CHITRADURGA NEWS | 23 APRIL 2026
ಚಿತ್ರದುರ್ಗ: ಮಾದಿಗರ 35 ವರ್ಷಗಳ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಒಳಮೀಸಲಾತಿ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: SSLC RESULT | ಚಿತ್ರದುರ್ಗ ಜಿಲ್ಲೆಗೆ ಜಿಲ್ಲೆ ಶೇ.92.25 ರಷ್ಟು ಫಲಿತಾಂಶ
ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಒಳಮೀಸಲಾತಿ ಸಭೆ ನಡೆಸಲಾಗಿದೆ. ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಾಟಗಾರರು ಬಂದಿದ್ದಾರೆ. ಈ ಸಭೆಯಲ್ಲಿ ಒಕ್ಕೋರಲ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ತೀರ್ಮಾನ ನೋಡಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಕರೆ ನೀಡಿದರು.
ಏಪ್ರಿಲ್ 24ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾದಿಗರ ಬೇಡಿಕೆ ಈಡೇರಿಸುವ ನಿರ್ಣಯ ಕೈಗೊಂಡರೆ ಸರ್ಕಾರವನ್ನು ಅಭಿನಂದಿಸುತ್ತೇವೆ. ಇಲ್ಲವಾದಲ್ಲಿ ಹೈವೇ ಬಂದ್ ಮಾಡಲಾಗುವುದು. ಶಾಸಕರ ಮಂತ್ರಿಗಳ ಮನೆ ಮುತ್ತಿಗೆ, ಘೇರಾವ್, ಸೇರಿದಂತೆ ಸಿಎಂ ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಮುದಾಯಕ್ಕೆ ಹೋರಾಟ ಹೊಸದಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ರಾಜ್ಯದ ಯಾವ ಭಾಗದಲ್ಲಿ ಏನೇ ಅನಾಹುತಗಳು ಸಂಭವಿಸಿದರೂ ಅದಕ್ಕೆ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಹೋರಾಟಗಾರ ಅಂಬಣ್ಣ ಆರೋಲಿಕರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚಿತ್ರದುರ್ಗದಲ್ಲಿ ಮಾಡಿದ್ದ ಡಿಕ್ಲರೇಷನ್ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟರ ಒಳಮೀಸಲಾತಿ ವಿಷಯದಲ್ಲಿ ಸುಖಾಸುಮ್ಮನೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಮಾದಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವುದು ಈ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದರು.
ಏಪ್ರಿಲ್ 24ರಂದು ನಡೆಯುವ ಒಳಮೀಸಲಾತಿ ಕುರಿತ ಸಚಿವ ಸಂಪುಟ ಸಭೆಯಲ್ಲಿ 56ಸಾವಿರ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಒಳಮೀಸಲು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ರಕ್ತಸಿಕ್ತ ಹೋರಾಟವೂ ಸೇರಿದಂತೆ ಜೈಲ್ ಬರೋ ಚಳವಳಿ ಮಾಡಲಾಗುವುದು ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಹೆಚ್ಚಿನ ಬಿಸಿಲು | ವೃದ್ಧರು, ಗರ್ಭಿಣಿಯರು, ಮಕ್ಕಳ ವಿಶೇಷ ಕಾಳಜಿಗೆ DHO ರೇಣುಪ್ರಸಾದ್ ಸಲಹೆ
ಒಳಮೀಸಲಾತಿ ಹಿರಿಯ ಹೋರಾಟಗಾರರಾದ ಮಾರಸಂದ್ರ ಮುನಿಯಪ್ಪ ಮಾತನಾಡಿ, ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಒಳಮೀಸಲು ಜಾರಿ ಆಗದೇ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ 891 ಹುದ್ದೆಗಳ ಅಧಿಸೂಚನೆ ಇನ್ನೂ ಅಂತರ್ಜಾಲದಲ್ಲಿ ಹಾಗೇಯೆ ಇದೆ ಎಂದರು.
ಮೈಸೂರಿನ ಒಳಮೀಸಲಾತಿ ಹೋರಾಟಗಾರ ವಕೀಲ ಅರುಣ್ ಕುಮಾರ್ ಮಾತನಾಡಿ, ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ, ನ್ಯಾ.ನಾಗಮೋಹನ್ ದಾಸ್ ಸೇರಿದಂತೆ ಎಲ್ಲಾ ಆಯೋಗಗಳ ವರದಿಯಲ್ಲಿ ಮಾದಿಗರಿಗೆ ಶೇ.6 ರಷ್ಟು ಒಳಮೀಸಲು ನೀಡಲಾಗಿದೆ. ಆದರೆ, ಹೊಲಯರಿಗೆ, ಕೊರಚ, ಲಂಬಾಣಿ, ಬೋವಿಗಳಿಗೆ ಈ ಪ್ರಮಾಣ ಹೆಚ್ಚುತ್ತಲೇ ಬಂದಿರುವುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದರು.
ಈ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಬೂಬು ಹೇಳದೇ ಶೇ.6 ಒಳಮೀಸಲು ಅನ್ವಯವಾಗುವ ರೀತಿಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಾದಿಗರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಏ.25 ರಂದು ಚಿತ್ರದುರ್ಗದಲ್ಲಿ ಜನಸೇನಾ ಪಕ್ಷದ ಸದಸ್ಯತ್ವ ಅಭಿಯಾನ
ಸಿದ್ದರಾಮಯ್ಯ ಸರ್ಕಾರಕ್ಕೆ ಮಾದಿಗರಿಗೆ ನೀಡಿದ ಭರವಸೆಗಳ ನೆನಪು ಇಲ್ಲವಾಗಿದೆ. ಆದ್ದರಿಂದ ಈ ಸಮುದಾಯ ಇನ್ನೂ ಹೋರಾಟ ಮಾಡಬೇಕಾಗಿದೆ. ಒಳಮೀಸಲು ಜಾರಿಗೆ ಹೊಲಯ ಸಚಿವರು ಸೇರಿದಂತೆ ಕೊಲಂಭೋ ಸಚಿವರು ವಿರೋಧಿಸುತ್ತಿರುವುದು ವಂಚಿತ ಸಮುದಾಯಕ್ಕೆ ಎಸಗುವ ದ್ರೋಹ. ಸರ್ಕಾರ ಇಂತಹುದನ್ನು ಮುಂದಿಟ್ಟುಕೊಂಡು ಮಾದಿಗರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠೀಯಲ್ಲಿ ವಕೀಲ ಮಾಳಪ್ಪ ಕುರ್ಕಿ, ಲೇಖಕ ಸಂತೋಷ್ ಕೋಡಿಹಳ್ಳಿ, ಚಿತ್ರದುರ್ಗದ ಹಿರಿಯ ಒಳಮೀಸಲು ಹೋರಾಟಗಾರ ಬಿ.ಪಿ. ಪ್ರಕಾಶ್ ಮೂರ್ತಿ, ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಗುರುಮೂರ್ತಿ, ಹುಲ್ಲೂರು ಕುಮಾರಸ್ವಾಮಿ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
