CHITRADURGA NEWS | 06 JUNE 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಇದೀಗ ಮತ್ತೊಂದು ಫಲಿತಾಂಶಕ್ಕೆ ರಾಜ್ಯದ ಮತದಾರರು ಎದುರು ನೋಡುತ್ತಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಬೆಂಗಳೂರಿನ ಕಲಾ ಕಾಲೇಜು ಆವರಣದಲ್ಲಿ ಇಂದು (ಜೂನ್ 6) ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದ್ದು, ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.
ಚಿತ್ರದುರ್ಗ(ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ), ಚಿಕ್ಕಬಳ್ಳಾಪುರ (ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ), ಕೋಲಾರ (ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್), ತುಮಕೂರು (ಪಾವಗಡ, ಮಧುಗಿರಿ, ಶಿರಾ, ಚಿಕ್ಕನಾಯಕನಳ್ಳಿ, ತಿಪಟೂರು, ತುರುವೆಕೆರೆ, ಕುಣಿಗಲ್, ಗುಬ್ಬಿ, ತುಮಕೂರು, ಕೊರಟಗೆರೆ) ಹಾಗೂ ದಾವಣಗೆರೆ ಜಿಲ್ಲೆ (ದಾವಣಗೆರೆ, ಹರಿಹರ, ಜಗಳೂರು ತಾಲೂಕು) ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ.
ಕ್ಲಿಕ್ ಮಾಡಿ ಓದಿ: ಗಿಡಮೂಲಿಕೆ ಔಷಧಿ ಸೇವಿಸುವಾಗ ಎಚ್ಚರ
ಈ ಜಿಲ್ಲೆಯ ವ್ಯಾಪ್ತಿಯುಳ್ಳ ಕ್ಷೇತ್ರದ ಚುನಾವಣೆ ಜೂನ್ 3ರಂದು ನಡೆದಿತ್ತು. ಐದು ಜಿಲ್ಲೆಗಳಿಂದ ಶೇ 95.27ರಷ್ಟು ಮತದಾನವಾಗಿದೆ. ಇಲ್ಲಿ ಮತದಾರರಾಗಿರುವ ಪ್ರೌಢಶಾಲಾ ಶಿಕ್ಷಕರು, ಪಿಯು ಕಾಲೇಜುಗಳ ಉಪನ್ಯಾಸಕರು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಬೋಧಕ ವರ್ಗದವರು ಯಾರಿಗೆ ಬೆಂಬಲ ನೀಡಿದ್ದಾರೆ ಎಂಬುದರ ಬಿಸಿ ಚರ್ಚೆಯೂ ನಡೆದಿದೆ.
ಕ್ಲಿಕ್ ಮಾಡಿ ಓದಿ: ಚನ್ನಗಿರಿಯಲ್ಲಿ ರಾಶಿ ಅಡಿಕೆ ಬೆಲೆ ಮತ್ತಷ್ಟು ಹೆಚ್ಚಳ
ಇದು ಪ್ರಾಶಸ್ತ್ಯದ ಮತದಾನ ಆಗಿರುವುದರಿಂದ, ‘ಪ್ರಥಮ ಪ್ರಾಶಸ್ತ್ಯ’ದ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿದವರು ‘ಗೆಲುವಿನ ಮನೆ’ ಪ್ರವೇಶಿಸಲಿದ್ದಾರೆ. ಫಲಿತಾಂಶ ಹೊರಬೀಳಲು ಸಾಕಷ್ಟು ಸಮಯವೂ ಬೇಕಾಗುತ್ತದೆ. ಬ್ಯಾಲೆಟ್ ಪೇಪರ್ಗಳನ್ನು ತೆರೆಯುತ್ತಾ ಹೋದಂತೆ ಅಭ್ಯರ್ಥಿಗಳ ‘ಮತ ಚಿತ್ರಣ’ ಸಿಗಲಿದೆ. ಮತ ಎಣಿಕೆ ಶುರುವಾಗಲು ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು, ಪಕ್ಷದವರು ಹಾಗೂ ಬೆಂಬಲಿಗರ ಎದೆಬಡಿತ ಜೋರಾಗಿದೆ.
ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವೈ.ಎ.ನಾರಾಯಣಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಕಾಂಗ್ರೆಸ್ನಿಂದ ಡಿ.ಟಿ.ಶ್ರೀನಿವಾಸ್, ಕಿಶನ್ ಎಂ.ಜಿ (ಕರ್ನಾಟಕ ರಾಷ್ಟ್ರ ಸಮಿತಿ), ಪಕ್ಷೇತರರು: ಜಿ.ಎಚ್.ಇಮ್ರಾಪುರ್, ಕಪನಿಗೌಡ, ಎನ್.ಇ.ನಟರಾಜ್, ವೈ.ಆರ್.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ, ಬಾಬು ಯೋಗೀಶ್ ಆರ್, ಲೋಕೇಶ್ ತಾಳಿಕಟ್ಟೆ, ವನಿತಾ ಎಸ್, ವಿನೋದ್ ಶಿವರಾಜ್, ಶ್ರೀನಿವಾಸ್ ಬಿ, ಸೈಯದ್ ಅಫ್ಕ್ ಅಹಮದ್ ಸೇರಿ 25 ಅಭ್ಯರ್ಥಿಗಳು ಕಣದಲ್ಲಿದ್ದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 95.83ರಷ್ಟು ಮತದಾನವಾಗಿದೆ. ಜಿಲ್ಲೆಯ 4,913 ಶಿಕ್ಷಕ ಮತದಾರರಿದ್ದರು. ಇದರಲ್ಲಿ 3,303 ಪುರುಷರು ಹಾಗೂ 1,405 ಮಹಿಳೆಯರು ಸೇರಿ 4,708 ಶಿಕ್ಷಕ ಮತದಾರರು ಹಕ್ಕು ಚಲಾಯಿಸಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ ಶೇ 96.27, ಚಳ್ಳಕೆರೆಯಲ್ಲಿ ಶೇ 94.5, ಚಿತ್ರದುರ್ಗದಲ್ಲಿ ಶೇ 96.03, ಹಿರಿಯೂರು ಶೇ 92, ಹೊಸದುರ್ಗದಲ್ಲಿ ಶೇ 96.18, ಹೊಳಲ್ಕೆರೆ ತಾಲ್ಲೂಕಿನ ಶೇ.95.6ರಷ್ಟು ಮತದಾನವಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿ ನಿರಂತರ ಗೆಲುವು ಸಾಧಿಸುತ್ತಿರುವ ನಾರಾಯಣಸ್ವಾಮಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಡಿ.ಟಿ.ಶ್ರೀನಿವಾಸ್ ಪಣ ತೊಟ್ಟಿದ್ದಾರೆ. ವಿಜಯಮಾಲೆ ಯಾರ ಕೊರಳಿಗೆ ಎಂಬುದು ಸದ್ಯದ ಕುತೂಹಲ

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
