
ಚಿತ್ರದುರ್ಗ ನ್ಯೂಸ್.ಕಾಂ: ಗಣೇಶನ ಹಬ್ಬ ಅಥವಾ ಗಣೇಶ ಚತುರ್ಥಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ. ಈ ಹಬ್ಬವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಂಭ್ರಮಿಸುತ್ತಾರೆ. ಪುಟಾಣಿ ಮಕ್ಕಳು, ಯುವಕರಂತೂ ಊರು, ಕೇರಿ, ಬೀದಿ, ಮನೆಗಳಲ್ಲಿ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುವ ಬಗ್ಗೆ ಒಂದು ತಿಂಗಳ ಮುಂಚಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿರುತ್ತಾರೆ.
ಆದರೆ, ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಈ ಗಣೇಶ ಚತುರ್ಥಿಗೆ ಹೊಸ ಆಯಾಮ ನೀಡಲಾಗಿದೆ. ಇಲ್ಲಿನ ಚಿತ್ರಕಲಾ ಪರಿಷತ್ ವಿಶಿಷ್ಟ ಗಣೇಶೋತ್ಸವ ಆಚರಣೆ ಮಾಡಿದೆ. ಈ ಪ್ರಯತ್ನವನ್ನು ದಾವಣಗೆರೆಯ ತೊಗಟವೀರ ಸಮುದಾಯ ಭವನದಲ್ಲಿ ಸೆಪ್ಟಂಬರ್ 27 ರವರೆಗೆ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮುಂಬೈ ಡಿಜೆ | ದಾವಣಗೆರೆಯಲ್ಲಿ ಡಿಜೆ ಸೀಕ್ರೇಟ್ ರಿವಿಲ್ ಮಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಸದಾನಂದ ಹೆಗಡೆ ಗಣೇಶ ಹಬ್ಬವನ್ನು ಕಲಾವಿದರೊಂದಿಗೆ ಆಚರಿಸುವ ಸಂಕಲ್ಪ ಮಾಡಿ, ‘ವರ್ಣ ಗಣೇಶ’ ಎಂಬ ಪರಿ ಕಲ್ಪನೆಯೊಂದಿಗೆ ಹಬ್ಬದ ಅಂಗವಾಗಿ ಚಿತ್ರಕಲಾ ಶಿಬಿರ ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಮೂಡಿಬಂದ ಒಂದೊಂದು ಗಣೇಶ ಒಂದೊಂದು ಭಾವ ಮೂಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ಚಿತ್ರದುರ್ಗ ಹಾಗೂ ದಾವಣಗೆರೆಯ ಆಯ್ದ ಚಿತ್ರಕಲಾವಿದರನ್ನ ಸಂಪರ್ಕಿಸಿ, ಕಾರ್ಯಕ್ರಮದ ಬಗ್ಗೆ ಕಲಾವಿದರೊಂದಿಗೆ ಚರ್ಚಿಸಿ, ಅವರಿಗೆ ಬಣ್ಣ ಕ್ಯಾನ್ವಾಸ್ ಹಾಗೂ ಗೌರವ ಧನ ಕೊಟ್ಟು ಚಿತ್ರ ಬಿಡಿಸುವ ಕಲಾ ಶಿಬಿರ ಆಯೋಜಿಸಿದ್ದು, ಶಿಬಿರದಲ್ಲಿ ಒಬ್ಬ ಕಲಾವಿದರಿಗೆ ಎರಡು ಕ್ಯಾನ್ವಾಸ್ ನೀಡಿ ಒಂದು ಗಣೇಶನ ಚಿತ್ರ ಹಾಗೂ ಇನ್ನೊಂದು ಅವರಿಗೆ ತಿಳಿದ ಚಿತ್ರವನ್ನು ರಚಿಸುವ ಆಯ್ಕೆ ನೀಡಲಾಗಿತ್ತು.

ಈ ವೇಳೆ ಕಲಾವಿದರು ತಮ್ಮ ಮನಸ್ಸು, ಬುದ್ಧಿ, ಭಾವನೆಗಳಲ್ಲಿರುವ ಗಣಶೇನಿಗೆ ಬಣ್ಣ, ಕುಂಚದ ಮೂಲಕ ಜೀವ ತುಂಬಿ ಕ್ಯಾನ್ವಾಸ್ನಲ್ಲಿ ಅಚ್ಚೊತ್ತಿದ್ದಾರೆ. ಇದರ ಪ್ರತಿರೂಪವಾಗಿ 25ಕ್ಕೂ ಹೆಚ್ಚು ಕಲಾಕೃತಿಗಳು ಶಿಬಿರದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಪ್ರತಿಯೊಬ್ಬ ಕಲಾವಿದರು ಗಣೇಶನ ಕೃತಿಗಳನ್ನ ದೃಷ್ಟಿ ಗೋಚರವಾಗಿ, ಸೃಜನಾತ್ಮಕ ರೂಪಗಳನ್ನು ಸಂಪರ್ಕಿಸುವ ವಸ್ತುಗಳ ನಡುವಿನ ಸಮ್ಮೀಲನವಾಗಿ, ಮೂಡುವಂತಹ ಭಾವನೆಗಳ ಕಲಾಕೃತಿಗಳನ್ನು ರಚಿಸಿದ್ದಾರೆ. ಅಕ್ರಾಲಿಕ್, ಕ್ಯಾನ್ವಾಸ್, ವರ್ಣ ,ಕಪ್ಪು ಬಿಳುಪಿನ ಛಾಯೆಗಳೊಂದಿಗೆ ಬೆರೆತ ನಾನಾ ವಿಧದ ಗಣೇಶನ ಕಲಾಕೃತಿಗಳಿಗೆ ಮಧ್ಯ ಕರ್ನಾಟಕದ ಕಲಾವಿದರು ಮೂರ್ತ ಹಾಗೂ ಅಮೂರ್ತ ರೂಪದ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ಗಣೇಶ ಚತುರ್ಥಿ ಅಂಗವಾಗಿ ನಡೆದ ಚಿತ್ರಕಲಾ ಶಿಬಿರದಲ್ಲಿ ಅವಳಿ ಜಿಲ್ಲೆಗಳ 25ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಪ್ರಮುಖವಾಗಿ ಚಂದ್ರಶೇಖರ್ ಸಂಗಾ, ಮಹಾಲಿಂಗಪ್ಪ, ರಂಗನಾಥ್ ಕುಲಕರ್ಣಿ, ಅಚ್ಚುತಾನಂದ, ದಾದಾ ಚಿತ್ರದುರ್ಗ, ಟಿ.ಎಂವೀರೇಶ್(ಕ್ರಿಯೇಟಿವ್), ಶಿವಕುಮಾರ್ ಸಿದ್ದಾಪುರ, ಶಾಂತಯ್ಯ ಪ್ರಡಿಮಠ, ಸಂತೋμï ಕುಲಕರ್ಣಿ, ರೂಪಶ್ರೀ, ವಿಶಾಲಾಕ್ಷಿ ಮತ್ತಿತರರು ಭಾಗವಹಿಸಿದ್ದರು.
ದಾವಣಗೆರೆಯ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಸದಾನಂದ ಹೆಗಡೆ ಹಾಗೂ ಕಾರ್ಯದರ್ಶಿ ಶೇಷಾಚಲ ಇಂಥದ್ದೊಂದು ವಿಶಿಷ್ಟ ಸಂದರ್ಭ ಸೃಷ್ಟಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
