ಮುಖ್ಯ ಸುದ್ದಿ
ಐದು ಗ್ಯಾರೆಂಟಿ ನಿಲ್ಲಿಸಿ, ಕಾಮಗಾರಿ ಬಿಲ್ ಪಾವತಿಸಿ | ಕಟ್ಟಡ ನಿರ್ಮಾಣ ಕಾರ್ಮಿಕರ ಆಗ್ರಹ

ಚಿತ್ರದುರ್ಗ ನ್ಯೂಸ್.ಕಾಂ: ಮಾಡಿರುವ ಕಾಮಗಾರಿಗಳ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಪ್ರಾಣ ಕಳೆದುಕೊಳ್ಳುವ ಆತಂಕದ ಸ್ಥಿತಿಯಲ್ಲಿದ್ದಾರೆ. ಕೂಡಲೇ ಸರ್ಕಾರ ಅವರ ಬಿಲ್ ಪಾವತಿ ಮಾಡಬೇಕು.
ರಾಜ್ಯ ಸರ್ಕಾರ ಉಚಿತ ಐದು ಗ್ಯಾರೆಂಟಿಗಳನ್ನು ನಿಲ್ಲಿಸಿ ಬಿಲ್ ಪಾವತಿ ಮಾಡಲಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ರಾಜ್ಯಾದ್ಯಂತ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರಿವೆಂಟರಿ ಹೆಲ್ತ್ ಕೇರ್ ಯೋಜನೆ ಜಾರಿಗೊಳಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಬಿಡುಗಡೆ ಆಗಿರುವ ಸೆಸ್ ಹಣವನ್ನು ಹಿಂಪಡೆದು ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಕಂಪ್ಯೂಟರ್ ಸೆಂಟರ್ಗಳಲ್ಲಿ ಕಟ್ಟಡ ಕಾರ್ಮಿಕರ ನೊಂದಣಿಯನ್ನು ನಿಲ್ಲಿಸಬೇಕು. ನೊಂದಾಯಿತ ಕಾರ್ಮಿಕ ಸಂಘಟನೆಗಳಿಗೆ ಕಟ್ಟಡ ಕಾರ್ಮಿಕರ ನೊಂದಣಿ ಹಾಗೂ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು. ಬೋಗಸ್ ನೊಂದಣಿ ರದ್ದಾಗಬೇಕು. ಸೆಸ್ ವಸೂಲಿಗೆ ಪ್ರಾಧಿಕಾರ ರಚನೆಯಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೋಟೆ ನಾಡಿನ ಮನೆ ಮನೆಗೆ ತಲುಪಲಿದೆ ಅಯೋಧ್ಯೆಯ ಮಂತ್ರಾಕ್ಷತೆ
ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಎಲ್ಲಾ ಕಾಮಗಾರಿಗಳನ್ನು ಮೌಲ್ಯಮಾಪನಗೊಳಿಸಲು ಅಧಿಕಾರಿಗಳನ್ನು ತಕ್ಷಣ ನೇಮಕ ಮಾಡಿ ಶೇ.2 ರಷ್ಟು ಬಡ್ಡಿಸಹಿತ ಸೆಸ್ ವಸೂಲಿ ಮಾಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಶೇ.70 ರಷ್ಟು ಕಡಿತಗೊಳಿಸಿದ್ದು, ಈ ಹಿಂದೆ ನೀಡುತ್ತಿದ್ದಂತೆ ವಿದ್ಯಾರ್ಥಿ ವೇತನವನ್ನು ಮಕ್ಕಳಿಗೆ ನೀಡಬೇಕು.
ನೊಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ ಐದು ಲಕ್ಷ ರೂ.ಗಳ ಪರಿಹಾರ ನೀಡಬೇಕು. ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷ ರೂ.ಗಳನ್ನು ಕೊಡಬೇಕು. ಪ್ರತಿ ತಿಂಗಳು ಐದು ಸಾವಿರ ರೂ.ಪಿಂಚಣಿ ನೀಡಬೇಕು. ಟೈಲ್ಸ್ ಮತ್ತು ವೆಲ್ಡಿಂಗ್ ಕೆಲಸಗಾರರಿಗೆ ಟೂಲ್ ಕಿಟ್ ಬದಲು ಐದು ಸಾವಿರ ರೂ. ಧನ ಸಹಾಯ ಮಾಡಬೇಕು ಎಂದು ಹೇಳಿದರು.
ಹೆರಿಗೆ ಭತ್ಯೆ ನಗದು ನೇರ ವರ್ಗಾವಣೆ ಐವತ್ತು ಸಾವಿರ ರೂ. ಹಾಗೂ ವಿವಾಹಕ್ಕೆ ಒಂದು ಲಕ್ಷ ರೂ. ನೀಡಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷ ಕೆ.ಗೌಸ್ಪೀರ್, ಖಜಾಂಚಿ ಡಿ.ಈಶ್ವರಪ್ಪ, ನರಸಿಂಹಸ್ವಾಮಿ, ನಾದಿಆಲಿ, ಇಮಾಮ್ ಮೊಹಿದ್ದೀನ್, ಚಾಂದ್ಪೀರ್, ಮಹಾಂತೇಶ್, ವೈ.ಬಸವರಾಜ್, ಸಲೀಂ, ಫೈರೋಜ್, ತಿಮ್ಮಯ್ಯ, ತಿಪ್ಪೇಸ್ವಾಮಿ, ರಾಜಣ್ಣ, ಪ್ರಸನ್ನ, ರಫಿ, ಗೌಸ್ಖಾನ್, ರಾಜಪ್ಪ, ರಘು ಮತ್ತಿತರರು ಪ್ರತಿಭಟನೆಯಲ್ಲಿದ್ದರು.
