CHITRADURGA NEWS | 11 MARCH 2024
ಚಿತ್ರದುರ್ಗ: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮದ ಪಿ.ಜಿ.ಅನಿತಾ ಲಕ್ಷ್ಮಿ ಭಾಜನರಾಗಿದ್ದಾರೆ.
ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಮಾರ್ಚ್ 12 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕಬ್ಬನ್ ಉದ್ಯಾನವನದ ಜವಾಹರ್ ಬಾಲ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ₹ 25,000 ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ.
ಸರ್ಕಾರ ಪ್ರತಿ ವರ್ಷ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಧಕ ಮಹಿಳೆಯರಿಗೆ ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. 26 ಪ್ರಶಸ್ತಿಗಳನ್ನು 7 ವಿಭಾಗದಲ್ಲಿ ನೀಡಲಾಗುತ್ತದೆ. ಮಹಿಳಾ ಅಭಿವೃದ್ಧಿಗಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ 6, ಮಹಿಳಾ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ 8, ಕಲೆಯಲ್ಲಿ ಸಾಧನೆ 5, ಸಾಹಿತ್ಯದಲ್ಲಿ ಸಾಧನೆ 3, ಕ್ರೀಡೆಯಲ್ಲಿ ಸಾಧನೆ 2 ಹಾಗೂ ಶಿಕ್ಷಣ, ವೀರ ಮಹಿಳೆ ವಿಭಾಗದಲ್ಲಿ ತಲಾ 1 ಪ್ರಶಸ್ತಿ ನೀಡಲಾಗುತ್ತಿದೆ.
ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಸಾಧನೆ ಮಾಡಿದ್ದಾರೆ ಪಿ.ಜಿ.ಅನಿತಾ ಲಕ್ಷ್ಮಿ . ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆ ಚಿಂತಿಸದೇ ಅವುಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಾ ನಮ್ಮ ಗುರಿ ತಲುಪಬೇಕು ಎಂಬ ಆಶಯದಾಯಕ ಮಾತುಗಳನ್ನಾಡುವ ಅನಿತಾ ಲಕ್ಷ್ಮಿ ವಿದ್ಯಾರ್ತಿಗಳ ಪಾಲಿನ ಜ್ಞಾನ ಜ್ಯೋತಿಯಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಗ್ರಾಮ ಮೂಲದ ರಥಶಿಲ್ಪಿ ಪಿ.ಗುರುನಾಥಾಚಾರಿ, ಸುವರ್ಣಮ್ಮ ಅವರ ಪುತ್ರಿ ಅನಿತಾ ಲಕ್ಷ್ಮಿ ನಿತ್ಯ ಕೃಷಿ ಅವಲಂಭಿತ ಕಾಯಕ ಮಾಡುತ್ತಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.
ಕೂನಬೇವು ಗ್ರಾಮದ ಸರ್ಕಾರಿ ಶಾಲೆಯಲ್ಲೇ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ತುರವನೂರಿನ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ಚಿತ್ರದುರ್ಗದ ಎಸ್ಜೆಎಂ ಪದವಿ ಕಾಲೇಜಿನಲ್ಲಿ ಬಿ.ಕಾಂ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಪದವಿ ಪಡೆದಿದ್ದಾರೆ.
ಪಿಯುಸಿ ಪೂರ್ಣಗೊಳಿಸಿದ ಬಳಿಕ ಒಂದು ವರ್ಷ ಬೆಂಗಳೂರು, ಮುಂಬೈನಲ್ಲಿ ಗಗನಸಖಿ ತರಬೇತಿ ಪಡೆದಿದ್ದಾರೆ. ಗಗನಸಖಿಯಾಗಿ ಕೆಲಸ ಮಾಡುವ ಅವಕಾಶ ಬಂದರೂ ಅದನ್ನು ನಿರಾಕರಿಸಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆ.ಎಂ. ಸುರೇಶ್ ಇವರ ಕನಸನ್ನು ನನಸಾಗಿಸಲು ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಇವರು ಐಎಎಸ್, ಕೆಎಸ್ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವ ಸರ್ಕಾರಿ ಕಾಲೇಜಿನ ವಿಒದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈವರೆಗೂ 6,500ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಮುನ್ನಡೆದಿದ್ದಾರೆ.
ಬೆಂಗಳೂರು, ತುಮಕೂರು, ದಾವಣಗೆರೆ, ಬೈಂದೂರು ಸೇರಿದಂತೆ ವಿವಿಧೆಡೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸ್ಮರ್ಧಾತ್ಮಕ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿಅವರನ್ನು ಅಣಿಗೊಳಿಸುವ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯದ ಸಮಸ್ಯೆ ಕಾಡಿದರೂ ದಿಟ್ಟತನದಿಂದ ಎದುರಿಸಿ ತರಬೇತಿ ಮುಂದುವರಿಸಿ ಇದೀಗ ನೆಚ್ಚಿನ ತರಬೇತುದಾರರಾಗಿದ್ದಾರೆ. ಪ್ರಚಲಿತ ವಿದ್ಯಮಾನವನ್ನು ಅಚ್ಚುಕಟ್ಟಾಗಿ ಬೋಧಿಸುವ ಕಲೆ ಇವರಿಗೆ ಕರಗತವಾಗಿದೆ.
ಶೃಂಗೇರಿ ಶಾರದಾ ಪೀಠದಿಂದ ಮಂಜುಳಗಾನಲೋಲೆ, ಅರುಣೋದಯ ಸಾಹಿತಿ, ಬೆಳ್ತಂಗಡಿ ರಾಮ ಕ್ಷತ್ರಿಯ ಸಂಘದಿಂದ ಜ್ಞಾನರತ್ನ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನ್ಯಾಷನಲ್ ಗ್ಲೋಬಲ್ ಐಕಾನ್ ಪ್ರಶಸ್ತಿ, ಗುರುಕುಲ ಕಲಾ ಸಮ್ಮೇಳನದಲ್ಲಿ ಗುರುಕುಲ ವಿದ್ಯಾರತ್ನ ಪ್ರಶಸ್ತಿ, ಬೆಳಗಾವಿಯಲ್ಲಿ ಯುವ ಜ್ಞಾನಶ್ರೀ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಸುನಾಮಿ ಅವಘಡದ ವೇಳೆ ಜನರಿಂದ ದೇಣಿಗೆ ಸಂಗ್ರಹಿಸಿ ಸಂತ್ರಸ್ತರಿಗೆ ನೆರವಾಗಿದ್ದಾರೆ. ಕೋವಿಡ್ ಕಾರಣಕ್ಕೆ ವಿಧಿಸಲಾಗಿದ್ದ ಲಾಕ್ಡೌನ್ ಸಮಯದಲ್ಲಿ ಆಹಾರ ವಿತರಿಸಿ ಬಡವರ ಹಸಿವು ನೀಗಿಸಿದ್ದಾರೆ. ಅಲ್ಲದೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
