CHITRADURGA NEWS | 19 JANUARY 2026
ಚಿತ್ರದುರ್ಗ: ತರಳಬಾಳು ಬೃಹನ್ಮಠದ ಕೇಂದ್ರ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಶಿವನಾರದ ಮುನಿ ಭವ್ಯ ದೇವಸ್ಥಾನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನಡೆದಿದೆ.
‘ಚಿಗಟೇರಿ ಎಂಬ ಊರಿಲ್ಲ, ನಾರಪ್ಪನೆಂಬ ದೇವರಿಲ್ಲ’ ಎಂಬ ಗಾದೆ ಪ್ರಚಲಿತದಲ್ಲಿದೆ. ಅದರಂತೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿರುವ ಈ ಪ್ರಸಿದ್ಧ ಚಿಗಟೇರಿ ಪುರಾಧೀಶ ಶಿವನಾರದ ಮುನಿಯ ನೂತನ ದೇವಾಲಯವನ್ನು ಸಿರಿಗೆರೆಯಲ್ಲಿ ನಿರ್ಮಿಸಲು ಭಕ್ತರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಸಾವಿರ ವರ್ಷ ಕಳೆದರೂ ಹಿಂದೂ ಸಂಸ್ಕೃತಿ ಇರುತ್ತದೆ | ಯಾದವ ಕೃಷ್ಣ
ಸಿರಿಗೆರೆಯ ಪ್ರವೇಶ ದ್ವಾರದಲ್ಲೇ ಚೋಳರ ಶೈಲಿಯಲ್ಲಿ ಸುಂದರವಾದ ಭವ್ಯ ದೇಗುಲ ನಿರ್ಮಾಣವಾಗುತ್ತಿದ್ದು, ಜನವರಿ 19 ಸೋಮವಾರ ಬೆಳಗ್ಗೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಹೇಗಿರುತ್ತೆ ಗೊತ್ತಾ ದೇಗುಲ:
ಕಲ್ಲುಗಳಿಂದ ನಿರ್ಮಾಣವಾಗಲಿರುವ ಸುಂದರ ದೇಗುಲದಲ್ಲಿ ಮೂರು ಮಂಟಪಗಳಿರುತ್ತವೆ. ಮಹಾಮಂಟಪ, ಗರ್ಭಗುಡಿ ಹಾಗೂ ಗರ್ಭ ಗುಡಿಯ ಸುತ್ತಾಮುತ್ತ ೧೦ ಅಡಿ ಅಗಲದ ಪ್ರಾಂಗಣ ಇರುತ್ತದೆ.
ಇದನ್ನೂ ಓದಿ: ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾತಂಗೇಶ್ವರಿ ದೇಗುಲ | ಜನವರಿ 20ಕ್ಕೆ ಭೂಮಿ ಪೂಜೆ
ದೇವಾಲಾಯದ ಗರ್ಭಗುಡಿಯ ಮೇಲೆ ನಿರ್ಮಾಣವಾಗುವ ಗೋಪುರದ ಮಾದರಿಯಲ್ಲೇ ಇತರೆ ಮಂಟಪಗಳ ಮೇಲೆಯೂ ಗೋಪುರ ಇರುತ್ತವೆ.
ದೇವಸ್ಥಾನದ ಸಮೀಪದಲ್ಲಿ ದೀಪಸ್ಥಂಭ ಇರುತ್ತದೆ. ಒಟ್ಟಾರೆ ದೇಗುಲಕ್ಕೆ ಐದೂವರೆಯಿಂದ ಆರು ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ.
ದೇವಸ್ಥಾನ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ಸಮೀಪದ ಕೋಯಿರಾ ಹಾಗು ಶಿರಾ ಸಮೀಪದ ಮದ್ದನಾಯಕನಹಳ್ಳಿ ಶಿಲ್ಪಗಳನ್ನು ಬಳಸಲಾಗುತ್ತದೆ. ಕಾರ್ಕಳ ಮೂಲದ ನಾಗರಾಜಾಚಾರಿ ನೇತೃತ್ವದ ತಂಡ ನಿರ್ಮಾಣ ಮಾಡಲಿದೆ.
ಮಧ್ಯ ಕರ್ನಾಟಕದಲ್ಲಿ ಅಪಾರ ಭಕ್ತಗಣ:
ಮಧ್ಯ ಕರ್ನಾಟಕದಲ್ಲಿ ಅಪಾರ ಭಕ್ತರನ್ನು ಹೊಂದಿರುವ ದೈವ ಶಿವನಾರದಮುನಿ. ದೇವರಿಗೆ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ ಜಿಲ್ಲೆಗಳು ಸೇರಿ ಅಪಾರ ಭಕ್ತರು ನಡೆದುಕೊಳ್ಳುವರು.
ಇದನ್ನೂ ಓದಿ: 2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ
ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ವೆಂಬ ಪ್ರತೀತಿಯೊಂದಿಗೆ ಸ್ವಾಮಿ, ಮಹರ್ಷಿ ತಪೋನಿಧಿಗಳಿಗೆ ನೆಲೆಕೊಟ್ಟ ಸ್ಥಳ -‘ಚಿನ್ನದ ಚಿಗಟೇರಿ’. ‘ದಂಡಗಂಟೆಯ ನಾರದ’ ಎಂಬ ಖ್ಯಾತಿ ಪಡೆದ ದೈವ ಶಿವನಾರದಮುನಿ.
ಎಂಟನೇ ಶತಮಾನದಲ್ಲಿ ಉತ್ತರ ಭಾರತದಿಂದ ಬಂದು ಮಧ್ಯ ಕರ್ನಾಟಕದಲ್ಲಿ ನೆಲೆನಿಂತು, ತಪಗೈದ ‘ಭೈರೇಶ’ ತನ್ನ ತಪಶಕ್ತಿಯಿಂದ ಭಕ್ತನ ಮೈಮೇಲಿನ ‘ನಾರುಹುಣ್ಣು’(ಚರ್ಮದ ಮೇಲಿನ ಗಂಟು) ನಿವಾರಣೆ ಮಾಡಿದರು. ಭೈರೇಶರು ಶಿವನಾರದ ಮುನಿಯಾಗಿ ಚಿಗಟೇರಿ ಗ್ರಾಮದ ಕ್ಷಾಮ ನೀಗಿದ್ದರು. ಪವಾಡ ಗೈದಿದ್ದರು ಎಂಬುದು ಇತಿಹಾಸ.
ಇದನ್ನೂ ಓದಿ: ದಿನ ಭವಿಷ್ಯ | ಜನವರಿ 19 | ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ, ಆರ್ಥಿಕ ಲಾಭದ ಸೂಚನೆ
ಅಂದು ಕ್ಷಾಮದಿಂದ ಕಂಗಾಲಾಗಿದ್ದ ಜನರ ಬಾಳಿಗೆ ಬೆಳಕಾಗಿ ಬಂದಿದ್ದ ನಾರದ ಮುನಿಗೆ, ಇಂದು ನಾಡಿನೆಲ್ಲೆಡೆ ಲಕ್ಷಾಂತರ ಭಕ್ತರಿದ್ದಾರೆ. ಅಂದಿನಿಂದ ನಾರನ್ಮುನಿ, ಶಿವನಾರದಮುನಿ ಎಂದು ಪ್ರಚಲಿತರಾದರು. ಹುಲ್ಲೂರಿನಿಂದ ಚಿಗಟೇರಿ ಗ್ರಾಮದ ಕ್ಷಾಮ ನಿವಾರಣೆಗೆ ಬಂದು ನೆಲೆಸಿದರು. ಅಲ್ಲಿ ನಾಡಗೌಡರು ದೇವಸ್ಥಾನ ನಿರ್ಮಿಸಿದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
