ಹೊಸದುರ್ಗ
JATRE: ನಾಳೆ ಹಾರನಕಣಿವೆ ರಂಗಪ್ಪನ ಅಂಬಿನೋತ್ಸವ | ತಂಗಟೆ ಗಿಡಕ್ಕೆ ಬಾಳೆಹಣ್ಣು ಸಕ್ಕರೆಯ ಸರ್ಫ್ ವಿಶೇಷ


CHITRADURGA NEWS | 12 OCTOBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ಕೋಡಿ ಬಳಿ ನೆಲೆ ನಿಂತಿರುವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ಜಾತ್ರೆ ಹಾಗೂ ಅಂಬಿನೋತ್ಸವ ಅ.13 ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಹಿರಿಯೂರು – ಹೊಸದುಗ ತಾಲೂಕಿನಲ್ಲಿ ಚಾಚಿಕೊಂಡಿರುವ ವಾಣಿವಿಲಾ ಸಾಗರ ಜಲಾಶಯದ ಹಿನ್ನೀರು ಬಳಿ ಕೋಡಿ ಹರಿಯುವ ಜಾಗದಿಂದ ಹಿಂಭಾಗದ ದಿಬ್ಬದಲ್ಲಿ ಶ್ರೀ ರಂಗನಾಥ ಸ್ವಾಮಿ ಭವ್ಯ ದೇಗುಲವಿದ್ದು, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಪಕ್ಕದ ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆಗಳಿಂದ ಸಹಸ್ರಾರು ಭಕ್ತರು ಇಲ್ಲಿಗೆ ಜಾತ್ರೆಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಬರದ ನಾಡಿನಲ್ಲಿ ಭರ್ಜರಿ ಮಳೆ | ರಂಗಯ್ಯನದುರ್ಗ ಜಲಾಶಯ ಭರ್ತಿ
ಹೊಸದುರ್ಗ ತಾಲೂಕಿನ ಅಂಚಿಬಾರಿಯಲ್ಲಿ ಶ್ರೀ ರಂಗನಾಥ ಸ್ವಾಮಿ ಉತ್ಸವಮೂರ್ತಿ ಇದ್ದು, ಇಲ್ಲಿಂದ ಭಕ್ತರು ಬೆಳಗ್ಗೆ ೮ ಗಂಟೆ ವೇಳೆಗೆ ರಂಗಪ್ಪ ಒಡಮೂಡಿರುವ ವಿವಿ ಸಾಗರ ಪಕ್ಕದ ದೇಗುಲದ ಜಾಗಕ್ಕೆ ಹೊತ್ತು ತರಲಾಗುತ್ತದೆ.
ಆನಂತರ ಹಲವು ಧಾರ್ಮಿಕ ಕಾಯಗಳು ನಡೆಯಲಿದ್ದು, ದೇವರ ಸಮ್ಮುಖದಲ್ಲಿ ಅಂಬಿನೋತ್ಸವ ಕೂಡಾ ಜರುಗಲಿದೆ.
ಇದನ್ನೂ ಓದಿ: ನಟ ಹುಲಿ ಕಾರ್ತಿಕ್ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಲೆಯಬೇಕು ಎಂದ ಶ್ರೀಗಳು
ಹಾರನಕಣಿವೆ ಶ್ರೀ ರಂಗನಾಥಸ್ವಾಮಿ ಜಾತ್ರೆಗೆ ಈ ವರ್ಷ ನೂತನ ಸಂಸದ ಗೋವಿಂದ ಕಾರಜೋಳ ಆಗಮಿಸಿ ಭಕ್ತಿ ಸಮರ್ಪಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಭಕ್ತರ ನಂಬಿಕೆಯ ದೈವ ರಂಗಪ್ಪ:
ಬುಡಕಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶ್ರೀ ರಂಗಪ್ಪನ ಜಾತ್ರೆಗೆ ಹೋಗಿ ಚೇಳು, ಹುಳ ಬಿಟ್ಟು ಬಂದರೆ ವಷಪೂರ್ತಿ ರಂಗಪ್ಪ ಕಾಯುತ್ತಾನೆ ಎನ್ನುವ ನಂಬಿಕೆ ಈ ಭಾಗದ ಭಕ್ತರಲ್ಲಿದೆ.
ಜಾತ್ರೆಯಲ್ಲಿ ದೇವಸ್ಥಾನ ಸಮಿತಿ ಮಾರಾಟ ಮಾಡುವ ತಗಡಿನ ಚೇಳು, ಹಾವು, ಹುಳಗಳ ಪ್ರತಿಕೃತಿಗಳನ್ನು ದೇವಸ್ಥಾನದ ಬಳಿ ಅರ್ಪಣೆ ಮಾಡಿದರೆ ಮನೆ, ಜಮೀನು, ತೋಟದಲ್ಲಿ ಹಾವುಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುವ ನಂಬಿಕೆ ಭಕ್ತರಲ್ಲಿ ಬಲವಾಗಿದೆ.
ಬಾಳೆಹಣ್ಣಿನ ಸರ್ಫ್ ವಿಶೇಷ:
ಹಾರನಕಣಿವೆ ರಂಗಪ್ಪನ ಜಾತ್ರೆಯಲ್ಲಿ ಬಾಳೆಹಣ್ಣಿನ ಸರ್ಫ್ ಬಹಳ ವಿಶೇಷವಾಗಿದೆ. ಇಲ್ಲಿಗೆ ಆಗಮಿಸುವ ಭಕ್ತರು ಬಾಳೆಹಣ್ಣು ಸಕ್ಕರೆ ತಂದು ತಂಗಟೆ ಗಿಡದ ಬುಡದಲ್ಲಿ ಪೂಜೆ ಸಲ್ಲಿಸಿ, ಹಣ್ಣು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ದಾಯ್ಯನಿಂದ ಗೋವಿಂದ ಎಂದು ಹೇಳಿಸಿದ ಬಳಿಕ ಭಕ್ತರಿಗೆ ಹಂಚುವುದು ಇಲ್ಲಿನ ಸಂಪ್ರದಾಯ.
ಗುಂಪು ಗುಂಪಾಗಿ ಬರುವ ಸ್ನೇಹಿತರು, ಎಲ್ಲರೂ ಹಣ ಸೇರಿಸಿ ಐದಾರು ಗೊನೆ ಬಾಳೆಹಣ್ಣು ಖರೀಧಿಸಿ ಸಕ್ಕರೆ ಬೆರೆಸಿ ಪ್ರಸಾದ ಮಾಡುತ್ತಾರೆ. ಒಬ್ಬರೇ ಬಂದವರು, ಯಾರ ಜೊತೆಗಾದರೂ ಸೇರಿ ಈ ಸಂಪ್ರದಾಯ ಪಾಲಿಸುತ್ತಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ನ್ಯೂಸ್ | ಅ.20ರಂದು ಬೃಹತ್ ಉದ್ಯೋಗ ಮೇಳ
ಈ ಆಚರಣೆಯಲ್ಲಿ ಇಲ್ಲಿ ತಂಗಟೆ ಗಿಡಗಳು ವಿಶೇಷ ಸ್ಥಾನ ಪಡೆದುಕೊಂಡಿದ್ದು, ಯಾರೂ ಪೂಜೆ ಮಾಡದ ಗಿಡಗಳಿಗಾಗಿ ಹುಡುಕಾಟ ನಡೆಯುತ್ತದೆ. ಬೆಟ್ಟ ಹಾಗೂ ಜಲಾಶಯದ ಒಡಲು ಆಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಗಿಡಗಳಿದ್ದೂ, ಸಹಸ್ರಾರು ಭಕ್ತರು ಬರುವುದರಿಂದ ಯಾರೂ ಪೂಜೆ ಸಲ್ಲಿಸದ ಗಿಡ ಹುಡುಕುವುದೇ ಸಾಹಸ ಅನ್ನಿಸುತ್ತಿರುತ್ತದೆ.

