CHITRADURGA NEWS | 11 APRIL 2025
ಚಿತ್ರದುರ್ಗ: ಒಳಮೀಸಲು ಜಾರಿ ಮಾಡುವವರೆಗೂ ಯಾವುದೇ ನೇಮಕಾತಿ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ

ನಗರದಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ನೀಡಿ 7 ತಿಂಗಳು ಆಗಿದೆ. ಈಗಾಗಲೇ ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಒಳಮೀಸಲಾತಿ ಜಾರಿಗೊಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ನಡೆ ಕೈಗೊಂಡಿದ್ದಾರೆ. ಆದರೆ, ಕಾಣದ ಕೈಗಳು ನಿರಂತರ ಅಡ್ಡಿ ಪಡಿಸುತ್ತಿವೆ ಎಂದು ದೂರಿದರು.
ಒಳಮೀಸಲಾತಿಗಾಗಿ 30 ವರ್ಷ ಹೋರಾಟ ನಡೆಸಿ, ಅನೇಕರು ನಮ್ಮನ್ನು ಅಗಲಿದ್ದಾರೆ. ಈ ಮಧ್ಯೆ ಮೀಸಲು ಸೌಲಭ್ಯಕ್ಕಾಗಿ ಸಮುದಾಯದವರು ಸರ್ಕಾರದ ಕಡೆ ಆಸೆಗಣ್ಣಿನಲ್ಲಿ ನೋಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ವಿಳಂಬ ನೀತಿ ಅನುಸುರಿಸುತ್ತಿದೆ ಎಂಬ ಆಕ್ರೋಶ ಮನೆ ಮಾಡಿದೆ. ಆದ್ದರಿಂದ ಎಲ್ಲ ಆತಂಕಗಳನ್ನು ದೂರಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗ, ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟರಲ್ಲಿ ಯಾವ ಜಾತಿಯವರು ಇದ್ದಾರೆಂಬ ಮಾಹಿತಿ ಕೇಳಿದರೂ ಇಲ್ಲಿಯವರೆಗೂ ಕೊಟ್ಟಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬಳಿಕ ತರಾತುರಿಯಲ್ಲಿ 10 ಸಾವಿರ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಇದೆಲ್ಲವೂ ಕುತಂತ್ರದ ಭಾಗವಾಗಿದೆ ಎಂದರು.
Also Read: ಬಸವ ಜಯಂತಿಯಂದು ರೇಣುಕ ಜಯಂತಿ ಮಾಡುವ ಉದ್ದೇಶವೇನು ? | ಸಾಣೇಹಳ್ಳಿ ಶ್ರೀ
ಈ ಷಡ್ಯಂತ್ರಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸರ್ಕಾರಿ ನೇಮಕಾತಿಗೆ ತಡೆ ಹಾಕಿದ್ದಾರೆ. ಜೊತೆಗೆ ಒಳಮೀಸಲಾತಿ ವಿಷಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ ವಿಷಯ ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ಅದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿ ಕಾರ್ಯ ಕೈಗೊಳ್ಳಲು ಸಿದ್ಧತೆ ಆರಂಭಿಸಿರುವುದು ಆಶಾಭಾವನೆ ಮೂಡಿಸಿದೆ ಎಂದು ಹೇಳಿದರು.
ಜಾತಿಗಣತಿ ಕಾರ್ಯ ಹಾಗೂ ಒಳಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು, ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ.
ಬೆಂಗಳೂರು, ಮೈಸೂರು ವಿಭಾಗಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರು ಮತ್ತು ಹೊಲೆಯ ಜಾತಿಯವರು ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪತ್ರವನ್ನು ಪಡೆದಿದ್ದಾರೆ.
ಇದು ಬಹಳಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ತೊಡೆದು ಹಾಕಲು ಮೂಲ (ಮಾದಿಗ ಅಧವಾ ಛಲವಾದಿ) ಜಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಮೂಲ ಜಾತಿ ನಮೋದಿಸದಿದ್ದರೆ ವೆಬ್ಸೈಟ್ ಸ್ವೀಕರಿದ ರೀತಿ ತಂತ್ರಾಂಶ ಸಿದ್ಧಪಡಿಸಬೇಕು ಎಂದರು.
ನ್ಯಾ.ಎ.ಜೆ.ಸದಾಶಿವ ಹಾಗೂ ಹಿಂದುಳಿದ ವರ್ಗಗಗಳ ಆಯೋಗದ ಕಾಂತರಾಜ್ ವರದಿ ಸಿದ್ಧಪಡಿಸುವಾಗ ಅಳವಡಿಸಿಕೊಂಡಿದ್ದ ಪ್ರಶ್ನಾವಳಿಯನ್ನು ಅಳವಡಿಸಿಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಪಂ ಸಿಇಒ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಉಸ್ತುವಾರಿಯಲ್ಲಿ ಶಿಕ್ಷಕರಿಂದ ಗಣತಿಕಾರ್ಯ ನಡೆಸಬೇಕು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಗ್ರಾಮಾಂತರ ಪ್ರದೇಶ, ಹಟ್ಟಿ, ಕಾಲೋನಿ ಹಾಗೂ ನಗರ ಪ್ರದೇಶದ ಕೆಲ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ವಾಸಿಸುವ ಪ್ರದೇಶದ ಪ್ರತಿ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಪಿಡಿಓ, ಗ್ರಾಮಲೆಕ್ಕಿಗರು ಕಡ್ಡಾಯ ಹಾಜರಿರಬೇಕು ಎಂದರು.
ಮುಖ್ಯವಾಗಿ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಬೇಕು. ಗಣಿತಿದಾರರು ಪ್ರತಿದಿನ ಗಣಿತಿ ಮಾಡಿದ ವಿವರವನ್ನು ಅಂದೇ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು. ನಮ್ಮ ವಿವರ ದಾಖಲಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅವಕಾಶ ಆಧಾರ್ ಕಾರ್ಡ್ ಲಿಂಕ್ಗೆ ಒಳಪಟ್ಟ ವ್ಯಕ್ತಿಗೆ ಇರಬೇಕು.
ಪರಿಶಿಷ್ಟ ಸಮುದಾಯದ ಪ್ರತಿ ವ್ಯಕ್ತಿಗೆ ಆಧಾರ್ ಕಾರ್ಡ್ ರೀತಿ ಗುರುತಿನ ಚೀಟಿ ನೀಡಬೇಕು. ಅದರಲ್ಲಿ ಜಾತಿಗಣತಿಯಲ್ಲಿ ನೋಂದಾಯಿಸಿಕೊಂಡ ಸಂಖ್ಯೆ ಸೇರಿ ಕೆಲ ವಿವರಗಳು ಇರಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಜಾರಿ ಬಳಿಕ ಉದ್ಯೋಗ, ಶಿಕ್ಷಣ, ಯೋಜನೆಗಳ ಸೌಲಭ್ಯಗಳನ್ನು ಪಡೆಯುವಾಗ ಮಾದಿಗ, ಛಲವಾದಿ, ಲಂಬಾಣಿ, ಭೋವಿ ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುವ ಸಂದರ್ಭ ಗುರುತಿನ ಚೀಟಿ ಸಾಕ್ಷಿಯಾಗಿ ಪರಿಗಣಿಸಬಹುದು.
Also read: ಆರೋಗ್ಯವಾಗಿರಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ
ಜಾತಿಗಣತಿ ಕಾರ್ಯಕ್ಕೆ ಪರಿಶಿಷ್ಟ ಜಾತಿಯ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನೇಮಿಸಬಾರದು. ಪಟ್ಟಣ, ನಗರ ಪ್ರದೇಶದಲ್ಲಿ ಹರಿದು ಹಂಚಿ ಹೋಗಿರುವ ಪರಿಶಿಷ್ಟರು ಜಾತಿಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾಯವಾಗುವ ರೀತಿ ನಗರಸಭೆ, ತಾಲ್ಲೂಕು ಕಚೇರಿ, ಮಹಾನಗರ ಪಾಲಿಕೆಯಲ್ಲಿ ಜಾತಿಗಣತಿ ವಿಭಾಗ ತೆರೆಯಬೇಕು. ಎಂದರು.
ಸರ್ವೇ ಕಾರ್ಯ ಕೈಗೊಳ್ಳಲು ಸಿದ್ಧಪಡಿಸಿದ ಅರ್ಜಿಯ ಪ್ರತಿಯನ್ನು ಪರಿಶಿಷ್ಟ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಎಲ್ಇಡಿ ಸ್ಕ್ರೀನ್ ಮೇಲೆ ಪ್ರದರ್ಶಿಸಿ, ಅಲ್ಪಸ್ವಲ್ಪ ತಿದ್ದುಪಡಿಗಳು ಇದ್ದರೇ ಸರಿಪಡಿಸಿ ಬಳಿಕ ಜಾತಿಗಣತಿ ಕಾರ್ಯ ಆರಂಭಿಸಬೇಕು.
ಆಧುನೀಕತೆ, ತಂತ್ರಜ್ಞಾನ ಯುಗದಲ್ಲಿ ಎಲ್ಲ ಕಾರ್ಯಗಳನ್ನು ಸುಸಜ್ಜಿತ ಹಾಗೂ ತ್ವರಿತವಾಗಿ ಕೈಗೊಳ್ಳಲು ಅವಕಾಶ ಇದೆ. ಆದರೂ ಈ ವಿಷಯದಲ್ಲಿ ಬಹಳಷ್ಟು ಗೊಂದಲದ ಜತೆಗೆ ವಿಳಂಬ ಆಗಿದೆ. ಇದೆಲ್ಲವನ್ನೂ ಹೊಗಲಾಡಿ ಒಳಮೀಸಲಾತಿಯನ್ನು ತುರ್ತಾಗಿ ಜಾರಿಗೊಳಿಸಬೇಕು.
ಸಾಮಾಜಿಕ ನ್ಯಾಯದ ಹರಿಕಾರ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ದಿಟ್ಟ ಕ್ರಮಕೈಗೊಳ್ಳಬೇಕು ಎಂದು ಪತ್ರ ಬರೆದು ಆಗ್ರಹಿಸಿದ್ದೇನೆ. ಜೊತೆಗೆ ಜೊತೆಗೆ ಏ.13ರಂದು ಮಾದಿಗ ಸಮುದಾಯದ ಮುಖಂಡರ ನಿಯೋಗ ತೆರಳಿ ಮನವಿ ಸಲ್ಲಿಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
