
CHITRADURGA NEWS | 01 DECEMBER 2025
ಹೊಳಲ್ಕೆರೆ: ಚಿತ್ರದುರ್ಗದಿಂದ ಹೊಸದುರ್ಗಕ್ಕೆ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಬೊಮ್ಮನಹಳ್ಳಿಯಲ್ಲಿ ಸೋಮವಾರ ಶಾಸಕ ಎಂ.ಚಂದ್ರಪ್ಪ ಚಾಲನೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 01 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?

ನಂತರ ಮಾತನಾಡಿದ ಶಾಸಕರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದ್ದರೂ ಇಲ್ಲಿಯವರೆಗೂ ಬಸ್ ಸೇವೆಯನ್ನೇ ಕಾಣದ ಈ ಹಳ್ಳಿ ಜನಕ್ಕೆ ಕೊಟ್ಟ ಮಾತಿನಂತೆ ಬಸ್ ಸೇವೆ ಒದಗಿಸಿದ್ದೇನೆ. ಸರ್ಕಾರ ಯಾವುದಿದ್ದರು ನನಗೆ ಲೆಕ್ಕಕ್ಕಿಲ್ಲ. ನಾನು ಸಿದ್ದರಾಮಯ್ಯನವರು ಒಂದೆ ಬಾರಿಗೆ ಶಾಸಕರಾದವರು. 1996 ರಲ್ಲಿಯೇ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ 83 ಶಾಸಕರು ಸಹಿ ಹಾಕಿ ಹೆಚ್.ಡಿ.ದೇವೆಗೌಡರಿಗೆ ಕೊಟ್ಟಿದ್ದೆವು. ಅವರು ಮಾಡಲಿಲ್ಲ. ಪಕ್ಷ ಬೇರೆ ಬೇರೆಯಿರಬಹುದು. ನನ್ನ ಅವರ ಸಂಬಂಧ ಅಣ್ಣ ತಮ್ಮಂದಿರಂತಿದೆ ಎಂದರು.
ತಾಳಿಕಟ್ಟೆಯಲ್ಲಿ 32 ವರ್ಷಗಳ ನಂತರ ತೋಪು ಜಾತ್ರೆ ನಡೆದಾಗ ಕನಕ ಗುರುಪೀಠದ ಪೂಜ್ಯರ ಸೂಚನೆಯಂತೆ ಮೂರು ತಿಂಗಳಲ್ಲಿ 30 ಕೋಟಿ ರೂ.ಗಳನ್ನು ಖರ್ಚು ಮಾಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಎರಡುವರೆ ಸಾವಿರ ಗುಡಿಸಲುಗಳಿಗೆ ನೀರು, ಕರೆಂಟ್ ಒದಗಿಸಿದೆ. ಒಂದು ಗುಡಿಸಲಿಗೆ ಬೆಂಕಿ ಬಿದ್ದರೆ ಅನಾಹುತ ಸಂಭವಿಸಬಹುದೆಂದು ಅಗ್ನಿಶಾಮಕ ವಾಹನ, ಅಂಬ್ಯುಲೆನ್ಸ್ಗಳನ್ನು ತರಿಸಿದ್ದೆ. ಪೂನಾ, ಬಾಂಬೆಯಿಂದ ಮೊಬೈಲ್ ಟಾಯ್ಲೆಟ್ಗಳನ್ನು ತರಿಸಿ ಹೆಣ್ಣು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದೆ ಎಂದು ತಿಳಿಸಿದರು.
367 ಕೋಟಿ ರೂ.ಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಅದಕ್ಕಾಗಿ ಪೈಪ್ಲೈನ್ ಅಳವಡಿಕೆ ಕೆಲಸ ಮುಗಿದಿದೆ. ತುಪ್ಪದಹಳ್ಳಿ ಬಳಿ 23 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿ ದಿನಕ್ಕೆ ಹತ್ತು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ನೀಡುತ್ತೇನೆ. ಹದಿನೇಳು ಕಡೆ ಪವರ್ಸ್ಟೇಷನ್ ನಿರ್ಮಿಸಿ ವಿದ್ಯುತ್ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆಂದ ಶಾಸಕರು ಮಹಿಳಾ ಭವನಕ್ಕೆ ಹತ್ತು ಲಕ್ಷ ರೂ.ಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿದರು.
ಇದನ್ನೂ ಓದಿ: ವಿ.ಡಿ.ಸಾರ್ವಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಚುನಾವಣೆ | ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇನೆ. ಕೆರೆ ಏರಿ ಮೇಲೆ ಜಾಲಿ ಗಿಡಗಳು ಬೆಳೆದಿತ್ತು. ಎಲ್ಲವನ್ನು ತೆಗೆಸಿ ಆರು ಬಸ್ಗಳು ಸಂಚರಿಸುವಷ್ಟು ಅಗಲ ಮಾಡಿದ್ದೇನೆ.
ಎನ್.ಜಿ.ಹಳ್ಳಿಯಿಂದ ತಾಳಿಕಟ್ಟೆವರೆಗೆ ಡಬ್ಬಲ್ ರೋಡ್ ಆಗಿದೆ. ಬೊಮ್ಮನಹಳ್ಳಿ ಗ್ರಾಮದವರು ಬಸ್ಸನ್ನೆ ಕಂಡಿರಲಿಲ್ಲ. ಹಲವು ವರ್ಷಗಳ ಬೇಡಿಕೆಯಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಪ್ರತಿದಿನ ಚಿತ್ರದುರ್ಗದಿಂದ ಹೊರಡುವ ಬಸ್ ಹೊಳಲ್ಕೆರೆ, ಎನ್.ಜಿ.ಹಳ್ಳಿ, ಗೌಡಿಹಳ್ಳಿ, ಉಪ್ಪಾರಹಟ್ಟಿ, ಕಡ್ಲಪ್ಪನಹಟ್ಟಿ, ಬೊಮ್ಮನಹಳ್ಳಿ, ಬಾಗೂರು ಮಾರ್ಗವಾಗಿ ಹೊಸದುರ್ಗ ತಲುಪಲಿದೆ. ಪ್ರಯಾಣಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ವಕೀಲ ಪ್ರಭಾಕರ್ ಮಾತನಾಡಿ, ಬೊಮ್ಮನಹಳ್ಳಿಗೆ ಬಸ್ ಸಂಚಾರ ಆರಂಭಿಸುವ ಮೂಲಕ ಶಾಸಕ ಡಾ.ಎಂ.ಚಂದ್ರಪ್ಪನವರು ನೀವುಗಳು ನೀಡಿದ ಅಧಿಕಾರ ಮತದ ಶಕ್ತಿಯೇನ್ನೆಂಬುದನ್ನು ತೋರಿಸಿ ಗ್ರಾಮಕ್ಕೆ ಗೌರವ ತಂದುಕೊಟ್ಟಿದ್ದಾರೆ. 20 ವರ್ಷಗಳ ಹಿಂದೆ ಒಂದೆ ಒಂದು ಖಾಸಗಿ ಬಸ್ ಈ ಗ್ರಾಮಕ್ಕೆ ಬರುತ್ತಿತ್ತು. ನೀವುಗಳು ಈಗ ಸರ್ಕಾರಿ ಬಸ್ ಹತ್ತಲು ಶಾಸಕರು ಕಾರಣ. ಇಂತಹ ಶಾಸಕರು ರಾಜ್ಯಕ್ಕೆ ಬೇಕಾಗಿದ್ದಾರೆಂದರು.
ನಿಮಗೆ ನಿವೇಶನಗಳಿಲ್ಲ. ಅದರ ಬಗ್ಗೆಯೂ ಶಾಸಕರಲ್ಲಿ ವಿನಂತಿಸಿಕೊಳ್ಳಿ. ಕ್ಷೇತ್ರದಲ್ಲಿ ಹುಡುಕಿ ಹುಡುಕಿ ಕೆಲಸ ಮಾಡುತ್ತಿರುವ ಯಾರಾದರೂ ನನ್ನ ಕಣ್ಣಿಗೆ ಕಾಣುತ್ತಿದ್ದಾರೆಂದರೆ ಅದು ಶಾಸಕ ಡಾ.ಎಂ.ಚಂದ್ರಪ್ಪನವರೆಂದು ಬಣ್ಣಿಸಿದರು.
ಇದನ್ನೂ ಓದಿ: 3 ದಿನ ಕೃಷಿ ಯಂತ್ರೋಪಕರಣಗಳ ಕುರಿತು ಉಚಿತ ತರಬೇತಿ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಗಂಗಾಧರ್ ಮಾತನಾಡಿ, ರಸ್ತೆ, ನೀರು, ವಿದ್ಯುತ್, ಶಾಲಾ-ಕಾಲೇಜು, ಕೆರೆ ಕಟ್ಟೆಗಳನ್ನು ಅಭಿವೃದ್ದಿಪಡಿಸಿದ್ದಾರೆ. ಕನಕ ಸಮುದಾಯ ಭವನ ಕೂಡ ಆಗಿದೆ. ಪುಷ್ಕರಣಿ ನೆನೆಗುದಿಗೆ ಬಿದ್ದಿದೆ. ಅದನ್ನು ಪೂರ್ಣಗೊಳಿಸಿ. ಮೂರ್ನಾಲ್ಕು ಶಾಲಾ ಕಟ್ಟಡಗಳನ್ನು ನಿರ್ಮಿಸಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಮನವಿ ಮಾಡಿದರು.
ಹೊಳಲ್ಕೆರೆ ಬಿಜೆಪಿ.ಮಂಡಲ ಅಧ್ಯಕ್ಷ ಕುಮಾರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ, ಶಶಿಧರ್, ನುಲೇನೂರು ಶೇಖರ್, ಮರುಳಸಿದ್ದಪ್ಪ, ಹಳ್ಳಪ್ಪ, ಡಾ.ಹನುಮಂತಪ್ಪ, ಸತೀಶ್, ಸರಸ್ವತಿ, ಯಶೋಧಮ್ಮ, ಸೋಮಶೇಖರ್, ಲತ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಆಶಾ ಕುಮಾರ್ಹ, ನುಮಂತಪ್ಪ, ಮಂಜುಳ, ಗ್ರಾಮಸ್ಥರು ಹಾಗೂ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
