕ್ಕಾಗಿ ವಿಬಿಜಿರಾಮ್ಜಿ ಯೋಜನೆಯನ್ನು ಕಾರಣವಿಲ್ಲದೆ ವಿರೋಧಿಸುತ್ತಿದೆ.
ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಸಿಲುಕಿರುವ ಚಿತ್ರದುರ್ಗ ಜಿಲ್ಲೆಯವರ ನೆರವಿಗೆ ಸಹಾಯವಾಣಿ
ದೇಶದ ಪ್ರಜಾಪ್ರಭತ್ವ ಉಳಿವಿಗೆ ಮತಪಟ್ಟಿ ಪರಿಷ್ಕರಣೆ ಅತಿ ಮುಖ್ಯವಾಗಿದೆ. ರಾಜ್ಯ ಸರ್ಕಾರದ ವಿಶ್ವಾಸದ್ರೋಹವನ್ನು ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ ಬಿಎಲ್ಓ-ಟುಗಳ ಮೇಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ದಿ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಮತಪಟ್ಟಿಯಲ್ಲಿರುವ ಬೋಗಸ್ ಓಟ್ಗಳಿಂದ ಬಿಜೆಪಿಗೆ ಹಾಗೂ ಪಕ್ಷದ ಜನಪ್ರತಿನಿಧಿಗಳಿಗೆ ತೊಂದರೆಯಾಗುತ್ತಿದೆ. ಕೆ.ಎಂ.ಆರ್.ಸಿ.ಹಣ 1440 ಕೋಟಿ ರೂ. ನಮ್ಮ ಕ್ಷೇತ್ರದಲ್ಲಿದೆ. ಚಿತ್ರದುರ್ಗ, ಹಿರಿಯೂರು ಕುಡಿಯುವ ನೀರು ಯೋಜನೆಗೆ 593 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದೇವೆ. ರಸ್ತೆ, ಚೆಕ್ಡ್ಯಾಂಗಳಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎದೆಗುಂದದೆ ಧೈರ್ಯವಾಗಿ ಮನೆ ಮನೆಗೆ ಹೋಗಿ ಮತ ಕೇಳಿ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಿ ಕೇಂದ್ರ ಸರ್ಕಾರ ವಿಬಿಜಿರಾಮ್ಜಿ ಯೋಜನೆಯನ್ನು ಜಾರಿಗೆ ತಂದಿದೆ. ನೂರು ದಿನಗಳ ಕೂಲಿ ಬದಲಾಗಿ ವರ್ಷಕ್ಕೆ 125 ದಿನಗಳ ಕಾಲ ಕೆಲಸ ಸಿಗುವಂತ ಅವಕಾಶ ಒದಗಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿಯಡಿ ಅನೇಕ ವರ್ಷಗಳಿಂದಲೂ ಲೋಪಗಳು ನಡೆಯುತ್ತಿರುವುದನ್ನು ಗಮನಿಸಿ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ.
ಇದನ್ನೂ ಓದಿ: ಇಂದಿನ ವೇಗದ ಬದುಕಿನಲ್ಲಿ ವ್ಯಾಯಾಮ, ಓಟ, ನಡಿಗೆ ಮತ್ತು ಯೋಗ ಚಟುವಟಿಕೆಗಳು ಅತ್ಯಗತ್ಯ
ಕಳೆದ ಹನ್ನೆರಡು ವರ್ಷಗಳಿಂದಲೂ ಭ್ರಷ್ಟಾಚಾರವಿಲ್ಲದೆ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿರವರ ದಿಟ್ಟತನದಿಂದ ಬಲಾಢ್ಯರ ಕೈಗೆ ಹಣ ಹೋಗುವುದು ನಿಂತಿರುವುದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಬಿಜಿರಾಮ್ಜಿ ಯೋಜನೆ ವಿರುದ್ದ ಅಪಪ್ರಚಾರದಲ್ಲಿ ತೊಡಗಿ ಜನರನ್ನು ದಿಕ್ಕುತಪ್ಪಿಸುತ್ತಿದೆ ಎಂದರು.
ನಾಲ್ಕು ವರ್ಷದಲ್ಲಿ ಕೇಂದ್ರದಿಂದ 1200 ಕೋಟಿ ರೂ.ಗಳ ಬಂದಿದೆ. ಅಷ್ಟು ಹಣ ಅಭಿವೃದ್ದಿಗೆ ಬಳಸಲಾಗಿದೆ. ರಾಜ್ಯ ಸರ್ಕಾರದಿಂದ ನೂರು ಕೋಟಿ ರೂ.ಗಳಷ್ಟು ಅಭಿವೃದ್ದಿಯಾಗಿಲ್ಲ. ಪಂಚಾಯಿತಿ ಮಟ್ಟದಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ನಯವಂಚಕತನವನ್ನು ಜನರ ಮುಂದಿಡುವಂತೆ ಕಾರ್ಯಕರ್ತರನ್ನು ವಿನಂತಿಸಿದರು.
ಮಾಜಿ ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಭೀಮಸಮುದ್ರ, ಚನ್ನಗಿರಿ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆ ರೇಟ್ಸ್
ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಧುಗಿರಿ ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಸಿ.ಹನುಮಂತೆಗೌಡ, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್, ವೆಂಕಟೇಶ್ಯಾದವ್, ಮಾಧುರಿ ಗಿರೀಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಎಲ್ಓ-ಟು ಕಾರ್ಯಾಗಾರದ ರಾಜ್ಯ ಸಂಚಾಲಕ ಡಾ.ಮಂಜುನಾಥ್, ಬಿಜೆಪಿ. ನಗರ ಮಂಡಲ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಕಲ್ಲೇಶಯ್ಯ, ಜಿ.ಎಸ್.ಅನಿತ್ಕುಮಾರ್, ಬಾಳೆಕಾಯಿ ಶ್ರೀನಿವಾಸ್, ನಗರ ಮಂಡಲ ನಿಕಟ ಪೂರ್ವ ಅಧ್ಯಕ್ಷ ನವೀನ್ ಚಾಲುಕ್ಯ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ಸಿದ್ದಾಪುರ ವೇದಿಕೆಯಲ್ಲಿದ್ದರು.
ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಪ್ರಮುಖರು, ವಿವಿಧ ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು ವಿಬಿಜಿರಾಮ್ಜಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
