CHITRADURGA NEWS | 06 JANUARY 2026
ಚಿತ್ರದುರ್ಗ: ಚಿತ್ರದುರ್ಗದಲ್ಲಿ ವಿಪ್ರ ಸಮಾಜಕ್ಕೆ ಜಾಗ ನೀಡುವುದಾದರೆ ಒಂದೇ ಕಡೆಯಲ್ಲಿ ಭವ್ಯವಾದ ಶ್ರೀಕೃಷ್ಣ ದೇವಸ್ಥಾನ, ಶಾಲೆ ಹಾಗೂ ಆಸ್ಪತ್ರೆ ನಿರ್ಮಾಣ ಮಾಡುವಷ್ಟು ನೀಡಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ತಿಳಿಸಿದರು.
ಇದನ್ನೂ ಓದಿ: ಅಮ್ಮ ದುಡ್ಡು ಕೊಡಲಿಲ್ಲ ಅಂತಾ ಬೆಂಕಿ ಹಚ್ಚಿಕೊಂಡ ಮಗ
ಹರಿವಾಯು ಗುರು ಸೇವಾ ಸಮಿತಿಯಿಂದ ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಆರಂಭವಾದ 25 ನೇ ವರ್ಷದ ಹರಿದಾಸ ಹಬ್ಬದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹರಿವಾಯು ಗುರು ಸೇವಾ ಸಮಿತಿ ನಿರಂತರವಾಗಿ 25 ವರ್ಷಗಳಿಂದ ಹರಿದಾಸ ಹಬ್ಬ ಆಚರಿಸಿಕೊಂಡು ಬರುತ್ತಿರುವುದನ್ನು ಗಮನಿಸಿದಾಗ ಇವರಲ್ಲಿ ಒಗ್ಗಟ್ಟಿದೆ ಎನ್ನುವುದು ತಿಳಿಯುತ್ತದೆ. ಯಾವುದೇ ಸಂಸ್ಥೆಯನ್ನು ಹುಟ್ಟುಹಾಕುವುದು ದೊಡ್ಡದಲ್ಲ. ಮುನ್ನಡೆಸಿಕೊಂಡು ಹೋಗುವುದು ಸಾಹಸದ ಕೆಲಸ. ವೈಮನಸ್ಸು ಬಂದರೆ ಹೋಳಾಗುತ್ತದೆ. ಬಾಲಗ್ರಹ ಪೀಡೆಗಳನ್ನು ದಾಟಿ ಬೆಳೆಯುತ್ತಿದೆಯೆಂದರೆ ಕಡಿಮೆ ಸಾಧನೆಯಲ್ಲ ಎಂದು ಪ್ರಶಂಶಿಸಿದರು.
ಹುಟ್ಟಿದ ಪ್ರತಿಯೊಬ್ಬರು ಬೆಳೆಯಲು ಎಷ್ಟೋ ಅವಕಾಶಗಳಿವೆ. ಹರಿ ಎಂದರೆ ಸಮಸ್ತ ಸದ್ಗುಣಗಳ ಗಣಿ. ಸದ್ಗುಣಗಳ ದಾಸರಾದಾಗ ಬದುಕು ಹಬ್ಬವಾಗುತ್ತದೆ. ದುರ್ಗುಣಗಳನ್ನು ದೂರ ಮಾಡಿಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಕನಕ ಗುರುಪೀಠದ ಈಶ್ವರಾನಂದಪುರಿ ಶ್ರೀ ಸಾನ್ನಿಧ್ಯದಲ್ಲಿ ಸಜ್ಜನಕೆರೆ ಭಕ್ತರ ಸಭೆ
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಧಾರ್ಮಿಕ ಐಕ್ಯತೆ ಸಮಗ್ರತೆಯಲ್ಲಿ ಉಡುಪಿಯ ಪೇಜಾವರ ಮಠ ಅನಾದಿ ಕಾಲದಿಂದಲೂ ಅಪಾರ ಕೊಡುಗೆ ನೀಡುತ್ತ ಬರುತ್ತಿದೆ ಎಂದು ಗುಣಗಾನ ಮಾಡಿದರು.
ಭೀಮ ನದಿ ಉಕ್ಕಿ ಹರಿದು ಇಡಿ ಗ್ರಾಮವೇ ಕೊಚ್ಚಿಕೊಂಡು ಹೋದಾಗ ಅಲ್ಲಿಗೆ ಭೇಟಿ ನೀಡಿದ ಪೇಜಾವರ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ವಿಶ್ವೇಶತೀರ್ಥ ಶ್ರೀಪಾದಂಗಳು ನೆಲೆ ಕಳೆದುಕೊಂಡ ಎಲ್ಲರಿಗೂ ಮನೆಗಳನ್ನು ಕಟ್ಟಿಸಿ ಜೊತೆಗೆ ಒಂದೊಂದು ಹಸುಗಳನ್ನು ನೀಡಿದರು.
ಆಗ ಆ ಗ್ರಾಮದ ಹೆಸರೆ ಗೋವಿಂದಪುರ ಎಂದು ಬದಲಾಯಿತು. ಯಾವ ಸರ್ಕಾರಗಳು ಇಂತಹ ಯೋಜನೆಗಳನ್ನು ತರಲಿಲ್ಲ. ಇಂದಿನ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶ್ವೇಶತೀರ್ಥ ಶ್ರೀಪಾದಂಗಳವರ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣ ಸಂಸ್ಕøತಿ, ಸೂಫಿ ಸಂಸ್ಕøತಿ, ದಾಸ ಸಂಸ್ಕøತಿ ಮೂರು ಹುಟ್ಟಿದೆ. ಸರಸ್ವತಿ ಕೃಪೆ ಯಾರಿಗಾಗುತ್ತದೋ ಅವರೆ ಭಾಗ್ಯವಂತರು. ಕನಕದಾಸ, ಪುರಸಂದರದಾಸ, ವ್ಯಾಸರಾಯರು ಮೂಢನಂಬಿಕೆ, ಕಂದಾಚಾರ, ಗೊಡ್ಡು ಸಂಪ್ರದಾಯಗಳ ವಿರುದ್ದ ಈಜಿದವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪೇಜಾವರ ಮಠದ ಶ್ರೀಗಳು ಇದ್ದರೆಂದರೆ ಅದು ಸುಲಭದ ಮಾತಲ್ಲ. ಈಗಿನ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಎಲ್ಲಾ ಕಡೆ ಕಾರ್ಯತಂತ್ರ ವಿಸ್ತರಿಸಿದ್ದಾರೆ. ವಿಪ್ರ ಸಮಾಜ ಚಿತ್ರದುರ್ಗಕ್ಕೆ ದೊಡ್ಡ ಕೊಡುಗೆ ನೀಡಿದೆ ಎನ್ನುತ್ತಾ ತ.ರಾ.ಸು. ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಹೆಸರುಗಳನ್ನು ಸ್ಮರಿಸಿದರು.
ಚಿತ್ರದುರ್ಗದಲ್ಲಿ ಭವ್ಯವಾದ ಶ್ರೀಕೃಷ್ಣನ ದೇವಸ್ಥಾನ ನಿರ್ಮಾಣ ಆಗಬೇಕಾಗಿರುವುದರಿಂದ ದೊಡ್ಡ ಜಾಗ ನೀಡುವಂತೆ ಸಂಸದರಲ್ಲಿ ಎಂಎಲ್ಸಿ ಕೆ.ಎಸ್.ನವೀನ್ ಮನವಿ ಮಾಡಿದರು.
ಬ್ರಾಹ್ಮಣ ಸಮುದಾಯಕ್ಕೆ ಸಂಸ್ಕಾರವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಈ ಸಮಾಜ ಮುಂಚೂಣಿಯಲ್ಲಿತ್ತು. ಉಡುಪಿಗೆ ಪ್ರಥಮವಾಗಿ ಬಸ್ ಬಿಟ್ಟಿದ್ದು ನಾವು, ತಿರುಪತಿ, ಶೃಂಗೇರಿ, ಧರ್ಮಸ್ಥಳಕ್ಕೂ ಬಸ್ ಸಂಚಾರ ಆರಂಭಿಸಿದ್ದು ನಮ್ಮ ಕುಟುಂಬ ಎಂದು ಸ್ಮರಿಸಿದರು.
ಇದನ್ನೂ ಓದಿ: ಬಿ.ವಿಮಲಾಕ್ಷಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ
ರಾಘವೇಂದ್ರಸ್ವಾಮಿಗಳ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ಪದ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ, ನಗರಸಭೆ ಸದಸ್ಯ ಜಿ.ಹರೀಶ್, ವೈಷ್ಣವ ಸಭಾ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಚಿತ್ರದುರ್ಗ ಬಡಗನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎ.ಶೇಷಗಿರಿರಾವ್, ಉತ್ತರಾಧಿಮಠದ ವ್ಯವಸ್ಥಾಪಕ ಪ್ರಭಂಜನಾಚಾರ್ಯ ಕೂಸನೂರು, ಹೊಸದುರ್ಗ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಚಂದ್ರಪ್ರಕಾಶ್, ಸಂಸ್ಕಾರ ಭಾರತಿಯ ರಾಮಚಂದ್ರ ವೇದಿಕೆಯಲ್ಲಿದ್ದರು.
ಹರಿವಾಯು ಗುರುಸೇವಾ ಸಮಿತಿ ಅಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಜೋಯಿಸ್ ಹುಲಿರಾಜ್ ಸೇರಿದಂತೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹರಿದಾಸ ಹಬ್ಬದಲ್ಲಿ ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
