CHITRADURGA NEWS | 29 JANUARY 2026
ಚಿತ್ರದುರ್ಗ: ಬಹು ಮಹತ್ವಾಕಾಂಕ್ಷೆಯ ಜಲ್ಜೀವನ್ ಮಿಷನ್ ಯೋಜನೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಇಚ್ಚಾ ಶಕ್ತಿಯ ಕೊರತೆಯ ಕಾರಣದಿಂದ ಸಮಪರ್ಕಪವಾಗಿ ಅನುಷ್ಟಾನವಾಗಿಲ್ಲ, ಅದರಲ್ಲೂ ನನ್ನ ಮತಕ್ಷೇತ್ರವಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯೋಜನೆಯ ಅನುಷ್ಟಾನದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಮಧ್ಯ ಪ್ರವೇಶ ಮಾಡಬೇಕು ಎಂದು ಲೋಕಸಭೆ ಅಧಿವೇಶನದಲ್ಲಿ ಸಂಸದ ಗೋವಿಂದ ಕಾರಜೋಳರವರು ಪ್ರಸ್ಥಾಪಿಸಿದರು.
ಇದನ್ನೂ ಓದಿ: ಆದರ್ಶ ವಿದ್ಯಾಲಯ | 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಸದನದಲ್ಲಿ ಮಾತನಾಡಿದ ಸಂಸದರು, ಪ್ರತಿಯೊಂದು ಗ್ರಾಮೀಣ ಮನೆಗೂ ಕೈಗೆಟಕುವ ಸೇವಾ ವಿತರಣಾ ಶುಲ್ಕದಲ್ಲಿ ನಿಯಮಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುವ ಘನ ಉದ್ದೇಶದೊಂದಿಗೆ ಜಲ್ ಜೀವನ್ ಮಿಷನ್ ಯೋಜನೆಯನ್ನು ಮೋದಿಜಿ ನೇತೃತ್ವದ ನಮ್ಮ ಸರ್ಕಾರ 2019 ರಲ್ಲಿ ಜಾರಿಗೆ ತಂದಿದೆ.
ಪ್ರತಿಯೊಂದು ಗ್ರಾಮದಲ್ಲಿ ಮನೆಗಳಿಗೆ, ಅಂಗನವಾಡಿ ಕಟ್ಟಡಗಳಿಗೆ, ಆಸ್ಪತ್ರೆಗಳಿಗೆ, ಶಾಲೆಗಳಿಗೆ, ಗ್ರಾಮ ಪಂಚಾಯತಿ ಕಛೇರಿಗಳಿಗೆ, ಸಮುದಾಯ ಭವನಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶ. ಕರ್ನಾಟಕದಲ್ಲಿ ಒಟ್ಟು 1,01,30,702 ಕುಟುಂಬಗಳಿವೆ, ಇದರಲ್ಲಿ ಈಗಾಗಲೇ 86,83,089 ಕುಟುಂಬಗಳಿಗೆ ನಲ್ಲಿ ಮೂಲಕ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಕರ್ನಾಟಕದ 31 ಜಿಲ್ಲೆಗಳ 5992 ಗ್ರಾಮ ಪಂಚಾಯತಿಗಳಲ್ಲಿ ಈ ದಿನದವರೆಗೆ 955 ಗ್ರಾಮಪಂಚಾಯಿತಿಗಳು ಹರ್ಘರ್ ಜಲ್ ಘೋಷಣೆಗೆ ಪ್ರಸ್ಥಾವನೆ ಸಲ್ಲಿಸಿವೆ, ಅದರಲ್ಲಿ 538 ಗ್ರಾಮ ಪಂಚಾಯತಿಗಳು ಹರ್ಘರ್ ಜಲ್ ಎಂದು ಘೋಷಣೆಯಾಗಿವೆ.
ಇದನ್ನೂ ಓದಿ: ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿಗೆ ಅರ್ಜಿ ಅಹ್ವಾನ
ಒಟ್ಟಾರೆ ಕರ್ನಾಟಕದ 26,591 ಗ್ರಾಮಗಳಲ್ಲಿ ಕೇವಲ 5803 ಗ್ರಾಮಗಳು ಮಾತ್ರ ಹರ್ಘರ್ ಜಲ್ ಎಂದು ಘೋಷಣೆಯಾಗಿವೆ. ಆದರೆ, ಶೇಕಡ 85 ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ಕೂಡ ಈವರೆಗೆ ಹರ್ ಘರ್ ಜಲ್ ಎಂದು ಘೋಷಣೆಯಾಗಿಲ್ಲ.
ನಾನು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯಲ್ಲಿ 3,81,012 ಮನೆಗಳಲ್ಲಿ 3,35,422 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯೊಂದು ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದ ಸಮರ್ಪಕವಾಗಿ ಅನುಷ್ಟಾನವಾಗಿಲ್ಲ ಅನ್ನುವುದೇ ಅತ್ಯಂತ ನೋವಿನ ಸಂಗತಿಯಾಗಿದೆ.
ಕ್ಷೇತ್ರ ಪ್ರವಾಸದ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದೇನೆ, ಆದರೆ ಒಂದೂ ಗ್ರಾಮಗಳಲ್ಲಿಯೂ ಸಹ ಜಲ್ ಜೀವನ್ ಮಿಷನ್ ಯೋಜನೆ ನನ್ನ ಜಿಲ್ಲೆಯಲ್ಲಿ ಗುಣಮಟ್ಟದಿಂದ ಅನುಷ್ಟಾನವಾಗಿಲ್ಲ. ಪ್ರತಿಯೊಂದು ಗ್ರಾಮಗಳಲ್ಲಿಯೂ ಈ ಮೊದಲೇ ಇದ್ದ ಹಳೇ ಪೈಪ್ ಲೈನ್ಗಳ ಮುಖಾಂತರವೇ ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಹಣ್ಣು, ರೇಷ್ಮೆ, ಹೂ, ತರಕಾರಿ ಸೇರಿದಂತೆ ಇತರೆ ಬೆಳೆಗಳ ಉಚಿತ ತರಬೇತಿ
ಚಿತ್ರದುರ್ಗ ಜಿಲ್ಲೆಗೆ ಈ ಯೋಜನೆಯಡಿ ನೀಡಿರುವ ಸುಮಾರು 948 ಕೋಟಿಯಷ್ಟು ಅನುದಾನ ಸಪರ್ಮಕವಾಗಿ ಬಳಕೆಯಾಗಿಲ್ಲ ಎನ್ನುವುದು ಆಘಾತಕಾರಿ ಹಾಗೂ ದುರ್ದೈವದ ಸಂಗತಿಯಾಗಿದೆ. ನಾನು ನಿಮಗೆ ವಿನಂತಿ ಮಾಡುವುದೇನೆಂದರೆ, ಯೋಜನೆಯ ಉದ್ದೇಶ ಈಡೇರಬೇಕು. ಅನುದಾನ ಸದ್ಬಳಕೆಯಾಗಬೇಕು.
ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಗಳಿಗೂ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಜಲಶಕ್ತಿ ಸಚಿವಾಲಯ ಮಧ್ಯಪ್ರವೇಶ ಮಾಡಿ ಕರ್ನಾಟಕ ರಾಜ್ಯದಲ್ಲಿ ಅನುಷ್ಟಾನಗೊಂಡಿರುವ ಹಾಗೂ ಅನುಷ್ಟಾನಗೊಳ್ಳುತ್ತಿರುವ ಜಲ್ ಜೀವನ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಉಸ್ತುವಾರಿ ಮಾಡಬೇಕು.
ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ವಿನಂತಿಸುತ್ತೇನೆ ಎಂದು ಲೋಕಸಭಾ ಅಧ್ಯಕ್ಷರ ಮೂಲಕ ಜಲಶಕ್ತಿ ಸಚಿವರ ಗಮನ ಸೆಳೆದರು.
ಇದನ್ನೂ ಓದಿ: ಎಳ್ಳು-ಬೆಲ್ಲ ತಿನ್ನುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ?
ಸಂಸದರ ಪ್ರಶ್ನೆಗೆ ಉತ್ತರ ನೀಡಿದ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ರವರು ನೀರಿಗೆ ಸಂಬಂಧಿಸಿದ್ದು ರಾಜ್ಯ ಸರ್ಕಾರದ ಪರ್ಯಾಲೋಚನೆಗೆ ಬರುವ ವಿಷಯವಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ 169 ದೂರುಗಳು ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಬಂದಿವೆ. ಈ ಎಲ್ಲಾ ದೂರುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.
ಮಾನ್ಯ ಸಂಸದರು ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗಿಲ್ಲ ಎನ್ನುವ ವಿಷಯವನ್ನು ಸದನದಲ್ಲಿ ಹಾಗೂ ನನಗೆ ಈಗಾಗಲೇ ಪತ್ರಗಳನ್ನು ಬರೆದು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆಯಲ್ಲಿ ಲೋಪವಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
