ಚಿತ್ರದುರ್ಗ ನ್ಯೂಸ್: ದೊಡ್ಡಸಿದ್ದವ್ವನಹಳ್ಳಿಯ ಯುವ ರೈತ ಜ್ಞಾನೇಶ್ ಅವರ ಸಾವಯವ ಕೃಷಿ ಅಳವಡಿಸಿಕೊಂಡಿರುವ ತೋಟಕ್ಕೆ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಮನಸೋತರು.
ಮಂಗಳವಾರ ಚಿತ್ರದುರ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದ ಸಚಿವರು, ಮಳೆಯಿಲ್ಲದೆ ಬೆಳೆ ಹಾನಿಯಾಗಿರುವ ಜಮೀನುಗಳ ವೀಕ್ಷಣೆ ನಡುವೆ, ಸಾವಯವ ಹಾಗೂ ಸುಸ್ಥಿತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜ್ಞಾನೇಶ್ ಅವರ ತಾಕಿಗೆ ಭೇಟಿ ನೀಡಿ ಸುಮಾರು 45 ನಿಮಿಷ ಅಲ್ಲೇ ಕಳೆದರು.
ಇಲ್ಲಿ ಬೆಳೆದಿದ್ದ ನಿಂಬೆ, ಹಲಸು, ಪಪ್ಪಾಯ, ದಾಳಿಂಬೆ, ಕರಿಬೇವು, ನುಗ್ಗೆ, ದಾಳಿಂಬೆ, ಮಾವು, ಬಾಳೆ ಹೀಗೆ ತರಹೇವಾರಿ ಬೆಳೆಗಳನ್ನು ಒಂದೊಂದಾಗಿ ವೀಕ್ಷಿಸಿದರು. ಕರಿಬೇವು, ನಿಂಬೆಯ ಪರಿಮಳ ಹೀರುತ್ತಾ ಸಾವಯವದ ಘಮಲು ಸವಿದರು.ಇದಾದ ನಂತರ ಹಸುವಿನ ಶೆಡ್ನಲ್ಲಿದ್ದ ದೇಸಿ ತಳಿಯ ಹಸುಗಳು, ಜೇನು ಸಾಕಾಣಿಕೆ ಹೀಗೆ ಒಂದೊಂದೆ

ಮಾಹಿತಿ ಪಡೆಯುತ್ತಾ, ಲಾಭ ನಷ್ಟದ ಮಾಹಿತಿ ಪಡೆಯುತ್ತಾ ಜ್ಞಾನೇಶ್ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾನ ಮನಸ್ಕ 25 ರಿಂದ 30 ರೈತರು ಒಂದೆಡೆ ಸೇರಿ, ಪ್ರತಿ ಭಾನುವಾರ ಸಾವಯವ ಸಂತೆ ಮಾಡುವವುದು, ಗುಣಮಟ್ಟದ ಬೆಳೆಗಳನ್ನು ನಿಗದಿತ ದರದಲ್ಲೇ ಮಾರಾಟ ಮಾಡಿ, ಲಾಭ ಗಳಿಸುತ್ತಿರುವ ಬಗ್ಗೆಯೂ ರೈತ ಜ್ಞಾನೇಶ್ ಅವರಿಂದ ಮಾಹಿತಿ ಪಡೆದ ಸಚಿವರು ಸಂತಸ ವ್ಯಕ್ತಪಡಿಸಿದರು.
ಇಂತಹ ರೈತರು ಹಾಗೂ ಜಮೀನುಗಳ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬೇಕು. ರೈತರ ಯಶೋಗಾಥೆಗಳ ಬಗ್ಗೆ ಪ್ರಚಾರ ನೀಡಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಜ್ಞಾನೇಶ್ ಕುಟುಂಬದವರ ಜತೆಗೂಡಿ ತೋಟಕ್ಕೆ ಭೇಟಿ ನೀಡಿದ ನೆನಪಿಗಾಗಿ ಒಂದು ಸಸಿಯನ್ನೂ ನೆಟ್ಟರು.
ಈ ವೇಳೆ ರೈತರನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಸಂಯೋಜಿತ ಸಮಗ್ರ ಕೃಷಿ ಪದ್ಧತಿ ಹಾಗೂ ಸಾವಯವ ಬೇಸಾಯ ಅಳವಡಿಕೆಯಿಂದ ಉತ್ತಮ ಆದಾಯ ದೊರೆತು ರೈತರಿಗೆ ಶಾಶ್ವತ ಆರ್ಥಿಕ ಭದ್ರತೆ ಸಿಗಲಿದ್ದು, ರೈತರು ಈ ನಿಟ್ಟಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಭಾರತೀಯ ಕಿಸಾನ್ ಸಂಘ ದೇಸಿ ಹೆಸರಿನಲ್ಲಿ ಸಾವಯವ ಉತ್ಪನ್ನಗಳ ಬ್ರಾಂಡ್ ಸೃಷ್ಟಿಸಿ ಉತ್ತಮ ಬೇಡಿಕೆ ಪಡೆದಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಸಿದರು.
ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳದೆ ಬದುಕು ಗಟ್ಟಿಗೊಳಿಸಬೇಕು. ಸಾವಯವ ಕೃಷಿಯಲ್ಲಿ ಸಾರ್ಥಕ ಬದುಕು ಕಟ್ಟಿಕೊಂಡಿರುವ ಕೃಷಿಕ ಜ್ಞಾನೇಶ್ ಎಲ್ಲರಿಗೂ ಪ್ರೇರಣಾ ಶಕ್ತಿ ಹಾಗೂ ಆದರ್ಶವಾಗಿದ್ದಾರೆ ಎಂದರು. ಸಮಗ್ರ ಕೃಷಿ ಪದ್ಧತಿಯು ದೊಡ್ಡ ದೊಡ್ಡ ಹಿಡುವಳಿದಾರರಿಗೆ ಸೂಕ್ತವಲ್ಲ, ಇದೇನಿದ್ದರೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೂಕ್ತವಾದುದು. ಯಾರು ಕಡಿಮೆ ಕೃಷಿ ಭೂಮಿ ಹೊಂದಿರುತ್ತಾರೆಯೋ ಅಂತಹ ರೈತರಿಗೆ ಸಮಗ್ರ ಕೃಷಿ ಪದ್ಧತಿ ಶಾಶ್ವತ ಆದಾಯ ತರಲಿದೆ. ಕೆಲವೊಮ್ಮೆ ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಒಳ್ಳೆಯ ಲಾಭ ಗಳಿಸಿದರೆ, ಇನ್ನೊಮ್ಮೆ ಮಾಡಿದ ಖರ್ಚು ಕೂಡ ದೊರೆಯದ ಪರಿಸ್ಥಿತಿ ಉಂಟಾಗುತ್ತದೆ. ಆದರೆ, ಇಂತಹ ಪರಿಸ್ಥಿತಿಯ ನಡುವೆಯೂ ಜ್ಞಾನೇಶ ಅವರು ಗುಣಮಟ್ಟ ಹಾಗೂ ಸಾವಯವ ಕೃಷಿಗೆ ಆದ್ಯತೆ ನೀಡಿ, ಒಳ್ಳೆಯ ಲಾಭ ಗಳಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಉದ್ಯೋಗ ತೊರೆದು, ಕೃಷಿಯತ್ತ ಆಕರ್ಷಿತರಾಗಿ ಸಾಧನೆ ಮಾಡಿರುವ ರೈತ ಜ್ಞಾನೇಶ್ ಇತರೆ ರೈತರಿಗೆ ಮಾದರಿ. ಜೇನು ಸಾಕಾಣಿಕೆ, ಹೈನುಗಾರಿಕೆ, ವಿವಿಧ ತೋಟಗಾರಿಕೆ ಬೆಳೆಗಳು, ಬೆಳೆಗಳ ಮೌಲ್ಯವರ್ಧನೆ ಹಾಗೂ ಮಾಡಿಕೊಂಡಿರುವ ಮಾರುಕಟ್ಟೆ ವ್ಯವಸ್ಥೆ ನಿಜಕ್ಕೂ ಇತರರಿಗೆ

ಅನುಕರಣೀಯ. ಕೃಷಿಯ ಸವಾಲು ಹಾಗೂ ಅದನ್ನು ಮೆಟ್ಟಿ ನಿಲ್ಲಲು ಸಾವಯವ ಕೃಷಿಗೆ ಇರುವ ಸಾಧ್ಯತೆಗಳ ಬಗ್ಗೆ ಗಮನ ಸೆಳೆದ ಸಚಿವರು, ರೈತರು ಸಾವಯವ ಕೃಷಿಯ ಲಾಭ ಪಡೆಯುವಂತೆ ಕರೆ ನೀಡಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ರೈತ ಜ್ಞಾನೇಶ್ ಅವರು ತಮ್ಮ ಬೆಳೆಗೆ ತಾವೇ ಗರಿಷ್ಟ ಮಾರಾಟ ದರವನ್ನು ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಾರೆ, ಗುಣಮಟ್ಟಕ್ಕೆ ಆದ್ಯತೆ ನೀಡುವ ಇವರು, ಕೇವಲ 03.5 ಎಕರೆಯಲ್ಲಿ ವರ್ಷಕ್ಕೆ ಖರ್ಚನ್ನು ತೆಗೆದು, ಸುಮಾರು 10 ಲಕ್ಷ ರೂ. ವರೆಗೂ ಲಾಭ ಮಾಡಿಕೊಳ್ಳುತ್ತಿದ್ದಾರೆ, ಇದು ಇತರೆ ರೈತರಿಗೆ ಮಾದರಿಯಾಗಿದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಮಗ್ರ ಕೃಷಿ ತೋಟ ಮಾಡಿ ನಿರಂತರ ಲಾಭ ಗಳಿಸುತ್ತಿರುವ ರೈತ ಜ್ಞಾನೇಶ್ ಅವರ ಸಾಧನೆ ಬಗ್ಗೆ ವ್ಯಾಪಕ ಪ್ರಚಾರ ಆಗಬೇಕು, ರೈತರಿಗೆ ಇದರ ಅರಿವು ಮೂಡಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ತಹಸಿಲ್ದಾರ್ ನಾಗವೇಣಿ, ಜ್ಞಾನೇಶ್ ಅವರ ಸಹೋಧರ ತಿಪ್ಪೇಸ್ವಾಮಿ ಸೇರಿದಂತೆ ರೈತರು, ಅಧಿಕಾರಿಗಳು, ಕುಟುಂಬದವರು ಉಪಸ್ಥಿತರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
