CHITRADURGA NEWS | 2 JANUARY 2024
ಚಿತ್ರದುರ್ಗ: ಅಯೋಧ್ಯೆಯಲ್ಲಿ ಬಾಲರಾಮನಿಗೆ ನಾಳೆ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವ ನಡೆಯುತ್ತಿದೆ.
ಅಯೋಧ್ಯೆಯಲ್ಲಂತೂ ಹಿಂದೆಂದೂ ಕಂಡು ಕೇಳರಿಯದಷ್ಟು ಸಂಭ್ರಮ ಮನೆ ಮಾಡಿದ್ದು, ನಾಡಿನ ಸಾವಿರಾರು ಸಾಧು ಸಂತರು, ಗಣ್ಯರು ಅಯೋಧ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ನಾಲ್ವರು ಹಾಗೂ ಪಕ್ಕದ ದಾವಣಗೆರೆ, ಹಾವೇರಿ ಶ್ರೀಗಳು ಸೇರಿದಂತೆ ಒಟ್ಟು ಏಳು ಜನ ಮಠಾಧೀಶರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಗೆ ತೆರಳಿದ ಕೋಟೆನಾಡಿನ ಮಠಾಧೀಶರು
ಅಯೋಧ್ಯೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ನಾಡಿನ ಮಠಾಧೀಶರು ನಾಡಿಗೆ ಸಂದೇಶ ರವಾನಿಸಿದ್ದಾರೆ. ಯಾವ ಮಠಾಧೀಶರು ಏನು ಹೇಳಿದ್ದಾರೆ ಪೂರ್ಣ ವಿವರ ಇಲ್ಲಿದೆ ನೋಡಿ..
ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ
ಹನುಮನ ನಾಡಿನಿಂದ ರಾಮನ ನಾಡಿಗೆ ಬಂದಿದ್ದೇವೆ. ನಮ್ಮ ಜೀವನದಲ್ಲಿ ನಾವು ಗಮನಿಸಿದಂತೆ ಭಾರತೀಯರು ಇಷ್ಟೊಂದು ಸಂಭ್ರಮವನ್ನು ಎಂದೂ ಕಂಡಿರಲಿಲ್ಲ. ಅಯೋಧ್ಯೆಯ ಪ್ರತಿ ಕಲ್ಲು, ಗಲ್ಲಿ, ಮರ, ಮನೆ ಎಲ್ಲವೂ ರಾಮನ ಜಪ ಮಾಡುತ್ತಿದೆ. ಈ ಸಂಭ್ರಮವೇ ಸೌಹಾರ್ಧತೆಗೆ ಸಾಕ್ಷಿಯಾಗಿದೆ. ಈ ಕ್ಷಣಕ್ಕಾಗಿ ಲಕ್ಷಾಂತರ ಜನ ಹೋರಾಟ ಮಾಡಿದ್ದಾರೆ, ಸಾವಿರಾರು ಜನ ಬಲಿದಾನ ಮಾಡಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ನಮ್ಮ ಸ್ಮರಣೆಯಿದೆ.
ಇದೊಂದು ಐತಿಹಾಸಿಕ ಕ್ಷಣ. ಭಾರತೀಯರ ಧಾರ್ಮಿಕ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಸಾಧು ಸಂತರು, ಹೋರಾಟಗಾರರು, ಸಂಘ ಪರಿವಾರ ಮಾಡಿದೆ. ಇದಕ್ಕೆ ನಮ್ಮ ಸ್ವಾಮಿಜಿಗಳ ಪರಿವಾರ ಅಭಿನಂದನೆ ಸಲ್ಲಿಸುತ್ತದೆ. ಇದು ನಮ್ಮ ಬದುಕಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು.
ರಾಮ ಸರ್ವಗುಣ ಸಂಪನ್ನ, ಆ ಗುಣಗಳನ್ನು ಭಾರತೀಯರು ಅಳವಡಿಸಿಕೊಂಡಾಗ ಭಾರತ ವಿಶ್ವಗುರು ಆಗಲು ಸಾಧ್ಯ.

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ:
ಕನಕದಾಸರು ರಾಮನ ಬಗ್ಗೆ ಕೀರ್ತನೆ ಬರೆದಿದ್ದಾರೆ. ಅಂಗಳದೊಳು ರಾಮನಾಡಿದ, ಚಂದ್ರ ಬೇಕೆಂದು ತಾ ಹಠ ಮಾಡಿದ ಎಂದು ಉಲ್ಲೇಖಿಸಿದ್ದಾರೆ.
ಆ ರಾಮ ಓಡಾಡಿದ ಮಣ್ಣನ್ನು ನಾವೆಲ್ಲಾ ಸ್ಪರ್ಶಿಸಿದ್ದೇವೆ. ಭವ್ಯ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಅಖಂಡ ಭಾರತದ ಜನರ ಸಂಕಲ್ಪ ಇತ್ತು. ಮಂದಿರ ನಿರ್ಮಾಣಕ್ಕಾಗಿ ಸಾಕಷ್ಟು ಜನ ಜೀವದಾನ ಮಾಡಿದ್ದಾರೆ.
ಅವರೆಲ್ಲರ ಕನಸು ನನಸಾಗುತ್ತಿದೆ. ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂದಿರ ಲೋಕಾರ್ಪಣೆಗೆ ಚಾಲನೆ ನೀಡಲಿದ್ದಾರೆ.
ರಾಜನಹಳ್ಳಿ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ:
ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ದೇವಸ್ಥಾನ ಲೋಕಾರ್ಪಣೆ ಮಾಡುತ್ತಿರುವುದು ಸಂತೋಷದ ವಿಚಾರ. ಈ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಗಳಾಗುತ್ತಿದ್ದೇವೆ. ಇಡೀ ದೇಶ ಈ ಕ್ಷಣಕ್ಕಾಗಿ ಕಾಯುತ್ತಿದೆ.
ಮಧುರೆ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ
ಸನಾತನ ಹಿಂದೂ ಧರ್ಮದಲ್ಲಿ ಭಾರತೀಯರು ಅನೇಕ, ಜಾತಿ, ಮತ ಪಂಥಗಳಿದ್ದರೂ, ನಾವೆಲ್ಲಾ ಭಗವಂತನನ್ನು ಆರಾಧಿಸುತ್ತೇವೆ.
ಮರ್ಯಾದಾ ಪುರುಷೋತ್ತಮ ಎಂದು ಪೂಜಿಸುವ ಶ್ರೀರಾಮ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ಸದ್ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಇಡೀ ಜಗತ್ತು ಇತ್ತ ನೋಡುತ್ತಿರುವಾಗ ನಾವು ಬೇಧ-ಭಾವ ಮಾಡದೇ ಶ್ರೀರಾಮನನ್ನ ಆರಾಧಿಸಬೇಕು. ಯಾವ ಬೇಧಗಳಿಲ್ಲದೆ ಎಲ್ಲರೂ ಸೇರಿ ಹಬ್ಬದಂತೆ ಆಚರಿಸೋಣ.
ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಚಿತ್ರದುರ್ಗದ ಮಗುವಿಗೆ ರಾಮನೆಂದು ನಾಮಕರಣ
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ:
ಒಂದು ಕಾಲದಲ್ಲಿ ಈ ಧರ್ಮದಲ್ಲಿ ತಾರತಮ್ಯ ಇತ್ತು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಕ್ರಮೇಣ ಈ ಭಾವನೆ ಕಡಿಮೆ ಆಗುತ್ತಿದೆ. ಎಲ್ಲವನ್ನೂ ಒಂದೇ ದಿನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ, ಕ್ರಮೇಣ ಬದಲಾವಣೆ ಆಗುತ್ತಿದೆ. ಕಾಲ ಬದಲಾದಂತೆ ಅಂಥಹ ಪರಿಸ್ಥಿತಿ ನಿರ್ನಾಮವಾಗಿ ನಾವು ಕೂಡಾ ಸಂವಿಧಾನ ಬದ್ಧವಾಗಿ ಎಲ್ಲ ಹಕ್ಕುಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಿಂದುಗಳು, ಭಾರತೀಯರು ಒಟ್ಟಾಗಿ ಬಾಳಬೇಕು ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ. ಶ್ರೀರಾಮ ಮಂದಿರ ಅಂಥಹ ಭಾವನೆ ವ್ಯಕ್ತಪಡಿಸಲು ಸೂಕ್ತ ಸಂದರ್ಭವಾಗಿದೆ.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ:
ರಾಮನ ವ್ಯಕ್ತಿತ್ವವೇ ಸರ್ವರನ್ನು ಒಳಗೊಂಡ ಸುಭೀಕ್ಷಾ ರಾಜ್ಯ ನಿರ್ಮಾಣ ಮಾಡುವುದು. ಇಲ್ಲಿ ಮೇಲು-ಕೀಳು, ಆದಿ ಅಂತ್ಯಜ ಎನ್ನುವ ಶ್ರೇಣಿಕೃತ ವ್ಯವಸ್ಥೆ ಇರಬಾರದು ಎನ್ನುವ ಕಾರಣಕ್ಕೆ ಮಂದಿರದ ಅರ್ಚಕರಾಗಿಯೂ ಹಿಂದುಳಿದ ಸಮುದಾಯಗಳನ್ನು ಜೋಡಿಸಿರುವುದು ಮಾದರಿ.
ನಮ್ಮಲ್ಲಿ ರಾಮ ಜೋಯಿಸ, ರಾಮ ಭಟ್. ರಾಮಣ್ಣ, ರಾಮಪ್ಪ ಹೀಗೆ ಎಲ್ಲ ಜಾತಿ ವರ್ಗದಲ್ಲೂ ರಾಮನ ಹೆಸರಿನವರಿದ್ದಾರೆ. ಅದೇ ರೀತಿ ರಾಮನ ಆಲಯದಲ್ಲೂ ಸರ್ವರನ್ನು ಒಳಗೊಂಡ ಪುರೋಹಿತರನ್ನು ನೋಡುವುದು ಸಮಂಜಸವಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
