CHITRADURGA NEWS | 06 MAY 2024
ಚಿತ್ರದುರ್ಗ: ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ 34 ನೇ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 16 ಜೋಡಿಗಳ ವಿವಾಹ ಜರುಗಿತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ತಂಪಾದ ಮಡಿಕೆ ನೀರಿನ ಅರವಟಿಗೆ ಆರಂಭ | ಎಲ್ಲಿ ಅಂತಿರಾ ಈ ಸುದ್ದಿ ಓದಿ..
ಈ ವೇಳೆ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ,
ಐತಿಹಾಸಿಕ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಹಿಂದಿನ ಪೀಠಾಧಿಪತಿಗಳೆಲ್ಲರೂ ಸಹ ನಿರ್ಮೋಹ, ನಿರಹಂಕಾರ, ನಿಸ್ವಾರ್ಥತೆಯ ಮಹಾಸದ್ಗುಣಗಳನ್ನು ಹೊಂದಿದವರು. ಸರಳತೆ, ಸಮಾನತೆ ಎಂಬ ಮಹಾತತ್ವದ ಮಣಿಹವನ್ನು ಹೊತ್ತು ನಡೆದು ಸಮಾಜಕ್ಕೆ ತಮ್ಮದೇ ಆದರ್ಶದ ಪಥವನ್ನು ಬಿಟ್ಟು ಹೋಗಿದ್ದಾರೆ.
ಅಂತಹ ದಾರಿಯನ್ನು ಈಗಲೂ ಸಹ ಬೃಹನ್ಮಠ ಆಧರಿಸಿ, ಅನುಸರಿಸಿ ನಡೆದಿರುವುದಕ್ಕೆ ಈ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವೇ ಸಾಕ್ಷಿ ಎಂದರು.
ಇದನ್ನೂ ಓದಿ: ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ
ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀ ಬೃಹನ್ಮಠದ ಸಾಮಾಜಿಕ ಕಾರ್ಯಗಳಲ್ಲಿ ಈ ಸರಳ ಸಾಮೂಹಿಕ ವಿವಾಹವೂ ಒಂದು. ಇದು ಎಷ್ಟೋ ಬಡಜನರ ಪಾಲಿಗೆ ಆಶಾಕಿರಣವಾಗಿದೆ ಎಂದರೆ ತಪ್ಪಲ್ಲ. ಶ್ರೀಮಠದೊಂದಿಗೆ ಸಾರ್ವಜನಿಕರು ಇಂತಹ ಜನಪರ ಕಾರ್ಯಗಳಲ್ಲಿ ಪಾಲ್ಗೊಂಡು ಈ ಪದ್ಧತಿಯನ್ನು ಅನುಸರಿಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮವೂ ನಿಮ್ಮಿಂದ ನಡೆದಿರುವುದು ಶ್ಲಾಘನೀಯ ಎಂದರು.
ಸರಳ ಮತ್ತು ಸರ್ವಸಮಾನತೆಯ ತತ್ವದಡಿಯಲ್ಲಿ ಸಾಗುತ್ತಿರುವ ಈ ಕಾರ್ಯಕ್ರಮವು ಜಾತಿ, ಮತ ಭೇದವಿಲ್ಲದ ಎಲ್ಲರೂ ಒಂದು ವೇದಿಕೆ ಅಡಿಯಲ್ಲಿ ತಮ್ಮ ಬಾಳ ಬದುಕಿಗೆ ಮುಂದಡಿ ಇಡುತ್ತಿರುವುದು ಸಂತಸದ ಸಂಗತಿ ಎಂದ ಸ್ವಾಮೀಜಿ, ದಂಪತಿಗಳ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಬೇಕು. ನಾನೆಚ್ಚು, ನೀನು ಕಡಿಮೆ ಎಂದರೆ ಅದು ಸಾರವತ್ತಾದ ಸಂಸಾರವಾಗಲು ಸಾಧ್ಯವಿಲ್ಲ. ಅನ್ಯೂನತೆಯೇ ಇಲ್ಲಿ ಪ್ರಧಾನ ಅಂಶವಾಗಬೇಕೆಂದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ಬರಗೇರಮ್ಮ, ಏಕನಾಥೇಶ್ವರಿ ಸಿಡಿ ಉತ್ಸವದ ವೈಭವ
ಹಾಗೆಯೇ ಇದೇ ತಿಂಗಳ 8, 9 ಮತ್ತು 10ನೇ ತಾರೀಖಿನಂದು ಶ್ರೀಮಠದ ವತಿಯಿಂದ ಇದೇ ವೇದಿಕೆಯಲ್ಲಿ ವಿಶ್ವಕ್ಕೆ ಮಾದರಿಯ ಅನುಭವ ಮಂಟಪ ನಿರ್ಮಿಸಿ ಆದರ್ಶ ತತ್ವಗಳನ್ನು, ಬಿಟ್ಟು ಹೋಗಿರುವ ನಮ್ಮ ಸಾಂಸ್ಕøತಿಕ ನಾಯಕರಾದ ಬಸವಣ್ಣನವರ ಜಯಂತಿಯನ್ನು ಏರ್ಪಡಿಸಲಾಗಿದೆ.
ಇಲ್ಲಿ ಮ್ಕಕಳಿಗೆ, ದೊಡ್ಡವರಿಗೆ ವಚನ ಕಂಠಪಾಠ ಹಾಗೂ ಬಸವಾದಿ ಶಿವಶರಣರ ವೇಷ ಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ಚಿಂತನಗೋಷ್ಠಿಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವ ಪ್ರಭುಸ್ವಾಮೀಜಿ ಮಾತನಾಡಿ, ಜೀವನ ಸುಖವಾಗಿ ನಡೆಯಲು ಎಲ್ಲರಲ್ಲೂ ನಂಬಿಕೆ ಅಗತ್ಯ. ಅದು ಇರದೇ ಹೋದರೆ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಅಂದರೆ ತೊಂದರೆ, ತಾಪತ್ರಯ, ಸಮಸ್ಯೆ ಇರುವುದು ಸಹಜ.
ಅವುಗಳನ್ನು ತಾಳ್ಮೆ, ಸಹನೆಯಿಂದ ಪರಿಹರಿಸಿಕೊಂಡು ಸಾಗಬೇಕು. ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಇಲ್ಲಿ ತಮ್ಮ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡು ಹೋಗಿರುವ ಉದಾಹರಣೆ ಇದೆ. ಎಂತಹ ಸಂದರ್ಭದಲ್ಲಿಯೂ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಿಂತಿರುವ ಉದಾಹರಣೆ ಇಲ್ಲ ಎಂದು ನುಡಿದರು.
ಇದನ್ನೂ ಓದಿ: ಈರುಳ್ಳಿ ಬೆಳೆಗಾರರ ಮೊಗದಲ್ಲಿ ಮಂದಹಾಸ | ರಫ್ತಿಗೆ ಕೇಂದ್ರ ಸರ್ಕಾರದ ಸಮ್ಮತಿ
ಬೃಹನ್ಮಠದ ಖಾಸಾಮಠ ಗುರುಮಠಕಲ್ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಕೊರತೆಯಾದರೂ ಸಹ ವಿಶ್ವಾಸಕ್ಕೆ ಭಂಗ ಬರಬಾರದು. ಪರಸ್ಪರ ಪ್ರೀತಿ-ವಿಶ್ವಾಸ ಸಹ ಬಾಳ್ವೆಯಿಂದ ಬದುಕು ಹಸನಾಗಲು ಸಾಧ್ಯವಿದೆ. ಅಂತಹ ದಾರಿಯಲ್ಲಿ ನೂತನ ದಂಪತಿಗಳು ಹಾಗೂ ಸೇರಿದ ನೀವುಗಳು ಸಾಗಿರಿ ಎಂದು ಸಲಹೆ ನೀಡಿದರು.
ಜಮುರಾ ಕಲಾವಿದರಾದ ಉಮೇಶ ಪತ್ತಾರ ಮತ್ತು ಸಂಗಡಿಗರು ವಚನ ಗಾಯನ ಮತ್ತು ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಪದಗಳನ್ನು ಹಾಡಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
