ಮುಖ್ಯ ಸುದ್ದಿ
ಸುಗಂಧ ರಾಜ ಹೂವಿನ ಹಾರ ಹಾಕದಂತೆ ಸೂಚನೆ | ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರವಾಸ ಪಟ್ಟಿಯಲ್ಲಿ ಉಲ್ಲೇಖ

CHITRADURGA NEWS | 27 JANUARY 2024
ಚಿತ್ರದುರ್ಗ: ನಾಳೆ ಜ.28 ಭಾನುವಾರ ಚಿತ್ರದುರ್ಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸಚಿವರು ಭಾಗವಹಿಸುತ್ತಿದ್ದಾರೆ.
ಈ ವೇಳೆ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಸಚಿವರು, ಅಧಿಕಾರಿಗಳ ಪ್ರವಾಸದ ಪಟ್ಟಿ ಈಗಾಗಲೇ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಹಾಗೂ ಶಿಷ್ಟಾಚಾರ ಪಾಲನೆಗೆ ಸಂಬಂಧಿಸಿ ಹಲವು ಇಲಾಖೆಗಳಿಗೆ ಬಂದು ತಲುಪುತ್ತಿವೆ.
ಇದನ್ನೂ ಓದಿ: ಮುರುಘಾ ಮಠದಿಂದ ಸೀಬಾರ ಹೆದ್ದಾರಿ ಬಂದ್
ಇದರಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರವಾಸದ ವಿವರ ಇರುವ ಟಿಪಿ.
ಜ.27 ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಕೊಪ್ಪಳ ಜಿಲ್ಲೆಯ ಗಿಣಿಗೆರೆ ವಿಮಾನ ನಿಲ್ದಾಣಕ್ಕೆ ಸಂಜೆ 4 ಗಂಟೆಗೆ ಬಂದಿಳಿಯಲಿದ್ದಾರೆ.
ಜ.28 ಭಾನುವಾರ ಬೆಳಗ್ಗೆ 9 ಗಂಟೆಗೆ ಕೊಪ್ಪಳದಿಂದ ಚಿತ್ರದುರ್ಗಕ್ಕೆ ಕಾರಿನ ಮೂಲಕ ರಸ್ತೆಯಲ್ಲಿ ಬರಲಿದ್ದಾರೆ. 11 ಗಂಟೆಗೆ ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗುವರು.
ಸಮಾವೇಶ ಮುಗಿಸಿ ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗದಿಂದ ರಸ್ತೆ ಮೂಲಕ ಬೆಂಗಳೂರಿಗೆ ಡಿಕೆಶಿ ಪ್ರಯಾಣಿಸಲಿದ್ದಾರೆ.
ಆದರೆ, ಇದೆಲ್ಲಾ ವಿವರಗಳ ಜೊತೆಗೆ ವಿಶೇಷ ಸೂಚನೆಯಾಗಿ ಮತ್ತೊಂದು ಪ್ರಮುಖ ಅಂಶವನ್ನು ದಾಖಲಿಸಿದ್ದು, ಇದನ್ನು ಖುದ್ದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುವ ಎಲ್ಲ ಕಾರ್ಯಕರ್ತರು, ಮುಖಂಡರು ಗಮನಿಸಲೇಬೇಕಿದೆ. ಇಲ್ಲದಿದ್ದರೆ ನಿಮ್ಮಿಂದಾಗಿ ಎಡವಟ್ಟಾಗುವ ಸಾಧ್ಯತೆ ಇರುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಮುಖಂಡರು ಸುಗಂಧರಾಜ ಹೂವಿನ ಹಾರ ಹಾಕಬಾರದು ಎಂದು ಮನವಿ ಮಾಡಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳು ಅಧಿಕೃತವಾಗಿ ಕಳುಹಿಸಿರುವ ಪ್ರವಾಸದ ಪಟ್ಟಿಯಲ್ಲಿ ಈ ಸೂಚನೆ ಹಾಕಲಾಗಿದೆ.
ಸಾಕಷ್ಟು ಜನರಿಗೆ ಹೂವಿನಿಂದ ಅಲರ್ಜಿ ಇರುವ ಕಾರಣಕ್ಕೆ ದೂರ ಇರುತ್ತಾರೆ. ಸುಗಂಧ ರಾಜ ಹೂವಿನ ಪರಿಮಳದಿಂದ ಅಲರ್ಜಿ, ಕೆಮ್ಮು, ಸೀನು ಬರುವುದು ಕೆಲವರಿಗೆ ಅಲರ್ಜಿಯಾಗಿರುತ್ತದೆ.
ಇದನ್ನೂ ಓದಿ: ಶಾಸಕರಾದ ಟಿ.ರಘುಮೂರ್ತಿ ಹಾಗೂ ಬಿ.ಜಿ.ಗೋವಿಂದಪ್ಪಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ
ಇನ್ನೂ ಕೆಲವರಿಗೆ ಪಟಾಕಿ ಹೊಡೆದರೆ ಕಷ್ಟ. ಪಟಾಕಿಯ ವಾಸನೆ ಹಾಗೂ ಹೊಗೆಯಿಂದ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯೂ ಕೆಲವರಿಗೆ ಇರುತ್ತದೆ. ಈ ಕಾರಣಕ್ಕೆ ಇಂತಹ ಮನವಿ ಮಾಡಲಾಗಿರುತ್ತದೆ.
ಇನ್ನೂ ಕೆಲ ರಾಜಕಾರಣಿಗಳ ಇಂತಹ ಪ್ರವಾಸದ ಸಂದರ್ಭದಲ್ಲಿ ಊಟಕ್ಕೆ ಇಂಥದ್ದೇ ಇರಬೇಕು ಎಂಬ ಮೆನು ಇರುತ್ತದೆ. ಕೆಲವರು ಬೇರೆ ಬೇರೆ ನಿಯಮ, ಪಥ್ಯಗಳನ್ನು ಅನುಸರಿಸುವ ಕಾರಣ, ಮಧ್ಯಾಹ್ನ ಅಥವಾ ರಾತ್ರಿ ಬರೀ ಹಾಲು, ಹಣ್ಣು, ತರಕಾರಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಕೆಲವರಿಗೆ ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿ ಬಳಸಿದ ಅಡುಗೆ ಆಗುವುದಿಲ್ಲ ಹೀಗೆ ಅವರವರ ದೇಹ ಪ್ರಕೃತಿಯಂತೆ ಇರುತ್ತದೆ.
ಅದೇ ರೀತಿ ಡಿ.ಕೆ.ಶಿವಕುಮಾರ್ ಅವರಿಗೆ ಅವರ ಅಭಿಮಾನಿಗಳು, ಸಾರ್ವಜನಿಕರು, ಕಾರ್ಯಕರ್ತರು, ಮುಖಂಡರು ಸುಗಂಧ ರಾಜ ಹೂವಿನ ಹಾರ ಹಾಕದಂತೆ ಮನವಿ ಮಾಡಲಾಗಿದೆ.
