ಬಹಳ ಅಪರೂಪದ ರಾಶಿ ರಾಶಿ ಜಮರದ ಮರಗಳಿಂದಲೇ ತುಂಬಿರುವ ಕಮರದ ಅರಣ್ಯ ಬಾಂಡ್ರಾವಿ (ಮೊಳಕಾಲ್ಮೂರು ತಾಲೂಕಿನ ಬಾಂಡ್ರಾವಿ ಕಾಡು) ಕುರಿತು ಇಂದಿನ ಸಂಡೆ ಸ್ಪಷಲ್ ವಿಶೇಷ ಲೇಖನ.
ಚಿತ್ರದುರ್ಗ ನ್ಯೂಸ್: ಕಲಾಕೃತಿಗಳಂತೆ ಕಾಣುವ ರಾಶಿ ರಾಶಿ ಹೆಬ್ಬಂಡೆಗಳು. ಮೈಲು ದೂರದವರೆಗೂ ದೃಷ್ಟಿ ಹಾಯಿಸುವಷ್ಟು ಬಟಾ ಬಯಲು. ಅಪರೂಪದ ಮಳೆ. ಇಲ್ಲಿನ ಜನಜೀವನವೇ ಸವಾಲು ಅನ್ನಿಸುವಂತಹ ವಾತಾವರಣ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಈಶಾನ್ಯ ಮೂಲೆಯ ಮೊಳಕಾಲ್ಮೂರು ತಾಲೂಕು ಹಲವು ವಿಸ್ಮಯಗಳ ಆಗರ.
ಬರದ ನೈಜ ಚಿತ್ರಣ ಕಾಣಬೇಕಾದರೆ ಮೊಳಕಾಲ್ಮೂರು ತಾಲೂಕಿನಲ್ಲಿ ಪ್ರವಾಸ ಮಾಡಬೇಕು. ಇಲ್ಲಿನ ಜನರ ಬದುಕೇ ಒಂದು ಸವಾಲು. ಮಳೆಯ ನೆರಳಿನ ಪ್ರದೇಶ ಎಂದು ಈ ನಾಡನ್ನು ಗುರುತಿಸಲಾಗಿದೆ. ಇಲ್ಲಿನ ಜನತೆ ಯಾವ ಆಸರೆ ನಂಬಿ ಬದುಕಿನಲ್ಲಿ ಭರವಸೆ ಇಟ್ಟುಕೊಂಡಿದ್ದಾರೆ ಎಂದು ಒಂದು ಕ್ಷಣಕ್ಕೆ ಅನ್ನಿಸಿ ಬಿಡುತ್ತದೆ.
ಇಷ್ಟೆಲ್ಲಾ ಸಮಸ್ಯೆಗಳ ಕಾರ್ಮೋಡದ ನಡುವೆ, ಅಲ್ಲೊಂದು ಹಸಿರಿನ ಪಸೆ ಕಾಣಿಸುತ್ತದೆ. ಮೊಳಕಾಲ್ಮೂರೆಂಬ ತಾಯಿಯ ಸೀರೆಯ ಸೆಗಿನಂತೆ ಈ ಹಸಿರು ಪ್ರದೇಶ ಥಟ್ಟನೆ ನಮ್ಮ ಸ್ಮøತಿ ಪಟಲದಲ್ಲಿ ಹಾದು ಹೋಗುತ್ತದೆ.
ಹೌದು, ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಳಕಾಲ್ಮೂರಿನಿಂದ ಬಳ್ಳಾರಿ ಕಡೆಗೆ ಸಂಚರಿಸಿದಾಗ ಸಿಗುವ ರಾಂಪುರದಲ್ಲಿಳಿದು, ಪಶ್ಚಿಮಕ್ಕೆ ಸಾಗಿದರೆ ಈ ಹಸಿರು ಪ್ರದೇಶ ಸಿಗುತ್ತದೆ.

ಕಮರದ ಅರಣ್ಯ ಪ್ರದೇಶದ ಬಾಂಡ್ರಾವಿ
ಬಹಳ ಅಪರೂಪದ ರಾಶಿ ರಾಶಿ ಜಮರದ ಮರಗಳಿಂದಲೇ ತುಂಬಿರುವ ಕಮರದ ಅರಣ್ಯ ಬಾಂಡ್ರಾವಿಯ ವಿಶೇಷ. ಪಕ್ಕದ ಸಂಡೂರು ಅರಣ್ಯಕ್ಕೆ ಹೊಂದಿಕೊಂಡಂತೆ ಬಾಂಡ್ರಾವಿ ಭಾಗದಲ್ಲಿ ಕಮರದ ಅರಣ್ಯ ಮುಗಿಲಿಗೆ ಮೈಯೊಡ್ಡಿ ನಿಂತಿದೆ.
1904ರಲ್ಲೇ ಸರ್ಕಾರ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಅಧಿಸೂಚನೆ ಹೊರಡಿಸಿರುವ ‘ಸುಂದರ ಕಮರ ಅರಣ್ಯ’ 1306.87 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ.
ಈ ಕಾಡಿನುದ್ದಕ್ಕೂ ಎತ್ತ ಕಣ್ಣು ಹಾಯಿಸಿದರೂ ಕಮರದ ಮರಗಳೇ ಕಾಣಸಿಗುವ ಕಾರಣ ಇದನ್ನು ಕಮರದ ಅರಣ್ಯವೆಂದೇ ಗುರುತಿಸಲಾಗಿದೆ. ಇದು ಬಹಳ ವಿಶೇಷವಾಗಿದೆ.

ಅರಣ್ಯ ಇಲಾಖೆ ಅರಣ್ಯದ ನಟ್ಟ ನಡುವೆ ಇರುವ ಬೆಟ್ಟವೊಂದರ ಮೇಲೆ ಸುಂದರ ವೀಕ್ಷಣಾ ತಾಣ (ವೀವ್ ಪಾಯಿಂಟ್) ಕೂಡಾ ನಿರ್ಮಿಸಿದ್ದು, ಪ್ರವಾಸಿಗರು ಇಲ್ಲಿಗೆ ಬಂದರೆ ಅದ್ಬುತವಾದ ನೋಟವೂ ಸಿಗುತ್ತದೆ.
ಕಾಡಿನಲ್ಲಿ ಅಲ್ಲಲ್ಲಿ ಕಾರೇ ಹಣ್ಣುಗಳು, ಕವಳಿ ಹಣ್ಣುಗಳು, ನೇರಳೆ ಹಣ್ಣುಗಳ ರುಚಿಯೂ ಸಿಗುತ್ತದೆ. ಹಣ್ಣಿನ ಮರ, ಗಡಿಗಳ ಬಳಿಗೆ ಹೋದಾಗ ಅಲ್ಲಿ ಕರಡಿಗಳು ಹಣ್ಣು ತಿಂದು ಬೀಜ ಉಗುಳಿರುವ, ಮಲ ವಿಸರ್ಜನೆ ಮಾಡಿರುವ ಸುಳಿವುಗಳು ಗೋಚರವಾಗುತ್ತವೆ.
ರಾಂಪುರದಿಂದ ಬಾಂಡ್ರಾವಿ ಕಡೆಗೆ ಬರುತ್ತಲೇ ಮಲೆನಾಡಿನ ರಸ್ತೆಗಳಂತೆ ತಿರುವುಗಳು, ಅಕ್ಕಪಕ್ಕದಲ್ಲಿ ಮರಗಳು, ಕೆಲವೊಮ್ಮೆ ಸಣ್ಣಗೆ ಬೀಳುವ ಮಳೆಯ ಹನಿಗಳ ಸ್ಪರ್ಷವೂ ಸಿಗುತ್ತದೆ.
ಇದನ್ನು ಓದಿ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲೆ ಹೊಸ ಮೆಡಿಕಲ್ ಕಾಲೇಜು | 24 ಹಳೆಯ ಕಟ್ಟಡ ನೆಲಸಮಕ್ಕೆ ಸಭೆಯಲ್ಲಿ ನಿರ್ಧಾರ
ವನಪಾಲಕ ಶ್ರೀ ನಾಗಪ್ಪ ಜೆ. ಮೇಟಿ ಬಾಂಡ್ರಾವಿ ಅರಣ್ಯ

ಅರಣ್ಯ ಇಲಾಖೆಯ ಸಾಮಾನ್ಯ ವನಪಾಲಕನಾಗಿ ಸೇರಿ ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದ ವನಪಾಲಕನಿಗೆ ಸಲ್ಲಬೇಕಾದ ಅತಿ ದೊಡ್ಡ ಗೌರವವನ್ನು ಅರಣ್ಯ ಇಲಾಖೆ ಇಲ್ಲಿ ನೀಡಿದೆ. ತಾನು ಸಂರಕ್ಷಣೆ ಮಾಡಿದ ಬಾಂಡ್ರಾವಿ ಕಮರದ ಅರಣ್ಯ ಪ್ರದೇಶಕ್ಕೆ, ಮುಂದೊಂದು ದಿನ ತನ್ನದೇ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಖುದ್ದು ನಾಗಪ್ಪ ಕೂಡಾ ಅಂದುಕೊಂಡಿರಲಿಲ್ಲ. ಹೌದು ಅಂಥದ್ದೊಂದು ಗೌರವವನ್ನು ಅರಣ್ಯ ಇಲಾಖೆ ನೀಡಿದ್ದು, ಬಾಂಡ್ರಾವಿ ಕಮರದ ಅರಣ್ಯಕ್ಕೆ ‘ವನಪಾಲಕ ಶ್ರೀ ನಾಗಪ್ಪ ಜೆ. ಮೇಟಿ ಬಾಂಡ್ರಾವಿ ಅರಣ್ಯ’ ಎಂದು ಮರು ನಾಮಕರಣ ಮಾಡಲಾಗಿದೆ.
ಬಾಂಡ್ರಾವಿ ಕಮರ ಅರಣ್ಯವನ್ನು ಬೆಳೆಸಿ, ಸಂರಕ್ಷಣೆ ಮಾಡಿ, ಇಂದು ಹಚ್ಚ ಹಸುರಿನ ತಾಣವನ್ನಾಗಿ ರೂಪಿಸುವಲ್ಲಿ 1974ರಲ್ಲಿ ವನಪಾಲಕರಾಗಿ ಬಂದ ನಾಗಪ್ಪ ಜೆ ಮೇಟಿ ಅವರ ಪಾತ್ರ ಪ್ರಮುಖವಾಗಿದೆ. ಅವರ ಜೊತೆಗೆ ನಾಗಪ್ಪ ಮೇಟಿ ಪತ್ನಿ ಸಿದ್ದಮ್ಮ, ಅರಣ್ಯ ಇಲಾಖೆಯ ಇತರೆ ಸಹದ್ಯೋಗಿಗಳು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಗುವಿನಂತೆ ಈ ಕಾಡು ಬೆಳೆಸಿದ್ದಾರೆ.

ನಾಗಪ್ಪ ಅವರ ಕರ್ತವ್ಯ ನಿಷ್ಠೆ ಪರಿಗಣಿಸಿ 1994ರಲ್ಲಿ ರಾಜ್ಯ ಸರ್ಕಾರ ‘ವನಮಿತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ. ಆನಂತರ ಕೇಂದ್ರ ಸರ್ಕಾರ 1997ರಲ್ಲಿ ‘ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ’ ಪುರಸ್ಕಾರ ನೀಡಿದೆ.
ಇದಾದ ನಂತರ 2003 ಡಿಸೆಂಬರ್ ತಿಂಗಳಲ್ಲಿ ವನಪಾಲಕ ನಾಗಪ್ಪ ಜೆ ಮೇಟಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಾರೆ. ಈ ವೇಳೆ ಅರಣ್ಯ ಇಲಾಖೆ ಬಾಂಡ್ರಾವಿ ಅರಣ್ಯವನ್ನು ವನಪಾಲಕ ಶ್ರೀ ನಾಗಪ್ಪ ಜೆ.ಮೇಟಿ ಬಾಂಡ್ರಾವಿ ಅರಣ್ಯ ಪ್ರದೇಶವೆಂದು ಮರು ನಾಮಕರಣ ಮಾಡಿ ಅವರ ಕರ್ತವ್ಯ ನಿಷ್ಠೆಗೆ ಗೌರವ ಸೂಚಿಸಿದೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
English Summary: Bandravi, Bandravi Forest, Molakalmuru, Forest, Sunday Special, Chitradurga News, Chitradurga tourism.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
