CHITRADURGA NEWS | 04 MAY 2026
ಚಿತ್ರದುರ್ಗ: ಮಾಸ್ ಲೀಡರ್ ಸಿದ್ದರಾಮಯ್ಯ ಅಲ್ಲ. ಅದು ಯಡಿಯೂರಪ್ಪ. ಸಿದ್ದರಾಮಯ್ಯ ಅವರು ಒಂದು ಪಕ್ಷದಲ್ಲಿದ್ದು ಮತ್ತೊಂದು ಪಕ್ಷ ಸೇರಿ ಅಲ್ಲಿ ಮುಖ್ಯಮಂತ್ರಿಯಾದವರು. ಆದರೆ, ಒಂದೇ ಪಕ್ಷದಲ್ಲಿದ್ದು, ಅದನ್ನು ತಳಹಂತದಿಂದ ವಿಧಾನಸಭೆವರೆಗೆ ತಂದು ನಾಯಕರಾದವರು, ಜನನಾಯಕರಾದವರು ಯಡಿಯೂರಪ್ಪ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ನ್ಯಾಯಾಧೀಶರ ವರ್ಗಾವಣೆ | ವಕೀಲರ ಸಂಘದಿಂದ ಬೀಳ್ಕೊಡುಗೆ
ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದ ರಾಜಕಾರಣದ ದಿಕ್ಕನ್ನು ಬದಲಾವಣೆ ಮಾಡಿದ ನಾಯಕ ಬಿ.ಎಸ್. ಯಡಿಯೂರಪ್ಪ. ಅವರು ರಾಜ್ಯದ ಮಾಸ್ ಲೀಡರ್ ಎಂದು ಬಣ್ಣಿಸಿದರು.
ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಹೊಸ ದಾಖಲೆ ನಿರ್ಮಿಸುವ ಕಾರ್ಯಕ್ರಮ ಆಗಲಿದೆ. ಹತ್ತು ಲಕ್ಷ ಜನಸೇರಲಿದ್ದಾರೆ. ಇದನ್ನು ನೋಡಲು ಎರಡು ಕಣ್ಣು ಸಾಲದು. ಇದು ಇಡೀ ಭಾರತಕ್ಕೆ ಹೊಸ ದಾಖಲೆಯಾಗಲಿದೆ ಎಂದು ಹೇಳಿದರು.
ಮೇ ಅಂತ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸುವ ತೀರ್ಮಾನ ಮಾಡಿದ್ದೆವು. ಗೃಹ ಸಚಿವ ಅಮಿತ್ ಶಾ ಅವರು ಮೇ 9 ರಂದು ಬರಲು ಒಪ್ಪಿಗೆ ನೀಡಿದ್ದರಿಂದ ಅಂದೇ ಆಯೋಜಿಸಿದೆವು. ಮೇ 9 ರಂದು ಕಾಂಗ್ರೆಸ್ನ ಸೂರ್ಯ ಅಸ್ತಂಗತವಾಗುವ ಸಮಯ. ಅಂದು ಬಿಜೆಪಿಯ ಕಮಲ ಅರಳುವ ಸಮಯ ಎಂದು ಮಾರ್ಮಿಕವಾಗಿ ನುಡಿದರು.
ಬದಲಾವಣೆ ಬೇಕಾದರೆ ಪ್ರಬಲವಾದ ಕಾರಣ ಬೇಕು. ಈಗ ಅಭಿಮಾನೋತ್ಸವವೇ ಕಾರಣವಾಗಿದೆ. ಇದನ್ನು ಆಯೋಜಿಸಲು ಎಲ್ಲರೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸುಪ್ರೀಂಕೋರ್ಟ್ನಲ್ಲಿ ಬಾಕಿ ಇರುವ ಜಿಲ್ಲೆಯ 58 ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ
ನಾವೆಲ್ಲ ಸಾರ್ವಜನಿಕ ಜೀವನದಲ್ಲಿ ಬಹಳ ಆದರ್ಶಗಳನ್ನು ಇಟ್ಟುಕೊಂಡು ಬಂದಿರುತ್ತೇವೆ. ಅಧಿಕಾರ ಸಿಕ್ಕಾಗ ಅಧಿಕಾರ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಕಾಂಪ್ರಮೈಸ್ ಮಾಡಿಕೊಳ್ಳುತ್ತೇವೆ. ಅಧಿಕಾರ ನಮಗೆ ಮಾಡಿಕೊಂಡಿರುವ ಮಡದಿಯಂತೆ. ಆದರ್ಶಗಳೇ ನಮಗೆ ಮುಖ್ಯ. ಅಧಿಕಾರ ಬಂದ ನಂತರ ಆದರ್ಶಗಳನ್ನು ಮರೆಯುತ್ತೇವೆ. ಆದರೆ ಕೆಲವೇ ಕೆಲವು ಜನ ಅಧಿಕಾರ ಬಂದಾಗಲೂ ಆದರ್ಶಗಳನ್ನು ಮರೆಯದೇ ಅಧಿಕಾರವನ್ನು ಆದರ್ಶ ಪರಿಪಾಲನೆಗೆ ಬಳಸಿಕೊಂಡವರು ಇದ್ದಾರೆ. ಅಂತಹ ವಿರಳ ನಾಯಕರಲ್ಲಿ ಬಿಎಸ್ವೈ ಒಬ್ಬರು ಎಂದರು.
ಬಿಎಸ್ವೈ ಅವರನ್ನು ನಾವು ರೈತ ನಾಯಕ, ಹೋರಾಟಗಾರ ಎನ್ನುತ್ತೇವೆ. ಆದರೆ, ಅವರ ಇನ್ನೊಂದು ಮುಖ ಅತ್ಯಂತ ಮಾನವೀಯತೆ ಇರುವವರು. ಅಪರೂಪದ ಸೂಕ್ಷ್ಮಾತಿಸೂಕ್ಷ್ಮ ನಾಯಕ ಅವರು. ಹಿಡಿದ ಕೆಲಸ ಮಾಡೇ ತೀರುವ ಅಪರೂಪದ ನಾಯಕ. ಅವರ ಜೊತೆ ಕೆಲಸ ಮಾಡುವ ಸೌಭಾಗ್ಯ ನಮ್ಮದು. ಅವರು ಬಹಳ ಜನರ ಬದುಕಿಗೆ ದಾರಿ ಮಾಡಿದ್ದಾರೆ. ಬಹಳ ಜನರ ಬದುಕಿಗೆ ಬೆಳಕು ನೀಡಿದ್ದಾರೆ, ಸಹಾಯ ಮಾಡಿದವರು ಎಂದು ಹೇಳಿದರು.
ಕೃತಜ್ಞತೆ ಎಂಬುದು ಮನುಷ್ಯನಿಗೆ ಬೇಕಾದ ಅತ್ಯಂತ ದೊಡ್ಡ ಗುಣ. ಯಡಿಯೂರಪ್ಪ ಎಂಬ ಮಹಾನಾಯಕನಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಯಡಿಯರಪ್ಪ ಅವರು ಕಂಡ ಕನಸಿನ ಸಾಕಾರವನ್ನು ನಾವೆಲ್ಲ ಮಾಡೋಣ. ವಿಧಾನಸೌಧದಲ್ಲಿ ಕಮಲದ ಧ್ವಜ ಹಾರಿಸುವ ಸಂಕಲ್ಪ ಮಾಡೋಣ. ಇದಕ್ಕಾಗಿ ನಾವೆಲ್ಲ ಕೆಲಸ ಮಾಡೋಣ ಎಂದು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಜೂರು | ಆಡಳಿತಾತ್ಮಕ ನ್ಯಾಯಮೂರ್ತಿ ವಿ.ಶ್ರೀಶಾನಂದ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಚಾಮರಾಜನಗರದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮಾರನೇ ದಿನವೇ ಹೆಲಿಕಾಪ್ಟರ್ ಬುಕ್ ಮಾಡಿಸಿ ಮೃತ ಕಾರ್ಯಕರ್ತನ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಂತಹ ಮಾನವೀಯತೆಯ ಹೃದಯ ಅವರದ್ದ ಎಂದು ಸ್ಮರಿಸಿದರು.
ಬೆಂಗಳೂರಿನಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಅಭಿಮಾನಿಗಳು, ಕಾರ್ಯಕರ್ತರು ದೂರದ ಊರಿನಿಂದ ಬಂದಿದ್ದರೆ ಅವರಿಗೆ ಏನಾದರೂ ಅನಾನುಕೂಲವಾಗಿದೆಯೇ ಎಂದು ಪರಿಶೀಲಿಸುತ್ತಿದ್ದರು. ಬಂದವರು ಮರಳುವಾಗ ಏನಾದರೂ ಆಗಿದೆಯೇ ಎಂದು ಕೇಳುತ್ತಿದ್ದರು. ನಾಲ್ಕು ಬಾರಿ ಸಿಎಂ ಆದರೂ ಕಾರ್ಯಕರ್ತರ ಮೇಲೆ ಅದೇ ಕಾಳಜಿ, ಪ್ರೇಮ, ಅಭಿಮಾನ ಇಟ್ಟುಕೊಂಡಿರುತ್ತಿದ್ದರು ಎಂದು ವಿವರಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
