
CHITRADURGA NEWS | 17 JUNE 2026
ಚಿತ್ರದುರ್ಗ: ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಬದ್ದವಾಗಿದೆ. ಲೋಪದೋಷಗಳನ್ನು ಸರಿಪಡಿಸಿ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸುವ ಪರಿಷ್ಕರಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರವು ಗಂಭೀರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಸ್ಪಷ್ಟ ಪಡಿಸಿದರು.

ಇದನ್ನೂ ಓದಿ: ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
ನಗರದ ಜಿಲ್ಲಾ ಪಂಚಾಯತಿ ಸಿಇಒ ಕಚೇರಿ ಸಭಾಂಗಣದಲ್ಲಿ ಬುಧವಾರ, ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ, ತಾಂತ್ರಿಕ ಸವಾಲುಗಳು ಮತ್ತು ಮುಂದಿನ ಸುಧಾರಣೆಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗಾಗಿ ಪ್ರಾಧಿಕಾರವು ತೀವ್ರ ನಿಗಾ ವಹಿಸಿದೆ. ಪ್ರಾಧಿಕಾರದ ರಾಜ್ಯಾಧ್ಯಕ್ಷನಾದ ಮೇಲೆ ರಾಜ್ಯದ 31 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಸಿಇಒ ಹಾಗೂ ತಾಲೂಕು ಮಟ್ಟದಲ್ಲಿ ಇಒ ನೇತೃತ್ವದಲ್ಲಿ ಗ್ಯಾರಂಟಿ ಯೋಜನಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ.
ಒಟ್ಟು 4,000 ಕ್ಕೂ ಹೆಚ್ಚು ಜನರ ಬೃಹತ್ ಉಸ್ತುವಾರಿ ಕಾರ್ಯಪಡೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ತೆರಿಗೆದಾರರ ಹಣ ವ್ಯರ್ಥವಾಗದೆ ಬಡವರ ಕೈಸೇರಬೇಕು ಮತ್ತು ಮಹಿಳೆಯರ ಸಬಲೀಕರಣವಾಗಬೇಕು ಎನ್ನುವುದೇ ಸರ್ಕಾರದ ಪ್ರಮುಖ ಆಶಯವಾಗಿದೆ. ಪರಿಷ್ಕರಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಶುದ್ದ ಸುಳ್ಳು ಎಂದು ಹೆಚ್.ಎಂ.ರೇವಣ್ಣ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಲೋಪದೋಷ ನಿವಾರಣೆ:
ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದ ಗಂಭೀರ ಲೋಪವನ್ನು ಪ್ರಾಧಿಕಾರ 2025ರ ಸೆಪ್ಟಂಬರ್ ತಿಂಗಳಿನಲ್ಲಿ ಪತ್ತೆಹಚ್ಚಿತ್ತು. ಈ ಗೊಂದಲಗಳನ್ನು ಸರಿಪಡಿಸುವಂತೆ 31-10-2025 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ವಿವಿಧ ಸೌಲಭ್ಯಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಅಹ್ವಾನ
ರಾಜ್ಯದ ತೆರಿಗೆದಾರರ ಹಣ ವ್ಯರ್ಥವಾಗಬಾರದು, ಅರ್ಹ ಬಡವರಿಗೆ ತಲುಪಬೇಕು. ಮಹಿಳೆಯರ ಸಬಲೀಕರಣ ಹಾಗೂ ರಾಷ್ಟ್ರದ ಸಂಪತ್ತು ಹೆಚ್ಚಿಸುವುದು ಸರ್ಕಾರ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿರುವ ಕ್ರಮವನ್ನು ಹೆಚ್.ಎಂ.ರೇವಣ್ಣ ಸ್ವಾಗತಿಸಿದರು.
ಲೋಪದೋಷ ಬೆಳಕಿಗೆ ಬಂದರೂ, ಗ್ರಾಮೀಣ ಭಾಗದಲ್ಲಿ ಮರಣ ನೋಂದಣಿ ತಕ್ಷಣಕ್ಕೆ ನಡೆಯದೇ ಇರುವುದರಿಂದ ನಿಖರ ಅಂಕಿ-ಅಂಶಗಳ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ 2025ರ ಡಿಸೆಂಬರ್ ಹಾಗೂ 2026ರ ಮೇ ತಿಂಗಳಲ್ಲಿ ವಿಶೇಷ ಪರಿಶೀಲನಾ ಸಭೆಗಳನ್ನು ನಡೆಸಿ, ಈವರೆಗೆ ಮರಣ ಹೊಂದಿದ ಒಟ್ಟು 1,44,056 ಕುಟುಂಬದ ಮುಖ್ಯಸ್ಥರ ಖಾತೆಗಳನ್ನು ಗುರುತಿಸಿ ಹಣ ಸಂದಾಯವನ್ನು ಸ್ಥಗಿತಗೊಳಿಸಲಾಗಿದೆ.
ಬ್ಯಾಂಕ್ಗಳಿಂದ ಮಾಹಿತಿ ಸಂಗ್ರಹಿಸುವಲ್ಲಿ ಕೆಲವು ತಾಂತ್ರಿಕ ಸವಾಲುಗಳು ಎದುರಾಗಿವೆ. ರಾಜ್ಯದ ಗಡಿ ಭಾಗದದಲ್ಲಿ ಫಲಾನುಭವಿಗಳ ಹಣ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಬ್ಯಾಂಕ್ಗಳ ಶಾಖೆಗಳಿಗೆ ಜಮೆಯಾಗಿರುವುದರಿಂದ, ಆಯಾ ಬ್ಯಾಂಕುಗಳ ಮುಖ್ಯ ಕಚೇರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ: ಚುನಾವಣಾ ಕರ್ತವ್ಯ ಲೋಪ | ಶಿಕ್ಷಕಿ ಅಮಾನತು ಮಾಡಿ ಡಿಸಿ ವೆಂಕಟೇಶ್ ಆದೇಶ
ಮರಣ ಹೊಂದಿದವರ ಬ್ಯಾಂಕುಗಳ ಖಾತೆ ಜಮೆಯಾಗಿರುವ ಹಣವನ್ನು ಹಿಂಪಡೆಯಲು ಕ್ರಮ ವಹಿಸಲಾಗುತ್ತಿದೆ. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಂತಹ ಖಾತೆಗಳಲ್ಲಿ ಜಮೆಯಾದ ಹಣವನ್ನು ಮೃತರ ಅನರ್ಹರು ಬಳಸಿಕೊಂಡಿರುವ ಸಾಧ್ಯತೆಯಿದೆ. ಈ ಹಣವನ್ನು ವಾಪಸ್ ಪಡೆಯಲು ಸಹ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಹೆಚ್.ಎಂ.ರೇವಣ್ಣ ತಿಳಿಸಿದರು.
ಗೃಹಜ್ಯೋತಿ ಹೊರ ರಾಜ್ಯದವರ ಬಳಕೆಗೆ ಕಡಿವಾಣ:
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುವ ಉದ್ದೇಶದಿಂದ ಒಂದೇ ಮನೆಯನ್ನು ಕೃತಕವಾಗಿ ವಿಭಜಿಸಿರುವುದು ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ಅನ್ನು ಗೃಹಬಳಕೆಯ ವ್ಯಾಪ್ತಿಗೆ ತರುತ್ತಿರುವ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದ ತೆರಿಗೆದಾರರ ಹಣ ಕೇವಲ ಇಲ್ಲಿನ ಅರ್ಹ ಜನರಿಗೆ ಮಾತ್ರ ತಲುಪಬೇಕು ಎಂಬ ಕಾರಣಕ್ಕೆ, ಹೊರರಾಜ್ಯದವರು ಯೋಜನೆಗಳ ಲಾಭ ಪಡೆಯುವುದನ್ನು ತಡೆಯಲು ಸರ್ಕಾರ ಚಿಂತನೆ ನಡೆಸಿದೆ. ಶಕ್ತಿ ಯೋಜನೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಮಹಿಳೆಯರಿಗೆ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುವುದು ಎಂದು ಹೆಚ್.ಎಂ.ರೇವಣ್ಣ ಹೇಳಿದರು.
ಜಿಲ್ಲೆಯ ಸಾಧನೆ ಬಗ್ಗೆ ಪ್ರಶಂಸೆ :
ಚಿತ್ರದುರ್ಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಹೆಚ್.ಎಂ.ರೇವಣ್ಣ ಶ್ಲಾಘಿಸಿದರು. ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಒಟ್ಟು ರೂ.3,783 ಕೋಟಿ ಹಣ ಬಿಡುಗಡೆಯಾಗಿದೆ. ಹಿಂದೆ ಇಡೀ ಜಿಲ್ಲೆಯ ಎಲ್ಲಾ ಇಲಾಖೆಗಳ ಒಟ್ಟು ವಾರ್ಷಿಕ ಬಜೆಟ್ ಹಂಚಿಕೆ ಸುಮಾರು ರೂ.1,600 ಕೋಟಿ ಇರುತ್ತಿತ್ತು. ಆದರೆ ಇಂದು ಕೇವಲ ಗ್ಯಾರಂಟಿ ಯೋಜನೆಗಳಿಗಾಗಿಯೇ ಜಿಲ್ಲೆಗೆ ರೂ.3,783 ಕೋಟಿ ಹಣ ಹರಿದುಬಂದಿದೆ. ಇದು ನೇರವಾಗಿ ಜನರ ಕೈ ಸೇರುತ್ತಿರುವ ಹಣವಾಗಿದೆ ಎಂದರು.
ಇದನ್ನೂ ಓದಿ: ನವೋದಯ ವಿದ್ಯಾಲಯದಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದ ಪ್ರವೇಶ | ಅರ್ಜಿ ಆಹ್ವಾನ
ಈ ಐದೂ ಗ್ಯಾರಂಟಿಗಳಿಂದಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕನಿಷ್ಠ ರೂ. 5,000 ದಿಂದ 6,000 ವರೆಗೆ ಉಳಿತಾಯವಾಗುತ್ತಿದೆ. ಇದು ದೇಶದಲ್ಲೇ ಅತ್ಯಂತ ವಿಶಿಷ್ಟ ಹಾಗೂ ಯಶಸ್ವಿ ಕಾರ್ಯಕ್ರಮವಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದರೆ ರಾಜ್ಯ ದಿವಾಳಿಯಾಗುತ್ತದೆ ಟೀಕೆಗಳು ಕೇಳಿಬಂದವು. ಆದರೆ, ಸರ್ಕಾರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಮಾಡಿದೆ.
ಇದೇ ಯೋಜನೆಗಳನ್ನು ನಕಲು ಮಾಡಿ ಜಾರಿಗೆ ತಂದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಯೋಜನೆ ಸ್ಥಗತಿವಾಗಿವೆ. ಚುನಾವಣೆಯ ಗೆಲುವಿಗಾಗಿ ಯೋಜನೆ ಘೋಷಿಸಿ ನಂತರ ನಿಲ್ಲಿಸಲಾಗಿದೆ. ಆದರೆ ರಾಜ್ಯದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲಾ ವರ್ಗದ ಜನರಿಗೂ ಯೋಜನೆ ತಲುಪುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪರಿಷ್ಕರಣೆಯ ಮುಖ್ಯ ಉದ್ದೇಶ ಕೇವಲ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯು ರಾಜ್ಯದ 31 ಜಿಲ್ಲೆಗಳಲ್ಲೇ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲೆಗೆ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ ಎಂದು ಹೆಚ್.ಎಂ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿ
ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಹೆಚ್.ಎಂ.ರೇವಣ್ಣ ಎಸ್ಸಿಪಿ/ಟಿಎಸ್ಪಿ ಹಣ ದುರುಪಯೋಗದ ಆರೋಪವನ್ನು ನಿರಾಕರಿಸಿ, ದಲಿತ ಹಾಗೂ ಹಿಂದುಳಿದ ಸಮಾಜದ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ನೇರ ಹಣ ಮೀಸಲಿಟ್ಟ ಏಕೈಕ ರಾಜ್ಯ ಕರ್ನಾಟಕ ಎಂದು ಸಮರ್ಥಿಸಿಕೊಂಡರು. ವರ್ಷಕ್ಕೆ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರ ಬಿ.ಬಿ.ಎಲ್. ಕಾರ್ಡುನ್ನು ಮಾನದಂಡಗಳನ್ನು ಆಧಾರಿಸಿ ಕೇಂದ್ರ ಸರ್ಕಾರ ರದ್ದು ಮಾಡುತ್ತಿದೆ ಎಂದು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸಿಇಒ ಡಾ.ಆಕಾಶ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿ.ಪಂ.ಸಿಪಿಓ ಗಾಯಿತ್ರಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
