
CHITRADURGA NEWS | 26 AUGUST 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜನಪ್ರತಿನಿಧಿಗಳ ಎಚ್ಚರಿಸಲು ಎದ್ದೇಳು ಜನ ಸೇವಕ ಹೋರಾಟ (Irrigation Movement) ಹಮ್ಮಿಕೊಂಡಿದೆ.
ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಭದ್ರಾ ಕಾಮಗಾರಿಗೆ ಅನುದಾನ ನೀಡುಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ರೋಹವೆಸಗುತ್ತಿವೆ. ಜಿಲ್ಲೆಯ ಜನ ಪ್ರತಿನಿಧಿಗಳು ಎಚ್ಚರ ತಪ್ಪಿ ಮಲಗಿದ್ದು ಅವರನ್ನು ಏಳಿಸುವ ಸಂಬಂಧ ಎದ್ದೇಳು ಜನ ಸೇವಕ ಹೋರಾಟ ಹಮ್ಮಿಕೊಳ್ಳಬೇಕು. ಸಂಸದ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಮನೆ ಮುಂಭಾಗ ತಮಟೆ ಬಾರಿಸುವುದರ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕೆಂದು ಸಭೆ ಅಭಿಪ್ರಾಯಪಟ್ಟಿತು.
ಎದ್ದೇಳು ಜನ ಸೇವಕ ಕಾರ್ಯಕ್ರಮದ ಆರಂಭದಲ್ಲಿ ಆಗಸ್ಟ್ 29 ರ ಗುರುವಾರ ಸಂಸದ ಗೋವಿಂದ ಕಾರಜೋಳ ಮನೆ ಮುಂಭಾಗ ತಮಟೆ ಬಾರಿಸಲು ಸಭೆ ತೀರ್ಮಾನಿಸಿತು. ನಂತರ ಎಲ್ಲ ಶಾಸಕರ ಮನೆ ಮುಂಭಾಗ ಒಂದೊಂದು ದಿನ ಹಾಗೂ ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಕಾರ್ಯಕ್ರಮ ನಡೆಯಲಿದೆ.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ಕಾಮಗಾರಿ ಭದ್ರಾ ಮೇಲ್ದಂಡೆಗೆ ಅನುದಾನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತಾಳಿವೆ. ಬಾಕಿ ಬಿಲ್ ಪಾವತಿಸದ ಕಾರಣ ಕಾಮಗಾರಿ ನಿರ್ವಹಿಸುತ್ತಿದ್ದ ಆದಿತ್ಯ ಕನ್ ಸ್ಟ್ರಕ್ಷನ್ ಕಂಪನಿ ಹಾಗೂ ಅಮೃತ ಕನ್ ಸ್ಟ್ರಕ್ಷನ್ ಕಂಪನಿಗಳು ಭದ್ರಾ ಮೇಲ್ದಂಡೆ ಮೇಲ್ಜಂಡೆ ಮುಖ್ಯ ಇಂಜಿನಿಯರ್ ಪತ್ರ ಬರೆದು ಕಾಮಗಾರಿ ಸ್ಥಗಿತಗೊಳಿಸಿ ವಾಪಾಸ್ಸು ಹೋಗುತ್ತಿದ್ದೇವೆ. ನಮ್ಮ ಬಿಲ್ ಸೆಟ್ಲ್ ಮೆಂಟ್ ಮಾಡುವಂತೆ ಮನವಿ ಮಾಡಿವೆ.
ಈ ಎರಡೂ ಕಂಪನಿಗಳಿಗೆ ಬರೋಬ್ಬರಿ ಐದು ನೂರು ಕೋಟಿಗೂ ಹೆಚ್ಚು ಹಣ ಪಾವತಿ ಮಾಡಬೇಕಿದೆ.ಈ ಕಂಪಿನಿಗಳು ಫೀಲ್ಡ್ ನಿಂದ ಕಾಲ್ಕಿತ್ತರೆ ಮರಳಿ ಕರೆದುಕೊಂಡು ಬರುವುದು ಕಷ್ಟ. ರಾಜ್ಯ ಸರ್ಕಾರ ಕೂಡಲೇ ಈ ಕಂಪನಿಗಳು ಹೊರ ಹೋಗದಂತೆ ತಡೆಯಬೇಕು. ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಯಾದವರೆಡ್ಡಿ ಆಗ್ರಹಿಸಿದರು.
ಭದ್ರಾ ಮೇಲ್ದಂಡೆಗೆ 2007-08 ರಲ್ಲಿ ಆರಂಭವಾಗಿದ್ದು ಇದುವರೆಗೂ 9700 ರು ಕೋಟಿ ರು ಗಳನ್ನು ರಾಜ್ಯ ಸರ್ಕಾರ ವ್ಯಯ ಮಾಡಿದೆ. ಆದರೆ 2014 ರಲ್ಲಿ ಶುರುವಾದ ಎತ್ತಿನಹೊಳೆ ಯೋಜನೆಗೆ 15900 ಕೋಟಿ ರು ವ್ಯಯಿಸಲಾಗಿದೆ. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವುದರ ಹಿಂದೆ ಇರುವ ರಾಜಕೀಯ ಇಚ್ಚಾಶಕ್ತಿ, ಭದ್ರಾ ಮೇಲ್ದಂಡೆಗೆ ಇಲ್ಲದಂತಾಗಿದೆ. ಇಲ್ಲಿನ ಜನ ಪ್ರತಿನಿಧಿಗಳ ನಿಸ್ಸೀಮ ನಿರ್ಲಕ್ಷ್ಯ ತನ, ರಾಜ್ಯ ಸರ್ಕಾರದ ಉದಾಸೀನ ಮನೋಭಾವದಿಂದಾಗಿ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯ ಜನ ದಂಗೆ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಬೇಡರೆಡ್ಡಿ ಬಸವರೆಡ್ಡಿ ಮಾತನಾಡಿ, ಕಾಮಗಾರಿ ನಿರ್ವಹಣೆ ಮಾಡುವ ಕಂಪನಿಗಳು ಯಾವುದೇ ಕಾರಣದಿಂದ ಹೊರ ಹೋಗದಂತೆ ತಡೆವ ಕೆಲಸವಾಗಬೇಕು. ಸರ್ಕಾರ ಈ ಸಬೂಬು ಹೇಳಿ ಮತ್ತೊಂದಿಷ್ಟು ದಿನ ಕಾಲ ನೂಕುವ ಅಪಾಯವಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಕ್ಷಣವೇ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿ, ಕಂಪನಿಗಳು ಹೊರ ಹೋಗದಂತೆ ನೋಡಿಕೊಳ್ಳಬೇಕು. ಹಾಗೊಂದು ವೇಳೆ ಕಂಪನಿಗಳು ಇಲ್ಲಿಂದ ಕಾಲ್ಕಿತ್ತಲ್ಲಿ ಮತ್ತೆ ಹೊಸದಾಗಿ ಟೆಂಡರ್ ಕರೆದೆ ಏಜೆನ್ಸಿ ಫಿಕ್ಸ್ ಮಾಡುವಲ್ಲಿ ಮತ್ತಷ್ಟು ವಿಳಂಬವಾಗುತ್ತದೆ. ಅರ್ಧಕ್ಕೆ ನಿಂತ ಕಾಮಗಾರಿ ಮುಂದುವರಿಸಲು ಯಾರೂ ಬರುವುದಿಲ್ಲವೆಂಬ ಕನಿಷ್ಟ ಪ್ರಜ್ಞೆ ಸರ್ಕಾರಕ್ಕೆ ಇರಬೇಕು ಎಂದರು.
ಕ್ಲಿಕ್ ಮಾಡಿ ಓದಿ: ಜಿಲ್ಲೆಯ ರೈತರಿಗೆ ಸಂತಸದ ಸುದ್ದಿ | 10 ಸಾವಿರ ಎಕರೆಯಲ್ಲಿ ದಾಳಿಂಬೆ ಬೆಳೆ ವಿಸ್ತರಣೆ ಗುರಿ
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು ಮಾತನಾಡಿ, ಒಂದು ತಿಂಗಳ ಒಳಗಾಗಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ಅನುದಾನ ನೀಡಬೇಕು. ಕೇಂದ್ರ ಕೂಡಾ ತನ್ನ ವಚನ ಪಾಲಿಸಬೇಕು. ಅಗತ್ಯ ಬಂದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಮನೆ ಮುಂಭಾಗ ಪ್ರತಿಭಟನೆ ನಡೆಸೋಣ ಎಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಕರುನಾಡ ಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಕಾರ್ಯಾಧ್ಯಕ್ಷ ಹೊರಕೇರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜಿಲ್ಲಾ ಮಹಿಳಾ ಅಧ್ಯಕ್ಷ ದೊಡ್ಡಸಿದ್ದವ್ವನಹಳ್ಳಿ ಸುಧಾ, ಹಿರಿಯೂರು ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಚೇತನ ಯಳನಾಡು, ಜಾನುಕೊಂಡ ತಿಪ್ಪೇಸ್ವಾಮಿ, ಸಿದ್ದೇಶ್ ಜಾನುಕೊಂಡ, ತಾಲೂಕು ಅಧ್ಯಕ್ಷ ಇಸಾಮುದ್ರ ಪ್ರಭು, ಹುಣಿಸೆಕಟ್ಟೆ ಕಾಂತರಾಜ್,ಮುದ್ದಾಪುರ ನಾಗಣ್ಣ, ರಂಗೇಗೌಡ, ಮೊಳಕಾಲ್ಮುರು ಮಂಜುನಾಥ ಸಭೆಯಲ್ಲಿ ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
