
CHITRADURGA NEWS | 13 DECEMBER 2025
ಚಿತ್ರದುರ್ಗ: ಹಿರಿಯ ರೈತ ನಾಯಕ, ದಿ.ನುಲೇನೂರು ಶಂಕರಪ್ಪ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಪ್ರತಿಷ್ಠಾನದಿಂದ ಇದೇ ಮೊದಲ ಬಾರಿಗೆ ಹೋರಾಟಗಾರ್ತಿ ಕೋಲಾರದ ವರಲಕ್ಷ್ಮೀ ಅವರಿಗೆ ನುಲೇನೂರು ಶಂಕರಪ್ಪ ಹಸಿರು ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಲಿಡ್ಕರ್ ಭವನದಲ್ಲಿ ನುಲೇನೂರು ಶಂಕರಪ್ಪ ಪ್ರತಿಷ್ಠಾನದಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 13 | ಹತ್ತಿ ರೇಟ್ ಎಷ್ಟಿದೆ?
ಪ್ರಶಸ್ತಿ 25 ಸಾವಿರ ನಗದು, ಸ್ಮರಣಿಕೆ ಹಾಗೂ ರೇಷ್ಮೆ ಸೀರೆಯನ್ನು ಒಳಗೊಂಡಿತ್ತು. ಕಾರ್ಯಕ್ರಮದ ಸಭಾಂಗಣಕ್ಕೆ ಆಗಮಿಸಿದ ವರಲಕ್ಷ್ಮೀ ಅವರನ್ನು ಹೂಮಳೆಗರೆದು ಸ್ವಾಗತಿಸಲಾಯಿತು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಶಸ್ತಿ ಅರ್ಪಣೆ:
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ವರಲಕ್ಷ್ಮೀ ಅವರು, ಮೂವತ್ತು ವರ್ಷಗಳ ಹೋರಾಟದಲ್ಲಿ ಎಂದೂ ಪ್ರಶಸ್ತಿ, ಪುರಸ್ಕಾರಗಳಿಗೆ ಒಪ್ಪಿಕೊಂಡಿಲ್ಲ. ಆದರ್ಶ, ರೈತ ನಾಯಕರೊಬ್ಬರ ಹೆಸರಿನಲ್ಲಿ ಮಹಿಳಾ ಹೋರಾಟಗಾರರನ್ನು ಗುರುತಿಸುವ ಎಚ್ಚರಕ್ಕೆ ನನ್ನದೊಂದು ಲಾಲ್ ಸಲಾಂ ಎಂದರು.
ಇದನ್ನೂ ಓದಿ: ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಬಿಸಿ ಬಿಸಿ ಚರ್ಚೆ | ಅನುದಾನ ಬರುತ್ತೋ ಇಲ್ಲವೋ ಗೊತ್ತಿಲ್ಲ, ಚರ್ಚೆಯಂತೂ ಆಯ್ತು
ಈ ಪುರಸ್ಕಾರವನ್ನು ನಾನು ಈ ನಾಡಿನ ಅಂಗನಾಡಿ ಕಾರ್ಯಕರ್ತೆಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಅರ್ಪಿಸುವೆ. ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಇಳಿದಾಗಲೆಲ್ಲಾ ನಾವು ಮನೆಯನ್ನು ಮರೆತು ಹೋರಾಟ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಶಾ, ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಭದ್ರತೆ ಇಲ್ಲ. ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಈವತ್ತಿನ ಸರ್ಕಾರಗಳು ಹೋರಾಟಗಾರರ ಮೇಲೆ ನಿಷೇಧಗಳನ್ನು ಹೇರುತ್ತಾ ಬರುತ್ತಿವೆ. ದೆಹಲಿಯಲ್ಲಿ ನಡೆದ ರೈತರ ಹೋರಾಟದ ಇತಿಹಾಸ ನಮಗೆಲ್ಲಾ ತಿಳಿದಿದೆ. ನೂರು ಜನರು ಮಾತ್ರ ಇಂತಹ ಜಾಗದಲ್ಲಿ ಹೋರಾಟ ಮಾಡಬೇಕು ಎಂಬ ಷರತ್ತು ವಿಧಿಸುವುದನ್ನು ನೋಡಿದರೆ ನಾವೆಲ್ಲಾ ಮಿಂಚು ಹುಳುಗಳಾಗಬೇಕಿದೆ. ರೈತ, ದಲಿತ, ಕಾರ್ಮಿಕ ಅಂದರೆ ಹಸಿರು, ನೀಲಿ, ಕೆಂಪು ಒಂದಾಗದಿದ್ದರೆ ಪ್ರಭುತ್ವದ ಕಾನೂನುಗಳು ನಮ್ಮ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಇರಲಿವೆ ಎಂದು ವಿವರಿಸಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾಡುವ ಕೆಲಸಕ್ಕೆ ಭದ್ರತೆಯಿಲ್ಲದ ಕಾರಣ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ವಿಷಾದಿಸಿದರು.
ಇದನ್ನೂ ಓದಿ: ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
ರೈತರಿಗೆ 9 ವರ್ಷದಲ್ಲಿ 24 ಲಕ್ಷ ಕೋಟಿ ರೂ. ನಷ್ಟ:
ರೈತ ನಾಯಕ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡುತ್ತಾ, ದೇಶದಲ್ಲಿ ಸ್ವಾಮಿನಾಥನ್ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ರೈತರು, ಕಾರ್ಮಿಕರಿಗೆ 24 ಲಕ್ಷ ಕೋಟಿ ರೂ. ನಷ್ಟವಾಗಿದೆ. 2024-25ನೇ ಸಾಲಿನಲ್ಲಿ 3 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದರು.
ಬ್ರಿಟೀಷರು ಭಾರತಕ್ಕೆ ಮೊದಲು ಅಂದರೆ, ಸಾವಿರ ವರ್ಷ ಮೊದಲೇ ಭಾರತದ ಜಿಡಿಪಿ ಜಗತ್ತಿನಲ್ಲೇ ಹೆಚ್ಚಾಗಿತ್ತು. ಆಗ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆಗಳಿದ್ದವು. ರೈತರು ಕೃಷಿ ಜೊತೆಗೆ ಉಪವೃತ್ತಿ ಮಾಡಿಕೊಂಡಿದ್ದರು ಎಂದು ತಿಳಿಸಿದರು. ಇಂದು ರಚನಾತ್ಮಕ ಹೋರಾಟಗಳಿಂದ ಮಾತ್ರ ಸಾಮಾನ್ಯ ಜನರು ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿಕೊಡಬೇಕಾಗಿದೆ. ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ:
ಇನ್ನೂ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡುತ್ತಾ, ಎಂಭತ್ತರ ದಶಕದಲ್ಲಿದ್ದ ಹೋರಾಟದ ಸ್ಫೂರ್ತಿ ಇಂದು ಇಲ್ಲ. ಹೆಚ್ಚು ಹೆಚ್ಚು ಯುವಕರು ಹೋರಾಟಕ್ಕೆ ಧುಮಕಬೇಕಿದೆ ಎಂದರು.
ಇದನ್ನೂ ಓದಿ: ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ | ಕೃಷಿ ಅಧಿಕಾರಿಗಳಿಗೆ ಡಿಸಿ ಸೂಚನೆ
ತಂತ್ರಜ್ಞಾನ ಯುಗದಲ್ಲಿ ನಾವಿದ್ದರೂ ಆಗಿನ ಕಾಲದಲ್ಲಿ ಒಂದು ಕರೆಕೊಟ್ಟರೂ ಸಾಕು ಸಾವಿರ ಸಾವಿರ ಸಂಖ್ಯೆಯಲ್ಲಿ ಹೋರಾಟಕ್ಕೆ ಜನರು ಬರುತ್ತಿದ್ದರು. ಈಗ ಪ್ರಾಮಾಣಿಕ ಹೋರಾಟಗಾರರನ್ನು ಹುಡುಕಬೇಕಿದೆ ಎಂದರು.

ಜಿಲ್ಲೆಯಲ್ಲಿ ನೀರಾವರಿ ಹೋರಾಟಕ್ಕೆ ನುಲೇನೂರು ಶಂಕರಪ್ಪ ಅವರ ಕೊಡುಗೆ ದೊಡ್ಡದಿದೆ. ಇಂತಹವರ ಹೆಸರಿನಲ್ಲಿ ಪ್ರತಿಷ್ಥಾನ ಆರಂಭಿಸಿ ಮೊದಲ ಬಾರಿಗೆ ಮಹಿಳಾ ಹೋರಾಟಗಾರರಿಗೆ ಶಂಕರಪ್ಪನವರ ಹೆಸರಿನಲ್ಲಿ ಪುರಸ್ಕಾರ ಮಾಡುತ್ತಿರುವುದು ಅವರ ಹೋರಾಟದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರೈತ ಚಳವಳಿ ಉತ್ತುಂಗದಲ್ಲಿ ಇದ್ದ ಕಾಲದಲ್ಲಿಯೇ ದಲಿತ ಚಳವಳಿಯೂ ಕೂಡ ರಾಜ್ಯದಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ರೈತ, ದಲಿತ, ಕಾರ್ಮಿಕ ಚಳವಳಿಗಳು ಒಂದೇ ವೇದಿಕೆಯಲ್ಲಿ ಸೇರಿ ಸಂಯುಕ್ತ ಹೋರಾಟ ಎಂದು ಮಾಡಿಕೊಂಡು ಈ ನಾಡಿನ ಉಳಿವಿಗಾಗಿ ಹೋರಾಡುವ ಅಗತ್ಯವಿದೆ. ಕಾಮ್ರೆಡ್ ವರಲಕ್ಷ್ಮೀ ಅವರ ಹೋರಾಟವನ್ನು ಕಣ್ಣಾರೆ ಕಂಡಿರುವ ನಾವುಗಳು ಅವರಿಂದ ಮಹಿಳಾ ಹೋರಾಟಕ್ಕೆ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 12 |ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ರೇಟ್
ದೇವನಹಳ್ಳಿಯಲ್ಲಿ ರೈತರ ಭೂಮಿಯನ್ನು ಆಮಿಷವೊಡ್ಡಿ ಕಬಳಿಸಲು ಹೋದ ಸರ್ಕಾರದ ವಿರುದ್ಧ ಹಮ್ಮಿಕೊಂಡ ಚಳವಳಿಗೆ ಸೋತ ಸರ್ಕಾರ ನೋಟಿಪಿಕೇಷನ್ ವಾಪಾಸ್ ಪಡೆದಾಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಇಂತಹ ಯಶಸ್ವಿಗಳು ಹೋರಾಟಗಾರಿಗೆ ಸಿಕ್ಕ ಪುರಸ್ಕಾರ ಎಂದರು.
ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ದಲಿತ ಚಳವಳಿಯಲ್ಲಿ ಹೋರಾಟ ಆರಂಭಿಸಿ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಅಮಾನುಷ ಬೆತ್ತಲೆ ಹೋರಾಟವನ್ನು ಖಂಡಿಸುವ ಚಳವಳಿ ನಡೆಸಿದಾಗ ಸರ್ಕಾರ ಅಂತಹ ಅನಿಷ್ಟ ಪದ್ಧತಿಯನ್ನು ನಿಷೇಧಿಸಿದಾಗ ಅದು ಚಳವಳಿಯ ಗೆಲುವಾಗಿತ್ತು. ಇದಾದ ನಂತರ ರೈತ ಚಳವಳಿಯಲ್ಲಿ ಪ್ರೊ.ನಂಜುಂಡಸ್ವಾಮಿ, ಸುಂದರೇಶ್ ಅಂತಹವರ ಹೋರಾಟದಿಂದ ಪ್ರೇರೇಪಿತಗೊಂಡು ರೈತ ಚಳವಳಿಯಲ್ಲಿ ಅನೇಕ ಹೋರಾಟಗಳ ಮೂಲಕ ಪ್ರಭುತ್ವವನ್ನು ಎಚ್ಚರಿಸುವ ಕೆಲಸ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 12 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರೈತ ಮುಖಂಡ ನುಲೇನೂರು ಶಂಕರಪ್ಪ, ದಲಿತ ಮುಖಂಡ ಎಂ.ಜಯಣ್ಣ ಹಾಗೂ ಓಡೆಯರ್ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ಪ್ರಶಸ್ತಿ ಕೊಡಬೇಕು ಎಂಬ ಚಿಂತನೆಯಲ್ಲಿದ್ದೆವು. ಆದರೆ, ಜಯಣ್ಣ ಮತ್ತು ಓಡೆಯರ್ ಹೆಸರಿನಲ್ಲಿ ಬೇರೊಂದು ಸಂಘಟನೆ ಪ್ರಶಸ್ತಿ ಕೊಡಬೇಕು ಎಂಬ ಆಲೋಚನೆಯಲ್ಲಿದ್ದ ಕಾರಣ ನುಲೇನೂರು ಶಂಕರಪ್ಪ ಅವರ ಹೆಸರಲ್ಲಿ ಪ್ರಾರಂಭಿಸಿರುವ ಪ್ರತಿಷ್ಥಾನದಿಂದ ಹಸಿರು ಪ್ರಶಸ್ತಿ ಕೊಡಲಾಗುತ್ತಿದೆ. ಜಯಣ್ಣ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಆಲೋಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ನುಲೇನೂರು ಶಂಕರಪ್ಪ ಅವರ ಪುತ್ರ ಡಾ. ರವಿಶಂಕರ್ ಮಾತನಾಡಿ, ತಂದೆಯವರು ಹೋರಾಟದಲ್ಲಿ ಎಂದಿಗೂ ತನ್ನ ತತ್ವ ಸಿದ್ಧಾಂತ ಬಿಟ್ಟವರಲ್ಲ. ಹಣಕ್ಕಾಗಿ ಎಂದಿಗೂ ಯಾರೊಂದಿಗೂ ರಾಜಿಯಾದವರಲ್ಲ. ಎಂತಹ ಕಡುಕಷ್ಟ ಬಂದರೂ ಹಾದಿ ತಪ್ಪಿದವರಲ್ಲ. ಬದಲಾಗಿ ಸಂಕಷ್ಟದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ನಮಗೆ ಜೀವಿತದ ಕಾಲದಲ್ಲಿ ಕಲಿಸಿ ಹೋಗಿದ್ದಾರೆ ಎಂದು ಮೆಲುಕು ಹಾಕಿದರು.
ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಆಡಳಿತ ಪಕ್ಷದ ಆರು ಜನ ಶಾಸಕರಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಭದ್ರಾ ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಧೋರಣೆ ತೋರುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿರಿಯೂರು ತಾಲೂಕಿನಲ್ಲಿ ಬೆಳೆ ವಿಮೆ ನೋಂದಣಿ ಪ್ರಾರಂಭ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ವಿನಾಯಕ್ ತೊಡರನಾಳ್ ಮಾತನಾಡಿ, ಶಂಕರಣ್ಣ ಹಾಗೂ ನಾನು ಅಕ್ಕಪಕ್ಕದ ಊರಿನವರು ರೈತರ ಮಕ್ಕಳಾಗಿ ಜನಿಸಿ ಪಟ್ಟಣ ಸೇರಿ ರೈತ ಕಸುಬನ್ನು ಬಿಡುವವರ ಬಗ್ಗೆ ಸದಾ ಬೇಸರಿಸಿಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ನೀರಾವರಿ ಆನುಷ್ಠಾಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ,ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ನುಲೇನೂರು ಶಂಕರಪ್ಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮುಂಚೂಣಿ ನಾಯಕರಾಗಿದ್ದರು. ಯೋಜನೆಗೆ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ಉದಾಸೀನ ತೋರುತ್ತಿದೆ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಬಾಂಡ್ ಬಿಡುಗಡೆ ಮಾಡಲಿ,ಕೊಳ್ಳಲು ಜನರಿದ್ದಾರೆ ಎಂದರು.
ರೈತ ಮಖಂಡರಾದ ಕೆ.ಪಿ. ಭೂತಯ್ಯ, ಹಂಪಯ್ಯನ ಮಾಳಿಗೆ ಧನಂಜಯ, ಗೋವಿಂದರಾಜು, ಕಾರ್ಮಿಕ ಮುಖಂಡ ಸುರೇಶ್ ಬಾಬು, ಪ್ರಾಂತರೈತ ಸಂಘದ ಯಶವಂತ್ ಮಾತನಾಡಿದರು.
ಇದನ್ನೂ ಓದಿ: ರೈತರ ಬೆಳೆ ಮಾರಾಟ ಮಾಡಲು ಎಪಿಎಂಸಿ ನಿರ್ಮಾಣ | ಶಾಸಕ ಡಾ.ಎಂ.ಚಂದ್ರಪ್ಪ
ರೈತ ಸಂಘದ ವಲಯ ಕಾರ್ಯದರ್ಶಿ ಅರುಣ್ ಕುಮಾರ್ ಕುರುಡಿ, ಬಸ್ತಿಹಳ್ಳಿ ಸುರೇಶ್ ಬಾಬು, ಹೊರಕೆರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಸಿಪಿಐ ಮುಖಂಡ ಸುರೇಶ್ ಬಾಬು, ಕಮಲಮ್ಮ ನುಲೇನೂರು ಶಂಕರಪ್ಪ ಇದ್ದರು.ಜಡೇಕುಂಟೆ ಮಂಜುನಾಥ್ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿ ವಂದಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
