ಚಿತ್ರದುರ್ಗ ನ್ಯೂಸ್. ಕಾಂ:
ರಾಜಕಾರಣದಲ್ಲಿ ಕೀಳು ಭಾಷೆಯ ಪ್ರಯೋಗ ಇತ್ತೀಚಿಗೆ ಜಾಸ್ತಿಯಾಗಿದೆ. ಭಾಷೆ ಒಬ್ಬರನ್ನೊಬ್ಬರು ವೈಯುಕ್ತಿಕ ಹಂತದಲ್ಲಿ ಕೆಟ್ಟದಾಗಿ ನಿಂದನೆ ಮಾಡುವುದಕ್ಕೆ ಬಳಕೆಯಾಗುತ್ತಿದೆ. ಇದಕ್ಕೆ ಅಗತ್ಯಬಿದ್ದರೆ ಕಾನೂನಿನ ಚೌಕಟ್ಟಿನೊಳಗೆ ಕಡಿವಾಣ ಬೀಳಬೇಕು ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾದ ಆರ್. ಅಶೋಕ್ ಅವರು ಮಠಕ್ಕೆ ಭೇಟಿ ನೀಡಿ ತರಳಬಾಳು ಶ್ರೀಗಳಿಂದ ಆಶೀರ್ವಾದ ಪಡೆದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನಮ್ಮ ಸಂವಿಧಾನವು ಎಲ್ಲರಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಅದು ಸ್ವೇಚ್ಛಾರಕ್ಕೆ ಬಳಕೆಯಾಗಬಾರದು ಎಂದರು.

ದೇಶದ ರಾಜಕಾರಣ ಈ ಹಿಂದೆ ನೈಜವಾಗಿತ್ತು. ಈಗೀಗ ಬಳಕೆಯಾಗುತ್ತಿರುವ ಭಾಷೆಯನ್ನು ನಮ್ಮ ಹಿಂದಿನ ರಾಜಕಾರಣಿಗಳು ಬಳಸಿದ ಉದಾಹರಣೆಗಳು ಇಲ್ಲ. ಜನರ ಕಷ್ಟಸುಖಗಳ ಬಗ್ಗೆ ಚಿಂತಿಸುವಂತಹ ಮುತ್ಸದ್ಧಿಗಳಿದ್ದರು. ಈಗ ಅಂತಹ ರಾಜಕಾರಣ ಕಾಣುತ್ತಿಲ್ಲ. ಎಲ್ಲರೂ ವೈಯುಕ್ತಿಕ ಹಂತದಲ್ಲಿಯೇ ಯೋಚಿಸುವಂತಾಗಿದೆ. ಇದು ದೇಶಕ್ಕೆ ಒಳ್ಳೆಯದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕಾರಣ ಇಂದು ದಾರಿತಪ್ಪಿದೆ. ಅದರಂತೆಯೇ ಧರ್ಮವೂ ದಾರಿತಪ್ಪಿದೆ. ಧರ್ಮಗುರುಗಳೂ ದಾರಿ ತಪ್ಪಿದ್ದಾರೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ವಿಧಾನ ಸಭೆ ವಿರೋಧ ಪಕ್ಷದ ನೂತನ ನಾಯಕ ಆರ್. ಅಶೋಕ್ ಮಾತನಾಡಿ, ರಾಜಕಾರಣಿಗಳಿಗೆ ಬಳಸುವ ಭಾಷೆಯ ಮೇಲೆ ಹಿಡಿತ ಇರಬೇಕು. ರಾಜಕಾರಣಿಗಳೇ ಕೀಳುಮಟ್ಟದ ಭಾಷೆಯನ್ನು ಪ್ರಯೋಗ ಮಾಡುತ್ತಾ ಹೋದಲ್ಲಿ, ಜನರಿಗೆ ಮಾರ್ಗದರ್ಶನ ಮಾಡುವ ನೈತಿಕತೆಯನ್ನೇ ಕಳೆದುಕೊಳ್ಳುತ್ತೇವೆ. ನಾನು 2009 ರಿಂದ ವಿಧಾನಸಭೆಯಲ್ಲಿದ್ದೇನೆ. ಶಾಸಕನಾಗಿ, ಮಂತ್ರಿಯಾಗಿ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ಎಂದೂ ಕೂಡ ವಿಧಾನ ಮಂಡಲದಲ್ಲಿಯೇ ಆಗಲಿ, ಹೊರಗಿನ ಸಭೆಗಳಲ್ಲಿಯೇ ಭಾಷೆಯನ್ನು ಬಳಸುವಾಗ ಎಚ್ಚರಿಕೆ ವಹಿಸಿದ್ದೇನೆ. ಎಂದೂ ಕೂಡ ಕೆಟ್ಟದಾದ ಭಾಷೆಯನ್ನು ಬಳೆಸಿಲ್ಲ ಎಂದರು.
ಬೆಂಗಳೂರು ದಾಸರಹಳ್ಳಿ ಶಾಸಕ ಮುನಿರಾಜು, ಚಿತ್ರದುರ್ಗದ ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ, ಯುವ ಮೋರ್ಚಾ ಅಧ್ಯಕ್ಷ ಪಾಲಯ್ಯ, ಹನುಮಂತೇಗೌಡ, ಜಗಳೂರು ಮುಖಂಡ ಟಿ.ಜಿ. ಗೌಡ, ದಾವಣಗೆರೆಯ ರವಿಕುಮಾರ್, ಸಿರಿಗೆರೆ ಯುವ ಮೋರ್ಚಾ ಕಾರ್ಯದರ್ಶಿ ಕೆ.ಬಿ. ಮೋಹನ್, ವೆಂಕಟೇಶ ಯಾದವ್, ಪಂಚಾಕ್ಷರಯ್ಯ, ಪೆಟ್ರೋಲ್ ಬಸವರಾಜ್, ಹಂಚಿನಮನೆ ಸಂದೀಪ್ ಮುಂತಾದವರು ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
