
CHITRADURGA NEWS | 10 JULY 2024
ಚಿತ್ರದುರ್ಗ: ಸಮಾಜದಲ್ಲಿ ಶಾಂತಿ ನೆಲೆಸಲು ಸಾಮಾಜಿಕ ಮೌಲ್ಯಗಳಾದ ಸಂತೃಪ್ತಿ ಮತ್ತು ಮಾನವತಾವಾದವನ್ನು ಬೆಳೆಸಲು ಎಲ್ಲಾ ಪ್ರಯತ್ನಗಳು ನಡೆಯಬೇಕು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ (Law College) ಆಯೋಜಿಸಿದ್ದ ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮ ಕುರಿತು ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ರೋಗಗಳಿಗೆ ಮದ್ದು ಇದೆ. ಆದರೆ ಮನುಷ್ಯನ ದುರಾಸೆಗಳಿಗೆ ಮದ್ದು ಇಲ್ಲ. ನಿರಂತರವಾಗಿ ಹೆಚ್ಚುತ್ತಿರುವ ದುರಾಸೆಯ ಹಳಿಯಿಂದ ಹೊರಬರುವ ಏಕೈಕ ಮಾರ್ಗವೆಂದರೆ ತೃಪ್ತಿಯ ಮೌಲ್ಯವನ್ನು ಬೆಳೆಸುವುದು ಎಂದರು.

ಕಳೆದ ಹಲವು ದಶಕಗಳಲ್ಲಿ ದೇಶದಲ್ಲಿ ಸಾಕಷ್ಟು ಭ್ರಷ್ಟಚಾರ, ಹಗರಣಗಳು ನಡೆದು ಸಾರ್ವಜನಿಕರ ಕೋಟಿಗಟ್ಟಲೇ ಹಣ ಲೂಟಿಯಾಗಿದೆ. ಪ್ರತಿಯೊಬ್ಬರು ಹಣಗಳಿಸಿ ಶ್ರೀಮಂತರಾಗಿ. ಆದರೆ ಇವೆಲ್ಲವೂ ಕಾನೂನು ಪ್ರಕಾರ ನಡೆಯಬೇಕು. ಸಮಾಜದಲ್ಲಿ ಬದಲಾವಣೆ ತರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಅಖಿಲ ಭಾರತ ವೀರಶೈವ ಮಹಾಸಭಾ | ಡಿ.ಕೆ.ಆರ್.ಗ್ರೂಪ್ ಮಂಜುನಾಥ್ ಆಯ್ಕೆ
ದುರಾಸೆಯ ಸಂಪತ್ತು ಎಂದಿಗೂ ಖುಷಿ ಕೊಡುವುದಿಲ್ಲ. ಶ್ರೀಮಂತರೆಲ್ಲರೂ ಜೀವನದಲ್ಲಿ ಖುಷಿಯಾಗಿರುತ್ತಾರೆ ಎಂದು ಭಾವಿಸಬೇಕಿಲ್ಲ. ಇರುವುದರಲ್ಲಿ ಸಂತೃಪ್ತಿ ಪಡುವ ಗುಣ ಬೆಳೆಸಿಕೊಳ್ಳಬೇಕು. ತೃಪ್ತಿ ಇಲ್ಲದಿದ್ದಲ್ಲಿ ದೇಶ ಮುಂದೊಂದು ದಿನ ಸಂಕಟ ಎದುರಿಸಬೇಕಿದೆ. ದೇಶದಲ್ಲಿ ಭಾಷೆ, ಧರ್ಮ ವಿಚಾರದಲ್ಲಿ ಏನೆಲ್ಲಾ ವಿವಾದಗಳು ನಡೆಯುತ್ತಿವೆ ಎಂಬುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಇದೇ ಪ್ರವೃತ್ತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಜೀವನ ಕಷ್ಟವಾಗಲಿದೆ ಎಂದರು.
ಲೋಕಾಯುಕ್ತಕ್ಕೆ ಬರುವುದಕ್ಕೂ ಮುಂಚೆ ಸಮಾಜದಲ್ಲಿನ ಅನ್ಯಾಯದ ಬಗ್ಗೆ ಅರಿವು ಇರಲಿಲ್ಲ. ನಾನು ಸುಖವಾದ ಜೀವನ ನಡೆಸುತ್ತಿದ್ದೆ, ಜನರು ಸಹ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ ಎಂದು ಭಾವಿಸಿದ್ದೆ. ಆದರೆ ಲೋಕಾಯುಕ್ತನಾದ ನಂತರ ಆಡಳಿತದ ವಿವಿಧ ಹಂತಗಳಲ್ಲಿ ಭ್ರಷ್ಠಚಾರ ಮತ್ತು ಲಂಚದಿಂದ ಜನರು ಅನುಭವಿಸುತ್ತಿರುವ ನೋವನ್ನು ಹತ್ತಿರದಿಂದ ಕಂಡೆ. ಆ ವ್ಯವಸ್ಥೆಯನ್ನು ಹೋಗಲಾಡಿಸಲು ಕೆಲಸ ಮಾಡಿದೆ. ಸಾರ್ವಜನಿಕರು ಸರ್ಕಾರಿ ನೌಕರರನ್ನು ಸಾಹೇಬರು ಎಂದು ಸಂಬೋಧಿಸಬಾರದು. ಸರ್ಕಾರಿ ನೌಕರರು ಜನರ ಸೇವಕರು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಕಳೆದುಕೊಂಡಿದ್ದ 80 ಮೊಬೈಲ್ ಹುಡುಕಿಕೊಟ್ಟ ಪೊಲೀಸರು
ರಾಜಕೀಯವನ್ನು ವೈಯಕ್ತಿಕ ಲಾಭ ಹಾಗೂ ತನ್ನ ಇಚ್ಚಾಪೂರ್ವಕವಾಗಿ ಬಳಸಿಕೊಳ್ಳಬಾರದು. ರಾಜಕೀಯ ಪ್ರವೇಶವು ಜೀವನ ಮಾಡುವ ಉದ್ದೇಶ ಹೊಂದಿರಬಾರದು. ಅದು ಜನರ ಸೇವೆಗೆ ಬಳಕೆಯಾಗಬೇಕು. ಬಿಹಾರದಲ್ಲಿ ಏಳು ಸೇತುವೆಗಳು ನಿರ್ಮಾಣ ಹಂತದಲ್ಲಿ ನೆಲಕ್ಕುರುಳಿವೆಂದರೆ ಅಭಿವೃದ್ಧಿ ಬಗ್ಗೆ ಜನರೇ ತೀರ್ಮಾನಿಸಬೇಕು ಎಂದರು.
ವಕೀಲ ಪಾತ್ಯರಾಜನ್ ಅಧ್ಯಕ್ಷತೆವಹಿಸಿದ್ದರು. ಸರಸ್ವತಿ ಕಾನೂನು ಕಾಲೇಜು ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಕೆ.ಶೀಲಾ, ಸದಸ್ಯ ಪಿ.ಟಿ. ಚಂದ್ರಶೇಖರ್, ಆಡಳಿತಾಧಿಕಾರಿ ನಟರಾಜ್, ಪ್ರಾಂಶುಪಾಲೆ ಡಾ.ಸುಧಾ, ಪ್ರೊ.ಡಾ.ಎನ್.ಡಿ.ಗೌಡ, ಡಾ.ಕೆ.ಎಸ್.ಕರಿಯಣ್ಣ, ರಮೇಶ್, ರವಿಕುಮಾರ್, ಶ್ರೀಶೈಲಾ, ಮುರುಗೇಶ್, ಅಭಿನೇತ್ರಿ, ಹರ್ಷ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
