CHITRADURGA NEWS | 03 NOVEMBER 2025
ಚಿತ್ರದುರ್ಗ: 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದಂತಹ ಸಾಧನೆ ಇಡೀ ವಿಶ್ವವೇ ಬೆರಗುಗೊಳಿಸುವಂಥದ್ದು. ಅಂದಿನ ಸಮಾಜದಲ್ಲಿದ್ದ ಅಸಮಾನತೆ, ತಾರತಮ್ಯ, ಭೇದಭಾವ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ ಅಮೂಲ್ಯ ರತ್ನ ಬಸವಣ್ಣ. ಅನೇಕ ಶರಣರನ್ನು ಒಂದುಗೂಡಿಸಿ ಸಮಾನತೆ ಎನ್ನುವ ಬೀಜವನ್ನು ಬಿತ್ತಿದರು ಎಂದು ಹೊಸದುರ್ಗದ ಎಂ. ರಂಗನಾಥ್ ಹೇಳಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 3 | ಯಾವ ಅಡಿಕೆಗೆ ಎಷ್ಟು ರೇಟ್
ಮುರುಘಾ ಮಠದಲ್ಲಿ ಏರ್ಪಡಿಸಿರುವ ವಚನ ಕಾರ್ತಿಕೋತ್ಸವದಲ್ಲಿ ಶಿವಶರಣ ವೈದ್ಯ ಸಂಗಣ್ಣ ಮತ್ತು ವೈದ್ಯನಾಥೇಶ್ವರ ನವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯ ಸಂಗಣ್ಣ ಶರಣರು 21 ವಚನಗಳನ್ನು ರಚನೆ ಮಾಡಿದ್ದಾರೆ. ಅವರ ಒಂದು ವಚನದಲ್ಲಿ ದೈಹಿಕ ಔಷಧಿಗಿಂತ ಮನಸ್ಸಿನ ಔಷಧಿ ತೆಗೆದುಕೊಳ್ಳುವುದರಿಂದ ನಮ್ಮಲ್ಲಿರುವ ಖಾಯಿಲೆಗಳು ವಾಸಿ ಆಗುತ್ತವೆ. ಆ ಔಷಧಿ ವಚನಗಳಲ್ಲಿ ಸಿಗುತ್ತದೆ ಎಂದು ಹೇಳಿದರು.
ವೈದ್ಯ ಸಂಗಣ್ಣನವರು ಪಂಚ ಮಹಾಶರಣರನ್ನು ಹೊಗಳುತ್ತ ಕಕ್ಕಯ್ಯನವರನ್ನು ಕಾಮಧೇನು ಹೋಲಿಕೆ ಮಾಡಿ ತನಗೆ ಬೇಕಾಗಿರುವುದನ್ನು ನೀಡುವ ಮಹಾಶರಣ ಎಂದಿದ್ದಾರೆ. ಮಾದಾರ ಚೆನ್ನಯ್ಯ ಶರಣರನ್ನು ಕಲ್ಪವೃಕ್ಷಕ್ಕೆ ಹೋಲಿಕೆ ಮಾಡಿ, ತೆಂಗಿನಮರ ಪ್ರತಿಯೊಂದು ಭಾಗಗಳು ಯಾವ ರೀತಿ ಉಪಯೋಗಕ್ಕೆ ಬರುತ್ತದೆಯೋ ಚೆನ್ನಯ್ಯನವರ ವಚನಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ.
ಹರಳಯ್ಯನವರು ತಮಗೆ ಬಂದ ಕಷ್ಟಗಳನ್ನು ಹೋಗಲಾಡಿಸುವ ವ್ಯಕ್ತಿ ಆಗಿದ್ದಾರೆ. ಕೆಂಬಾವಿ ಶರಣರು ಅಮೃತ ಸಮುದ್ರಕ್ಕೆ ಹೋಲಿಕೆ ಮಾಡಿದ್ದಾರೆ. ಅವರ ವಚನಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡಲ್ಲಿ ಅಮೃತದಂತೆ ಶಕ್ತಿಯನ್ನು ಹೊಂದುತ್ತವೆ. ಶಿವನಾಗಮಯ್ಯನವರನ್ನು ದೈವ ಪರ್ವತ ಎಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನ.05 ರಂದು ಚಿತ್ರದುರ್ಗದಲ್ಲಿ ಸುವರ್ಣ ಮಹೋತ್ಸವ | ವ್ಯವಸ್ಥಿತ ಆಯೋಜನೆಗೆ ಕ್ರಮ ವಹಿಸಿ | ಡಿಸಿ
ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮಾನವನಿಗೆ ಕಾಯಿಲೆಗಳು ಬರುವುದಕ್ಕಿಂತ ಮುಂಚಿತವಾಗಿ ಮುಂಜಾಗ್ರತೆಯಿಂದ ಔಷಧಿಗಳನ್ನು ಸೇವಿಸುವುದು ಒಳ್ಳೆಯದು. ಅದೇ ರೀತಿ ಮಾನಸಿಕ ಕಾಯಿಲೆಗಳಿಗೆ ವಚನಗಳೇ ಔಷಧಿ ಆಗಿವೆ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿದ್ದ ವೈದ್ಯ ಸಂಗಣ್ಣ ಪಾರಂಪರಿಕ ನಾಟಿ ಔಷಧಿಗಳನ್ನು ನೀಡುತ್ತ ಬಂದವರು.
ನಾನಾ ರೋಗಗಳು ಬರುವುದಕ್ಕಿಂತ ಮುಂಚೆ ಲಿಂಗಧಾರಣೆ ಮಾಡಿಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ. ಕಳೆದುಕೊಂಡು ಹುಡುಕುವುದಕ್ಕಿಂತ ತನ್ನಲ್ಲಿರುವುದನ್ನು ಉಳಿಸಿಕೊಳ್ಳುವುದು ಮನುಷ್ಯನ ಮುಖ್ಯ ಗುರಿಯಾಗಿರಬೇಕು. ವಿಭೂತಿಯಲ್ಲಿ ಒಂದು ವಿಸ್ಮಯವಿದೆ.
ಯಾರು ವಿಭೂತಿ ಧರಿಸಿ ಲಿಂಗಪೂಜೆ ನೆರವೇರಿಸುತ್ತಾರೋ ಅವರಲ್ಲಿ ಭಕ್ತಿ, ಜ್ಞಾನ, ಯೋಗ ಪ್ರಸರಿಸಿ ಒಂದು ಶಕ್ತಿ ಪ್ರಾಪ್ತವಾಗುತ್ತದೆ. ಶಿವಯೋಗ ಮಾಡುವವರಲ್ಲಿ ಸಮಾಧಾನ, ಕರುಣೆ, ಮಾನವೀಯ ಮೌಲ್ಯಗಳು ವೃದ್ಧಿಸುತ್ತವೆ ಎಂದು ಹೇಳಿದರು.
ಶರಣ ವೈದ್ಯನಾಥೇಶ್ವರರ ಕುರಿತು ಎನ್.ಸಿ.ಚಂದ್ರಶೇಖರ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಕಳ್ಳಿಯ ಹಾಲು ಅಶುದ್ಧ. ಅದು ಶುದ್ಧ ಹಾಲಿಗೆ ಸಮನಲ್ಲ. ಹಾಗೇ ವಚನಗಳನ್ನು ತಿಳಿದವರು ನಿಜವಾದ ಜ್ಞಾನಿಗಳಾಗುತ್ತಾರೆ. ನಮ್ಮನ್ನು ಸುಳ್ಳಿನ ನಾಟಕದಿಂದ ಹೊರತೆಗೆದು ನಿಜವಾದ ಶುದ್ಧತೆ ಮತ್ತು ಭಕ್ತಿಯುಳ್ಳವರಾಗಬೇಕು.
ಲಿಂಗಪೂಜೆಯು ಪ್ರತಿಯೊಬ್ಬ ವ್ಯಕ್ತಿಯನ್ನು ಶುದ್ಧ ನಡತೆಯತ್ತ ಕೊಂಡೊಯ್ಯುತ್ತದೆ. ವೇದ, ಜಪ, ತಪಗಳಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನಗಳು ಕಲ್ಯಾಣ ರಾಜ್ಯವನ್ನು ಸೃಷ್ಟಿ ಮಾಡುವಂತಹ ಶಕ್ತಿ ಹೊಂದಿವೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 03 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಎಸ್.ಜೆ.ಎಂ. ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕಣುಮೇಶ್, ಸುಂಕದ ಬಂಕಣ್ಣ ಶರಣರ ಕುರಿತು ಮಾತನಾಡಿ, 12ನೇ ಶತಮಾನದಲ್ಲಿಯೂ ಸಹ ಸುಂಕವನ್ನು ಸಂಗ್ರಹಿಸಲಾಗುತ್ತಿತ್ತು. ಆ ಕಾಲಘಟ್ಟದಲ್ಲಿ ಪ್ರಾಮಾಣಿಕತೆ, ಮಾನವೀಯತೆ ಹೊಂದಿರುವ ಶರಣರನ್ನು ಕಾಣುತ್ತೇವೆ. ಅದೇ ರೀತಿ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ ಮನೋಭಾವ ಶ್ರೀಮಠದಲ್ಲಿ ಇದೆ ಎಂದು ಹೇಳಿದರು.
ಎಸ್.ಜೆ.ಎಂ. ಬ್ಯಾಂಕ್ನ ವ್ಯವಸ್ಥಾಪಕ ಟಿ.ಕೆ. ರಾಜಶೇಖರ್, ಹರಗುರು ಚರಮೂರ್ತಿಗಳು, ವಿವಿಧ ಸಮಾಜದ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ನೌಕರ ವರ್ಗದವರು, ಗುರುಕುಲದ ಮಕ್ಕಳು, ವಿದ್ಯಾರ್ಥಿಗಳು, ಬಸವ ಭಕ್ತರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
