
CHITRADURGA NEWS | 20 JANUARY 2026
ಚಿತ್ರದುರ್ಗ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪ರಲ್ಲಿರುವ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ಆದಿಶಕ್ತಿ ಶ್ರೀ ಮಾತಂಗೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಮಠ ಸಾಕ್ಷಿಯಾಯಿತು.
ಇದನ್ನೂ ಓದಿ: BJP ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನವೀನ್ | ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಠದ ಭಕ್ತರು, ಅಭಿಮಾನಿಗಳು ಸಾವಿರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಅಂದಾಜು 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ದೇವಸ್ಥಾನದಲ್ಲಿ ಪೂಜಿಸುವ ವಿಗ್ರಹವನ್ನು ಅಯೋಧ್ಯೆ ಶ್ರೀರಾಮ ವಿಗ್ರಹ ಕೆತ್ತನೆ ಮಾಡಿದ್ದ ಮೈಸೂರಿನ ಅರುಣ್ ಯೋಗಿರಾಜ್ ರಚಿಸಲಿದ್ದಾರೆ ಎನ್ನುವುದು ವಿಶೇಷ. ಕೈಯಲಿವೀಣಾ ವಾದನ ಹಿಡಿದಿರುವ ರೂಪದಲ್ಲಿ ತಾಯಿ ಮಾತಂಗೇಶ್ವರಿ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಆದಿಶಕ್ತಿ ಮಾತಂಗೇಶ್ವರಿ ದೇಗುಲಕ್ಕೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ದೇಗುಲಕ್ಕಾಗಿ ವೈಯಕ್ತಿಕವಾಗಿ ಹತ್ತು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಚ್.ಮುನಿಯಪ್ಪ, ಮಠಗಳ ಅಭಿವೃದ್ಧಿಗೆ ಸಮಾಜದ ಹಾಗೂ ಸಮಾಜಕ್ಕೆ ಶ್ರೀಗಳ ಮಾರ್ಗದರ್ಶನ ಅಗತ್ಯ. ಕುಲದೇವತೆಯ ದೇವಸ್ಥಾನವನ್ನು ಎಲ್ಲರೂ ಸ್ವಯಂ ಪ್ರೇರಣೆಯಿಂದ ನಿರ್ಮಾಣ ಮಾಡಬೇಕು. ಸರ್ಕಾರ ಮಠಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಮುಂದಿನ 11 ತಿಂಗಳಲ್ಲಿ ದೇಗುಲ ನಿರ್ಮಾಣವಾಗಿ, ಮಾಘ ಮಾಸದಲ್ಲಿ ಉದ್ಘಾಟನೆಯಾಗಲಿ ಎಂದು ಆಶಿಸಿದರು.
ಇದನ್ನೂ ಓದಿ: ಚಳ್ಳಕೆರೆ KSRTC ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆ ಕುರಿತು ವಸ್ತು ಪ್ರದರ್ಶನ | ಶಾಸಕ ಟಿ.ರಘುಮೂರ್ತಿ ಉದ್ಘಾಟನೆ
ಸಮುದಾಯದ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು, ಎಲ್ಲರೂ ಒಗ್ಗಟ್ಟಾಗಿರಬೇಕು. ಮುಂದುವರೆಸ ಸಮಾಜಗಳ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾದರಿಯಲ್ಲೇ ಅಭಿವೃದ್ಧಿ ಆಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ರಾಜ ವಂಶಸ್ಥರು ಹಾಗೂ ಸಂಸದರಾದ ಯದುವೀರ ಕೃಷ್ಣದತ್ತ ಒಡೆಯರ್ ಮಾತನಾಡಿ, ಪ್ರಾಚೀನ ಭಾರತದಲ್ಲಿ ದೇವಸ್ಥಾನಗಳು ಚಟುವಟಿಕೆಯ ಕೇಂದ್ರವಾಗಿದ್ದವು. ಅಲ್ಲಿ ಕಲೆಯ ರಕ್ಷಣೆಯಾಗುತ್ತಿತ್ತು. ಶಿಕ್ಷಣ, ಸೇವಾ ಚಟುವಟಿಕೆಗಳು ದೊರೆಯುತ್ತಿದ್ದವು. ಈಗ ಮತ್ತೊಮ್ಮೆ ಮಠಗಳ ಮೂಲಕ ಈ ಕಾರ್ಯ ಪುನರುಜ್ಜೀವನವಾಗಬೇಕಿದೆ. ಈ ಕಾರ್ಯಕ್ಕೆ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮುಂದಾಗಿದ್ದಾರೆ ಎಂದು ತಿಳಿಸಿದರು.

ಭಾರತ ಮಾತೆಯ ದೇಗುಲಕ್ಕೆ ಸಂವಿಧಾನವೇ ಧರ್ಮ ಗ್ರಂಥ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಮಾಧ್ಯಮ ರಂಗವೆಂಬ ನಾಲ್ಕು ಆಧಾರ ಸ್ಥಂಭಗಳ ಆಧಾರದಲ್ಲಿ ಭಾರತ ನಿಂತಿದೆ. ಹಿಂದೆ ವೇದ ಉಪನಿಷತ್ತು ಇನ್ನಿತರೆ ಗ್ರಂಥಗಳಿದ್ದರೂ ಕಾಲ ಕಾಲಕ್ಕೆ ನವೀಕರಣವಾಗಿ ಈಗ ಸಂವಿಧಾನ ಭಾರತದ ಗ್ರಂಥವಾಗಿದೆ ಎಂದರು.
ಇದನ್ನೂ ಓದಿ: ದಕ್ಷಿಣ ಕರ್ನಾಟದಲ್ಲೇ ಚಿತ್ರದುರ್ಗದ ತಲಾದಾಯ ಕಡಿಮೆ | ರಾಜ್ಯದ ಸರಸಾರಿ ತಲಾದಾಯ ಎಷ್ಟು ? | ಚಿತ್ರದುರ್ಗದ ತಲಾದಾಯವೆಷ್ಟು..?
ಒಂದು ಕಾಲದಲ್ಲಿ ದಲಿತ, ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿತ್ತು. ಈ ಅನ್ಯಾಯ ಸರಿಪಡಿಸಲು ಮದ್ರಾಸ್ ಪ್ರಾಂತದಲ್ಲಿ ಮುಂದಾದಾಗ ಕರ್ನಾಟಕದಲ್ಲಿ ಮೈಸೂರು ಸಂಸ್ಥಾನ ತಕ್ಷಣ ಸ್ಪಂದಿಸಿ ಮೀಸಲಾತಿ ಕಲ್ಪಿಸಿತ್ತು. ಹಿಂದುಳಿದ ವರ್ಗಗಳ ಪಾತ್ರವಿಲ್ಲದ ಸುವರ್ಣ ಮೈಸೂರು ಕಟ್ಟಲು ಸಾಧ್ಯವಿಲ್ಲ ಎನ್ನುವುದು ಗೊತ್ತಿತ್ತು. ಮೀಸಲಾತಿ ವ್ಯವಸ್ಥೆಯಿಂದ ಇಡೀ ಭಾರತಕ್ಕೆ ಲಾಭವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ಮಾತನಾಡುತ್ತಾ, ಮಠದಲ್ಲಿ ಸ್ಥಾಪಿಸಲಿರುವ ಮಾತಂಗೇಶ್ವರಿ ಸರಸ್ವತಿ, ಪಾರ್ವತಿ ಅವತಾರದಲ್ಲಿದ್ದಾರೆ. ಇದರರ್ಥ ಭವಿಷ್ಯದ ದಿನಗಳಲ್ಲಿ ಜ್ಞಾನದ ಆರಾಧನೆ ಆಗಬೇಕು. ಹೀಗಾದಾಗ ಮಾತ್ರ ದೇವರ ಆರಾಧಾನ ಫಲಪ್ರದವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನಾಲ್ವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ | ಚಿತ್ರದುರ್ಗಕ್ಕೆ ಹೊಸ AC
ಒಳಮೀಸಲಾತಿಗಾಗಿ ಅನೇಕರು ಜೀವ ತೆತ್ತಿದ್ದಾರೆ. ಆದರೆ, ಒಳಮೀಸಲಾತಿಯ ಅರ್ಥವೇ ಗೊತ್ತಿಲ್ಲದ ರಾಜಕಾರಣಿಗಳ ಕೈಯಲ್ಲಿ ನಾವಿದ್ದೇವೆ. ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿದ್ದರೂ, ಆ ಆರ್ಟಿಕಲ್ಗಳನ್ನು ಇಷ್ಟು ವರ್ಷಗಳವರೆಗೆ ಕತ್ತಲಲ್ಲಿಟ್ಟು ನಮ್ಮನ್ನು ನ್ಯಾಯಾಲಯಕ್ಕೆ ಅಲೆದಾಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದರು:
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಆದಿಜಾಂಬವ ಮಠದ ಶ್ರೀ ಷಡಾಕ್ಷರಮುನಿ ಸ್ವಾಮೀಜಿ, ಹಂಪಿ ಹೇಮಕೂಟದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಕೆಳಗೋಟೆ, ಮಾದಾರ ಚನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಹೂಡಿ ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ಲೋಕಸೇವಾ ಆಯೋಗದ ಸದಸ್ಯೆ ಡಾ.ಶಾಂತ ಹೊಸಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಅನಿತ್ ಕುಮಾರ್, ಮೈಸೂರು ಮರ್ಕಂಟೈಲ್ ಅಧ್ಯಕ್ಷರಾದ ಡಾ.ಎಚ್.ಎಸ್.ಶೆಟ್ಟಿ, ರವಿ ಮಲ್ಲಾಪುರ, ಬಿ.ಪಿ.ಪ್ರಕಾಶ್ ಮೂರ್ತಿ, ಜಡೇಕುಂಟೆ ಮಂಜುನಾಥ್, ವಿನಾಯಕ ತೊಡರನಾಳು, ನರಸಿಂಹರಾಜು, ಜಿ.ಎಚ್.ಮೋಹನ್, ರಘು ಇತರರಿದ್ದರು.
ಶರಣರ ಚೆನ್ನುಡಿ ಮಾಸಪತ್ರಿಕೆ ಲೋಕಾರ್ಪಣೆ:
ಮಾದಾರ ಚನ್ನಯ್ಯ ಗುರುಪೀಠದಿಂದ ಹೊಬರಲಿರುವ ನೂತನ ಮಾಸ ಪತ್ರಿಕೆ ʼಶರಣರ ಚೆನ್ನುಡಿʼ ಮಾಸಪತ್ರಿಕೆಯನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಗುರುಗಳಿಂದ ಗುರುಗಳಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಶ್ರೀಗಳ ಪೂರ್ವಾಶ್ರಮದಲ್ಲಿ ಅಕ್ಷರ ಕಲಿಸಿದ ಗುರುಗಳಾದ ನಿವೃತ್ತ ಶಿಕ್ಷಕರಾದ ಟಿ.ಬಸವರಾಜಪ್ಪ, ಮಸ್ರತ್ ನಾಜ್ ಬೇಗಂ, ಡಿ.ಟಿ.ವೆಂಕಟೇಶ್ ರೆಡ್ಡಿ, ಎಚ್.ಎಸ್.ಲಲಿತಮ್ಮ, ಬಸವರಾಜಪ್ಪ ಹಾಗೂ ಎ.ಆರ್.ಶಿವಮೂರ್ತಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ನಮಗೆ ಈ ಜಾಗ ಕೊಟ್ಟು ಬೆಳೆಸಿದ್ದು ಮುರುಘಾ ಮಠ, ಈ ಮಠ ಅದೇ ಪರಂಪರೆಯಲ್ಲಿ ಮುಂದುವರೆಯಬೇಕು. ಆದಿಚುಂಚನಗಿರಿ ಮಠದಿಂದ ೫೦ ಲಕ್ಷ ರೂ.ಗಳನ್ನು ನೀಡಿ ಮಠ ಕಟ್ಟಿಕೊಟ್ಟು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಮಠ ಸಮುದಾಯದ ರಾಜಕಾರಣಿಗಳನ್ನು ತಯಾರು ಮಾಡುವ ಕಾರ್ಖಾನೆ ಆಗಬೇಕು ಎನ್ನುವುದು ಆದಿಚುಂಚನಗಿರಿ ಶ್ರೀಗಳ ಅಭಿಪ್ರಾಯ. ನಾವು ಅದೇ ರೀತಿಯಲ್ಲಿರುತ್ತೇವೆ.
| ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ. ಮಾದಾರ ಚನ್ನಯ್ಯ ಗುರುಪೀಠ.
ಜನರಲ್ಲಿ ಜಾತಿ ತಾರತಮ್ಯವಿದೆ. ಆದರೆ, ನಮ್ಮ ಮಠಾಧೀಶರಲ್ಲಿ ಇಲ್ಲ. ನಾವೆಲ್ಲಾ ಒಂದೇ ತಟ್ಟಯಲ್ಲಿ ಊಟ ಮಾಡುತ್ತೇವೆ. ಹಿಂದುಳಿದ, ದಲಿತ ಮಠಾಧೀಶರಲ್ಲಿ ಒಡಕು ತರಲು ಯಾರಿಂದಲೂ ಸಾಧ್ಯವಿಲ್ಲ. ಮಾದಾರ ಚನ್ನಯ್ಯ ಶ್ರೀಗಳು ಸಾಕಷ್ಟು ಸಂಕಷ್ಟ ಅನುಭವಿಸಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
| ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಗುರುಪೀಠ.
ಬಸವಣ್ಣ ಹಾಗೂ ಅಂಬೇಡ್ಕರ್ ಈ ಸಮುದಾಯಕ್ಕೆ ನ್ಯಾಯ ಒದಗಿಸಿದ ಮಹನೀಯರು. ಬಸವಣ್ಣ ಮಾದಾರ ಚನ್ನಯ್ಯ ನಮ್ಮ ತಂದೆ ಎಂದು ಕರೆದರು. ಹುಟ್ಟಿಗೆ ಆಧ್ಯತೆ ಕೊಡುವುದಕ್ಕಿಂತ, ಬದುಕಿಗೆ ಮಹತ್ವ ಕೊಡಬೇಕು ಎನ್ನುವುದು ಬಸವಣ್ಣನವರ ಸಂದೇಶ.
| ಎಸ್.ಕೆ.ಬಸವರಾಜನ್, ಮಾಜಿ ಶಾಸಕರು.
ಮಾದರು – ಸಾದರು ಅಣ್ಣ ತಮ್ಮಂದಿರಂತೆ. ಶ್ರೀಗಳು ಸಮಾಜವನ್ನು ಉತ್ತಮವಾಗಿ ಸಂಘಟಿಸಿದ್ದಾರೆ. ಹಿಂದಿನ ದಿನಗಳಿಗಿಂತ ಈಗ ಸಾಕಷ್ಟು ಬದಲಾವಣೆ ಆಗುತ್ತಿದೆ. ಶಿಕ್ಷಣ ಪಡೆಯುತ್ತಿದ್ದಾರೆ. ಉನ್ನತ ಸ್ಥಾನಮಾನಗಳಿಗೆ ಹೋಗುತ್ತಿದ್ದಾರೆ. ಇದು ಬದಲಾವಣೆ ಸಂಕೇತ.
| ಜಿ.ಎಂ.ಸಿದ್ದೇಶ್ವರ, ಕೇಂದ್ರದ ಮಾಜಿ ಸಚಿವರು.
ಕಳೆದ 25 ವರ್ಷಗಳಲ್ಲಿ ಮಠ ಶಕ್ತಿ ಮೀರಿ ಬೆಳೆಯುತ್ತಿದೆ. ಸಮಾಜದ ವಿಚಾರ ಬಂದಾಗ ಮುಖಂಡರು ರಾಜಕಾರಣ ಬಿಟ್ಟು ಒಂದಾಗಬೇಕು.
| ಬಿ.ಎನ್.ಚಂದ್ರಪ್ಪ, ಮಾಜಿ ಸಂಸದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
