Connect with us

    ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ

    ಚಿತ್ರದುರ್ಗದಲ್ಲಿ ಬಿಜೆಪಿಗೆ ರೋಚಕ ಗೆಲುವು

    ಮುಖ್ಯ ಸುದ್ದಿ

    ಕೋಟೆನಾಡಿನಲ್ಲಿ ಅರಳಿದ ಕಮಲ | ಗೆಲುವಿನ ಜಯಭೇರಿ ಬಾರಿಸಿದ ಗೋವಿಂದ ಕಾರಜೋಳ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 04 JUNE 2024
    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ವಿರುದ್ಧ ಕಾರಜೋಳ ಜಯಭೇರಿ ಬಾರಿಸಿದ್ದಾರೆ.

    ತೀವ್ರ ಉತ್ಸಾಹದಲ್ಲಿ ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಬಿ.ಎನ್.ಚಂದ್ರಪ್ಪ ಆಗಮಿಸಿದ್ದರು. ಮೊದಲ ಸುತ್ತಿನಲ್ಲಿ 75 ಮತಗಳ ಮುನ್ನಡೆ ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ 32,239 ಹಾಗೂ ಬಿಜೆಪಿಯ ಗೋವಿಂದ ಕಾರಜೋಳ ಅವರು 32,164 ಮತ ಪಡೆದಿದ್ದರು. ಎರಡನೇ ಸುತ್ತಿನಿಂದ ಸತತವಾಗಿ ಹಿನ್ನಡೆ ಸಾಧಿಸಿದ ಕಾರಣ ಬೇಸರಗೊಂಡು ಮತ ಎಣಿಕೆ ಕೇಂದ್ರದಿಂದ ಹೆಜ್ಜೆ ಹಾಕಿದ್ದಾರೆ.

    ಎರಡನೇ ಸುತ್ತಿನಿಂದಲೂ ತೀವ್ರ ಅಂತರ ಕಾಯ್ದುಕೊಂಡ ಗೋವಿಂದ ಕಾರಜೋಳ ಗೆಲುವಿನ ನಗೆ ಬೀರಿದ್ದಾರೆ. 6,77041 ಮತ ಪಡೆದಿದ್ದು, ಕೊನೆ ಹಂತದ ಎಣಿಕೆ ನಡೆಯುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ 6,30.451 ಪಡೆ ಪಡೆದು ಸೋಲು ಅನುಭವಿಸಿದ್ದಾರೆ.

    ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ವಲಸಿಗರಿಗೆ ಮತ್ತು ಹೊಸ ಮುಖಗಳಿಗೆ ಮಣೆ ಹಾಕುತ್ತ ಬಂದಿರುವುದು ಈ ಚುನಾವಣೆಯಲ್ಲೂ ಮುಂದುವರೆದಿದೆ.

    ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಕಮಲ ಪಡೆ 2009 ಮತ್ತು 2019ರಲ್ಲಿ ಗೆದ್ದಿದೆ. 1996ರಲ್ಲಿ ಜೆಡಿಯು, 1999ರಲ್ಲಿ ಜೆಡಿಎಸ್ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಿ ಗೆದ್ದಿದ್ದಾರೆ. 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್ ನಿಜಲಿಂಗಪ್ಪ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿದ್ದರು.

    ಕಾಂಗ್ರೆಸ್ ನಿಂದ 1971ರಲ್ಲಿ ಕೊಂಡಜ್ಜಿ ಬಸ್ಸಪ್ಪ, 1977 ಮತ್ತು 1980ರಲ್ಲಿ ಕೆ. ಮಲ್ಲಣ್ಣ, 1984ರಲ್ಲಿ ಕೆ ಹೆಚ್ ರಂಗನಾಥ್ ಗೆಲವು ಸಾಧಿಸಿದ್ದರೆ 1989, 1991ರಲ್ಲಿ ಸಿ ಪಿ ಮೂಡಲಗಿರಿಯಪ್ಪ ಗೆದ್ದು ಬೀಗಿದ್ದರು. 1996ರಲ್ಲಿ ಜನತಾದಳದಿಂದ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಕೋದಂಡರಾಮಯ್ಯ ಗೆದ್ದಿದ್ದರು. 1998ರಲ್ಲಿ ಕಾಂಗ್ರೆಸ್ ನಿಂದ ಸಿ ಪಿ ಮೂಡಲಗಿರಿಯಪ್ಪ ಮೂರನೇ ಬಾರಿ ಸಂಸದರಾಗಿದ್ದರು.

    ಚಿತ್ರದುರ್ಗ ಎಸ್ಟಿ ಮೀಸಲು ಕ್ಷೇತ್ರದಲ್ಲಿ 1999ರಲ್ಲಿ ನಟ ಶಶಿಕುಮಾರ್ ಜೆಡಿಎಸ್ ನಿಂದ ಸಂಸದರಾಗಿ ಆಯ್ಕೆ ಆಗಿದ್ದರು. 2004ರಲ್ಲಿ ಕಾಂಗ್ರೆಸ್ ನಿಂದ ನಿವೃತ್ತ ನ್ಯಾ. ಎನ್ ವೈ ಹನುಮಂತಪ್ಪ ಸಂಸದರಾಗಿದ್ದರು. ಚಿತ್ರದುರ್ಗ ಎಸ್ಸಿ ಮೀಸಲು ಕ್ಷೇತ್ರದಲ್ಲಿ ವಿದೇಶದಿಂದ ಮರಳಿದ್ದ ಜನಾರ್ಧನಸ್ವಾಮಿ 2009ರಲ್ಲಿ ಬಿಜೆಪಿ ಸಂಸದರಾಗಿ ಗೆದ್ದು ಬೀಗಿದ್ದರು. 2014ರಲ್ಲಿ ಚಿಕ್ಕಮಗಳೂರು ಮೂಲದ ಬಿ ಎನ್ ಚಂದ್ರಪ್ಪ ಕಾಂಗ್ರೆಸ್ ನಿಂದ ಸಂಸದರಾಗಿದ್ದರು. 2019ರಲ್ಲಿ ಆನೇಕಲ್ ಮೂಲದ ಎ. ನಾರಾಯಣಸ್ವಾಮಿ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದರು.

    ಚಿತ್ರದುರ್ಗ ಲೋಕಸಭೆ ಕ್ಷೇತ್ರ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳ ಪೈಕಿ 2013ರಲ್ಲಿ 5 ಕಾಂಗ್ರೆಸ್ , 1 ಜೆಡಿಎಸ್, 1 ಬಿಜೆಪಿ, 1 ಬಿಎಸ್ ಆರ್ ಪಕ್ಷ ಗೆದ್ದಿತ್ತು.

    2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನಾಯಾಸವಾಗಿ ಗೆಲುವು ಸಾಧಿಸಿತ್ತು. 2019ರ ಲೋಕಸಭೆ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 5, ಕಾಂಗ್ರೆಸ್ 2, ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.
    2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದರೂ ಸಹ ಬಿಜೆಪಿ ಸುಲಭ ಗೆಲುವು ಸಾಧಿಸಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿ ಕೇವಲ 1ಸ್ಥಾನದಲ್ಲಿ ಗೆದ್ದಿದೆ.

    ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,41,937 ಮತದಾರರಿದ್ದು ಏಪ್ರಿಲ್ 26 ಶುಕ್ರವಾರದಂದು ನಡೆದಿದ್ದ ಮೊದಲ ಹಂತದ ಮತದಾನದಲ್ಲಿ ಶೇಕಡಾ 72.74 ಪ್ರಮಾಣದ ಮತದಾನವಾಗಿತ್ತು. 2024ರಲ್ಲಿ ಕಾಂಗ್ರೆಸ್ ಮೂರನೇ ಬಾರಿಗೆ ಬಿ.ಎನ್‌.ಚಂದ್ರಪ್ಪ ಅವರನ್ನು ಕಣಕ್ಕಿಳಿಸಿತ್ತು. ಆದರೆ ಮಾಜಿ ಉಪ ಮುಖ್ಯಮಂತ್ರಿ ಬಾಗಲಕೋಟೆಯ ಮುಧೋಳ ಮೂಲದ ಗೋವಿಂದ ಕಾರಜೋಳ ಕೋಟೆನಾಡಿನಲ್ಲಿ ಪುನಃ ಕಮಲ ಅರಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top