ಮುಖ್ಯ ಸುದ್ದಿ
21 ಅಡಿ ಎತ್ತರದ ಮುಳ್ಳಿನ ದೇಗುಲ | ಪುರ್ಲಹಳ್ಳಿಯಲ್ಲಿ ಬುಡಕಟ್ಟು ವೈಭವ

CHITRADURGA NEWS | 25 JANUARY 2024
ಚಿತ್ರದುರ್ಗ: ದೇವಸ್ಥಾನಗಳನ್ನು ಹೇಗೆ ನಿರ್ಮಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಥಟ್ ಅಂತಾ ಬರುವುದು ಕಲ್ಲಿನಿಂದ ಇಲ್ಲವೇ ಇಟ್ಟಿಗೆಯಿಂದ ನಿರ್ಮಾಣ ಮಾಡುತ್ತಾರೆ ಎಂಬ ಉತ್ತರ. ಆದರೆ ಮುಳ್ಳಿನಿಂದ ಅಂತಾ ಯಾರು ಹೇಳುವುದಿಲ್ಲ. ಆದರೆ ಹೀಗೆ ಹೇಳುತ್ತಾರೆ ಪರಶುರಾಂಪುರ ಸಮೀಪದ ಪುರಲ್ಲಹಳ್ಳಿ ಗ್ರಾಮಸ್ಥರು. ಅಚ್ಚರಿಯ ಜತೆ ಕುತೂಹಲ ಮೂಡುವುದು ಸಹಜ. ನಿಮ್ಮ ಕುತೂಲ, ಪ್ರಶ್ನೆಗೆ ಉತ್ತರ ಮುಂದಿನಂತೆ.
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸಮೀಪದ ಪುರ್ಲಹಳ್ಳಿ ಗ್ರಾಮದ ಜನತೆಗೆ ಕ್ಯಾತಪ್ಪನೇ ಆರಾಧ್ಯದೈವ. ಕ್ಯಾತಪ್ಪನ ಜಾತ್ರೆ ಬಂತೆಂದರೆ ಸಾಕು, ಈ ವಿಶಿಷ್ಟ ಆಚರಣೆಯೊಂದಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಗುತ್ತದೆ. ಕ್ಯಾತಪ್ಪನ ಜಾತ್ರೆ ಅಚ್ಚರಿಯ ತೊಟ್ಟಿಲು. ಕೆಲವೇ ನಿಮಿಷಗಳಲ್ಲಿ 21 ಅಡಿ ಎತ್ತರದ ಮುಳ್ಳಿನ ದೇಗುಲದ ನಿರ್ಮಿಸುವುದು ಜಾತ್ರೆಯ ವಿಶೇಷ.

ಇದನ್ನೂ ಓದಿ: ಜಮೀನಿನಲ್ಲಿ ನಾಗರಹಾವು ಕಚ್ಚಿ ಬಾಲಕ ಸಾವು
ಕಾಡುಗೊಲ್ಲ ಬುಡಕಟ್ಟಿನ ಕೊಣನ ಗೊಲ್ಲ ಮತ್ತು ಬೊಮ್ಮನಗೊಲ್ಲ ಬೆಡಗಿನ ಅಣ್ಣ-ತಮ್ಮಂದಿರು ಮಂಗಳವಾರ ರಾತ್ರಿಯೇ ವಸಲು ದಿನ್ನೆಯಲ್ಲಿ ಬಾರೆ ಕಳ್ಳೆ, ಎರದ ಕಳ್ಳೆ, ತುಗ್ಗಲಿ ಮೋರು ಮತ್ತು ಗುಡಿ ಕಟ್ಟಲು ಬೇಕಾಗುವ ಗಳಗಳನ್ನು ತಂದಿದ್ದರು. ಬೆಳಿಗ್ಗೆ ಕಳಶ ಇಡುವ ಈರಗಾರರು ಬಂದ ತಕ್ಷಣ ಒಂದು ಭಾಗದಲ್ಲಿ ಕೊಣನ ಗೊಲ್ಲರು, ಮತ್ತೊಂದು ಭಾಗದಲ್ಲಿ ಬೊಮ್ಮನ ಗೊಲ್ಲರು ಕ್ಷಣಾರ್ಧದಲ್ಲಿ ಗುಡಿಕಟ್ಟಿದರು.

ಪಶುಪಾಲನೆ ವೃತ್ತಿ ಮಾಡುತ್ತಿದ್ದ ಕ್ಯಾತಪ್ಪ ತಮ್ಮ ದನ-ಕರುಗಳನ್ನು ರಕ್ಷಿಸಲು ಬಾರೆ ಕಳ್ಳೆಯ ರೊಪ್ಪಗಳನ್ನು ಹಾಕಿಕೊಳ್ಳುತ್ತಿದ್ದರು ಎನ್ನುವ ಪ್ರತೀತಿ ಇದೆ. ಅದರ ನೆನಪಿಗಾಗಿ ಪ್ರತಿ ವರ್ಷ ಜಾತ್ರೆ ಸಮಯದಲ್ಲಿ ಈ ರೀತಿಯ ಕಳ್ಳೆ ಗುಡಿಯನ್ನು ಕಟ್ಟಿ ಅದರಲ್ಲಿ ಕ್ಯಾತಪ್ಪ ಮತ್ತು ಅದರ ಪರಿವಾರದ ದೇವರುಗಳಾದ ಬಂಜಗೆರೆಯ ಕಾಟಂದೇವರು, ವೀರಣ್ಣದೇವರು, ಬತವಿನದೇವರು, ಐಗಾರ್ಲಹಳ್ಳಿಯ ತಾಳಿದೇವರುಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದವನಿಗೆ 6 ತಿಂಗಳು ಸಜೆ
ಈ ಬಾರಿ ಕ್ಯಾತಗೊಂಡನಹಳ್ಳಿಯ ರಾಜಣ್ಣ, ಚೌಳೂರಿನ ರಘು ಎಂಬುವವರು ವಸಲು ದಿನ್ನೆಯಲ್ಲಿರುವ ಅಕ್ಕಮ್ಮನ ಬಾವಿಯಲ್ಲಿ ಸ್ನಾನ ಮಾಡಿ ಮೆರವಣಿಗೆಯ ಮೂಲಕ ಬಂದು ಬಾರೆ ಕಳ್ಳೆಯ ಗುಡಿಯ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಿದರು. ಜಾತ್ರೆಯ ಪ್ರಧಾನ ಘಟ್ಟವಾದ ಬಾರೆ ಕಳ್ಳೆಯ ಮೇಲಿನ ಕಳಶ ಕೀಳುವ ಕಾರ್ಯಕ್ರಮ ಜ.29 ರಂದು ನಡೆಯಲಿದೆ.
ಗುಡಿ ಕಟ್ಟಿನ ಪೂಜಾರರು, ಅಣ್ಣ-ತಮ್ಮಂದಿರು, ಕಾಡುಗೊಲ್ಲರ ತಾಲ್ಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಕುಮಾರ, ಮುಖಂಡರಾದ ದೇವಣ್ಣ, ಕುಮಾರ, ಸಿರಿಯಣ್ಣ ಇದ್ದರು.
