CHITRADURGA NEWS | 13 APRIL 2026
ಚಿತ್ರದುರ್ಗ: ಜನಸಮುದಾಯಕ್ಕೆ ಜೀವನ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ಕೆ ರಂಗಭೂಮಿ ಸರಳ ಮಾರ್ಗವಾಗಿದೆ. ಮೌಢ್ಯತೆಯ ಪರಮಾವಧಿಯನ್ನು ತೊಡೆದು ಹಾಕಲು ರಂಗಭೂಮಿ ಉತ್ತಮ ವೇದಿಕೆಯಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶಿವಶರಣ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ
ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ-2025 ಮೂರು ನಾಟಕಗಳ ಪ್ರದರ್ಶನ, ಉಪನ್ಯಾಸ, ರಂಗ ಗೀತೆಗಳ ಗಾಯನ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯುನ್ಮಾನ, ಜಾಲತಾಣ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳೆದಂತೆ ಮನುಷ್ಯನಲ್ಲಿ ಆಲಸ್ಯತನ ಮನೆಮಾಡುತ್ತದೆ. ಸರಳ ಮಾರ್ಗವನ್ನು ಅನುಸರಿಸುವ ನಿಟ್ಟಿನಲ್ಲಿ ದೇಹಾರೋಗ್ಯದ ಕಡೆ ಗಮನವಹಿಸುವುದಿಲ್ಲ. ಮೌಢ್ಯತೆಗೆ ಜಾರಿದ ಬದುಕು ಹೆಚ್ಚು ಕಾಲ ಉಳಿಯುವುದಿಲ್ಲ. ಪರಂಪರೆಯಿಂದ ಬಂದ ಜನಪದ ಸಂಸ್ಕೃತಿ ಮತ್ತು ಸಂಪ್ರದಾಯದ ಆಚಾರ ವಿಚಾರಗಳ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಂಡು ಹೋಗಬೇಕು.

ಬಸವಾದಿ ಶಿವಶರಣರ, ದಾರ್ಶನಿಕರ ಮತ್ತು ಸಂತರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ರಂಗ ನಾಟಕಗಳು ಸಾರ್ವಜನಿಕವಾಗಿ ಪ್ರದರ್ಶನಗೊಳ್ಳಬೇಕು. ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಆ ಕ್ಷಣದ ರಂಗಭೂಮಿಗೆ ಆಸಕ್ತಿ ತೋರುವುದು ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
ಚಿತ್ರದುರ್ಗ ಜಿಲ್ಲೆಯ ರಂಗಭೂಮಿ ಕಲಾವಿದರ ರಂಗ ಪ್ರಯೋಗಗಳಿಗೆ ಸಹಕಾರ ಮತ್ತು ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂಬ ಆತಂಕ ಮೂಡಿಸಿದೆ. ಬಹುತೇಕ ರಂಗ ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಈಮಧ್ಯೆ ಸಾಣೇಹಳ್ಳಿ ಶ್ರೀಗಳು ರಂಗಭೂಮಿ ಚಟುವಟಿಕೆಗಳಿಗೆ ಶಿವಸಂಚಾರದಿಂದ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಬಾಪೂಜಿ ಸಂಸ್ಥೆಯ ಕೆ.ಎಂ.ವೀರೇಶ್, ರಂಗ ನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ, ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ ಮುಂತಾದವರು ಸ್ವತಃ ರಂಗಭೂಮಿ ಕಲಾವಿದರಾಗಿ ಶಿಕ್ಷಣ ಕ್ಷೇತ್ರದ ಮೂಲಕ ರಂಗ ಪ್ರಯೋಗಗಳಿಗೆ ಉತ್ತೇಜನ ನೀಡುತ್ತಿರುವುದು ಪ್ರಶಂಸನೀಯ.
ಹಳ್ಳಿಗಳಲ್ಲಿ ರಂಗಭೂಮಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ತನ್ನ ಶ್ರೀಮಂತಿಕೆಯನ್ನು ಈಗಲೂ ಉಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಕಲಾವಿದರ ಸಾಂಸ್ಕೃತಿಕ ಚಟುವಟಿಗಳಿಗೆ ನಮ್ಮ ಮಾದಾರ ಚನ್ನಯ್ಯ ಗುರುಪೀಠದ ಸೇವಾ ಸಮಿತಿಯಿಂದ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುತ್ತೇವೆ ಎಂದರು.
ಇದನ್ನೂ ಓದಿ: ಅಂಬೇಡ್ಕರ್ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ
ಹಿರಿಯ ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಸಂಪ್ರದಾಯ ಮತ್ತು ಮನುಷ್ಯನ ವ್ಯಕ್ತಿತ್ವವನ್ನು ಸಂಪೂರ್ಣ ಕುಸಿಯುವಂತೆ ಮಾಡಿದ್ದವೋ ಅದರ ವಿರುದ್ಧ ದನಿ ಎತ್ತುವಂತೆ ಮಾಡಿದ್ದು 12 ನೇ ಶತಮಾನದ ಶಿವಶರಣರು. 21ನೇ ಶತಮಾನಕ್ಕೂ ಸ್ಪೂರ್ತಿಯಾಗಿರುವ ಶರಣರ ಕ್ರಾಂತಿ ಮತ್ತು ಬುದ್ಧನ ಚಿಂತನೆಗಳು ಭವಿಷ್ಯದ ಕಾಲಘಟ್ಟಕ್ಕೆ ಪ್ರಸ್ತುತವಾಗಿವೆ ಎಂದರು.
ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಆರ್.ಜಯಲಕ್ಷ್ಮಿ, ರಂಗನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ, ಜನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ, ಸಾಹಿತಿ ಹುರುಳಿ ಎಂ ಬಸವರಾಜ್, ಕಾನಾಮಡುಗು ಕರಿಯಣ್ಣ, ಹಿರಿಯ ರಂಗಭೂಮಿ ಕಲಾವಿದ ಕೆ.ಜಂಬುನಾಥ್, ಗಾಯಕ ಎಂ.ಕೆ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಗಾಯಕ ಡಿ.ಓ.ಮುರಾರ್ಜಿ ಮತ್ತು ತಂಡದವರು ಸುಗಮ ಸಂಗೀತ ನಡೆಸಿಕೊಟ್ಟರು. ಉಪನ್ಯಾಸಕಿ ರಾಜೇಶ್ವರಿ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಿಧನರಾದ ವಿಶ್ವಮಾನ್ಯರಾದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ, ಸ್ವರ ಸಾಮ್ರಾಜ್ಞಿ ಆಶಾ ಬೋಂಸ್ಲೆ ಅವರ ಆತ್ಮಕ್ಕೆ ಒಂದು ನಿಮಿಷ ಮೌನ ಆಚರಿಸಲಾಯಿತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
ಕಾರ್ಯಕ್ರಮದ ಕೊನೆಯಲ್ಲಿ ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರಚಿತ ಜಂಗಮದೆಡೆಗೆ ನಾಟಕವನ್ನು ಆರ್.ಜಗದೀಶ್ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
