
CHITRADURGA NEWS | 11 JULY 2024
ಚಿತ್ರದುರ್ಗ: ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ದೂರಿದರು.
‘ನಾನು ಸಮಾಜವಾದಿ, ಭ್ರಷ್ಟಾಚಾರ ಮಾಡುವುದಿಲ್ಲ, ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಸಜ್ಜನ ರಾಜಕಾರಣಿ ಸಮಾಜಕ್ಕೆ ಮಾದರಿ ಆಗಬೇಕು. ತಮ್ಮ ಮೇಲೆ ಆಪಾದನೆ ಬಂದಾಗ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಿದ ಉದಾಹರಣೆ ಇವೆ. ಆದರೆ ಆ ಕೆಲಸವನ್ನು ಸಿದ್ದರಾಮಯ್ಯ ಇನ್ನೂ ಮಾಡಿಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಮಕೃಷ್ಣ ಹೆಗಡೆ ಟಿಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ಸರ್ಕಾರದ ಖಜಾನೆ ಲೂಟಿ ಹೊಡೆದಿದೆ. ಸರ್ಕಾರದ ಇಲಾಖೆಯ ಆಯುಕ್ತರ ಹೆಸರಿಗೆ ಹಣ ಬಿಡುಗಡೆ ಆಗಬೇಕು. ಆದರೆ, ಎಲ್ಲಿಯೋ ತೆಗೆದ ನಕಲಿ ಖಾತೆಗೆ ಹಣ ಜಮೆ ಆಗಿದ್ದು ಇತಿಹಾಸದಲ್ಲಿ ಮೊದಲು’ ಎಂದರು.
‘ಮುಡಾ (MUDA CASE) ಸ್ವಾಧೀನ ಮಾಡಿಕೊಂಡ ಜಮೀನನ್ನು ಡಿನೋಟಿಫಿಕೇಶನ್ ಮಾಡಿದ್ದೇ ಮೊದಲ ತಪ್ಪು. ಅದನ್ನು ಮತ್ತೊಬ್ಬರ ಹೆಸರಿನಲ್ಲಿ ಖರೀದಿಸಿದ್ದು ಸ್ಪಷ್ಟವಾಗಿ ಭ್ರಷ್ಟಾಚಾರ ಕಾಣಿಸುತ್ತಿದೆ. ಸಿದ್ದರಾಮಯ್ಯ ಸಹಿತ ಇದರಲ್ಲಿ ಭಾಗಿಯಾದ ಸಂಪುಟದ ಎಲ್ಲರೂ ರಾಜೀನಾಮೆ ಕೊಡಬೇಕು. ನಾವು ಸಾಚಾ ಇದ್ದೇವೆ ಎಂದು ತನಿಖೆ ಮೂಲಕ ತಿಳಿಸಲಿ’ ಎಂದು ಸವಾಲ್ ಹಾಕಿದರು.
‘ಕೇಂದ್ರ ಸರ್ಕಾರ ಇಡಿ,ಸಿಬಿಐ, ಐಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪದೇ ಪದೇ ಹೇಳುತ್ತಾರೆ. ಅವೆಲ್ಲಾ ಸಾಂವಿಧಾನಿಕ ಸಂಸ್ಥೆಗಳು, ಅವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಅದು ದುರುಪಯೋಗ ಅಲ್ಲ, ಪ್ರಾಮಾಣಿಕವಾಗಿ ಕೆಲಸಮಾಡುತ್ತಿವೆ’ ಎಂದು ತಿರುಗೇಟು ನೀಡಿದರು.
ಕ್ಲಿಕ್ ಮಾಡಿ ಓದಿ: ಶಿಕ್ಷಕಿ ಮನೆಯ ಬಂಗಾರ ದೋಚಿದ ಕಳ್ಳರು | ತಿಥಿ ಕಾರ್ಯಕ್ಕೆ ತೆರಳಿದ್ದಾಗ ಕೈಚಳಕ
‘ಕಾಂಗ್ರೆಸ್ ದೇಶದಲ್ಲಿ ಆಡಳಿತ ನಡೆಸಿದಾಗ ಅನೇಕ ಬಾರಿ ದಾಳಿ ಆಗಿವೆ. ಆಗಲೂ ದುರುಪಯೋಗ ಮಾಡಿಕೊಂಡಿದ್ದರಾ. ಕಾನೂನು ಚೌಕಟ್ಟಿನಲ್ಲಿ ಈ ಸಂಸ್ಥೆಗಳು ಕೆಲಸ ಮಾಡುತ್ತವೆ’ ಎಂದರು.
‘ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ಬಂದಿರುವುದು ಬ್ಯಾಂಕುಗಳ ಕಾರಣಕ್ಕೆ. ಇದೊಂದು ಅಂತರ ರಾಜ್ಯ ಹಗರಣ. ಬ್ಯಾಂಕ್ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಈ ಪ್ರಕರಣದಲ್ಲಿ ನೀವು ತಪ್ಪೇ ಮಾಡಿಲ್ಲ ಅನ್ನುವುದಾದರೆ ಭೈರತಿ ಸುರೇಶ್ ಓಡಿ ಹೋಗಿ ಅಧಿಕಾರಿಗಳನ್ನು ಅಮಾನತು ಮಾಡಿದ್ಯಾಕೆ. ಎಲ್ಲ ದಾಖಲೆಗಳನ್ನು ಬೆಂಗಳೂರಿಗೆ ತರಲಾಗಿದೆ. ತಿದ್ದುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮೌಲ್ಯಾಧಾರಿತ ರಾಜಕಾರಣಿ ಎನ್ನುವುದನ್ನು ಸಾಬೀತು ಮಾಡಲಿ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ‘ಮುಖ್ಯಮಂತ್ರಿಗಳೇ ಅತೀ ದೊಡ್ಡ ರಿಯಲ್ ಎಸ್ಟೇಟ್ ಹಗರಣದಲ್ಲಿ ಭಾಗಿಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಮೊದಲು. ಮುಡಾದಲ್ಲಿ ನಿವೇಶನಕ್ಕಾಗಿ 62 ಸಾವಿರ ಜನ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ತಮ್ಮ ಅಧಿಕಾರ, ಪ್ರಭಾವ ಬಳಸಿ 1995 ರ ಕಾಯ್ದೆ ಅನ್ವಯ ಎಂದು ಉಲ್ಲೇಖಿಸಿ, ಅರ್ಕಾವತಿ ಬಡಾವಣೆಗೆ 2005 ರಲ್ಲಿ ರೂಪುಗೊಂಡ ನಿಯಮವನ್ನು ಬಳಕೆ ಮಾಡಿಕೊಂಡು ಮೈಸೂರಿನ ವಿಜಯನಗತದಂತಹ ಬಡಾವಣೆಗಳಲ್ಲಿ ನಿವೇಶನ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.
ಕ್ಲಿಕ್ ಮಾಡಿ ಓದಿ: LOKAYUKTHA; ಬೆಳ್ಳಂ ಬೆಳಗ್ಗೆ ಚಿತ್ರದುರ್ಗದಲ್ಲಿ ಲೋಕಾಯುಕ್ತರ ದಾಳಿ
‘2010 ರಲ್ಲಿಸಿದ್ದರಾಮಯ್ಯ ಪತ್ನಿ ಹೆಸರಿಗೆ ಜಮೀನು ಬಂದಿದೆ. ಆದರೆ, ಅದಕ್ಕಿಂತ ಹಿಂದೆಯೇ ರಚನೆಯಾದ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ. ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಶೇ.25 ರಷ್ಟುನಿವೇಶನ ಕೊಡಬೇಕು. ಆದರೆ, ಅಲ್ಲಿಯೂ ಇವರು ಕೈ ಹಾಕಿದ್ದಾರೆ. ಕೆಸರೆ ಜಮೀನಿನಲ್ಲಿ ಸಿದ್ದರಾಮಯ್ಯ ಕೈ ಕೆಸರಾಗಿದೆ. ವಿಪಕ್ಷದ ಶಾಸಕರು ಸದನಲ್ಲಿ ಮಾತನಾಡಿದರೆ ಹೆದರಿಸಿ ಕೂರಿಸುವ ಕೆಲಸ ಮಾಡುತ್ತಾರೆ. ಲೋಕಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಲಿದೆ. ರಾಹುಲ್ ಗಾಂಧಿ ಅವರ ಮುಖ್ಯಮಂತ್ರಿ ಮಾಡಿರುವ ಹಗರಣಗಳ ಬಗ್ಗೆ ಮಾತನಾಡಬೇಕು’ ಎಂದರು.
ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಸುರೇಶ್ ಸಿದ್ದಾಪುರ, ಸಂಪತ್, ರಾಮರೆಡ್ಡಿ, ದಗ್ಗೆ ಶಿವಪ್ರಕಾಶ್, ಬೇದ್ರೆ ನಾಗರಾಜ್, ಚಾಲುಕ್ಯ ನವೀನ್, ವೆಂಕಟೇಶ್ ಯಾದವ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
