ಕ್ರೈಂ ಸುದ್ದಿ
ಗೂಡ್ಸ್ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ | ಸ್ಥಳದಲ್ಲೇ ವಾಹನ ಚಾಲಕ ಮೃತ

CHITRADURGA NEWS | 24 MARCH 2024
ಚಿತ್ರದುರ್ಗ: ಅಡಿಕೆ ತೋಟದ ಗಿಡಗಳಿಗೆ ಮಣ್ಣು ಹಾಕುವ ಕೂಲಿ ಕೆಲಸಕ್ಕೆ ತೆರಳಿದ್ದ ಕೂಲಿ ಕೆಲಸಗಾರರ ವಾಹನ ಅಪಘಾತಕ್ಕೆ ತುತ್ತಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆ ಕೋಡಿರಂಗವ್ವನ ಹಳ್ಳಿಯ ವಡ್ಡರಹಟ್ಟಿ ನಿವಾಸಿ ಚಂದ್ರಪ್ಪ (31) ಮೃತ ಚಾಲಕ.
ಕ್ಲಿಕ್ ಮಾಡಿ ಓದಿ: ಝೇಂಕರಿಸಿದ ಗೋವಿಂದ…ಗೋವಿಂದ..ಜಯಘೋಷ | ಶ್ರೀ ಲಕ್ಷ್ಮಿ ಕಟ್ಟೇರಂಗನಾಥ ಸ್ವಾಮಿ ರಥೋತ್ಸವ
ಚಿಕ್ಕಮಗಳೂರು ಜಿಲ್ಲೆ ಬೀರೂರು ಪಟ್ಟಣ ಹೊರವಲಯದ ಬ್ರೈಟ್ ಫ್ಯೂಚರ್ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಸರಕು ಸಾಗಣೆ ವಾಹನದ ನಡುವೆ ಶನಿವಾರ ಡಿಕ್ಕಿ ಸಂಭವಿಸಿದೆ. ಈ ವೇಳೆ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಚಿತ್ರದುರ್ಗದ ಮಂಜುನಾಥ ಮತ್ತು 10 ಮಂದಿ ಧರ್ಮಸ್ಥಳ ಸಮೀಪದ ನಿಂತಿಕಲ್ ಗ್ರಾಮದಲ್ಲಿ ಅಡಿಕೆ ತೋಟದ ಗಿಡಗಳಿಗೆ ಮಣ್ಣು ಹಾಕುವ ಕೂಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿದ ನಂತರ ತಮ್ಮ ಗ್ರಾಮಗಳಿಗೆ ಸರಕು ಸಾಗಣೆ ವಾಹನದಲ್ಲಿ ವಾಪಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಕ್ಲಿಕ್ ಮಾಡಿ ಓದಿ: ಹೊರಕೆರೆ ದೇವರಪುರದ ರಂಗಪ್ಪನ ತೇರಿಗೆ ಜನಸಾಗರ | ವಿಜೃಂಭಣೆಯ ಲಕ್ಷ್ಮಿ ನರಸಿಂಹಸ್ವಾಮಿ ರಥೋತ್ಸವ
ಕಡೂರು ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಚಂದ್ರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಕಡೂರು, ಬೀರೂರು, ಶಿವಮೊಗ್ಗ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರು ಚಿತ್ರದುರ್ಗ, ಚನ್ನಗಿರಿ, ಗದಗ ಜಿಲ್ಲೆಯ ರೋಣ ತಾಲ್ಲೂಕಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
