
CHITRADURGA NEWS | 10 NOVEMBER 2025
ಚಿತ್ರದುರ್ಗ: ಸ್ವದೇಶಿ ಮೇಳಕ್ಕಾಗಿ ನಗರದ ಮುರುಘರಾಜೇಂದ್ರ(ಸರ್ಕಾರಿ ವಿಜ್ಞಾನ ಕಾಲೇಜು) ಕ್ರೀಡಾಂಗಣದಲ್ಲಿ ಬೃಹದಾಕಾರದ ಜರ್ಮನ್ ಟೆಂಟ್ಗಳು ತಲೆ ಎತ್ತಿದ್ದು, 200ಕ್ಕೂ ಅಧಿಕ ಸ್ಟಾಲ್ಗಳನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಶಿವಮೂರ್ತಿ ಮುರುಘಾ ಶರಣರ ಪರ ಸಿ.ವಿ.ನಾಗೇಶ್ವಾದ ಮಂಡನೆ

ಚಿತ್ರದುರ್ಗ ನಗರ ಪ್ರವೇಶಿಸುವ 6 ಮುಖ್ಯ ರಸ್ತೆಗಳಲ್ಲೂ ರಾಜಾವೀರ ಮದಕರಿ ನಾಯಕ, ಎಸ್.ನಿಜಲಿಂಗಪ್ಪ, ವೀರವನಿತೆ ಒನಕೆ ಓಬವ್ವ, ತರಾಸು, ಮುರುಘರಾಜೇಂದ್ರ ಶ್ರೀ ಹಾಗೂ ಭರಮಣ್ಣ ನಾಯಕ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸ್ವಾವಲಂಬನೆ, ನವೋದ್ಯಮ ಹಾಗೂ ಜನಮಾನಸದಲ್ಲಿ ಸ್ವದೇಶಿ ಪರಿಕಲ್ಪನೆ ಪಸರಿಸುವ ಹಿನ್ನೆಲೆಯಲ್ಲಿ ಸ್ವದೇಶಿ ಜಾಗರಣಾ ಮಂಚ್ ಆಯೋಜಿಸುತ್ತಿರುವ ಸ್ವದೇಶಿ ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಹೇಗಿದೆ ಮೈದಾನದ ಸಿದ್ಧತೆ ?
ಆಹಾರ ಮೇಳಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಕರ್ನಾಟಕದ ವಿವಿಧ ಶೈಲಿಯ ತಿನಿಸುಗಳನ್ನು ಸವಿಯಬಹುದಾಗಿದೆ. ಪ್ರವೇಶ ದ್ವಾರದಲ್ಲಿ ಗೋವುಗಳ ಪ್ರದರ್ಶನ, ಹರಿಹರ ಹಾಗೂ ಅರಸಿಕೆರೆ ಕಲಾವಿದರ ತಂಡದಿಂದ ಸುಮಾರು ೪೦ ಅಡಿ ಸುತ್ತಳತೆಯ ಬೃಹತ್ ರಂಗೋಲಿ, ಪ್ರವೇಶ ದ್ವಾರ, ತರಬೇತಿ ಸಭಾಂಗಣ, ಸಾಂಸ್ಕೃತಿಕ ಹಾಗೂ ವೇದಿಕೆ ಕಾರ್ಯಕ್ರಮಗಳಿಗೆ ಮೈದಾನದಲ್ಲಿ ಮಧ್ಯದಲ್ಲಿ ಬೃಹತ್ ಸಭಾಂಗಣ, ಅದರ ಎದುರಿನಲ್ಲೇ 200 ಮಳಿಗೆಗಳ ಬೃಹತ್ ಪೆಂಡಾಲ್ ಹಾಕಲಾಗಿದೆ. ಎಲ್ಲಾ ಪೆಂಡಾಲ್ಗಳ ನಡುವೆ ಮಕ್ಕಳಿಗೆ ಜಾನಪದ ಕ್ರೀಡೆಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಹಾಗೂ ಫ್ಲೆಕ್ಸ್ಮುಕ್ತ ಕಾರ್ಯಕ್ರಮ:
ಕಾರ್ಯಕ್ರಮದ ಆಯೋಜನೆ ಕುರಿತು ಮಾಹಿತಿ ನೀಡಿದ ಸಂಘಟಕ ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಇಡೀ ಕಾರ್ಯಕ್ರಮವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಫ್ಲೆಕ್ಸ್ ಹಾಕದೆ ಕರಪತ್ರಗಳ ಮೂಲಕ ಜಿಲ್ಲೆಯ ಮನೆ ಮನೆಗಳನ್ನು ತಲುಪುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಯುವನಿಧಿ ಯೋಜನೆ | ಸ್ವಯಂ ಘೋಷಣೆ ಪ್ರತಿ ತಿಂಗಳು ಕಡ್ಡಾಯ
ನ.12 ರಂದು ಬೆಳಗಿನಿಂದಲೇ ಸಾರ್ವಜನಿಕರಿಗೆ ಸ್ವದೇಶಿ ಮೇಳ ಮುಕ್ತವಾಗಲಿದ್ದು, ಸಂಜೆ 4.30 ಕ್ಕೆ ಅಧಿಕೃತ ಉದ್ಘಾಟನೆಯಾಗಲಿದೆ. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ, ಆರ್ಥಿಕ ತಜ್ಞರಾದ ಪ್ರೊ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೇರಿದಂತೆ ವಿವಿಧ ಅತಿಥಿಗಳು ಭಾಗವಹಿಸುವರು ಎಂದರು.
ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಗೋ ಪೂಜೆ ಹಾಗೂ ಗೋ ಪ್ರದರ್ಶನಕ್ಕೆ ಚಾಲನೆ ನೀಡುವರು. ಶ್ರೀ ಸೇವಾಲಾಲ್ ಸ್ವಾಮೀಜಿ ದೇಸಿ ಕ್ರೀಡೆಗಳಿಗೆ ಚಾಲನೆ ನೀಡುವರು.

ನ.13 ರಂದು ಬೆಳಗ್ಗೆ 6.30 ಶ್ರೀ ವಚನಾನಂದ ಸ್ವಾಮೀಜಿ ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳ ಒಕ್ಕೂಟದ ಅಡಿಯಲ್ಲಿ ಯೋಗ ತರಬೇತಿ ನೀಡುವರು.
ಯುವ ಸಮಾವೇಶದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಹಿಳಾ ಸಮಾವೇಶ ಬ್ರಹ್ಮಕುಮಾರಿ ಸಂಸ್ಥೆಯವರು ಹಾಗೂ ಪ್ರತಿ ದಿನ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸುವರು ಎಂದರು.
ಇದನ್ನೂ ಓದಿ: ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಶೇ.50 ರಿಯಾಯಿತಿ ದರಗಳಲ್ಲಿ ಲಭ್ಯ
ನ.16 ರಂದು ನಡೆಯುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಕಣ್ವಕುಪ್ಪೆ ಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮತ್ತಿತರರು ಭಾಗವಹಿಸುವರು ಎಂದು ನವೀನ್ ಮಾಹಿತಿ ನೀಡಿದರು.
ಹಳ್ಳಿ ಸೊಗಡು ಬಿತ್ತರಿಸುವ ರೀತಿಯಲ್ಲಿ ಇಡೀ ಕಾರ್ಯಕ್ರಮ ವ್ಯವಸ್ಥೆಯಾಗಿದ್ದು, ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಜಿಲ್ಲೆಯ 15 ಸಾವಿರ ಸರ್ಕಾರಿ ನೌಕರರ ಕುಟುಂಬಗಳು ಭಾಗವಹಿಸುತ್ತಿದ್ದಾರೆ. ಒಂದು ಸಾವಿರ ಯುವ ರೈತರಿಗೆ ಮಾರ್ಗದರ್ಶನ, ಪದವಿ ವಿದ್ಯಾರ್ಥಿಗಳಿಗೆ ಸ್ವದೇಶಿ ಪರಿಕಲ್ಪನೆ ಹಾಗೂ ನವೋದ್ಯಮ ಸ್ಥಾಪನೆ ಕುರಿತಂತೆ ತರಬೇತಿ ನೀಡಲಾಗುವುದು ಎಂದರು.
ಸ್ವದೇಶಿ ಜಾಗರಣಾ ಮಂಚ್ ಮುಖ್ಯಸ್ಥರಾದ ಜಗದೀಶ್ ಮಾತನಾಡಿ, ಸ್ವದೇಶಿ ಮೇಳದಿಂದ ಜಿಲ್ಲೆಯ ಉದ್ಯಮಿಗಳುಗೆ ಹೊರಗಿನವರ ಪರಿಚಯ ಆಗಲಿದೆ. ಇಲ್ಲಿ ವ್ಯಾಪಾರಕ್ಕಿಂತ ಹೊಸ ಗ್ರಾಹಕರ ಪರಿಚಯ ಮಾಡಿಕೊಡಲಾಗುತ್ತದೆ. ಉದ್ದಿಮೆದಾರರಿಗೆ ಹೊಸ ಗ್ರಾಹಕರ ಜೊತೆಗೆ ಬೆಸೆಯುವ ಕಾರ್ಯಕ್ರಮ ಇದಾಗಿದೆ ಎಂದು ಪರಿಕಲ್ಪನೆಯನ್ನು ವಿವರಿಸಿದರು.
ಇದನ್ನೂ ಓದಿ: ಹೊಳಲ್ಕೆರೆ ತಾಲ್ಲೂಕಿನಲ್ಲಿ ಉಚಿತ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನ
ನವಂಬರ್ 12 ಬುಧವಾರದಂದು ಮಧ್ಯಾಹ್ನ 3 ರಿಂದ 4ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಿ ಕ್ರೀಡೆಗಳು.
ಸಂಜೆ 5:30ಕ್ಕೆ ಸಾರ್ವಜನಿಕ ಉದ್ಘಾಟನೆ ಕಾರ್ಯಕ್ರಮ, ರಾತ್ರಿ 7:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನವಂಬರ್ 13ರಂದು ಬೆಳಿಗ್ಗೆ 10 ರಿಂದ 1.30ರವರೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕ ಶಿಬಿರ, ಮಧ್ಯಾಹ್ನ 3 ರಿಂದ 4.30ರವರೆಗೆ ಮಹಿಳಾ ಸಮಾವೇಶ, ಸಂಜೆ 6.30ಕ್ಕೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾ ಫೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನ ನಡೆಯಲಿದೆ.
ನವೆಂಬರ್ 14ರಂದು ಬೆಳಿಗ್ಗೆ 10 ರಿಂದ 1.30 ರವರೆಗೆ ಆಯುರ್ವೇದ ಶಿಬಿರ, ಮಧ್ಯಾಹ್ನ 12 ರಿಂದ 1.30ರವರೆಗೆ ಯುವ ಸಮಾವೇಶ, ರಾತ್ರಿ 7 ಗಂಟೆಗೆ ಪಂ. ಪ್ರಕಾಶ್ ಹೆಗಡೆ ಕಲ್ಲಾರೆಮನೆ, ಪಂ. ವಿಜಯ್ ಗೋನಾಳ್, ಪಂ. ಮಹೇಶ್ ರಾಜ್ ಸಾಲೊಂಕೆ ಇವರಿಂದ ಕೊಳಲು ಹಾಗೂ ಸಿತಾರ್ ಜುಗಲ್ ಬಂದಿ ನಡೆಯಲಿದೆ.
ನವಂಬರ್ 15ರಂದು ಬೆಳಿಗ್ಗೆ 10 ರಿಂದ 1.30 ರವರೆಗೆ ತಾರಸಿ ತೋಟ ತರಬೇತಿ, ಬೆಳಿಗ್ಗೆ 10 ರಿಂದ 1 ಗಂಟೆಗೆವರೆಗೆ ರೈತರೊಂದಿಗೆ ಸಂವಾದ, ರಾತ್ರಿ 7 ಗಂಟೆಗೆ ಲಯ ಲಾವಣ್ಯ ನಡೆಯಲಿದೆ.
ಇದನ್ನೂ ಓದಿ: ಕುರಿ ಕಳ್ಳನ ಬಂಧನ | 9.92 ಲಕ್ಷ ಬೆಲೆ ಬಾಳುವ ಕುರಿಗಳು ವಶ
ನವೆಂಬರ್ 16 ರಂದು ಬೆಳಿಗ್ಗೆ 7 ರಿಂದ 8.30ರವರೆಗೆ ರಂಗೋಲಿ ಸ್ಪರ್ಧೆ, ಬೆಳಿಗ್ಗೆ 11 ರಿಂದ 1 ರವರೆಗೆ ಕುಟುಂಬ ಪ್ರಭೋಧನ ಕಾರ್ಯಕ್ರಮ, ರಾತ್ರಿ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸೂತ್ರ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ 3 ರಿಂದ 7ರವರೆಗೆ ಪಂಚಗವ್ಯ ಚಿಕಿತ್ಸಾ ಶಿಬಿರ( ಉಚಿತ ಸಲಹೆ ) ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಮೇಳದ ಸಂಘಟಕರಾದ ಹನುಮಂತೇಗೌಡ, ಸಂಪತ್ ಕುಮಾರ್, ಪರಶುರಾಮ್, ರವಿತೇಜ, ಪ್ರದೀಪ್, ನಾಗರಾಜ್ ಬೇದ್ರೆ, ವೆಂಕಟೇಶ್ ಯಾದವ್ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
