CHITRADURGA NEWS | 05 MARCH 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮುಂದುವರೆದಿದ್ದು, ಗುರುವಾರ ಹಲವು ಸಂಘಟನೆಗಳು, ಮುಖಂಡರು ಮಠಾಧೀಶರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾಳೆ ರಾಜ್ಯ ಬಜೆಟ್ | ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ
ಒಂಟಿಕಲ್ಲು ಮಠದ ಶ್ರೀ ತಿಪ್ಪಾರೆಡ್ಡಿ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ನಂದಮಸಂದ್ ಸೇವಾಲಾಲ್ ಸ್ವಾಮೀಜಿ ಭಾಗವಹಿಸಿದ್ದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ ಉಪವಾಸ ಸತ್ಯಾಗ್ರಹವೇ ಕಣ್ಮರೆ ಆಗಿರುವ ಸಂದರ್ಭ ಜಿಲ್ಲೆಯ ರೈತರು ಅನ್ನ-ನೀರು ತೊರೆದು ಧರಣಿ ಕುಳಿತಿರುವುದು ಬದ್ಧತೆಗೆ ಸಾಕ್ಷಿಯಾಗಿದೆ. ಇವರ ಹೋರಾಟವನ್ನೇ ಹತ್ತಿಕ್ಕುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ನಾವು ನೀರು ಕೇಳಿದ್ರೆ ಆಳುವ ವರ್ಗ ವಿಷ ಕೊಡ್ತಿದೆ. ಇಲ್ಲಿನ ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ನಮ್ಮ ಮುಂದಿನ ಪೀಳಿಗೆ ಬದುಕು ದುಸ್ಥರವಾಗಲಿದೆ ಎಂದು ಎಚ್ಚರಿಸಿರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್….
ರೈತಸಂಘ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ನೀರೊಂದು ಕೊಟ್ಟರೇ ಭೂಮಿಯಲ್ಲಿ ಬಿತ್ತಿ, ಬೆಳೆದು ನಿಮಗೆ ಆಹಾರ ಕೊಡ್ತಿವೆ. ಬಜೆಟ್ನಲ್ಲಿ ಹಣ ತೆಗೆದಿಡದಿದ್ದರೇ ಪೊಲೀಸ್, ಅಧಿಕಾರಿಗಳಿಗೆ ಮಾಹಿತಿ ಕೊಡದೆ ದಿಢೀರನೇ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ತೀವ್ರ ಸ್ವರೂಕ್ಕೆ ಹೋರಾಟವನ್ನು ತೆಗೆದುಕೊಂಡು ಹೋಗಲಿದ್ದೇವೆ. ಅದಕ್ಕೂ ಮುನ್ನವೇ ಎಚ್ಚೇತ್ತುಕೊಳ್ಳಿ ಎಂದರು.
ಜಿಲ್ಲೆಯ ಜನತೆ ಫ್ಲೋರೈಡ್, ವಿಷಕಾರಕ ನೀರು ಸೇವಿಸುತ್ತಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ. ಆದರೂ ಇಲ್ಲಿನ ಜನರಿಗೆ ನೀರು ಕೊಡುವ ಕೆಲಸ ಆಗುತ್ತಿಲ್ಲ. ಫ್ಲೋರೈಡ್ ನೀರು ಕಾರಣಕ್ಕೆ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
–ಈಚಘಟ್ಟ ಸಿದ್ದವೀರಪ್ಪ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ.
ಉಪವಾಸ ನಿರತ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಾಲ್ಕು ದಿನ ಉಪವಾಸ ಕುಳಿತಿದ್ದೇವೆ. ನಮ್ಮ ತೆರಿಗೆ ಹಣದಲ್ಲಿ ಸಂಬಳ, ಕಾರು, ಮನೆ ಪಡೆದಿರುವ ಜಿಲ್ಲಾಧಿಕಾರಿ ಸೌಜನ್ಯಕ್ಕೂ ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ. ಇಂತಹ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆ ವರ್ಗಾವನೆ ಆಗಬೇಕು. ಇಲ್ಲದಿದ್ದರೇ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಬೇಕು, ಹೊಳಲ್ಕೆರೆ ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ವಿವಿ ಸಾಗರ, ಗಾಯತ್ರಿ ಜಲಾಶಯಕ್ಕೆ ಇಂತಿಷ್ಟು ನೀರು ಕಡ್ಡಾಯವಾಗಿ ಹರಿಸಲೇಬೇಕು. 2027ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ | ಪತ್ರಕರ್ತೆಯರಿಗೆ ವಿಶೇಷ ತರಬೇತಿ | ಅರ್ಜಿ ಅಹ್ವಾನ
ನಿವೃತ್ತ ಪ್ರಚಾರ್ಯ ಜೆ.ಯಾದವರೆಡ್ಡಿ ಮಾತನಾಡಿ, ಅಂತರ್ಜಲ ಕುಸಿದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲವೇ ನಮ್ಮ ಬದುಕಾಗಿದೆ. ನಮ್ಮನ್ನು ಅಪಾಯದಿಂದ ಪಾರು ಮಾಡಬೇಕಾದ ಸರ್ಕಾರಗಳೇ ಕಣ್ಮುಚ್ಚಿ ಕುಳಿತಿರುವುದು ನೋವಿನ ಸಂಗತಿ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಹಣ ಘೋಷಿಸುವಂತೆ ನಾವ್ಯಾರೂ ಕೇಳಿರಲಿಲ್ಲ. ಚುನಾವಣೆ ಪ್ರಚಾರಕ್ಕಾಗಿ ಅವರೇ 5,300 ಕೋಟಿ ರೂ. ಘೋಷಿಸಿದರು. ರಾಷ್ಟ್ರೀಯ ಯೋಜನೆ ಮನ್ನಣೆ ಕೊಡುತ್ತೇವೆ ಎಂದು ಬಹಿರಂಗವಾಗಿ ಹೇಳಿದರು. ಈಗ ಇಲ್ಲಸಲ್ಲದ ನೆಪ ಹೇಳುವುದು ಬಯಲುಸೀಮೆ ಜನರನ್ನು ಕತ್ತಲಿಗೆ ನೂಕಿದಂತೆ. ನಾವು ಬೀದಿಗಿಳಿಯುವ ಮುನ್ನವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ಭೀಮಗಾಯನ ಮಾರ್ಚ್ 07ಕ್ಕೆ
ಕಾರ್ಮಿಕ ಸಂಘಟನೆ ಮುಖಂಡ ಪೆನ್ನಯ್ಯ, ಮುಖಂಡರಾದ ರಮೇಶ್ ಕೋಟಿ, ಹುಲ್ಲೂರು ಕುಮಾರಸ್ವಾಮಿ, ಕಣ್ಮೇಶ್, ದೇವರಾಜ್, ಕಿರಣ್, ಸಿದ್ರಾಮಣ್ಣ, ಸಣ್ಣತಿಮ್ಮಣ್ಣ, ಸಣ್ಣೀರಪ್ಪ, ನಿಂಗಪ್ಪ, ಪ್ರಸನ್ನ, ವೆಂಕಟೇಶ್, ವೀರಭದ್ರಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಣ್ಣ, ತಿಪ್ಪೇಸ್ವಾಮಿ, ಕೆಪಿಎಂ ಗಣೇಶಯ್ಯ, ಹುಣಸೆಕಟ್ಟೆ ರಾಜು, ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ್ಯ, ನರೇನಹಳ್ಳಿ ಅರುಣ್ಕುಮಾರ್, ಶ್ರೀನಿವಾಸ ನಾಯ್ಕ್ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
