
ಚಿತ್ರದುರ್ಗ ನ್ಯೂಸ್.ಕಾಂ
ಮಠದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಸಹಿಸದೇ ಮಾಜಿ ಸಚಿವ ಎಚ್ ಏಕಾಂತಯ್ಯ ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇಲ್ಲಿ ಯಾವುದೇ ಹಣದ ದುರುಪಯೋಗ ಆಗಿಲ್ಲ. ಮಠದ ಭಕ್ತರು ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾ ಮಠದಿಂದ ನಿರ್ಮಾಣ ಮಾಡುತ್ತಿರುವ ಬಸವಣ್ಣನ ಪ್ರತಿಮೆ ವಿಚಾರದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಸ್ಪಷ್ಪಡಿಸಿದರು.
ಇಲ್ಲಿ ಯಾವುದೇ ಹಣದ ದುರುಪಯೋಗ ಆಗಿಲ್ಲ, ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ತೊಂದರೆ ನೀಡಿದ್ದಾರೆ. ಎಲ್ಕವನ್ನೂ ಕಾನೂನಿನಿಂದ ಸಮರ್ಥವಾಗಿ ಎದುರಿಸುತ್ತಿದ್ದೇವೆ. ಇಂತಹ ಅಪಪ್ರಚಾರ ಗಾಳಿ ಸುದ್ದಿಗೆ ಮಠದ ಭಕ್ತರು ಕಿವಿಗಿಡಬಾರದು. ಮಾಜಿ ಸಚಿವರಾದ ಎಚ್.ಏಕಾಂತಯ್ಯ ನೀಡಿರುವ ದೂರಿನಂತೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಲು ಸಮಿತಿ ರಚಿಸಿದ್ದಾರೆ. ಸಮಿತಿ ಬಂದಾಗ ಪ್ರತಿಮೆ ನಿರ್ಮಾಣದ ಎಲ್ಲ ಲೆಕ್ಕಗಳನ್ನು ರಸೀದಿ ಸಮೇತ ನೀಡುತ್ತೇವೆ. ಎಲ್ಲದಕ್ಕೂ ರಸೀದಿ ಇದೆ, ಸರ್ಕಾರ ಹಾಗೂ ಮಠದ ಭಕ್ತರು ನೀಡಿರುವ ಹಣದ ಪೈಸೆ ಪೈಸೆಗೂ ಲೆಕ್ಕ ಇದೆ. ಸರ್ಕಾರದಿಂದ 35 ಕೋಟಿ ಬಂದಿದೆ. 25 ಕೋಟಿ ರೂ. ಖರ್ಚಾಗಿದೆ. ಇನ್ನೂ ಹತ್ತು ಕೋಟಿ ರೂ. ಖಾತೆಯಲ್ಲಿದೆ ಎಂದರು.
ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಗುರುಗಳು 275 ಅಡಿ ಎತ್ತರದ ಬಸವ ಪುತ್ಥಳಿ ನಿರ್ಮಾಣಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಕೈ ಹಾಕಿದ್ದರು. ಇಲ್ಲಿನ ಪ್ರವಾಸೋದ್ಯಮ, ಸಾವಿರಾರು ಜನರಿಗೆ ಉದ್ಯೊಗ ಸಿಗಲಿ ಎನ್ನುವ ದೂರದೃಷ್ಟಿಯಿಂದ ಕೈ ಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಕೆಲಸ ನಿಂತಿದೆ. ಈಗ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.
ಆರಂಭದಲ್ಲಿ ಕಲ್ಲಿನ ಪ್ರತಿಮೆ ಮಾಡುವ ಉದ್ದೇಶವಿತ್ತು. 280.2 ಕೋಟಿ ರೂ. ಬಜೆಟ್, 325 ಅಡಿ ಎತ್ತರದ ಪ್ರತಿಮೆ. 170 ಅಡಿ ಅಡಿಪಾಯ, ಉಳಿದಿದ್ದು ಪ್ರತಿಮೆ ಆಗಲಿದೆ ಎಂದರು.
ಪ್ರತಿಮೆಯ ಉಸ್ತುವಾರಿ ಹೊತ್ತಿರುವ ಇಂಜಿನಿಯರ್ ಜಗದೀಶ್ ಮಾಹಿತಿ ನೀಡಿ, ಬಸವಣ್ಣನ ಪ್ರತಿಮೆಯ ಅಚ್ಚು ಆಗಿದೆ. ಸಿವಿಲ್ ಕೆಲಸಕ್ಕಿಂತ ಪ್ರತಿಮೆ ಕೆಲಸ ಜಾಸ್ತಿಯಾಗಿರುತ್ತದೆ. 120 ಅಡಿ ಎತ್ತರಕ್ಕೆ ಪೈಬರ್ ಪ್ರತಿಮೆ ಆಗಿದೆ ಎಂದರು.
ಪ್ರತಿಮೆ ಕುರಿತು ಈವರೆಗೆ ಜಿಲ್ಲಾಡಳಿತ ನಮಗೆ ಯಾವುದೇ ನೋಟೀಸ್ ನೀಡಿಲ್ಲ, ಪರಿಶೀಲನೆಗೆ ಯಾವುದೇ ತಂಡ ಬಂದಿಲ್ಲ. ಎಲ್ಲದಕ್ಕೂ ಲೆಕ್ಕಪತ್ರ ಇದೆ. ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ.
– ಕೆ.ಸಿ.ನಾಗರಾಜ್, ಮಠದ ಸಲಹಾ ಸಮಿತಿ ಸದಸ್ಯರು.
ಮುರುಘಾ ಮಠದಿಂದ ನಿರ್ಮಾಣ ಮಾಡಲು ಮುಂದಾಗಿರುವ 325 ಅಡಿ ಎತ್ತರದ ಬಸವ ಪುತ್ಥಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ದುರುಪಯೋಗ ಆಗಿರುವ ಬಗ್ಗೆ ಮಾಜಿ ಸಚಿವ ಎಚ್.ಏಕಾಂತಯ್ಯ ದೂರು ಆಧರಿಸಿ ತನಿಖೆ ನಡೆಸಲು ಜಿಲ್ಲಾಧಿಕಾರಿ ದಿವ್ಯಪ್ರಭು ತನಿಖಾ ತಂಡ ರಚಿಸಿ 15 ದಿನಗಳಲ್ಲಿ ವರದಿ ಸಲ್ಲಿಸಲು ಕಾಲಮಿತಿ ನಿಗಧಿ ಮಾಡಿ ಒಂದೆರಡು ದಿನದ ಹಿಂದೆ ಆದೇಶಿಸಿದ್ದರು.
2802 ಕೋಟಿ ರೂ. ಮೊತ್ತದ ಬೃಹತ್ ಕಾಮಗಾರಿ ಇದಾಗಿದ್ದು, ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರಕಾರ ಕೂಡಾ 35 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಈ ಹಣವನ್ನು ಮಠದ ಪೀಠಾಧಿಪತಿಗಳು ಪುತ್ಥಳಿ ನಿರ್ಮಾಣ ಗುತ್ತಿಗೆದಾರ ಸಂಸ್ಥೆಗಳೊಂದಿಗೆ ಶಾಮೀಲಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ CJ INFRA ENGG.PVT. ಲಿಮಿಟೆಡ್ ಗೆ ಗುತ್ತಿಗೆ ನೀಡಲಾಗಿದೆ ಎಂದು ಮಾಜಿಸಚಿವ ಎಚ್.ಏಕಾಂತಯ್ಯ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರತಿಮೆಗೆ ಸಂಬಂಧಿಸಿ ಯಾರೂ ಅಧಿಕೃತವಾಗಿ ಮಾಹಿತಿ ಪಡೆದಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿ ಮಠಕ್ಕೆ ಯಾವುದೇ ಅರ್ಜಿ ಬಂದಿಲ್ಲ. ಪಿ.ಎಸ್.ವಸ್ತ್ರದ್ ಆಡಳಿತಾಧಿಕಾರಿ ಆಗಿದ್ದ ಅವಧಿಯಲ್ಲಿ ಮಠದ ದಾಖಲೆಗಳನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ಅನಧಿಕೃತ ಮಾಹಿತಿ ಪಡೆದು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಮಠ ಚಿಂತನೆ ನಡೆಸುತ್ತಿದೆ.
– ಜಿತೇಂದ್ರ ಹುಲಿಕುಂಟೆ, ಮಠದ ಸಲಹಾ ಸಮಿತಿ ಸದಸ್ಯ
ದೂರು ನೀಡಿದ ಬೆನ್ನಲ್ಲೇ ತನಿಖಾ ತಂಡ ರಚನೆಯಾಗಿದ್ದು, ತಂಡದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕನ್ನಡ ಸಂಸ್ಜೃತಿ ಇಲಾಖೆ ಸಹಾಯಕ ನಿರ್ದೇಶಕರು ಇದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
