
CHITRADURGA NEWS | 04 AUGUST 2024
ಚಿತ್ರದುರ್ಗ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ, ಕಂಡು ಕೇಳರಿಯದ ದುರಂತ ಕೇರಳಾದ ವಯನಾಡ್(Wayanad) ಜಿಲ್ಲೆಯಲ್ಲಿ ನಡೆದಿದೆ. ಭಾರೀ ಮಳೆಯಿಂದ ಗುಡ್ಡ ಕುಸಿದು ನದಿಯ ದಿಕ್ಕೇ ತಪ್ಪಿ ನಾಲ್ಕು ಊರುಗಳು ಅಕ್ಷರಶಃ ಕೊಚ್ಚಿ ಹೋಗಿವೆ. ಮಳೆಯ ನೀರಿನಲ್ಲಿ ನೂರಾರು ಜನ ಹೆಣವಾಗಿ ಹೋಗಿದ್ದಾರೆ.
ಇಂತಹ ಅತೀ ದೊಡ್ಡ ದುರಂತ ನಡೆದ ಸ್ಥಳದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಓರ್ವ ಕನ್ನಡತಿ. ಮಾತ್ರವಲ್ಲ, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮನೆ ಮಗಳು ಎನ್ನುವುದು ನಮಗೆಲ್ಲಾ ಹೆಮ್ಮೆಯ ಸಂಗತಿ.
ಇದನ್ನೂ ಓದಿ: SP ಧರ್ಮೇಂದರ್ ಕುಮಾರ್ ಮೀನಾ ವರ್ಗಾವಣೆ | ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾಗಿ ನೇಮಕ
ಕಣ್ಣೂರು, ತಿರುವನಂತಪುರ, ಕಾಸರಗೋಡಿನಲ್ಲಿ ಕೆಲಸ ಮಾಡಿರುವ ಮೇಘಶ್ರೀ, ಕೇರಳಾದ ಎಸ್ಸಿ-ಎಸ್ಟಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಳೆದ ಜುಲೈ 10 ರಂದು ವಯನಾಡ್ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದೇ ತಿಂಗಳಲ್ಲಿ ಅತೀ ದೊಡ್ಡ ದುರಂತ ಎದುರಾಗಿದ್ದು, ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.

ವಯನಾಡ್ ಜಿಲ್ಲೆಯ ನಾಲ್ಕು ಗ್ರಾಮಗಳು ಕೊಚ್ಚಿ ಹೋದ ದಿನದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಡಿ.ಆರ್.ಮೇಘಶ್ರೀ, ಬೆಳಗ್ಗೆ 6 ಗಂಟೆಗೆ ಸ್ಥಳಕ್ಕೆ ಬಂದವರು ಮರುದಿನ ನಸುಕಿನ ಮೂರು ಗಂಟೆವರೆಗೆ ಕಾರ್ಯಾಚರಣೆಯ ನೇತೃತ್ವ ವಹಿಸಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬಾಲ್ಯ ವಿವಾಹ ಪ್ರಕರಣ | ಎಫ್ಐಆರ್ ದಾಖಲು
ಮೃತರ ಸಾಮೂಹಿಕ ಅಂತ್ಯಕ್ರಿಯೆ ನಡೆದಾಗಲೂ ಖುದ್ದು ಹಾಜರಿದ್ದು, ಎಲ್ಲ ಕ್ರಿಯೆಗಳನ್ನು ಮಾಡಿಸುವ ಮೂಲಕ ಕನ್ನಡತನ ಮೆರೆದಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದ ಪ್ರತಿ ಕ್ಷಣವೂ ಅಮೂಲ್ಯ. ಈ ಕ್ಷಣ ಇಲ್ಲಿದ್ದು, ಸಾಧ್ಯವಾದಷ್ಟು ಜನರ ಕೆಲಸ ಮಾಡಬೇಕು ಎನ್ನುವುದು ಮೇಘಶ್ರೀ ಅಭಿಪ್ರಾಯ.
ಹೌದು ವಯನಾಡ್ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಆರ್.ಮೇಘಶ್ರೀ ಮೂಲತಃ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರು.
ಇದನ್ನೂ ಓದಿ: ಕರ್ತೃ ಗದ್ದುಗೆಗೆ ಆ್ಯಕ್ಷನ್ ಪ್ರಿನ್ಸ್ ನಮನ | ಮುರುಘಾ ಮಠದಲ್ಲಿ ಅಭಿಮಾನಿಗಳ ದಂಡು
ಮೇಘಶ್ರೀ ಅವರ ತಂದೆ ರುದ್ರಮುನಿ, ಎಸ್ಬಿಐನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ತಾಯಿ ರುಕ್ಮಿಣಿ ದೇವಿ.
ದೊಡ್ಡೇರಿಯಲ್ಲಿರುವ ಮೇಘಶ್ರೀ ಅವರ ತಂದೆ ರುದ್ರಮುನಿ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಕಳೆದ ಸೋಮವಾರದವರೆಗೆ ನಾನು ವಯನಾಡ್ನಲ್ಲಿದ್ದೆ. ಅಂದು ಮಧ್ಯಾಹ್ನ ಬೆಂಗಳೂರಿಗೆ ಬಂದೆ. ಈ ಘಟನೆ ಮಧ್ಯರಾತ್ರಿ ನಡೆದಿದೆ. ಕೆಲವೇ ಕ್ಷಣಗಳಲ್ಲಿ ಮಗಳು ಮೇಘಶ್ರೀ ಸ್ಥಳಕ್ಕೆ ಧಾವಿಸಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ: ಅಭಿಮಾನಿಗೆ ಸಮಾಧಾನ ಮಾಡಿದ ಧ್ರುವ ಸರ್ಜಾ | ಸೆಲ್ಫಿ ಕ್ಲಿಕ್..ಕ್ಲಿಕ್
ತುರ್ತು ಪರಿಸ್ಥಿತಿಯಲ್ಲಿ ನನ್ನ ಮಗಳು ಮೇಘಶ್ರೀ ವಯನಾಡಿನ ಜನರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾಳೆ ಈ ಕ್ಷಣ ಕಷ್ಟವಾದರೂ ಹೆಮ್ಮೆ ಅನ್ನಿಸುತ್ತದೆ. ಅಲ್ಲಿನ ಪರಿಸ್ಥಿತಿ ನೆನೆಸಿಕೊಂಡಾಗ ಆತಂಕವಾಗುತ್ತದೆ. ನನ್ನ ಮಗಳ ಒತ್ತಡದ ಪರಿಸ್ಥಿತಿ ಕಂಡಾಗಲೂ ಉದ್ವಿಗ್ನಗೊಳ್ಳುತ್ತೇನೆ. ಆದರೆ, ಒಬ್ಬ ದೇಶದ ಪ್ರಜೆಯಾಗಿ ಜನ ಸಂಕಷ್ಟದಲ್ಲಿದ್ದಾಗ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದ್ದೇನೆ ಎಂದರು.
ವಯನಾಡಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೂಡಾ ಮೇಘಶ್ರೀ ಕರ್ತವ್ಯ ನಿಷ್ಠೆಗೆ ತಬ್ಬಿ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ವಿವಿ ಸಾಗರ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ
ಸದ್ಯ ನನ್ನ ಮಗಳು ಕರ್ತವ್ಯದಲ್ಲಿದ್ದು, ಮಕ್ಕಳನ್ನು ಅಳಿಯ ನೋಡಿಕೊಳ್ಳುತ್ತಿದ್ದಾರೆ. ಮೊಮ್ಮಕ್ಕಳನ್ನು ನೋಡಿಕೊಳ್ಳಲು ಮೂರು ದಿನಗಳಲ್ಲಿ ನಾನು ಅಲ್ಲಿಗೆ ತೆರಳುತ್ತೇನೆ ಎಂದು ರುದ್ರಮುನಿ ಹೇಳಿದರು.

ನೀವು ಗಾಬರಿ ಆಗಬೇಡಿ, ನಮಗೆ ಎಲ್ಲಾ ರೀತಿಯ ರಕ್ಷಣೆ ಇರುತ್ತದೆ ಎಂದು ಮೇಘಶ್ರೀ ತನ್ನ ಕುಟುಂಬಕ್ಕೆ ಹೇಳಿ ಕಾರ್ಯನಿರತರಾಗಿದ್ದಾರೆ.
ಖಾಸಗಿ ಉದ್ಯೋಗ ತೊರೆದು ಡಿಸಿಯಾದ ಮೇಘಶ್ರೀ:
ದೊಡ್ಡೇರಿಯ ಮೇಘಶ್ರೀ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದಿದ್ದಾರೆ. ಮರ್ನಾಲ್ಕು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ಖಾಸಗಿ ಉದ್ಯೋಗ ತೊರೆದು ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.
ಇದನ್ನೂ ಓದಿ: ಯಾದಗಿರಿಯ PSI ಪರಶುರಾಮ್ ಸಾವು | CBI ತನಿಖೆಗೆ ವಹಿಸುವಂತೆ ಕರುನಾಡ ವಿಜಯಸೇನೆಯಿಂದ ಒತ್ತಾಯ
2016ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದರು. ಅವರಿಗೆ ಈಗ ಎರಡೂವರೆ ವರ್ಷದ ವಿಸ್ಮಯಾ ಹಾಗೂ 6 ತಿಂಗಳ ಧೃತಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಮೇಘಶ್ರೀ ಅವರ ಪತಿ ವಿಕ್ರಂ ಸಿಂಹ, ಹರ್ತಿಕೋಟೆ ವೀರೇಂದ್ರ ಸಿಂಹ ಅವರ ಪುತ್ರ. ಸದ್ಯ ವಿಕ್ರಂ ಸಿಂಹ ವಿಜ್ಞಾನಿಯಾಗಿದ್ದು ಕೇರಳಾದಲ್ಲೇ ನೆಲೆಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
