
CHITRADURGA NEWS | 25 AUGUST 2025
ಚಳ್ಳಕೆರೆ: ಅಕ್ಷರ ಜ್ಞಾನವಿಲ್ಲದಿದ್ದರೂ ಗ್ರಾಮೀಣ ಭಾಗದಲ್ಲಿ ನೂರಾರು ಸೋಬಾನ, ದೇವರ ಹಾಡು, ಜಾನಪದಗಳನ್ನು ಹಾಡಿದ ಸಿರಿಯಜ್ಜಿಗೆ ಮರಣೋತ್ತರ ಪದ್ಮಶ್ರೀ ನೀಡಬೇಕು ಎಂದು ವನಕಲ್ಲು ಮಠದ ರಮಾನಂದ ಸ್ವಾಮೀಜಿ ಆಗ್ರಹಿಸಿದರು.
ಇದನ್ನೂ ಓದಿ: ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ತಾಲ್ಲೂಕಿನ ಯಲಕಟ್ಟೆ ಗೊಲ್ಲರಹಟ್ಟಿಯ ಜಾನಪದ ವಿಶ್ವಕೋಶವೆಂದೇ ಕರೆಯುವ ಸಿರಿಯಜ್ಜಿಯವರ ಹುಟ್ಟೂರಲ್ಲಿ ಅವರ ಸ್ಮಾರಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜಾನಪದ ಕಲೆಯನ್ನು ಮುಗಿಲೆತ್ತರಕ್ಕೆ ಕೊಂಡ್ಯೊಯ್ದ ಕೀರ್ತಿ ಜಾನಪದ ಸಿರಿ ಸಿರಿಯಜ್ಜಿದು. ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಸಿರಿಯಜ್ಜಿ ಯಾವುದೇ ಶಿಕ್ಷಣ ಪಡೆಯದಿದ್ದರೂ ಸಹ ಬದುಕಿನ ಲೌಕಿಕ ಜ್ಞಾನದಿಂದ ತನ್ನ ಕಂಠಶ್ರೀಯಿಂದ ಹತ್ತಾರು ಸಾವಿರ ಜಾನಪದ, ಸೋಬಾನೆ ಹಾಗೂ ದೇವರ ಹಾಡುಗಳನ್ನು ಹಾಡುವ ಮೂಲಕ ವಿಶ್ವಖ್ಯಾತಿ ಪಡೆದಿದ್ದಾರೆ.
ಪ್ರಧಾನ ಭಾಷಣ ಮಾಡಿದ ಸಿರಿಯಜ್ಜಿಯ 10 ಸಾವಿರಕ್ಕೂ ಹೆಚ್ಚು ಜಾನಪದ ಗೀತೆಗಳಿಗೆ ಅಕ್ಷರ ರೂಪನೀಡಿದ ನಾಡಿನ ಹೆಸರಾಂತ ಸಾಹಿತಿ ವಿಮರ್ಶಕ ಹನೂರು ಕೃಷ್ಣಮೂರ್ತಿ ಮಾತನಾಡಿ, ಜಾನಪದ ಸಿರಿ ಸಿರಿಯಜ್ಜಿ ಇಂದು ನಮ್ಮೊಡನಿಲ್ಲವೆಂಬ ಕೊರಗು ಯಾರನ್ನೂ ಕಾಡಲು ಸಾಧ್ಯವಿಲ್ಲ. ಕಾರಣ, ಇಂತಹ ಗ್ರಾಮೀಣ ಪರಿಸರದ ಈ ಕುಸುಮ ವಿದೇಶದಲ್ಲೂ ತನ್ನ ಕಂಪನ್ನು ಹರಡಿಸಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 25 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಅಮೇರಿಕದಲ್ಲಿ ವಿಶ್ವಜಾನಪದ ಸಮ್ಮೇಳನದಲ್ಲೂ ಸಿರಿಯಜ್ಜಿಯವರ ಜಾನಪದ ಹಾಡುಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದೇ. ಅಲ್ಲಿನ ಸಂಘಟಕರು ಜಾನಪದ ಸಿರಿಯಜ್ಜಿಯ ಕೊಡುಗೆ ನೆನಪಿಸಲಾಗಿತ್ತು. ಕರ್ನಾಟಕದಲ್ಲಿ ಯಾವುದೇ ಪ್ರಚಾರವಿಲ್ಲದೆ ದಶಕಗಳ ಕಾಲ ತನ್ನ ಸಾಹಿತ್ಯ ಕ್ಷೇತ್ರವನ್ನು ಮುಂದುವರಿಸಿದ್ದಕ್ಕೆ ಸಂತಸ ಪಟ್ಟರು.
ವಿಶ್ರಾಂತ ಪ್ರಾಂಶುಪಾಲ, ನಿವೃತ್ತ ಕನ್ನಡ ಪ್ರಾಧ್ಯಾಪಕ ಬಿ.ಪಿ.ವೀರೇಂದ್ರಕುಮಾರ್ ಮಾತನಾಡಿ, ವಿಶ್ವಮಟ್ಟದಲ್ಲಿ ಯಾವುದಾದರೂ ಜಾನಪದ ಸಾಹಿತಿ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದ್ದರೆ ಅದರ ಕೀರ್ತಿ ಸಿರಿಯಜ್ಜಿಯವರಿಗೆ ಸಲ್ಲುತ್ತದೆ. ಇಂದಿನ ದಿನದಲ್ಲಿ ಹತ್ತಾರು ಸಾಲುಗಳನ್ನು ಹಾಡಲು ಕಷ್ಟಪಡುವ ದಿನದಲ್ಲಿ ಹತ್ತು ಸಾವಿರ ಹಾಡುಗಳನ್ನು ತನ್ನ ನೆನಪಿನ ಶಕ್ತಿಯಿಂದಲೇ ಹಾಡುವ ಸಿರಿಯಜ್ಜಿಯ ಕೊಡುಗೆ ಅಸಮಾನ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಲಕ್ಷ್ಮಿನರಸಿಂಹಸ್ವಾಮಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ, ನಿವೃತ್ತ ಭಾರತೀಯ ಅರಣ್ಯ ಸೇವಾಧಿಕಾರಿ ಡಾ.ಬಿ.ಚಿಕ್ಕಪ್ಪಯ್ಯ, ಮೂಲತ ತುಮಕೂರು ಜಿಲ್ಲೆಯವನಾದ ನನಗೆ ಸಿರಿಯಜ್ಜಿಯವರ ಜಾನಪದ ಜ್ಞಾನದ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾನು, ಹನೂರು ಕೃಷ್ಣಮೂರ್ತಿ ಸೇರಿದಂತೆ ಈ ಭಾಗದ ಸಮುದಾಯದ ಮುಖಂಡರೊಡನೆ ಚರ್ಚಿಸಿ ಸಿರಿಯಜ್ಜಿಯ ಸ್ಮಾರಕ ನಿರ್ಮಾಣಕ್ಕೆ ಮುಂದಾದೆ.
ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಹಿನ್ನಲೆ ಚಿತ್ರದುರ್ಗದಲ್ಲಿ ವಿಜಯೋತ್ಸವ | ರಾಯಚೂರಿನಲ್ಲಿ ಬೃಹತ್ ಸಮಾವೇಶ | ಎಚ್.ಆಂಜನೇಯ
ಸ್ಮಾರಕ ನಿರ್ಮಾಣದ ಬಗ್ಗೆ ಬಿ.ವಿ.ರಾಜೇಶ್ವರಿ, ಟಿ.ಬಿ.ರಾಜಣ್ಣ, ಜಿ.ಸಿ.ರಂಗಸ್ವಾಮಿ, ಎಂ.ಪರಮೇಶ್, ಎಂ.ರಂಗನಾಥ, ವಿ.ತುಂಗೇಶ್ವರ್, ಸೇರಿದಂತೆ ಈ ಭಾಗದ ಹಲವಾರು ಜನರು ನನಗೆ ಸಹಕಾರ ನೀಡಿದ್ಧಾರೆ. ಈ ಸ್ಮಾರಕ ರಾಜ್ಯಮಟ್ಟದಲ್ಲಿ ಖ್ಯಾತಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಚಳ್ಳಕೆರೆ ತಾಲ್ಲೂಕು ಕಾಡುಗೊಲ್ಲ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗ್ರಾ.ಪಂ ಸದಸ್ಯ ಶ್ರೀನಿವಾಸ,ವೀರೇಶ್ ವಿ ಚಳ್ಳಕೆರೆ, ಮಹೇಂದ್ರ, ಬೆಳಗೆರೆ ಜಯಣ್ಣ, ಮುಂತಾದವರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
