
CHITRADURGA NEWS | 24 DECEMBER 2025
ಚಿತ್ರದುರ್ಗ: ಸೂಕ್ಷ್ಮಜೀವಾಣುಗಳಿರುವ ಕಾಂಪೋಷ್ಟ್ ಕಲ್ಚರ್ ಬಳಸಿ ಮೌಲ್ಯಯುತ ಸಾವಯವ ಗೊಬ್ಬರವಾಗಿ ಪರಿವರ್ತಿಸಬಹುದಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ.ಆರ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 24 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಭರಮಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ವತಿಯಿಂದ ಆಯೋಜಿಸಲಾದ ಕೃಷಿಯಲ್ಲಿ ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಬಳಕೆ ಮತ್ತು ಅಡಿಕೆ ಸಿಪ್ಪೆ ಕಾಂಪೋಸ್ಟಿಂಗ್ ಕುರಿತ ಹೊರಾಂಗಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಡಿಕೆ ಬೆಳೆಯು ಪ್ರಮುಖ ತೋಟಗಾರಿಕಾ ವಾಣಿಜ್ಯ ಬೆಳೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ಇದರ ವಿಸ್ತೀರ್ಣ ದುಪ್ಪಟ್ಟಾಗಿದೆ. ಅಡಿಕೆ ಸಿಪ್ಪೆಯು ಕೊಳೆಯಲು 2-3 ವರ್ಷಗಳು ಬೇಕಾಗಿರುವುದರಿಂದ ರೈತರು ಇದರ ವಿಲೇವಾರಿಗೆ ಇದನ್ನು ಸುಡುವುದು, ರಸ್ತೆ ಬದಿ ಹಾಕುವುದು ಮತ್ತು ಕೆರೆಗಳಿಗೆ ಸುರಿಯುತ್ತಿರುವುದರಿಂದ ನೀರು ಮತ್ತು ಪರಿಸರ ಮಾಲಿನ್ಯವಾಗುತ್ತಿದೆ.
ಜೈವಿಕ ಗೊಬ್ಬರಗಳು ಎಂದರೆ ಸಜೀವ ಸೂಕ್ಷ್ಮಜೀವಿಗಳನ್ನು ಒಳಗೊಂಡ ಗೊಬ್ಬರಗಳು. ಇವು ಮಣ್ಣಿನಲ್ಲಿ ಪೋಷಕಾಂಶಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನ ಜೀವಶಕ್ತಿ ಹೆಚ್ಚಿಸುತ್ತವೆ, ರಾಸಾಯನಿಕ ಗೊಬ್ಬರ ಅವಲಂಬನೆ ಕಡಿಮೆಮಾಡಿ ಕೃಷಿಯ ವೆಚ್ಚವನ್ನು ತಗ್ಗಿಸುತ್ತವೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಸಜೀವ ಮಣ್ಣು ಉಳಿಸಲು ಮತ್ತು ಸುಸ್ಥಿರ ಇಳುವರಿ ಪಡೆಯಲು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ರೈತರು ಆದ್ಯತೆ ನೀಡುವಂತೆ ರಜನೀಕಾಂತ.ಆರ್ ಕೋರಿದರು.
ಇದನ್ನೂ ಓದಿ: ಸಾರಿಗೆ ರಹದಾರಿ ಕುರಿತು ಚರ್ಚಿಸಲು RTO ಸಭೆ
ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ರೈತರು ಬಲಿಷ್ಠರಾಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ ಎಂದು ನಂಬಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರೈತರ ಸಬಲೀಕರಣಕ್ಕಾಗಿ ಹಲವು ಕಾನೂನು, ಕೃಷಿ ಸುಧಾರಣೆಗಳು, ನೀತಿಗಳನ್ನು ರೂಪಿಸಿದ್ದರು. ಇವರ ಗೌರವಾರ್ಥವಾಗಿ 2001 ರಲ್ಲಿ ಭಾರತ ಸರ್ಕಾರವು ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ರಾಷ್ಟ್ರೀಯ ರೈತರ ದಿನವನ್ನು ಆಚರಿಸುತ್ತಾ ಬರಲಾಗುತ್ತದೆ ಎಂದು ರಜನೀಕಾಂತ.ಆರ್ ತಿಳಿಸಿದರು.
ತುಮಕೂರಿನ ಮಲ್ಟಿಪ್ಲೇಕ್ಸ ಬಯೋಟೆಕ್ ಪ್ರೈ ಲಿ ನ ತಾಂತ್ರಿಕ ಮುಖ್ಯಸ್ಥ ಎಸ್.ಕುಮಾರ್ ಮತ್ತು ಗಿರಿಧರ್.ಜಿ, ಕೆನರಾ ಬ್ಯಾಂಕಿನ ಹಣಕಾಸು ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕ ವಿ.ತಿಪ್ಪೇಸ್ವಾಮಿ ರೈತರಿಗೆ ಅರಿವು ಮೂಡಿಸಿದರು.
ಕೋಗುಂಡೆ ಗ್ರಾಮದ ರೈತರಾದ ಹೆಚ್ ಸಿ ಲೋಕೇಶ್ ಇವರು ತಮ್ಮ ಅನುಭವವನ್ನು ಹಂಚಿಕೊಂಡರು. ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಾಯಿತು.
ಇದನ್ನೂ ಓದಿ: ವಿಕಲಚೇತನರಿಗೆ ಬಸ್ ಪಾಸ್ | ಅರ್ಜಿ ಅಹ್ವಾನ
ಕಾರ್ಯಕ್ರಮದಲ್ಲಿ ಅಖಂಡ ಕರ್ನಾಟಕದ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾಂತ ಅಶೋಕ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಪೂರ್ಣಶ್ರೀ ಎಂ ಬಡಿಗೇರ, ಕೃಷಿ ಅಧಿಕಾರಿ ಪವಿತ್ರಾ.ಎಂ.ಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿನಯ್, ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರಾದ ಚಿಕ್ಕಬೆನ್ನೂರಿನ ಕೆ ಸಿ ಕುಮಾರ್, ಕೋಡಿ ರಂಗವ್ವನಹಳ್ಳಿಯ ಜಿ ಸಿ ಶಿವಕುಮಾರ್, ಚೌಲಿಹಳ್ಳಿಯ ಶೈಲೇಶ್ ಕುಮಾರ್, ಪ್ರಶಾಂತ್ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ ಆಸಕ್ತ 85 ಕ್ಕೂ ಹೆಚ್ಚಿನ ರೈತ ಮಹಿಳೆಯರು ಮತ್ತು ರೈತರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
