
CHITRADURGA NEWS | 21 SEPTEMBER 2024
ಚಿತ್ರದುರ್ಗ: 1946ರಲ್ಲೇ ಸಿರಿಗೆರೆ ಮಠದಲ್ಲಿ ಎಲ್ಲಾ ಜಾತಿಯ ಜನರೊಡನೆ ಸಹಪಂಕ್ತಿ ಭೋಜನ ಆರಂಭಿಸಿ ಸಮಾಜದ ಜನರ ಸಿಟ್ಟಿಗೆ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಗುರಿಯಾಗಿದ್ದರು. ಅಕ್ಕನ ಬಳಗ ಮತ್ತು ಕಲಾಸಂಘಗಳ ಮೂಲಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಲು ಅವಿಶ್ರಾಂತವಾಗಿ ದುಡಿದರು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀಗಳ 32ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘1940ರಲ್ಲಿ ಮಠದ ಆಡಳಿತ ಚುಕ್ಕಾಣಿ ಹಿಡಿದ ಶ್ರೀಗಳು ಸಮಾಜದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದರು. 1946ರಲ್ಲೇ ಮಠದಲ್ಲಿ ಎಲ್ಲಾ ಜಾತಿಯ ಜನರೊಡನೆ ಸಹಪಂಕ್ತಿ ಭೋಜನ ಆರಂಭಿಸಿ ಸಮಾಜದ ಜನರ ಸಿಟ್ಟಿಗೆ ಗುರಿಯಾಗಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ತಾವು ನಂಬಿದ್ದ ಆದರ್ಶಗಳನ್ನು ಮುಂದುವರಿಸಿದರು’ ಎಂದರು.
‘ಪಂಚೆ ಕಟ್ಟಿಕೊಂಡು ಕಟ್ಟಡ ನಿರ್ಮಾಣ ಕೆಲಸದಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಾಡಿಗೆ ಹೋಗಿ ಸೌದೆ ತಂದು ಶಾಲಾ ವಿದ್ಯಾರ್ಥಿಗಳ ದಾಸೋಹಕ್ಕೆ ನೆರವಾಗುತ್ತಿದ್ದರು. ಅಧ್ಯಾತ್ಮ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಅವರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದರು’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ‘ಕರ್ನಾಟಕದಲ್ಲಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹಕ್ಕೆ ವಿಶೇಷ ಕೊಡುಗೆ ನೀಡಿದ್ದು ವೀರಶೈವ ಮಠಗಳು. ತರಳಬಾಳು ಮಠದ ಶಿವಕುಮಾರ ಶ್ರೀಗಳು ನಾಡಿನ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು’ ಎಂದರು.
ಕ್ಲಿಕ್ ಮಾಡಿ ಓದಿ: ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ | ನೋಂದಣಿಗೆ ಅವಕಾಶ
‘ಶ್ರೀಗಳು ಕಠೋರ ನಡೆ ನುಡಿಯುಳ್ಳವರಾಗಿದ್ದರು. ಹೃದಯಾಂತರಾಳದಲ್ಲಿ ಕೋಮಲವಾಗಿದ್ದರು. ಅಸತ್ಯದಿಂದ ಸತ್ಯದ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ದ ಗುರುವಾಗಿದ್ದರು’ ಎಂದು ತಿಳಿಸಿದರು.
ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹ ಮೂರ್ತಿ ಮಾತನಾಡಿ, ‘ವಚನ ಸಾಹಿತ್ಯ ಓದಲು ಯಾರ ನೆರವೂ ಬೇಡ. ಇದರಷ್ಟು ನೇರವಾದ ಮತ್ತು ಕಳಕಳಿಯುಳ್ಳ ಸಾಹಿತ್ಯ ಮತ್ತೊಂದಿಲ್ಲ. ವಚನ ಸಾಹಿತ್ಯವನ್ನು ಜಗತ್ತಿಗೆ ತಲುಪಿಸುವಲ್ಲಿ ತರಳಬಾಳು ಮಠದ ಕೊಡುಗೆ ಅಪಾರ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅದನ್ನು ಮುಂದುವರಿಸಿಕೊಂಡು ಬಂದಿದ್ದು, 22,000 ವಚನಗಳನ್ನು ಅಂತರ್ಜಾಲಕ್ಕೆ ಅಳವಡಿಸಿದ್ದಾರೆ’ ಎಂದು ಹೇಳಿದರು.
ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಬಸವಣ್ಣನವರ ತತ್ವಗಳನ್ನು ಆದರ್ಶಮಯವಾಗಿ ಪಾಲನೆ ಮಾಡಿದ ಶ್ರೀಗಳಲ್ಲಿ ಶಿವಕುಮಾರ ಶ್ರೀ ಅಗ್ರಗಣ್ಯರು. ಅವರು ಗ್ರಾಮಾಂತರ ನಾಡಿನಲ್ಲಿ ಅಕ್ಷರಕ್ರಾಂತಿ ಮಾಡಿದ ಶಕ್ತಿಯಾಗಿದ್ದರು. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವಂತಹ ಕೆಲಸ ತರಳಬಾಳು ಮಠದಿಂದ ಆಗಿದೆ’ ಎಂದು ತಿಳಿಸಿದರು.
‘ಧಾರ್ಮಿಕ ವಿಚಾರಗಳಿಗೆ ಸೀಮಿತವಾಗದೆ ಜನರ ಬದುಕಿಗೆ ಬೇಕಾದ ಎಲ್ಲಾ ರಂಗಗಳಲ್ಲಿಯೂ ತರಳಬಾಳು ಮಠ ಕೆಲಸ ಮಾಡುತ್ತಿದೆ. ತ್ರಿವಿಧ ದಾಸೋಹದ ಜೊತೆಗೆ ನ್ಯಾಯದಾನದ ಕೆಲಸ ನಡೆಯುತ್ತಾ ಬಂದಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಆದ್ರಿಕಟ್ಟೆಯ ಬಸವರಾಜ್ ಗಿರಿಯಾಪುರ, ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
