
CHITRADURGA NEWS | 30 SEPTEMBER 2025
ಚಿತ್ರದುರ್ಗ: ಕೊರಚ, ಕೊರಮ, ಭೋವಿ, ಲಂಬಾಣಿ ಸಮುದಾಯಗಳಿಗೆ ಒಳಮೀಸಲಾತಿ ವರ್ಗೀಕರಣದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಜಿಲ್ಲಾ ಒಕ್ಕೂಟದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ಸೆಪ್ಟಂಬರ್ 29 | ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್

ಮದಕರಿಪುರ ಲಂಬಾಣಿಹಟ್ಟಿಯಿಂದ ಚಿತ್ರದುರ್ಗದ ಒನಕೆ ಓಬವ್ವ ವೃತ್ತದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ, ಉದ್ಯೋಗ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಅಂಕಿ-ಅಂಶಗಳು ದಮನಿತ ಸಮುದಾಯಗಳ ಅನುಮಾನಕ್ಕೂ ಕಾರಣವಾಗಿದೆ ಎಂದು ದೂರಿದರು.
ನ್ಯಾ.ನಾಗಮೋಹನ್ ದಾಸ್ ಆಯೋಗ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಮೋಸ ಮಾಡಿದೆ. ಆಯೋಗದ ವರದಿಯನ್ವಯ ಸರ್ಕಾರದ ಕೆಲ ಇಲಾಖೆಗಳು ಎಸ್ಸಿ ಸಮುದಾಯಗಳ ಅಂಕಿ-ಅಂಶ ನೀಡಿಲ್ಲ. ಕೆಲ ಕುಟುಂಬಗಳು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ. ಹೀಗಿರುವಾಗ ಸಣ್ಣ-ಪುಟ್ಟ ಬದಲಾವಣೆಯೊಂದಿಗೆ ಸರ್ಕಾರ ಜಾರಿಗೊಳಿಸಿರುವುದು ಸರಿಯಲ್ಲ ಎಂದು ದೂರಿದರು.
ನಮ್ಮ ಸಮುದಾಯ ಅತ್ಯಂತ ಸ್ವಾಭಿಮಾನದಿಂದ ಬದುಕುವ ಸಮುದಾಯ ಹಾಗೂ ಸರ್ಕಾರವನ್ನು ಎಚ್ಚರಗೊಳಿಸುವ ಸಮುದಾಯ. ನಾವು ಎಷ್ಟು ಶಾಂತವಾಗಿರುತ್ತೇವೋ ಸಿಡಿದೇದ್ದರೆ ಅಷ್ಟೇ ಉಗ್ರ ಸ್ವರೂಪ ಪಡೆದು ಕೊಳ್ಳುತ್ತೇವೆ. ಕ್ರೀಮಿ ಕಿಟಗಳಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ. ಮೀಸಲಾತಿ ವಿಚಾರದಲ್ಲಿ ಈವರೆಗೆ ಸಮುದಾಯವನ್ನು ಕರೆದು ಮಾತನಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಅಲೆಮಾರಿಗಳಿಗೂ ನ್ಯಾಯ ಒದಗಿಸಿಲ್ಲ. ಮುಂದೆ ರಾಜ್ಯಮಟ್ಟದಲ್ಲಿ ಪ್ರತಿಭಟಿಸುತ್ತೇವೆ.
-ಪಿ.ರಾಜೀವ್, ಮಾಜಿ ಶಾಸಕ.
ನ್ಯಾ.ಸದಾಶಿವ, ನಾಗಮೋಹನ್ ದಾಸ್ ಹಾಗೂ ಮಾಧುಸ್ವಾಮಿ ಆಯೋಗದ ವರದಿಯನ್ವಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಈ ಸಮುದಾಯವನ್ನು ಯಾವ ದೃಷ್ಟಿಕೋನದಿಂದಲೂ ಹೊಂದಾಣಿಕೆ ಆಗದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದ ‘ಸಿ’ ವರ್ಗದವರೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮೀಸಲಾತಿಯಿಂದ ವಂಚಿಸಿರುವುದು ವಿಪರ್ಯಾಸ. ಆಯೋಗಗಳ ವರದಿ ಪ್ರಕಾರ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೈಗಾರಿಕೆಗೆ ಅನುಮತಿ ಪಡೆಯುವುದೇ ದುಸ್ಸಾಹಸ | ಚೇಂಬರ್ ಆಫ್ ಕಾಮರ್ಸ್ ಸತೀಶ್
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ‘ಸಿ’ ವರ್ಗದ ನಮ್ಮ ಸಮುದಾಯಗಳಿಗೂ ಶೇ. 6ರಷ್ಟು ಮೀಸಲಾತಿ ನಿಗದಿಗೊಳಿಸಲು ಮುಂದಾಗಬೇಕು. ಔದ್ಯೋಗಿಕವಾಗಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಪಶ್ಯ, ಅಸ್ಪಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಅಪೂರ್ಣ ಮಾಹಿತಿ ಹೊಂದಿರುವ ನಾಗಮೋಹನ್ ದಾಸ್ ವರದಿ ತಿರಸ್ಕರಿಸಿ, ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿವರೆಗೂ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು. ಬೇಡ ಜಂಗಮರನ್ನು ಎಸ್ಸಿ ಪಟ್ಟಿಯಿಂದ ತೆಗೆಯಬೇಕು ಎಂದು ಸಿಎಂಗೆ ಕೋರಿದರು.
ಪ್ರತಿಭಟನೆಯ ನೇತೃತ್ವವನ್ನು ಸರ್ದಾರ್ ಸೇವಾಲಾಲ್ ಸ್ವಾಮೀಜಿ, ನಂದಾ ಮಸಂದ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: ದಸರಾ, ದೀಪಾವಳಿ ಹಬ್ಬದ ಪ್ರಯಕ್ತ ಚರ್ಮ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ
ಶಿರಹಟ್ಟಿ ಶಾಸಕ ಡಾ.ಚಂದ್ರು ಲಂಬಾಣಿ, ಮಾಜಿ ಶಾಸಕರಾದ ಪಿ.ರಾಜು, ಕೆ.ಬಿ.ಅಶೋಕ್ನಾಯ್ಕ, ಬಸವರಾಜ್ನಾಯ್ಕ ಪಾದಯಾತ್ರೆಗೆ ಸಾಥ್ ನೀಡಿದರು. ಒಕ್ಕೂಟದ ಸಂಚಾಲಕ ನಿಂಗಾನಾಯ್ಕ, ಮುಖಂಡರಾದ ನರೇನಹಳ್ಳಿ ಅರುಣ್ಕುಮಾರ್, ಚಂದ್ರನಾಯ್ಕ, ರಮೇಶ್ನಾಯ್ಕ, ಗಿರೀಶ್ನಾಯ್ಕ, ಬಾಲ್ಯನಾಯ್ಕ, ಗೌತಮ್ನಾಯ್ಕ, ಸೂರ್ಯನಾಯ್ಕ, ಶಿವಕುಮಾರ್ನಾಯ್ಕ, ಗಂಗಾನಾಯ್ಕ, ರವಿ ಮದಕರಿಪುರ, ತಿಪ್ಪೇಸ್ವಾಮಿ, ಅನಿಲ್ನಾಯ್ಕ, ಶ್ರೀನಿವಾಸ್ನಾಯ್ಕ, ಪುಟ್ಟನಾಯ್ಕ, ಮೂರ್ತಿನಾಯ್ಕ, ಮಹಂತೇಶ್, ರಘುನಾಯ್ಕ, ಶ್ರೀಧರ್ನಾಯ್ಕ ಇತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
